ಮಾನವನ ಘನತೆ ಕಾಪಾಡದ ಯಾವುದೇ ಧರ್ಮ ರೋಗದಷ್ಟೇ ಕೆಟ್ಟದ್ದು: ಉದಯನಿಧಿ ಸ್ಟಾಲಿನ್ ಬೆಂಬಲಕ್ಕೆ ನಿಂತ ಪ್ರಿಯಾಂಕ್ ಖರ್ಗೆ
ಬೆಂಗಳೂರು, ಸೆಪ್ಟೆಂಬರ್ 04: ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಕುರಿತು ಹೇಳಿಕೆ ನೀಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಉದಯನಿಧಿ ಪರ ನಿಂತಿದ್ದಾರೆ.
ಉದಯನಿಧಿ ಹೇಳಿಕೆ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, 'ಸಮಾನತೆಯನ್ನು ಪ್ರತಿಪಾದಿಸದ ಅಥವಾ ಮಾನವನ ಘನತೆಯನ್ನು ಕಾಪಾಡದ ಯಾವುದೇ ಧರ್ಮವು ಧರ್ಮವೇ ಅಲ್ಲ' ಎಂದು ಹೇಳಿದ್ದಾರೆ.

'ಮನುಷ್ಯರಿಗೆ ಸಮಾನ ಹಕ್ಕುಗಳನ್ನು ನೀಡದ ಅಥವಾ ನಿಮ್ಮನ್ನು ಮನುಷ್ಯರಂತೆ ನಡೆಸಿಕೊಳ್ಳದ ಯಾವುದೇ ಧರ್ಮವು ರೋಗದಷ್ಟೇ ಕೆಟ್ಟದ್ದು' ಎಂದು ಅವರು ತಿಳಿಸಿದ್ದಾರೆ.
ಡಿಎಂಕೆ ಯುವ ಘಟಕದ ಮುಖ್ಯಸ್ಥ ಮತ್ತು ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮವನ್ನು ಸಮಾಜದಿಂದ ನಿರ್ಮೂಲನೆ ಮಾಡುವಂತೆ ಕರೆ ನೀಡಿದ್ದಾರೆ.
ಸನಾತನ ಧರ್ಮವು ಅನೇಕ ಸಾಮಾಜಿಕ ಅನಿಷ್ಟಗಳಿಗೆ ಕಾರಣವಾಗಿದೆ. ಇದು ಡೆಂಗಿ, ಮಲೇರಿಯಾ, ಕೊರೊನಾದಷ್ಟೇ ಕೆಟ್ಟದ್ದು. ಇದನ್ನು ನಿರ್ಮೂಲನೆ ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಉದಯನಿಧಿ ಸ್ಟಾಲಿನ್ ಹತ್ಯಾಕಾಂಡಕ್ಕೆ ಕರೆ ನೀಡಿದ್ದಾರೆ ಎಂದು ಆರೋಪಿಸಿದೆ.
ಈ ಕುರಿತು ಡಿಎಂಕೆ ಮೈತ್ರಪಕ್ಷ ಕಾಂಗ್ರೆಸ್ಸಿನ ಅಭಿಪ್ರಾಯವೇನು. ಇದು ಹಿಂದೂ ವಿರೋಧಿ ನಿಲುವಲ್ಲವೇ ಎಂದು ಬಿಜೆಪಿ ಪ್ರಶ್ನಿಸಿದೆ.
ತಮಿಳುನಾಡಿನ ಪ್ರಗತಿಪರ ಲೇಖಕರು, ಕಲಾವಿದರ ಸಂಘದಿಂದ ಶನಿವಾರ ಆಯೋಜಿಸಲಾಗಿದ್ದ 'ಸಮಾಜದಿಂದ ಸನಾತನ ಧರ್ಮದ ನಿರ್ಮೂಲನೆ' ಕುರಿತ ಸಮಾವೇಶದಲ್ಲಿ ಉದಯನಿಧಿ ಮಾತನಾಡಿದರು.
