MB Patil: ಬಿಜೆಪಿಯವರು ನಾಚಿಕೆ, ಮಾನ-ಮರ್ಯಾದೆ ಎಲ್ಲವನ್ನು ಬಿಟ್ಟು ನಿಂತಿದ್ದಾರೆ: ಎಂಬಿ ಪಾಟೀಲ್ ಕಿಡಿ
ಕಾವೇರಿ ವಿಚಾರದಲ್ಲಿ ಒಂದು ಕಡೆ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದರೆ ಮತ್ತೊಂದು ಕಡೆ ಕಾಂಗ್ರೆಸ್-ಬಿಜೆಪಿ ನಡುವೆ ಕಿತ್ತಾಟ ನಡೆಯುತ್ತಿದೆ. ರಾಜ್ಯದಲ್ಲಿ ಮೂವರು ಡಿಸಿಎಂ ನೇಮಕದ ಬಗ್ಗೆ ಸಚಿವ ಎಂಬಿ ಪಾಟೀಲ್ ಹೇಳಿಕೆಯನ್ನು ರಾಜ್ಯ ಬಿಜೆಪಿ ಟೀಕಿಸಿದ್ದು, ಇದಕ್ಕೆ ಎಂಬಿ ಪಾಟೀಲ್ ತಿರುಗೇಟು ಕೊಟ್ಟಿದ್ದಾರೆ.
ರಾಜ್ಯದಲ್ಲಿ ಮೂರು ಡಿಸಿಎಂ ಹುದ್ದೆ ಸೃಷ್ಟಿ ಮಾಡುವ ವಿಚಾರ ಹೈಕಮಾಂಡ್ಗೆ ಬಿಟ್ಟಿದ್ದು, ಹೈಕಮಾಂಡ್ ಡಿಸಿಎಂ ಆಗು ಎಂದು ನನಗೆ ಹೇಳಿದರೆ ಆಗುತ್ತೇನೆ ಎಂದು ಎಂ.ಬಿ ಪಾಟೀಲ್ ಹೇಳಿದ್ದರು. ಇದನ್ನು ಬಿಜೆಪಿ ಟೀಕಿಸಿದ್ದು, ಪಾಟೀಲ್ರನ್ನು ನೀರೋಗೆ ಹೋಲಿಸಿತ್ತು.

ಟ್ವೀಟ್ ಮಾಡಿದ್ದ ಬಿಜೆಪಿ, "ರೋಮ್ ಹೊತ್ತಿ ಉರಿಯುತ್ತಿದ್ದಾಗ ನೀರೋ ವಯಲಿನ್ ಬಾರಿಸುತ್ತಾ ಕುಳಿತಿದ್ದನಂತೆ", ಈ ಮಾತು ಸಚಿವ ಎಂಬಿ ಪಾಟೀಲ್ ಅವರಿಗೆ ಹೇಳಿ ಮಾಡಿಸಿದಂತಿದೆ. ರಾಜ್ಯವೇ ಸಂಪೂರ್ಣ ಬರಪೀಡಿತವಾಗಿ, ಕುಡಿಯುವ ನೀರಿಗೂ ಸಹ ತತ್ವಾರ ಆರಂಭವಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ನೀವು ಡಿಸಿಎಂ ಆಗಿ ಮಾಡುವುದಾದರೂ ಏನಿದೆ ಪಾಟೀಲರೇ..!!" ಎಂದು ಟೀಕಿಸಿತ್ತು.
ನಿಮಗೆ ಜನ ಪಾಠ ಕಲಿಸುತ್ತಾರೆ!
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಎಂಬಿ ಪಾಟೀಲ್ ಬಿಜೆಪಿ ನಾಯಕರ ವಿರುದ್ಧ ಕಿಡಿ ಕಾರಿದ್ದಾರೆ. "ಬಿಜೆಪಿಯವರು ನಾಚಿಕೆ, ಮಾನ-ಮರ್ಯಾದೆ ಎಲ್ಲವನ್ನು ಬಿಟ್ಟು ನಿಂತಿರುವಂತಿದೆ. ರಾಜ್ಯದಲ್ಲಿ ಚುನಾವಣೆ ಕಳೆದು 4 ತಿಂಗಳಾದರೂ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲಾಗಲಿಲ್ಲ." ಎಂದು ಟೀಕಿಸಿದರು.
