Darshan Arrest: ರೇಣುಕಾಸ್ವಾಮಿ ಕೊಲೆ ಕೇಸ್; ಜೈಲು ಸೇರಿದ ನಟ ದರ್ಶನ್: ಲಕ್ಷ್ಮೀ ಹೆಬ್ಬಾಳಕರ್ ಏನಂದ್ರು?
ಉಡುಪಿ , ಜೂನ್ 13: ಚಿತ್ರದುರ್ಗದ ಅಭಿಮಾನಿ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಮತ್ತು ಗ್ಯಾಂಗ್ ಅರೆಸ್ಟ್ ಆಗಿದ್ದಾರೆ. ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ನಲ್ಲಿ 17 ಆರೋಪಿಗಳ ಹೆಸರು ಉಲ್ಲೇಖಿಸಿದ್ದು, ಸದ್ಯ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಟೀಕೆ, ಆಕ್ರೋಶಕ್ಕೆ ಕಾರಣವಾಗಿದೆ.
ಉಡುಪಿ ಜಿಲ್ಲಾ ಪಂಚಾಯತ್ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ನಟ ದರ್ಶನ್ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಸಚಿವರು, ದೇಶದ ಕಾನೂನು ಎಲ್ಲರಿಗೂ ಒಂದೇ, ಕಾನೂನಿನ ಮುಂದೆ ಎಲ್ಲರೂ ಸಮಾನರು, ರಾಷ್ಟ್ರಪತಿಯಾಗಲಿ, ಸ್ಟಾರ್ ಆಗಲಿ, ಕೂಲಿ ಕಾರ್ಮಿಕನೇ ಆಗಲಿ. ಸರಕಾರ ಯಾರ ಒತ್ತಡಕ್ಕೂ ಮಣಿಯುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಕಾನೂನಿನ ಎಲ್ಲರೂ ಒಂದೇ. ಯಾರನ್ನು ರಕ್ಷಿಸುವ ಪ್ರಶ್ನೆ ಇಲ್ಲ. ರಾಜ್ಯ ಸರ್ಕಾರ ಕೂಡ ಯಾರ ಪರ ನಿಲ್ಲುವುದಿಲ್ಲ ಎಂದರು.

ಕಡಲ ಕೊರೆತ ತಡೆಗೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ತಲಾ 5 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಕಡಲ ಕೊರೆತದ ಶಾಶ್ವತ ಪರಿಹಾರಕ್ಕಾಗಿ ಡಿಪಿಆರ್ ಸಿದ್ಧಪಡಿಸಲಾಗಿದ್ದು, ಇದಕ್ಕೆ ರಾಜ್ಯ ಸರ್ಕಾರದಿಂದ ಮಾತ್ರ ಪರಿಹಾರ ನೀಡಲು ಸಾಧ್ಯವಿಲ್ಲ.ಕೇಂದ್ರ ಮತ್ತು ರಾಜ್ಯ ಸರ್ಕಾರ ಸಮನ್ವಯತೆಯೊಂದಿಗೆ ಕೆಲಸ ಮಾಡಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ಒಬ್ಬ ಶ್ರೇಷ್ಠ ನಟನಾಗಿ ಈ ರೀತಿಯಾಗಿ ವರ್ತಿಸಬಾರದಿತ್ತು: ಮುತಾಲಿಕ್
ಬೆಂಗಳೂರಿನಲ್ಲಿ ದರ್ಶನ್ ಹಾಗೂ ಸಹಚರ ನಡೆಸಿರುವ ಘಟನೆ ಅತ್ಯಂತ ಅಮಾನುಷವಾದದ್ದು ಎಂದು ಪ್ರಮೋದ್ ಮುತಾಲಿಕ್ ಹೇಳಿದರು. ಒಬ್ಬ ಶ್ರೇಷ್ಠ ನಟನಾಗಿ ಈ ರೀತಿಯಾಗಿ ವರ್ತಿಸಬಾರದಿತ್ತು. ಈ ವರ್ತನೆ ಅತ್ಯಂತ ಕೀಳು ಮಟ್ಟದ್ದಾಗಿದೆ. ಈ ರೀತಿ ಯಾರಿಗೂ ಅನ್ಯಾಯ ಆಗಬಾರದು. ಈಗಾಗಲೇ ಪೊಲೀಸರು ಅತ್ಯಂತ ಚುರುಕುತನದಿಂದ ಕಾರ್ಯನಿರ್ವಹಿಸಿ ಎಲ್ಲಾ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮುಂದಿನ ದಿನಗಳಲ್ಲಿ ಅಭಿಮಾನಿಗಳು ಹುಚ್ಚು ಅಭಿಮಾನ ಪ್ರದರ್ಶನ ಮಾಡಬಾರದು. ನಟರ ನಡವಳಿಕೆಯನ್ನು ಸಹ ಗಮನಿಸಬೇಕು, ಅಭಿಮಾನ ಚಿತ್ರದ ಮೇಲೆ ಇರಬೇಕೆ ಹೊರತು ನಟರ ಮೇಲಲ್ಲ. ಕಾರಣ ನಟರು ತೆರೆಯ ಮೇಲೆ ಮಾತ್ರ ನಟರಾಗದೆ ಜೀವನದಲ್ಲೂ ಸಹ ಉತ್ತಮ ಚಾರಿತ್ರ್ಯ ಹೊಂದಿರಬೇಕಾಗಿದ್ದು ಅತ್ಯವಶ್ಯವಾಗಿದೆ ಎಂದರು.
ಈ ಪ್ರಕರಣದ ಕುರಿತು ಹಾಸನದಲ್ಲಿ ಮಾಜಿ ಶಾಸಕ ಎ.ಟಿ ರಾಮಸ್ವಾಮಿ ಮಾತನಾಡಿ, ಚಿತ್ರದುರ್ಗದ ರೇಣುಕಾಸ್ವಾಮಿಯನ್ನ ಸಿನಿಮೀಯ ರೀತಿ ಕೊಲೆಮಾಡಲಾಗಿದೆ. ಮೇರು ನಟ ಎಂದು ಹೆಸರು ಪಡೆದು ಈ ರೀತಿ ಕೃತ್ಯವನ್ನ ದರ್ಶನ್ ಮತ್ತು ಗ್ಯಾಂಗ್ ಮಾಡಿದೆ. ಇದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಹಣ ಗಳಿಗೆಯಿಂದ ಹೀಗೆ ಮಾಡುತ್ತಿದ್ದಾರೆ, ಉರಿದಿದ್ದು ಬೂದಿ ಆಗುತ್ತದೆ ಎಂದು ಹಳ್ಳಿಗಳಲ್ಲಿ ಹೇಳುತ್ತಾರೆ. ಅದಕ್ಕೆ ನಟ ದರ್ಶನಗ ಅವರೇ ಉದಾಹರಣೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದು ಕಾನೂನಿನ ದೌರ್ಬಲ್ಯವೋ ಇಲಾಖೆಯಯ ದೌರ್ಬಲ್ಯವೋ ಗೊತ್ತಿಲ್ಲ. ಮೇರು ನಟ ಕೊಲೆಯಲ್ಲಿ ಭಾಗಿಯಾಗಿರೋದು ಶೋಭೆ ತರೋದಿಲ್ಲ ಎನ್ನೋದು ನನ್ನ ಭಾವನೆ, ಅವರ ಅಭಿಮಾನಿಗಳಿಗೆ ಪ್ರಖ್ಯಾತರಾಗಿ ಇರಬೇಕಿತ್ತು. ಆದರೆ, ಕುಖ್ಯಾತಿ ಆಗುತ್ತಿರೋದು ದುರದೃಷ್ಟಕರ. ಇದು ಇಡೀ ರಾಜ್ಯಕ್ಕೆ ತಂದಿರುವ ಕಳಂಕ. ಅವರ ವಿರುದ್ಧ ಕಠಿಣ ಕ್ರಮ ಆಗಬೇಕು, ಇವರದ್ದು ಇದೇ ಮೊದಲಲ್ಲ, ಹತ್ತಾರು ಘಟನೆ ನಡೆದಿದೆ. ಯಾವಾಗಲೂ ಅವರ ವಿರುದ್ಧ ಕಠಿಣ ಕ್ರಮ ಆಗಿಲ್ಲ, ಆದ್ದರಿಂದ ಇವರು ಎಚ್ಚೆತ್ತುಕ್ಕೊಂಡಿಲ್ಲ, ಆಗಲೇ ಕ್ರಮ ಆಗಿದ್ರೆ ಹೀಗೆ ಆಗ್ತುರ್ಲಿಲ್ಲ ಎಂದು ಆಕ್ರೋಶ ಹೊರ ಹಾಕಿದರು.
ಡಾ. ರಾಜ್ಕುಮಾರ್ ಸಿನಿಮಾದಲ್ಲೇ ಸಿಗರೇಟ್, ಮದ್ಯಪಾನ ಮಾಡುವ ಸೀನ್ಗಳನ್ನೇ ಮಾಡುತ್ತಿರಲಿಲ್ಲ. ಅವರೆಲ್ಲಿ ಇಂತಹ ನಟರು ಎಲ್ಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಇವರ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದು ಆಗ್ರಹಸಿದ್ದಾರೆ. ದೇಶದಲ್ಲಿ ಅನೇಕ ಪ್ರಕರಣಗಳಲ್ಲಿ ಕುಲಾಸೆ ಆಗಿರೋದನ್ನ ನೋಡಿದ್ದೇವೆ. ಇಂತಹವರನ್ನ ಹದಿನೈದು ದಿನ ಆದಮೇಲೆ ಬಿಡಿಸಿಕೊಂಡು ಬರೋದನ್ನೂ ನೋಡಿದ್ದೇವೆ, ಹಣ ಮಾತನಾಡಿದಾಗ ಕಾನೂನೇ ಮೂಕವಾಗುತ್ತವೆ. ಹೊರಗಡೆ ಬಂದು ದುಡ್ಡು ಕೊಟ್ಟು ಸಾಕ್ಷ್ಯ ನಾಶ ಮಾಡುತ್ತಾರೆ. ಸೂಕ್ತ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.












Click it and Unblock the Notifications