ಸನಾತನ ಧರ್ಮವು ಜಾತಿ, ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುತ್ತಿದೆ. ಅದನ್ನು ಬೇರು ಸಮೇತ ಕಿತ್ತುಹಾಕಬೇಕಿದೆ. ಮಾನವೀಯತೆ ಮತ್ತು ಮಾನವ ಸಮಾನತೆಯನ್ನು ಎತ್ತಿ ಹಿಡಿಯುವುದು ನಮ್ಮಲ್ಲರು ಗುರಿಯಾಗಬೇಕು ಎಂದು ಅವರು ಹೇಳಿದ್ದಾರೆ.
ಬಿಜೆಪಿಯ 'ಹತ್ಯಾಕಾಂಡ'ದ ಆರೋಪಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಉದಯನಿಧಿ ಸ್ಟಾಲಿನ್, 'ಸನಾತನ ಧರ್ಮವನ್ನು ಅನುಸರಿಸುತ್ತಿರುವ ಜನರ ನರಮೇಧಕ್ಕೆ ನಾನು ಎಂದಿಗೂ ಕರೆ ನೀಡಲ್ಲ. ಸನಾತನ ಧರ್ಮವು ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುವ ತತ್ವವಾಗಿದೆ. ಸನಾತನ ಧರ್ಮವನ್ನು ಬೇರುಸಹಿತ ಕಿತ್ತುಹಾಕುವುದು ನಮ್ಮ ಗುರಿಯಾಗಬೇಕು ಎಂಬುದಾಗಿ ಹೇಳಿದ್ದೇನೆ. ಈ ಮೂಲಕ ಮಾನವೀಯತೆ ಮತ್ತು ಮಾನವ ಸಮಾನತೆಯನ್ನು ಎತ್ತಿಹಿಡಿಯಬೇಕು ಎಂಬುದಾಗಿ ತಿಳಿಸಿದ್ದೇನೆ' ಎಂದು ಅವರು ತಿಳಿಸಿದ್ದಾರೆ.
ಡಿಎಂಕೆ ಸಮರ್ಥನೆ
ಡಿಎಂಕೆ ಕಾರ್ಯದರ್ಶಿ ಮತ್ತು ವಕ್ತಾರ ಸರವಣನ್ ಅಣ್ಣಾದೊರೈ ಅವರು ಉದಯನಿಧಿಯವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
'ನಮ್ಮ ನಾಯಕ ಉದಯನಿಧಿ ಅವರ ಹೇಳಿಕೆಯನ್ನು ತಿರುಚಲಾಗಿದೆ. ಉದಯನಿಧಿ ಸ್ಟಾಲಿನ್ ನರಮೇಧಕ್ಕೆ ಕರೆ ನೀಡಿದ್ದಾರೆ ಎಂದು ನಕಲಿ ಸುದ್ದಿ ವ್ಯಾಪಾರಿಗಳು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ' ಎಂದು ಅವರು ಆರೋಪಿಸಿದ್ದಾರೆ.
'ಕಾಂಗ್ರೆಸ್ ಮುಕ್ತ ಭಾರತ' ಎಂದು ಪ್ರಧಾನಿ ಹೇಳಿದರೆ ಹತ್ಯಾಕಾಂಡಕ್ಕೆ ಕರೆ ನೀಡಿದಂತೆಯೇ? ಉದಯನಿಧಿ ಸ್ಟಾಲಿನ್ ನರಮೇಧಕ್ಕೆ ಕರೆ ನೀಡಿದ್ದಾರೆ ಎಂದು ಹೇಗೆ ಹೇಳುತ್ತೀರಿ? ಇದು ನಕಲಿ ಸುದ್ದಿ. ಸುಳ್ಳು ಸುದ್ದಿ ದ್ವೇಷವನ್ನು ಹುಟ್ಟುಹಾಕುತ್ತದೆ. ನಾವು ಸನಾತನ ಧರ್ಮವನ್ನು ತೊಡೆದುಹಾಕಲು ಬಯಸುತ್ತೇವೆ ಎಂದು ಹೇಳಿದಾಗ ನಾವು ಕ್ರೂರ ಜಾತಿ ವ್ಯವಸ್ಥೆಯನ್ನು ತೊಡೆದುಹಾಕಲು ಬಯಸುತ್ತೇವೆ ಎಂದು ಅರ್ಥವೆಂದು ಅವರು ತಿಳಿಸಿದ್ದಾರೆ.












Click it and Unblock the Notifications