ಕರ್ನಾಟಕ ಚುನಾವಣೆ: ಗೋವಾ ಸರ್ಕಾರದಿಂದ ಪಾವತಿ ರಜೆ ಘೋಷಣೆ
ಪಣಜಿ, ಮೇ 9: ಗೋವಾದ ಬಿಜೆಪಿ ಸರ್ಕಾರವು ಮೇ 10 ರಂದು ನೆರೆಯ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ವೇತನ ಸಹಿತ ರಜೆ ಎಂದು ಘೋಷಿಸಿದೆ. ಇದು ಖಾಸಗಿ ಸಂಸ್ಥೆಗಳು ಮತ್ತು ಕೈಗಾರಿಕಾ ಕಾರ್ಮಿಕರನ್ನು ಸಹ ಒಳಗೊಂಡಿರುತ್ತದೆ ಎಂದು ತಿಳಿಸಿದೆ.
ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸರ್ಕಾರದ ಈ ನಿರ್ಧಾರವು ವಿರೋಧ ಪಕ್ಷಗಳು ಮತ್ತು ಉದ್ಯಮ ಸಂಸ್ಥೆಗಳಿಂದ ಟೀಕೆ ವ್ಯಕ್ತವಾಗಿದೆ. ಗೋವಾ ರಾಜ್ಯ ಕೈಗಾರಿಕೆಗಳ ಸಂಘವು ರಜೆಯ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಬಹುದು ಎಂದು ಹೇಳಿದೆ.

ಕರ್ನಾಟಕದಲ್ಲಿ ವಿಧಾನಸಭೆಗೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮೇ 10 ರಂದು ವೇತನ ಸಹಿತ ರಜೆ ಎಂದು ಘೋಷಿಸಿ ಸರ್ಕಾರ ಸೋಮವಾರ ಅಧಿಸೂಚನೆ ಹೊರಡಿಸಿದೆ. ಸರ್ಕಾರಿ ನೌಕರರು ಮತ್ತು ಕೈಗಾರಿಕಾ ಕಾರ್ಮಿಕರು ಸೇರಿದಂತೆ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ರಜೆಯನ್ನು ವಿಸ್ತರಿಸಲಾಗಿದೆ ಎಂದು ಅದು ಹೇಳಿದೆ.
ಗೋವಾ ರಾಜ್ಯ ಕೈಗಾರಿಕೆಗಳ ಸಂಘದ ಅಧ್ಯಕ್ಷ ದಾಮೋದರ್ ಕೋಚ್ಕರ್ ರಾಜ್ಯ ಸರ್ಕಾರದ "ಅಸಂಬದ್ಧ" ನಿರ್ಧಾರದ ಹಿಂದಿನ ತಾರ್ಕಿಕ ಉದ್ದೇಶವನ್ನು ಪ್ರಶ್ನಿಸಿದ್ದಾರೆ. ಗೋವಾದ ಕೈಗಾರಿಕೆಗಳು ಇದು ಸಂಪೂರ್ಣವಾಗಿ ಅಸಂಬದ್ಧ ಮತ್ತು ಮೂರ್ಖ ನಿರ್ಧಾರವೆಂದು ಹೇಳಿವೆ. ಬಿಜೆಪಿಯು ಚುನಾವಣಾ ಲಾಭಕ್ಕಾಗಿ ಉದ್ಯಮಗಳನ್ನು ಸುಲಿಗೆ ಮಾಡಲು ಮುಂದಾಗುತ್ತಿದೆ ರಾಜ್ಯ ಸರ್ಕಾರದ ಇಂತಹ ಏಕಪಕ್ಷೀಯ ನಿರ್ಧಾರಗಳ ವಿರುದ್ಧ ನಾವು ಕಾನೂನು ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಹೇಳಿದ್ದಾರೆ.

ಆಮ್ ಆದ್ಮಿ ಪಕ್ಷದ ಗೋವಾ ಘಟಕದ ಅಧ್ಯಕ್ಷ ಅಮಿತ್ ಪಾಲೇಕರ್ ಕೂಡ ರಾಜ್ಯ ಸರ್ಕಾರದ ಈ ನಿರ್ಧಾರ ಮೂರ್ಖತನದ್ದು ಎಂದು ವಾಗ್ದಾಳಿ ನಡೆಸಿದರು. ನಮ್ಮ ತಾಯಿ ಮಹದಾಯಿಯನ್ನು ಕರ್ನಾಟಕಕ್ಕೆ ಮಾರಾಟ ಮಾಡಿದ ನಂತರ ಬಿಜೆಪಿ ನೇತೃತ್ವದ ಗೋವಾ ಸರ್ಕಾರ ನೆರೆಹೊರೆಯವರನ್ನು ಮೆಚ್ಚಿಸಲು ಕೀಳು ಮಟ್ಟಕ್ಕೆ ಇಳಿಯುತ್ತಿದೆ ಎಂದು ಅವರು ವಿಡಿಯೋ ಸಂದೇಶದಲ್ಲಿ ಆರೋಪಿಸಿದ್ದಾರೆ.
ಗೋವಾ ಫಾರ್ವರ್ಡ್ ಪಾರ್ಟಿ (ಜಿಎಫ್ಪಿ) ಕೂಡ ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಖಂಡಿಸಿದೆ. "ರಾಮನವಮಿಯಂದು ಗೋವಾ ಜನರು ರಜೆ ಕೇಳಿದಾಗ ಡಾ.ಪ್ರಮೋದ್ ಸಾವಂತ್ರ ಉತ್ಸಾಹ ಮತ್ತು ತ್ವರಿತ ನಿರ್ಧಾರವು ಸ್ಪಷ್ಟವಾಗಿಲ್ಲ. ಆದರೆ ಬೊಮ್ಮಾಯಿ ಹಾಗೂ ಬಿಜೆಪಿ ಗೋವಾ ಘಟಕಕ್ಕೆ ವಿಶ್ವಾಸರ್ಹವಾಗಿದೆ ಎಂದು ಟ್ವೀಟ್ ಮಾಡಿದೆ.
ಗೋವಾ ಮುಖ್ಯಮಂತ್ರಿ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ನೆರೆಯ ರಾಜ್ಯಗಳಲ್ಲಿ ಚುನಾವಣೆಗಳು ಇದ್ದಾಗ ರಜೆ ನೀಡುವುದು ವಾಡಿಕೆ. ಕಳೆದ ವರ್ಷ ಗೋವಾದಲ್ಲಿ ಮತದಾನದ ದಿನದಂದು ಕರ್ನಾಟಕದಲ್ಲಿ ರಜೆ ಘೋಷಿಸಲಾಗಿತ್ತು ಎಂದು ಹೇಳಿದ್ದಾರೆ. ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ಗೋವಾ ಮತ್ತು ಕರ್ನಾಟಕ ನಡುವೆ ಜಗಳ ಇದ್ದೇ ಇದೆ.












Click it and Unblock the Notifications