ಕಾರವಾರ ನೌಕಾನೆಲೆ ಮುಂದೆ ಸ್ಥಳೀಯರ ಪ್ರತಿಭಟನೆ
ಉತ್ತರ ಕನ್ನಡ, ಮೇ 23 : ಕಾರವಾರದ ನೌಕಾನೆಲೆಯಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವಂತೆ ಹಾಗೂ ಹೆಚ್ಚಿನ ಪರಿಹಾರ ನೀಡುವಂತೆ ಒತ್ತಾಯಿಸಿ ಸೀಬರ್ಡ್ ನೌಕಾನೆಲೆ ಮುಂದೆ ಗುರುವಾರ ಸಾವಿರಾರು ಜನರು ಪ್ರತಿಭಟನೆ ನಡೆಸಿದರು. ಈ ಸಮಯದಲ್ಲಿ ವ್ಯಕ್ತಿಯೊಬ್ಬರು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆಯಿತು.
ಗುರುವಾರ ಸೀಬರ್ಡ್ ನೌಕಾನೆಲೆ ನಿರ್ಮಾಣದಿಂದ ನಿರಾಶ್ರಿತರಾದ ಸ್ಥಳೀಯರಿಗೆ ನೌಕಾನೆಲೆಯಲ್ಲಿ ಉದ್ಯೋಗ ನೀಡಬೇಕು ಹಾಗೂ ಸುಪ್ರೀಂಕೋರ್ಟ್ ಆದೇಶದಂತೆ ಹೆಚ್ಚಿನ ಪರಿಹಾರ ನೀಡುಬೇಕು ಎಂದು ಒತ್ತಾಯಿಸಿ ಸಾವಿರಾರು ಜನರು ಪ್ರತಿಭಟನೆ ನಡೆಸಿದರು. ನೌಕಾನೆಲೆಯ ಎಲ್ಲಾ ದ್ವಾರಗಳ ಬಳಿ ಪ್ರತಿಭಟನೆ ನಡೆಸಿದ್ದರಿಂದ ನೌಕಾನೆಲೆ ಸಿಬ್ಬಂದಿ ಸಂಚಾರಕ್ಕೆ ತೊಂದರೆ ಉಂಟಾಯಿತು.

ಪ್ರತಿಭಟನೆ ನಡೆಸುತ್ತಿದ್ದ ವೇಳೆಯೇ ಸಂದೇಶ ದುರ್ಗಾಕರ್ ಎಂಬುವವರು ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದರು. ತಕ್ಷಣ ಅಲ್ಲಿದ್ದ ಕೆಲವರು ಅವರನ್ನು ತಡೆದು ನೀರು ಸುರಿದರು. ಈ ಆತ್ಮಹತ್ಯೆ ಪ್ರಯತ್ನದಿಂದಾಗಿ ಕೆಲಕಾಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಯಿತು.
ಪ್ರತಿಭಟನೆ ನಡೆಸುತ್ತಿದ್ದಾಗ ಸೀಬರ್ಡ್ ನೌಕರನೊಬ್ಬ ಬೈಕ್ ಮೂಲಕ ನೌಕಾನೆಲೆಗೆ ಹೋಗಲು ಪ್ರಯತ್ನ ನಡೆಸಿದ, ಇದರಿಂದ ಕೋಪಗೊಂಡ ಪ್ರತಿಭಟನಾಕಾರರು, ಆತನನ್ನು ಹಿಡಿದು ಥಳಿಸಿ ಬೈಕನ್ನು ಜಖಂ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ಶಾಂತಗೊಂಡಿತು.
ಜಿಲ್ಲಾಧಿಕಾರಿಗೆ ಮುತ್ತಿಗೆ : ಪ್ರತಿಭಟನೆ ಕುರಿತು ಮಾಹಿತಿ ಪಡೆದು ಜಿಲ್ಲಾಧಿಕಾರಿ ಎಂ.ಟಿ ರೇಜು ಸ್ಥಳಕ್ಕೆ ಭೇಟಿ ನೀಡಿದರು. ಪ್ರತಿಭಟನೆ ಕೈ ಬಿಡುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದರು. ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗೆ ಮುತ್ತಿಗೆ ಹಾಕಿ ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದ ಜಿಲ್ಲಾಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ನೌಕಾನೆಲೆ ಸಿಬ್ಬಂದಿಯ ಸಂಚಾರಕ್ಕೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು. ಜಿಲ್ಲಾಧಿಕಾರಿಗಳ ಭರವಸೆಯಿಂದಾಗಿ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.












Click it and Unblock the Notifications