Lok Sabha Election 2024: ರಾಜಕೀಯ ಮೇಲಾಟಕ್ಕೆ ತೆರೆ ಎಳೆಯಲಿದೆ ಮತದಾರರ ಮಹಾತೀರ್ಪು
ಬೆಂಗಳೂರು, ಜೂನ್ 03: ರಾಜಕೀಯ ಲೆಕ್ಕಾಚಾರಗಳು ಏನಾಗುತ್ತವೆ ಎಂಬುದು ತಿಳಿಯಲು, ಮತದಾರ ಪ್ರಭು ಯಾವ ರೀತಿಯ ತೀರ್ಪು ಅರಿವಾಗಲು, ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುತ್ತಾರಾ ಎಂಬುದು ಗೊತ್ತಾಗಲು, ಕಳೆದ ಕೆಲವು ತಿಂಗಳುಗಳಿಂದ ನೋಡಿ ಸುಸ್ತಾಗಿದ್ದ ರಾಜಕೀಯ ಸರ್ಕಸ್ ಗೆ ತೆರೆ ಬೀಳುವುದಕ್ಕೆ ಕಾಲ ಸನ್ನಿಹಿತವಾಗಿದೆ. ಜೂನ್ 4ರ ಮಹಾತೀರ್ಪು ನಮ್ಮಲ್ಲಿ ಎದ್ದಿರುವ ಎಲ್ಲ ಗೊಂದಲಗಳಿಗೆ ಪರಿಹಾರ ಮತ್ತು ಪ್ರಶ್ನೆಗಳಿಗೆ ಉತ್ತರ ನೀಡಲಿದೆ.
ಕಳೆದೊಂದು ವರ್ಷದಿಂದ ಲೋಕಸಭಾ ಚುನಾವಣೆಯನ್ನು ಎದುರಿಸಲು ರಾಜಕೀಯ ಪಕ್ಷಗಳು ತನ್ನದೇ ಆದ ಕಾರ್ಯತಂತ್ರಗಳನ್ನು ರೂಪಿಸಿಕೊಂಡು ಬಂದಿದ್ದವು. ಕಳೆದ ಹತ್ತು ವರ್ಷಗಳಿಂದ ಅಧಿಕಾರವಿಲ್ಲದೆ ಚಡಪಡಿಸುತ್ತಿರುವ ಕಾಂಗ್ರೆಸ್ ಹೇಗಾದರೂ ಮಾಡಿ ಅಧಿಕಾರ ಹಿಡಿಯಲೇ ಬೇಕೆಂಬ ಹಠಕ್ಕೆ ಬಿದ್ದಿದ್ದರೆ, ಮೂರನೇ ಬಾರಿಗೂ ನಾವೇ ಆಡಳಿತ ನಡೆಸಬೇಕೆಂಬ ತೀರ್ಮಾನವನ್ನು ಬಿಜೆಪಿ ಮಾಡಿಕೊಂಡಿತ್ತು. ಹೀಗಾಗಿ ಲೋಕಸಭಾ ಚುನಾವಣೆ ಹತ್ತಿರವಾದಂತೆಲ್ಲ ರಾಜಕೀಯ ಜಿದ್ದಾಜಿದ್ದಿ, ಮೇಲಾಟಗಳು ಜಾಸ್ತಿಯಾಗಿದ್ದವು. ಅದೆಲ್ಲವನ್ನು ನೋಡಿಕೊಂಡು, ಸಹಿಸಿಕೊಂಡು ದೇಶದ ಜನ ಬಂದಿದ್ದರು.

