Karnataka Drought: ಬೆಳೆ ಹಾನಿ ಪರಿಶೀಲನೆಗೆ ಬರಲಿದೆ ಕೇಂದ್ರ ತಂಡ- ಯಾವ್ಯಾವ ಜಿಲ್ಲೆ? ರಾಜ್ಯ ಕೇಳಿದ ಪರಿಹಾರವೆಷ್ಟು? ತಿಳಿಯಿರಿ
ಬೆಂಗಳೂರು, ಅಕ್ಟೋಬರ್ 04: ಮುಂಗಾರು ಮಳೆ ಕೊರತೆಯಿಂದ ರಾಜ್ಯದಲ್ಲಿ ಬರಗಾಲ ಉಂಟಾಗಿದೆ. ಇದರಿಂದ ಬೆಳೆಗಳು ಹಾನಿಯಾಗಿವೆ. ಈ ಹಾನಿಯನ್ನು ಪರಿಶೀಲಿಸಲು ಕೇಂದ್ರದ ತಂಡವು ಗುರುವಾರದಿಂದ ರಾಜ್ಯಾದ್ಯಂತ ಪ್ರವಾಸ ಆರಂಭಿಸಲಿದೆ.
ಬೆಳೆ ಹಾನಿ ಪರಿಶೀಲನೆಗೆ ಕೇಂದ್ರ ತಂಡವು ಗುರುವಾರ ಕರ್ನಾಟಕಕ್ಕೆ ಭೇಟಿ ನೀಡಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರದ ಅಧ್ಯಯನ ತಂಡದೊಂದಿಗೆ ಸಭೆ ನಡೆಸಲಿದ್ದಾರೆ. ರಾಜ್ಯದ ಪ್ರಸ್ತುತ ಸ್ಥಿತಿಗತಿ ಕುರಿತು ಕೇಂದ್ರ ತಂಡಕ್ಕೆ ವಿವರಿಸುವ ಸಾಧ್ಯತೆ ಇದೆ.

ಗುರುವಾರ ಬೆಂಗಳೂರು ನಗರಕ್ಕೆ ಮೂರು ಪ್ರತ್ಯೇಕ ತಂಡಗಳು ಆಗಮಿಸಲಿದ್ದು, ರಾಜ್ಯದ 12 ಜಿಲ್ಲೆಗಳಿಗೆ ಭೇಟಿ ನೀಡಲಿವೆ. ಮಳೆ ಕೊರತೆಯಿಂದ ರೈತರು ಅನುಭವಿಸಿರುವ ನಷ್ಟದ ಮೌಲ್ಯಮಾಪನ ನಡೆಸಲಿವೆ.
ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಚಿತ್ರದುರ್ಗ, ಹಾವೇರಿ, ಗದಗ, ಕೊಪ್ಪಳ, ವಿಜಯನಗರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ದಾವಣಗೆರೆ ಜಿಲ್ಲೆಗಳಿಗೆ ಕೇಂದ್ರ ತಂಡ ಭೇಟಿ ನೀಡಲಿದೆ ಎಂದು ತಿಳಿದುಬಂದಿದೆ.

ತಂಡಗಳು ನಾಳೆಯಿಂದ ಐದು ದಿನಗಳ ಕಾಲ ಮೇಲೆ ತಿಳಿಸಿದ ಜಿಲ್ಲೆಗಳಿಗೆ ಭೇಟಿ ನೀಡಲಿವೆ. ಭೇಟಿ ಮುಗಿದ ಬಳಿಕ ಕೇಂದ್ರಕ್ಕೆ ವರದಿಯನ್ನು ಸಲ್ಲಿಸಲಿದ್ದು, ಅದರ ಆಧಾರದ ಮೇಲೆ ರಾಜ್ಯಕ್ಕೆ ಪರಿಹಾರವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಕರ್ನಾಟಕದ 195 ತಾಲೂಕುಗಳಲ್ಲಿ ಬರ
ಮಳೆ ಕೊರತೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ರಾಜ್ಯದ ಎಲ್ಲ 31 ಜಿಲ್ಲೆಗಳಲ್ಲಿ ಬೆಳೆ ನಷ್ಟದ ಕುರಿತು ಸಮೀಕ್ಷೆ ನಡೆಸಿದೆ. ರಾಜ್ಯದ 195 ತಾಲ್ಲೂಕುಗಳಲ್ಲಿ ಬರ ಎಂದು ಘೋಷಿಸಿದೆ. 195 ತಾಲೂಕುಗಳಲ್ಲಿ 161 ತಾಲ್ಲೂಕುಗಳು ತೀವ್ರ ಬರಪೀಡಿತ. 34 ತಾಲ್ಲೂಕುಗಳು ಮಧ್ಯಮ ಬರಪೀಡಿತ ಎಂದು ಗುರುತಿಸಲಾಗಿದೆ.
ಕರ್ನಾಟಕ ಸರ್ಕಾರವು 28,000 ಕೋಟಿ ರೂಪಾಯಿಗೂ ಹೆಚ್ಚು ಬೆಳೆ ನಷ್ಟವನ್ನು ಅಂದಾಜಿಸಿದೆ. ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ ಅಡಿಯಲ್ಲಿ ಕೇಂದ್ರದಿಂದ 4,000 ಕೋಟಿ ರೂಪಾಯಿಗಳ ಪರಿಹಾರವನ್ನು ಕೇಳಿದೆ.

ಈ ಕುರಿತು ಮಾತನಾಡಿರುವ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ, ರಾಜ್ಯವು ನೈಋತ್ಯ ಮುಂಗಾರು ಮಳೆ ಕೊರತೆಯನ್ನು ಎದುರಿಸುತ್ತಿದೆ. ಒಟ್ಟು ಆಹಾರ ಉತ್ಪಾದನೆ ಗುರಿಯಲ್ಲಿ ಶೇ.52 ರಷ್ಟು ನಷ್ಟ ಅನುಭವಿಸಿದೆ. ಅಂದಾಜು 40 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಮಳೆ ಕೊರತೆಯು ಭತ್ತ, ರಾಗಿ ಮತ್ತು ಜೋಳದ ಮೇಲೆ ಹೆಚ್ಚು ಪರಿಣಾಮ ಬೀರಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಜೂನ್ನಲ್ಲಿ ಶೇ 56 ರಷ್ಟು ಕಡಿಮೆ ಮಳೆಯಾಗಿದ್ದು, ಜುಲೈನಲ್ಲಿ ಶೇ 29 ರಷ್ಟು ಹೆಚ್ಚು ಮಳೆಯಾಗಿದೆ. ಆದರೆ ಆಗಸ್ಟ್ನಲ್ಲಿ ರಾಜ್ಯವು ಶೇ 73 ರಷ್ಟು ತೀವ್ರ ಮಳೆ ಕೊರತೆಯನ್ನು ಎದುರಿಸಿದೆ ಎಂದು ಕರ್ನಾಟಕ ಸರ್ಕಾರ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ಮಾಹಿತಿ ಪ್ರಕಾರ, ಜೂನ್ 1 ರಿಂದ ಆಗಸ್ಟ್ 19 ರ ನಡುವೆ ರಾಜ್ಯದಲ್ಲಿ ಶೇ 23 ರಷ್ಟು ಕಡಿಮೆ ಮಳೆಯಾಗಿದೆ. ಈ ಅವಧಿಯಲ್ಲಿ ರಾಜ್ಯದಲ್ಲಿ ಸರಾಸರಿ 635 ಮಿಮೀ ಮಳೆಯ ಬದಲಿಗೆ 487 ಮಿಮೀ ಮಳೆಯಾಗಿದೆ.
ರಾಜ್ಯ ಸರ್ಕಾರವು ಖಾಸಗಿ ಲೇವಾದೇವಿದಾರರ ( ಸಾಲ ನೀಡುವವರು ) ಮೇಲೆ ನಿಗಾ ಇಡಲು ಅಧಿಕಾರಿಗಳಿಗೆ ಆದೇಶಿಸಿದೆ. ಬರಗಾಲದಲ್ಲಿ ರೈತರಿಗೆ ಕಿರುಕುಳ ನೀಡದಂತೆ ಬ್ಯಾಂಕ್ಗಳಿಗೆ ನಿರ್ದೇಶಿಸಿದೆ. ಸರ್ಕಾರದ ನೀಡಿರುವ ಮಾಹಿತಿಯ ಪ್ರಕಾರ, ಈ ವರ್ಷವೊಂದರಲ್ಲೇ 251 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.












Click it and Unblock the Notifications