ಮೊಟ್ಟೆ ಬಗ್ಗೆ ಪಶುಸಂಗೋಪನಾ ಸಚಿವರ ಸ್ವಾರಸ್ಯಕರ ಮಾತು
ಬೆಂಗಳೂರು, ಅ.12: ಪಶುಸಂಗೋಪನಾ ಸಚಿವರೂ ಆದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಟಿಬಿ ಜಯಚಂದ್ರ ಅವರು ಮೊಟ್ಟೆ ಸ್ವಾರಸ್ಯಕರವಾಗಿ ಮಾತನಾಡಿದ್ದಾರೆ.
ಶಾಲಾ ಮಕ್ಕಳಿಗಿನ್ನು ಮೊಟ್ಟೆಭಾಗ್ಯ: ಹೆಬ್ಬಾಳದಲ್ಲಿರುವ ಪಶುವೈದ್ಯಕೀಯ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ 'ವಿಶ್ವಮೊಟ್ಟೆ ದಿನಾಚರಣೆ'ಯನ್ನು ಉದ್ಘಾಟಿಸಿ ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆಗಾಗಿ 'ಮೊಟ್ಟೆಭಾಗ್ಯ' ಯೋಜನೆ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ ಎಂದು ಮಾತು ಆರಂಭಿಸಿದ ಸಚಿವ ಜಯಚಂದ್ರ ಅವರು ಮೊಟ್ಟೆಯ ಹುಟ್ಟನ್ನೇ ಪ್ರಶ್ನಿಸಿದರು.
ಮತ್ತು ತಮ್ಮ ಪ್ರಕಾರ ಮೊಟ್ಟೆ ಸಸ್ಯಾಹಾರ. ಒಪ್ಪದವರು ಈ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ನಡೆಸಲಿ. ಸೂಕ್ತ ನಿರ್ಧಾರಕ್ಕೆ ಬಂದು ಜನ ಮೊಟ್ಟೆ ತಿನ್ನುವಂತಾಗಲಿ ಎಂದು ಕಳಕಳಿ ವ್ಯಕ್ತಪಡಿಸಿದರು.

ಹಾಲು, ಜೇನುತುಪ್ಪವೂ ನಾನ್ ವೆಜ್ಜೇ!
ಮೊಟ್ಟೆ ಮಾಂಸಹಾರ ಎಂದು ತರ್ಕ ಮಾಡುವುದಾದರೆ ಹಾಲು ಮತ್ತು ಜೇನುತುಪ್ಪವೂ ಸಹ ಮಾಂಸಾಹಾರವಾಗುತ್ತದೆ. ಅರ್ಥವಿಲ್ಲದ ಆಚರಣೆ ಬಿಟ್ಟು ಅಪೌಷ್ಟಿಕತೆ ನಿವಾರಣೆಗೆ ಕನಿಷ್ಠ 2 ದಿನಕ್ಕೆ 1 ಮೊಟ್ಟೆ ತಿನ್ನುತ್ತಾ ಬನ್ನಿ ಎಂದು ಸಚಿವರು ಉಚಿತ ಸಲಹೆ ನೀಡಿದರು. (ಚಿತ್ರ ಕೃಪೆ- www.lolazabeth.com)

ಚೀನಾ ಸದೆಬಡಿಯಲು ಯುವಶಕ್ತಿಗೆ ಬೇಕು ಮೊಟ್ಟೆ ಶಕ್ತಿ!
ಜನಸಂಖ್ಯೆ ಹೆಚ್ಚಾಗಿರುವ ಚೀನಾದಲ್ಲಿ, ಹಿಂದುಳಿದ ರಾಷ್ಟ್ರ ಅಫ್ರಿಕಾದಲ್ಲಿ ಅಪೌಷ್ಟಿಕತೆ ಇಲ್ಲ. ಆದರೆ, ಮುಂದುವರಿಯುತ್ತಿರುವ ಭಾರತದಂತಹ ದೇಶದಲ್ಲಿ ಅಪೌಷ್ಟಿಕತೆ ಪ್ರಮಾಣ ಹೆಚ್ಚಾಗಿದೆ. ಅದರಲ್ಲೂ ಮಕ್ಕಳಲ್ಲಿ ಹೆಚ್ಚುತ್ತಿರುವ ಅಪೌಷ್ಟಿಕತೆ ತಡೆಯಲು ಸರ್ಕಾರ ಕ್ರಮ ಕೈಗೊಳ್ಳುತ್ತಿದ್ದು, ಮೊಟ್ಟೆ ನೀಡುವುದು ಅನಿವಾರ್ಯವಾಗಿದೆ. ಅಷ್ಟೇ ಚೀನಾವನ್ನು ಸದೆಬಡಿಯಲು ಯುವಶಕ್ತಿಗೆ ಬೇಕು ಎಂದು ಮೊಟ್ಟೆ ಶಕ್ತಿಯನ್ನು ಸಚಿವರು ಪ್ರತಿಪಾದಿಸಿದರು!

320ನೇ ಶತಮಾನದಿಂದಲೂ ಮೊಟ್ಟೆ ಬಳಕೆ
ಕ್ರಿ. ಪೂ. 320ನೇ ಶತಮಾನದಿಂದಲೂ ಮೊಟ್ಟೆ ಬಳಕೆಯಲ್ಲಿದೆ. ದೈಹಿಕ ಕ್ಷಮತೆಯಿದ್ದರೆ ಮಾತ್ರ ದೃಢ ಮನಸ್ಸನ್ನು ಕಾಯ್ದುಕೊಳ್ಳಲು ಸಾಧ್ಯ. ಮೊಟ್ಟೆ ಸಸ್ಯಾಹಾರವೆಂದೂ ಮೊಟ್ಟೆಯನ್ನು ತಿನ್ನುವ ಮೂಲಕ ಆರೋಗ್ಯಕರ ಮನಸ್ಸನ್ನು ಹೊಂದಬಹುದೆಂದೂ ಎಂದು ಹಿಂದೆ ಗಾಂಧೀಜಿ ಅವರೇ ಹೇಳಿದ್ದರು. ಮನುಷ್ಯ ಅಧಿಕ ಆಹಾರ ಸೇವನೆಗಿಂತ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸುವುದು ಉತ್ತಮ. ಮೊಟ್ಟೆ ಆಹಾರ ಮಾತ್ರವಲ್ಲದೆ ಸೌಂದರ್ಯ ವರ್ಧಕ ತಯಾರಿಕೆಗೂ ಬಳಕೆಯಾಗುತ್ತದೆ- ಸಚಿವ ಟಿಬಿ ಜಯಚಂದ್ರ.

ಅಮೆರಿಕದಲ್ಲಿರುವಂತೆ ಅಗತ್ಯಾಂಶ ಸೇರಿಸಿ ಮೊಟ್ಟೆ ವಿತರಣೆ
ಆದರೂ ಈ ಬಗ್ಗೆ ಜನರಲ್ಲಿ ಮೂಢನಂಬಿಕೆ ಇದೆ. ಅದರಲ್ಲೂ ಹಳದಿ ತಿನ್ನಬಾರದು. ಬಿಳಿ ಬಣ್ಣದ ಭಾಗವನ್ನು ಮಾತ್ರ ಸೇವಿಸಬೇಕೆಂಬ ವಾದವೂ ಇದೆ. ಆದರೆ, ಮೊಟ್ಟೆಯಲ್ಲಿರುವ ಎಲ್ಲಾ ಅಂಶವೂ ಮುಖ್ಯ. ಮೊಟ್ಟೆ ಬಗ್ಗೆ ಜನರಲ್ಲೂ ಅನೇಕ ರೀತಿಯ ಮೌಢ್ಯಗಳಿವೆ. ಈ ಬಗ್ಗೆ ಜಾಗೃತಿ ಆಗಬೇಕಿದೆ.
ಅಮೆರಿಕದಲ್ಲಿ ಮೊಟ್ಟೆಗೆ ಇನ್ನಷ್ಟು ಅಗತ್ಯ ಪೋಷಕಾಂಶ ಸೇರಿಸಿ ಹಳದಿ ಮೊಟ್ಟೆ ನೀಡಲಾಗುತ್ತಿದೆ. ಅದೇ ರೀತಿ ನಮ್ಮಲ್ಲೂ ಏನಾದರೂ ಅಗತ್ಯ ಅಂಶ ಸೇರಿಸಿ ಮೊಟ್ಟೆ ವಿತರಿಸಲು ಸಾಧ್ಯವೇ ಎಂದು ಚಿಂತಿಸಲಾಗುತ್ತಿದೆ ಎಂದೂ ಸಚಿವರು ವಿವರಿಸಿದರು












Click it and Unblock the Notifications