ಬಿಜೆಪಿಯವರು ನಾಚಿಕೆ, ಮಾನ-ಮರ್ಯಾದೆ ಎಲ್ಲವನ್ನು ಬಿಟ್ಟು ನಿಂತಿರುವಂತಿದೆ.
— M B Patil (@MBPatil) September 21, 2023
ರಾಜ್ಯದಲ್ಲಿ ಚುನಾವಣೆ ಕಳೆದು 4 ತಿಂಗಳಾದರೂ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲಾಗಲಿಲ್ಲ.
ರಾಜ್ಯದಿಂದ 25 ಸಂಸದರನ್ನು ಆರಿಸಿ ಕಳುಹಿಸಿದರೂ, ಒಬ್ಬರಾದರೂ ನಿಂತು ಮಾತನಾಡಿ ಪ್ರಧಾನಿ ಅವರ ಗಮನವನ್ನು ಕಾವೇರಿ ವಿಚಾರದ ಕಡೆ ಸೆಳೆಯಲಾಗಲಿಲ್ಲ.
ಕಾವೇರಿ ನೀರಿಗಾಗಿ ಇಲ್ಲಿ… https://t.co/Ef7vQopTeY
" ರಾಜ್ಯದಿಂದ 25 ಸಂಸದರನ್ನು ಆರಿಸಿ ಕಳುಹಿಸಿದರೂ, ಒಬ್ಬರಾದರೂ ನಿಂತು ಮಾತನಾಡಿ ಪ್ರಧಾನಿ ಅವರ ಗಮನವನ್ನು ಕಾವೇರಿ ವಿಚಾರದ ಕಡೆ ಸೆಳೆಯಲಾಗಲಿಲ್ಲ. ಕಾವೇರಿ ನೀರಿಗಾಗಿ ಇಲ್ಲಿ ಹೋರಾಡುತ್ತಿರುವಾಗ ವಯಲಿನ್ ಬಾರಿಸುತ್ತಾ ಕುಳಿತಿರುವ 25 ಸಂಸದರಿಗೂ ರಾಜ್ಯದ ಜನ ಮುಂದಿನ 6 ತಿಂಗಳಲ್ಲಿ ಉತ್ತರ ನೀಡಲು ಕಾಯುತ್ತಿದ್ದಾರೆ." ಎಂದು ಖಡಕ್ಕಾಗಿ ಉತ್ತರ ನೀಡಿದ್ದಾರೆ.
ಲಿಂಗಾಯತರು ಹಾಗೂ ಅಹಿಂದ ವರ್ಗಕ್ಕೆ ಅಧಿಕಾರ ದೊರಕುತ್ತದೆ ಎಂದಾಕ್ಷಣ ಬಿಜೆಪಿಯಲ್ಲಿ ಅ'ಸಂತೋಷ ಭುಗಿಲೇಳುತ್ತದೆ. ಇದು ಏಕೆ ಎಂಬುದೇ ಯಕ್ಷಪ್ರಶ್ನೆ...! ಎಂದು ಅವರು ಮತ್ತೊಂದು ಟ್ವೀಟ್ನಲ್ಲಿ ಕಿಡಿ ಕಾರಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪು ದುರದೃಷ್ಟಕರ
ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿರುವ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ ಎಂಬಿ ಪಾಟೀಲ್, ಈ ತೀರ್ಪು ಅತ್ಯಂತ ದುರದೃಷ್ಟಕರ, ನಮಗೇ ಕುಡಿಯಲು ನೀರಿಲ್ಲ, ಪರಿಸ್ಥಿತಿ ಹೀಗೆ ಮುಂದುವರೆದರೆ ಬೆಂಗಳೂರಿನ ಕುಡಿಯುವ ನೀರಿಗೂ ಅಭಾವ ಕಾಡುತ್ತದೆ. ಪ್ರಾಧಿಕಾರ ಮತ್ತು ಸುಪ್ರೀಂಕೋರ್ಟ್ಗೆ ರಾಜ್ಯದ ವಾಸ್ತವ ಸ್ಥಿತಿ ತಿಳಿಸಬೇಕಾಗಿದೆ. ಕೇಂದ್ರ ಸರ್ಕಾರ ತಜ್ಞರನ್ನು ಕಳಿಸಿ ಸ್ಥಿತಿಗತಿ ತಿಳಿದು, ನೀರು ಬಿಡುವ ಆದೇಶವನ್ನು ಮರುಪರಿಶೀಲನೆ ಮಾಡಲಿ ಎಂದು ಹೇಳಿದರು.












Click it and Unblock the Notifications