ರಾಜಕಾರಣಿಗಳು ಎಷ್ಟೇ ಮೆರೆದರೂ ಅಂತಿಮವಾಗಿ ಅವರನ್ನು ಅಧಿಕಾರದಲ್ಲಿಡಬೇಕಾ? ಅಥವಾ ಹೊರಗೆ ಅಟ್ಟಬೇಕಾ? ಎಂಬ ತೀರ್ಮಾನ ಮಾಡುವವರು ಮತದಾರರೇ.. ಹೀಗಿರುವಾಗ ರಾಜಕಾರಣಿಗಳು ಅಧಿಕಾರದ ಮದದಲ್ಲಿ ಮೈಮರೆತರೆ ಅವರನ್ನು ಮೂಲೆಗುಂಪು ಮಾಡುವುದು ಮತದಾರರಿಗೆ ಕಷ್ಟವೇನಲ್ಲ. ಈಗಾಗಲೇ ಆ ರೀತಿಯಲ್ಲಿ ಮೆರೆದವರು, ಸೋಲಿಲ್ಲದ ಸರದಾರರಂತೆ ಬೀಗಿದವರು ಅಹಂ ನೆತ್ತಿಗೇರಿ ಮತದಾರರನ್ನು ಕಡೆಗಣಿಸಿದ ಬಹಳಷ್ಟು ಮಂದಿಗೆ ಮತದಾರರು ತಕ್ಕ ಪಾಠ ಕಲಿಸಿದ ಉದಾಹರಣೆಗಳು ಭಾರತದ ರಾಜಕೀಯ ಇತಿಹಾಸದಲ್ಲಿ ಬಹಳಷ್ಟಿವೆ.
ದೇಶದ ಮತದಾರರು ಪ್ರಭುದ್ಧರಾಗಿದ್ದಾರೆ
ನಮ್ಮ ನಾಯಕರು ಹಿಂದೆ ಮಾಡಿದ ಸಾಧನೆಗಳ ಪಟ್ಟಿ ಇವತ್ತಿನ ಯುವ ಮತದಾರರಿಗೆ ಬೇಕಾಗಿಲ್ಲ. ಅವರಿಗೆ ಬೇಕಾಗಿರುವುದು ಭವಿಷ್ಯದಲ್ಲಿ ಮಾಡಬಹುದಾದ ಮತ್ತು ಯುವ ಪೀಳಿಗೆಗೆ ಅನುಕೂಲವಾಗ ಬಹುದಾದ ಯೋಜನೆಗಳು. ಇವತ್ತು ವರ್ಷದಿಂದ ವರ್ಷಕ್ಕೆ ಕೋಟ್ಯಂತರ ಸಂಖ್ಯೆಯಲ್ಲಿ ಯುವಕ, ಯುವತಿಯರು ಮತದಾನದ ಹಕ್ಕನ್ನು ಪಡೆಯುತ್ತಿದ್ದಾರೆ. ಅವರೆಲ್ಲರೂ ವಿದ್ಯಾವಂತ ಮತದಾರರು. ಅವರು ಭರವಸೆಯನ್ನು ನಂಬಿ, ಆಮಿಷಕ್ಕೊಳಗಾಗಿ ಮತ ಚಲಾಯಿಸುವವರಲ್ಲ. ಎಲ್ಲವನ್ನು ವಿಶ್ಲೇಷಿಸುವ ಯಾವುದು ಒಳಿತು? ಯಾವುದು ಕೆಡಕು ಎಂಬುದರ ಅರಿವು ಹೊಂದಿದವರು. ಹೀಗಾಗಿ ಇಂತಹ ಮತದಾರರನ್ನು ದಾರಿ ತಪ್ಪಿಸಿ ಮತ ಪಡೆಯುತ್ತೇವೆ ಎನ್ನುವುದು ತುಸು ಕಷ್ಟವೇ.

ಇವತ್ತು ಸ್ಪರ್ಧೆ ಮಾಡಿರುವ ಬಹುತೇಕ ಹಿರಿಯ ನಾಯಕರು ಹಲವು ದಶಕಗಳಿಂದ ಚುನಾವಣೆಯನ್ನು ಎದುರಿಸುತ್ತಾ ಬಂದಿದ್ದಾರೆ. ಮೂರರಿಂದ ನಾಲ್ಕು ದಶಕಗಳ ಹಿಂದೆ ಇದ್ದಂತಹ ಪರಿಸ್ಥಿತಿ ಇವತ್ತಿಲ್ಲ. ಹಿಂದೆ ಮತದಾರರಲ್ಲಿ ಅವಿದ್ಯಾವಂತರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆಗ ನಾಯಕರು ನೀಡುವ ಭರವಸೆಗಳನ್ನು ಮತದಾರರ ಸುಲಭವಾಗಿ ನಂಬಿ ಬಿಡುತ್ತಿದ್ದರು. ರಾಜಕೀಯವಾಗಿಯೂ ಜನ ಅಷ್ಟೊಂದಾಗಿ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಅವತ್ತು ಬಹುತೇಕ ಜನ ಕಾಂಗ್ರೆಸ್ ಹೊರತು ಪಡಿಸಿ ಇನ್ಯಾವ ಪಕ್ಷವನ್ನಾಗಲೀ, ನಾಯಕರನ್ನಾಗಲೀ ಅಷ್ಟು ಸುಲಭವಾಗಿ ಒಪ್ಪಿಕೊಳ್ಳುತ್ತಿರಲಿಲ್ಲ.
ಫಲಿತಾಂಶದ ನಿರೀಕ್ಷೆಯಲ್ಲಿ ದೇಶ, ವಿದೇಶಿಗರು
ಆದರೆ ಕಳೆದೊಂದು ದಶಕದೀಚೆಗೆ ಎಲ್ಲವೂ ಬದಲಾಗಿದೆ. ನರೇಂದ್ರಮೋದಿ ನೇತೃತ್ವದಲ್ಲಿ ದೇಶದಾದ್ಯಂತ ಗಟ್ಟಿಯಾಗುತ್ತಿದೆ. ಅದೇ ವೇಳೆಯಲ್ಲಿ ಕಾಂಗ್ರೆಸ್ ದುರ್ಬಲವಾಗಿದೆ ಎಂಬುದನ್ನು ಒಪ್ಪಿಕೊಳ್ಳಲೇ ಬೇಕಾಗಿದೆ. ಆದರೆ ಕಳೆದ ಎರಡು ವರ್ಷಗಳಿಂದ ಕಾಂಗ್ರೆಸ್ 2024ರ ಲೋಕಸಭಾ ಚುನಾವಣೆಗೆ ತಯಾರಿ ಆರಂಭಿಸಿತ್ತು. ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ಮತ್ತು ನ್ಯಾಯ್ ಯಾತ್ರೆಗಳನ್ನು ನಡೆಸಿದರು.

ಅಷ್ಟೇ ಅಲ್ಲದೆ ಬಿಜೆಪಿಯನ್ನು ನೇರವಾಗಿ ಮಣಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತು ಬಿಜೆಪಿಯನ್ನು ವಿರೋಧಿಸುವವರನ್ನೆಲ್ಲ ಒಟ್ಟುಗೂಡಿಸಿ ಈ ಬಾರಿಗೆ ಚುನಾವಣೆಗೆ ಹೋಗಿರುವುದು ವಿಶೇಷವಾಗಿದೆ. ಹೀಗಾಗಿಯೇ ನಾವು ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸ ಕಾಂಗ್ರೆಸ್ ನೇತೃತ್ವದ ಐಎನ್ಡಿಐಎ ನದ್ದಾಗಿದೆ.
ಅದು ಏನೇ ಇರಲಿ ಈ ಬಾರಿಯ ಲೋಕಸಭಾ ಚುನಾವಣೆ ಹತ್ತು ಹಲವು ರೀತಿಯಲ್ಲಿ ಮತದಾರರಿಂದ ಹಿಡಿದು ರಾಜಕೀಯ ನಾಯಕರ ತನಕ ಎಲ್ಲರಲ್ಲೂ ಕುತೂಹಲವಂತು ಇದ್ದೇ ಇದೆ. ಅಂತಿಮವಾಗಿ ಮತದಾರರು ಯಾರನ್ನು ಬೆಂಬಲಿಸಿದ್ದಾರೆ? ಯಾರಿಗೆ ಅಧಿಕಾರ ಹಿಡಿಯಲು ಅವಕಾಶ ಮಾಡಿಕೊಟ್ಟಿದ್ದಾರೆ? ಎಂಬುದೆಲ್ಲವೂ ಗೊತ್ತಾಗಬೇಕಾದರೆ ಫಲಿತಾಂಶ ಹೊರ ಬರಲೇ ಬೇಕಾಗಿದೆ. ಆ ಕ್ಷಣಗಳಿಗಾಗಿ ದೇಶವಾಸಿಗಳು ಮಾತ್ರವಲ್ಲ ವಿದೇಶಿಗರೂ ಕಾತರದಿಂದ ಕಾಯುತ್ತಿರುವುದು ಎದ್ದು ಕಾಣಿಸುತ್ತಿದೆ.












Click it and Unblock the Notifications