Karnataka Rains: ಈ ಜಿಲ್ಲೆಗಳಿಗೆ ಭಾರೀ ಚಳಿ ಎಚ್ಚರಿಕೆ, ಕರ್ನಾಟಕ ಹವಾಮಾನ ವರದಿ, ಮುನ್ಸೂಚನೆ
ಬೆಂಗಳೂರು, ಜನವರಿ 21: ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆ ಸುರಿದಿದ್ದ ಮಳೆರಾಯನ ಅಬ್ಬರ ಇಳಿಕೆ ಆಗಿದೆ. ಮುಂದಿನ ಒಂದು ವಾರದ ಕಾಲ ರಾಜ್ಯದಲ್ಲಿ ಅಲ್ಲಲ್ಲಿ ತುಂತುರು ಮಳೆ ಆಗಬಹುದು. ಉಳಿದಂತೆ ಒಣಹವೆ ಮುಂದುವರಿಯಲಿದೆ. ಬೆಂಗಳೂರು ಇನ್ನಿತರ ಜಿಲ್ಲೆಗಳಿಗೆ ಮುಂದಿನ ಮೂರು ದಿನ ಚಳಿ, ದಟ್ಟ ಮಂಜಿನ ವಾತಾವಣದ ಎಚ್ಚರಿಕೆ ನೀಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಹೌದು, ಬಂಗಾಳಕೊಲ್ಲಿ ಸಮುದ್ರ ಭಾಗ ಸೇರಿದಂತೆ ವಿವಿಧೆಡೆ ಉಂಟಾಗಿದ್ದ ವೈಪರಿತ್ಯಗಳ ಪ್ರಭಾವದಿಂದ ಸುರಿಯುತ್ತಿದ್ದ ಮಳೆ ಅಬ್ಬರ ತಗ್ಗಿದೆ. ಬೆಂಗಳೂರಿನಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ಒಂದು ಗಂಟೆಗೂ ಹೆಚ್ಚು ಕಾಲ ತುಂತುರು ಮಳೆ ಆಗಿತ್ತು. ಇದೀಗ ಹವಾಮಾನ ವೈಪರಿತ್ಯಗಳು ದುರ್ಬಲವಾದ ಹಿನ್ನೆಲೆಯಲ್ಲಿ ಮತ್ತೆ ವಾತಾವರಣ ಸಹಜ ಸ್ಥಿತಿಯತ್ತ ಮರಳುತ್ತಿದೆ.

ಬೆಂಗಳೂರಿನಲ್ಲಿ ಸೋಮವಾರ ಕೊಂಚ ಚಳಿ ಹೆಚ್ಚಾಗಿದ್ದು, ಮಧ್ಯಾಹ್ನ ಒಣ ಹವೆ, ಗರಿಷ್ಠ ತಾಪಮಾನ ಕಂಡು ಬಂತು. ಇದೇ ವಾತಾವರಣ, ಒಳನಾಡು ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ, ಮೈಸೂರು, ರಾಮನಗರ, ಚಾಮರಾಜನಗರ, ಹಾಸನ, ದಾವಣಗೆರೆ, ಬಳ್ಳಾರಿ, ವಿಜಯನಗರ ಹಾಗೂ ಹಾವೇರಿ, ಗದಗ, ಕೊಪ್ಪಳ, ಬೆಳಗಾವಿ, ಧಾರವಾಡ, ವಿಜಯಪುರ, ಬಾಗಲಕೋಟೆ, ಬೀದರ್, ಯಾದಗಿರಿ ಭಾಗಗಳಲ್ಲೂ ಇಂತದ್ದೆ ವಾತವಾರಣ ಕಂಡು ಬರಲಿದೆ.
