ಭಾರತೀಯ ರೈಲ್ವೆಯಲ್ಲಿ ಕೊಂಕಣ ರೈಲ್ವೆ ವಿಲೀನ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ
ಬೆಂಗಳೂರು, ಮಾರ್ಚ್ 17: ಹಲವು ದಿನಗಳಿಂದ ಭಾರತೀಯ ರೈಲ್ವೆಯಲ್ಲಿ ಕೊಂಕಣ ರೈಲ್ವೆ ವಿಲೀನ ಮಾಡಬೇಕು ಎಂಬ ಬೇಡಿಕೆ ಕೇಳಿ ಬರುತ್ತಿದೆ. ಭಾರತೀಯ ರೈಲ್ವೆ ವಿವಿಧ ರಾಜ್ಯಗಳು ಒಪ್ಪಿಗೆ ನೀಡಿದರೆ ಇದಕ್ಕೆ ಅನುಮತಿ ನೀಡುವುದಾಗಿ ಹೇಳಿದೆ. ಕರ್ನಾಟಕ ಸೇರದಂತೆ ವಿವಿಧ ರಾಜ್ಯಗಳು ಈ ಕುರಿತು ಅಂತಿಮ ಒಪ್ಪಿಗೆಯನ್ನು ನೀಡಬೇಕಿದೆ. ಕೊಂಕಣ ರೈಲ್ವೇ ಕಾರ್ಪೊರೇಷನ್ ಲಿಮಿಟೆಡ್ನಲ್ಲಿ (ಕೆಆರ್ಸಿಎಲ್) ಕರ್ನಾಟಕ, ಮಹಾರಾಷ್ಟ್ರ, ಗೋವಾ ಮತ್ತು ಕೇರಳ ರಾಜ್ಯಗಳು ಪಾಲನ್ನು ಹೊಂದಿವೆ.
ರೈಲ್ವೆ ಖಾತೆ ರಾಜ್ಯ ಸಚಿವ, ತುಮಕೂರು ಸಂಸದ ವಿ. ಸೋಮಣ್ಣ, "ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸಲು ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ" ಎಂದು ಹೇಳಿದ್ದರು. ಗೋವಾ ರಾಜ್ಯ ಈಗಾಗಲೇ ಕೆಆರ್ಸಿಎಲ್ನಲ್ಲಿ ತಾನು ಹೊಂದಿರುವ ಪಾಲನ್ನು ತ್ಯಜಿಸಲು ಒಪ್ಪಿಗೆಯನ್ನು ಕೊಟ್ಟಿದೆ.

ಕರ್ನಾಟಕ ಸರ್ಕಾರ ಭಾರತೀಯ ರೈಲ್ವೆಯಲ್ಲಿ ಕೊಂಕಣ ರೈಲ್ವೆ ವಿಲೀನಕ್ಕೆ ಮೌಖಿಕ ಅನುಮತಿಯನ್ನು ನೀಡಿದೆ. ಆದರೆ ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಧಿಕೃತವಾಗಿ ಒಪ್ಪಿಗೆಯನ್ನು ಕೊಡಬೇಕಿದೆ. ಭಾರತೀಯ ರೈಲ್ವೆಯಲ್ಲಿ ಕೆಆರ್ಸಿಎಲ್ ವಿಲೀನವಾದರೆ ಅದಕ್ಕೆ ಸಹ ಹೆಚ್ಚಿನ ಅನುದಾನ ಸಿಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಕರ್ನಾಟಕ ಕರಾವಳಿಯ ಜಿಲ್ಲೆಗಳು ಕೆಆರ್ಸಿಎಲ್ ವ್ಯಾಪ್ತಿಯಲ್ಲಿದೆ.
ಸಚಿವ ಸಂಪುಟ ಸಭೆಯಲ್ಲಿ ಚರ್ಚೆ: ಸೋಮವಾರ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಶಾಸಕರ ನಿಯೋಗದ ಜೊತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಸಚಿವರಾದ ಎಂ. ಬಿ. ಪಾಟೀಲ್ ಭೇಟಿ ಮಾಡಿದ್ದರು.
ಈ ನಿಯೋಗದಲ್ಲಿ ಶಾಸಕರಾದ ವಿ. ಸುನಿಲ್ ಕುಮಾರ್, ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ ಇದ್ದರು. ಭಾರತೀಯ ರೈಲ್ವೆಯಲ್ಲಿ ಕೆಆರ್ಸಿಎಲ್ ವಿಲೀನದ ಕುರಿತು ನಿಯೋಗ ಸಚಿವರ ಜೊತೆ ಚರ್ಚೆಯನ್ನು ನಡೆಸಿತು.
ಕೋಟ ಶ್ರೀನಿವಾಸ ಪೂಜಾರಿ ಸಾಮಾಜಿಕ ಜಾಲತಾಣದ ಪೋಸ್ಟ್ನಲ್ಲಿ, 'ರಾಜ್ಯದ ಸಚಿವರಾದ ಶ್ರೀ ಎಂಬಿ ಪಾಟೀಲ್ ಅವರನ್ನು ಭೇಟಿಯಾಗಿ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆ ಜೊತೆಗೆ ವಿಲೀನಗೊಳಿಸುವ ಬಗ್ಗೆ ಮಾತುಕತೆ ನಡೆಸಲಾಯಿತು' ಎಂದು ಹೇಳಿದ್ದಾರೆ.
'ಕಳೆದ 30 ವರ್ಷಗಳಿಂದ ಕೇಂದ್ರದ ಮಾಜಿ ಸಚಿವರಾದ ದಿ. ಜಾರ್ಜ್ ಫರ್ನಾಂಡೀಸ್ ರವರ ಶ್ರಮದಿಂದ ಹಲವು ರಾಜ್ಯಗಳ ಒಡಂಬಡಿಕೆಯ ಮೂಲಕ ಜಾರಿಗೆ ತಂದಿರುವ ಈ ಕೊಂಕಣ ರೈಲ್ವೆಯು ಈಗ ನಷ್ಟದಲ್ಲಿದೆ. ಮಾತ್ರವಲ್ಲದೆ ಇದೊಂದು ಪ್ರತ್ಯೇಕ ಇಲಾಖೆ ಆಗಿರುವ ಕಾರಣ ಕರಾವಳಿ ಭಾಗದ ರೈಲ್ವೆ ಅಭಿವೃದ್ಧಿಗೆ ಭಾರೀ ತೊಡಕುಂಟುಮಾಡುತ್ತಿದೆ' ಎಂದು ತಿಳಿಸಿದ್ದಾರೆ.
'ಈಗಾಗಲೇ ಗೋವಾ ರಾಜ್ಯವು ಇದಕ್ಕೆ ಒಪ್ಪಿಗೆ ನೀಡಿದ್ದು, ನಮ್ಮ ರಾಜ್ಯವೂ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಲು ಮನವಿ ಮಾಡಿದೆವು. ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ಮುಂದಿನ ಸಚಿವ ಸಂಪುಟದಲ್ಲೇ ಈ ಬಗ್ಗೆ ಒಪ್ಪಿಗೆ ಪಡೆಯುತ್ತೇವೆ ಎಂಬ ಭರವಸೆ ನೀಡಿದರು' ಎಂದು ಪೋಸ್ಟ್ ಹಾಕಿದ್ದಾರೆ.
ಲೋಕಸಭೆಯಲ್ಲಿಯೂ ಕೊಂಕಣ ರೈಲ್ವೆ ವಿಲೀನದ ಕುರಿತು ಚರ್ಚೆ ನಡೆದಿತ್ತು. ಆಗ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್, ಕೆಆರ್ಸಿಎಲ್ನಲ್ಲಿ ಪಾಲು ಹೊಂದಿರುವ 4 ರಾಜ್ಯಗಳಲ್ಲಿ ಗೋವಾ ಮಾತ್ರ ರೈಲ್ವೆ ಸಚಿವಾಲಯದ ಪರವಾಗಿ ತನ್ನ ಪಾಲನ್ನು ತ್ಯಜಿಸಲು ಇಚ್ಛೆ ವ್ಯಕ್ತಪಡಿಸಿದೆ ಎಂದು ಹೇಳಿದ್ದರು.
ರೈಲ್ವೆ ಸಚಿವಾಲಯ ಕೆಆರ್ಸಿಎಲ್ನಲ್ಲಿ ಪಾಲು ಹೊಂದಿರುವ ಮಹಾರಾಷ್ಟ್ರ, ಕರ್ನಾಟಕ, ಕೇರಳ ಮತ್ತು ಗೋವಾ ರಾಜ್ಯ ಸರ್ಕಾರಗಳನ್ನು ತಮ್ಮ ಪಾಲಿನ ಪ್ರಕಾರ ಕೆಆರ್ಸಿಎಲ್ನಲ್ಲಿನ ಬಂಡವಾಳ ವೆಚ್ಚಕ್ಕೆ ಕೊಡುಗೆ ನೀಡುವಂತೆ ಅಥವಾ ಸಚಿವಾಲಯದ ಪರವಾಗಿ ತಮ್ಮ ಷೇರುಗಳನ್ನು ತ್ಯಜಿಸುವಂತೆ ಕೇಳಿಕೊಂಡಿದೆ. ಆದರೆ ಎಲ್ಲಾ ರಾಜ್ಯಗಳಿಂದ ಇನ್ನು ಒಪ್ಪಿಗೆ ಸಿಗುವುದು ಬಾಕಿ ಇದೆ.












Click it and Unblock the Notifications