ಅತ್ಯಧಿಕ ಚಳಿಯ ಜಿಲ್ಲೆಗಳು ಇವು
ಕಳೆದ 24 ಗಂಟೆಗಳಿಂದ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಮಡಿಕೇರಿ, ಚಾಮರಾಜನಗರ, ತುಮಕೂರು ಭಾಗಗಳಲ್ಲಿ ಚಳಿ ಪ್ರಮಾಣದಲ್ಲಿ ಏರಿಕೆ ಆಗಿದೆ. ಬೀದರ್ನಲ್ಲಿ ಕನಿಷ್ಠ ಉಷ್ಣಾಂಶ 11 ಹಾಗೂ ಚಿಕ್ಕಮಗಳೂರಿನಲ್ಲಿ 12 ಡಿಗ್ರಿ ಸೆಲ್ಸಿಯಸ್ಗೆ ಕುಸಿಯುವ ಮೂಲಕ ಜಿಲ್ಲೆಗಳಲ್ಲಿ ಅತ್ಯಧಿಕ ಚಳಿ ಸೃಷ್ಟಿಯಾಗಿದೆ.
ಅದೇ ರೀತಿ ಧಾರವಾಡ, ವಿಜಯಪುರ, ಕೋಲಾರದ ಚಿಂತಾಮಣಿಯಲ್ಲಿ ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್, ಬೆಳಗಾವಿ ಏರ್ಪೋರ್ಟ್ 15, ಬಾಗಲಕೋಟೆ, ಹಾವೇರಿ, ಗದಗ, ಬೆಂಗಳೂರು ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ತಲಾ 16 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡು ಬಂದಿದೆ. ಹೀಗಾಗಿ ಈ ಪ್ರದೇಶಗಳಲ್ಲಿ ಹೆಚ್ಚು ಚಳಿಯ ವಾತಾವರಣ ಕಂಡು ಬಂದಿದೆ.
ಬೆಳಗ್ಗೆ ತೀವ್ರ ಚಳಿ, ದಟ್ಟ ಮಂಜು ದಾಖಲಾದರೆ, ಮಧ್ಯಾಹ್ನ ಬಿರು ಬಿಸಿಲಿಗೆ ಜನ ಕಂಗಾಲಾಗುತ್ತಿದ್ದಾರೆ. ಹಣ ಹವೆಯ ವಾತಾವರಣ ಮುಂದಿನ ಒಂದು ವಾರ ಮುಂದುವರಿಯಲಿದೆ. ಸದ್ಯ ವಾತಾವರಣದಲ್ಲಿ ಭಾರೀ ಮಳೆಯ ನಿರೀಕ್ಷೆ, ಚಂಡಮಾರುತ ವಾತಾವರಣದ ಎಚ್ಚರಿಕೆ ಇಲ್ಲ ಎಂದು ಐಎಂಡಿ ಸ್ಪಷ್ಟಪಡಿಸಿದೆ.
ಬೆಂಗಳೂರಲ್ಲಿ ಚಳಿ ಏರಿಕೆ ಸಾಧ್ಯತೆ
ಬೆಂಗಳೂರಿನಲ್ಲಿ ಇಂದು ಮಂಗಳವಾರ ಮೂರು ಕಡೆಗಳಲ್ಲಿ 15 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಎರಡು ದಿನಗಳ ಹಿಂದೆ ಬೆಳ್ಳಗ್ಗೆ ಸುರಿದ ಮಳೆಯ ನಂತರ ವಾತಾವರಣದಲ್ಲಿ ತೀವ್ರ ಬದಲಾವಣೆ ಆಗಿದೆ. ತೀವ್ರ ಚಳಿ, ಶೀತದ ಅನುಭವ ಆಗುತ್ತಿದೆ. ಮುಂದಿನ ಮೂರು ದಿನಗಳ ಕಾಲ ನಗರದಲ್ಲಿ ಇದೇ ರೀತಿಯ ವಾತಾವರಣ ಕಂಡು ಬರಲಿದೆ. ಜನರಿಗೆ ಆರೋಗ್ಯದ ಕಡೆಗೆ ಕಾಳಜಿ ವಹಿಸುವಂತೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications