ನ. 1ರಿಂದ ಜೆಡಿಎಸ್ ಪಂಚರತ್ನ ರಥಯಾತ್ರೆ, ವೇಳಾಪಟ್ಟಿ
ಬೆಂಗಳೂರು, ಅಕ್ಟೋಬರ್ 26; ಕರ್ನಾಟಕ ಜೆಡಿಎಸ್ 2023ರ ವಿಧಾನಸಭೆ ಚುನಾವಣೆ ಮುಂದಿಟ್ಟುಕೊಂಡು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ. ನವೆಂಬರ್ 1ರಂದು ಪಕ್ಷದ ಬಹುನಿರೀಕ್ಷಿತ 'ಪಂಚರತ್ನ ರಥಯಾತ್ರೆ'ಗೆ ಚಾಲನೆ ಸಿಗಲಿದೆ.
ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆಗೆ ನವೆಂಬರ್ 1ರಂದು ಚಾಲನೆ ಸಿಗಲಿದೆ. ಮುಂದಿನ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸಹ ಅಂದೇ ಬಿಡುಗಡೆ ಮಾಡಲಾಗುತ್ತದೆ.
ಪಕ್ಷ ಅಧಿಕಾರಕ್ಕೆ ಬಂದರೆ ಉದ್ಯೋಗ, ಶಿಕ್ಷಣ, ನೀರಾವರಿ, ಕೃಷಿ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮಾಡುವ ಬದಲಾವಣೆಗಳನ್ನು ವಿವರಿಸುವ ಪಂಚರತ್ನ ರಥಯಾತ್ರೆಯ ಮೊದಲ ಹಂತಕ್ಕೆ ನವೆಂಬರ್ 1ರಂದು ಚಾಲನೆ ಸಿಗಲಿದೆ. ರಾಜ್ಯಾದ್ಯಂತ ಈ ಯಾತ್ರೆ ಸುಮಾರು 35 ದಿನಗಳ ಕಾಲ ಸಂಚಾರ ನಡೆಸಲಿದೆ.
ಬಿಜೆಪಿಯ ಜನಸಂಕಲ್ಪ ಯಾತ್ರೆ, ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆ ಬಳಿಕ ರಾಜ್ಯದ ಮತ್ತೊಂದು ಪಕ್ಷ ಯಾತ್ರೆಯನ್ನು ಕೈಗೊಂಡಿದೆ. ಕೋಲಾರದ ಮುಳಬಾಗಿಲಿನಿಂದ ಯಾತ್ರೆ ಆರಂಭವಾಗಲಿದೆ.

ಏನಿದು ಪಂಚರತ್ನ ಯಾತ್ರೆ?
1. ಶಿಕ್ಷಣವೇ ಆಧುನಿಕ ಶಕ್ತಿ; ಉತ್ತಮ ಗುಣಮಟ್ಟದ ಹಾಗೂ ವ್ಯವಸ್ಥಿತ ಶಿಕ್ಷಣವನ್ನು ಉಚಿತವಾಗಿ ನೀಡುವ ಯೋಜನೆ.
2. ಆರೋಗ್ಯ ಸಂಪತ್ತು; ಪ್ರತಿಯೊಂದು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ 24*7 ಕಾರ್ಯ ನಿರ್ವಹಣೆ ಮಾಡುವ ಸುಸಜ್ಜಿತ ಹೈ-ಟೆಕ್ ಆಸ್ಪತ್ರೆ ನಿರ್ಮಾಣ.
3. ರೈತ ಚೈತನ್ಯ; ಆಧುನಿಕ ತಂತ್ರಜ್ಞಾನದ ಕೃಷಿ ಪದ್ಧತಿ ಅಳವಡಿಕೆ, ಸರಿಯಾದ ಬೆಳೆ ಶೇಖರಣಾ ವ್ಯವಸ್ಥೆ ಹಾಗೂ ಲಾಭದಾಯಕವಾದ ಮಾರುಕಟ್ಟೆ ವ್ಯವಸ್ಥೆ.
4. ಯುವ ನವ ಮಾರ್ಗ ಹಾಗೂ ಮಹಿಳಾ ಸಬಲೀಕರಣ; ಯುವಜನತೆ ಹಾಗೂ ಮಹಿಳೆಯರಿಗೆ ಉದ್ಯೋಗ ಪಡೆಯಲು ಅಗತ್ಯ ತರಬೇತಿ ಹಾಗೂ ಮಾರ್ಗದರ್ಶನ.
5. ವಸತಿಯ ಆಸರೆ; ವಸತಿ ಇಲ್ಲದವರಿಗೆ ಸರ್ಕಾರದಿಂದಲೇ ವಸತಿ ಕಟ್ಟಿಕೊಡುವ ಯೋಜನೆ.

ಎಲ್ಲಿ ಸಾಗಲಿದೆ ಪಂಚರತ್ನ ರಥಯಾತ್ರೆ?
ನವೆಂಬರ್ 1ರಂದು ಕೋಲಾರ ಜಿಲ್ಲೆಯ ಮುಳಬಾಗಿಲಿನಿಂದ ರಥಯಾತ್ರೆ ಆರಂಭವಾಗಲಿದೆ.
* ನವೆಂಬರ್ 6 ರಿಂದ 10ರ ತನಕ ಚಿಕ್ಕಬಳ್ಳಾಪುರ ಜಿಲ್ಲೆ
* ನವೆಂಬರ್ 11 ರಿಂದ 13ರ ಬೆಂಗಳೂರು ಗ್ರಾಮಾಂತರ ಜಿಲ್ಲೆ
* ನವೆಂಬರ್ 14 ರಿಂದ 23 ತುಮಕೂರು ಜಿಲ್ಲೆ
* ನವೆಂಬರ್ 24 ರಿಂದ 30 ಹಾಸನ ಜಿಲ್ಲೆಯಲ್ಲಿ ರಥಯಾತ್ರೆ ಸಂಚಾರ.

ಪಂಚರತ್ನ ರಥಯಾತ್ರೆ ಸಾಗುವ ಮಾರ್ಗ
* ಡಿಸೆಂಬರ್ 1ರಂದು ತುಮಕೂರಿನ ಕುಣಿಗಲ್ನಲ್ಲಿ ಯಾತ್ರೆ ಸಂಚಾರ
* ಡಿಸೆಂಬರ್ 2ರಿಂದ 5 ರಾಮನಗರದಲ್ಲಿ ರಥಯಾತ್ರೆ ಸಂಚಾರ ನಡೆಸಲಿದೆ.
ಮೊದಲ ಹಂತದಲ್ಲಿ 35 ದಿನಗಳ ಕಾಲ ರಥಯಾತ್ರೆ ನಡೆಸಲು ಜೆಡಿಎಸ್ ಪಕ್ಷ ತಯಾರಿ ನಡೆಸಿದೆ.

120 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ
ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಪಂಚರತ್ನ ರಥಯಾತ್ರೆ ಮೊದಲ ದಿನವೇ 120 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡುವ ನಿರೀಕ್ಷೆ ಇದೆ. ಅಭ್ಯರ್ಥಿಗಳ ಘೋಷಣೆಗೂ ಮುನ್ನ ಗೊಂದಲವಿರುವ ಕ್ಷೇತ್ರಗಳ ನಾಯಕರ ಜೊತೆ ಕುಮಾರಸ್ವಾಮಿ ಸಭೆ ನಡೆಸಿದ್ದಾರೆ.
ಜೆಡಿಎಸ್ ಪಕ್ಷ ಈಗಾಗಲೇ ಜಲಧಾರೆ ಕಾರ್ಯಕ್ರಮದ ಮೂಲಕ ರಾಜ್ಯಾದ್ಯಂತೆ ಒಂದು ಹಂತದ ಯಾತ್ರೆ ನಡೆಸಿದೆ. ಈಗ ಪಂಚರತ್ನ ಯಾತ್ರೆ ಮೂಲಕ ಮತ್ತೊಮ್ಮೆ ರಾಜ್ಯದ ಜನರ ಮುಂದೆ ಹೋಗುತ್ತಿದೆ.

123 ಸ್ಥಾನಗಳ ಗುರಿ
ಜೆಡಿಎಸ್ ಪಕ್ಷ 2023ರ ವಿಧಾನಸಭೆ ಚುನಾವಣೆಯಲ್ಲಿ 123 ಸ್ಥಾನಗಳಲ್ಲಿ ಜಯಗಳಿಸುವ ಗುರಿ ಹೊಂದಿದೆ. ಅದಕ್ಕಾಗಿ ವಿವಿಧ ಕಾರ್ಯಕ್ರಮ ರೂಪಿಸುತ್ತಿದೆ.
ಪಕ್ಷದ ಟಿಕೆಟ್ ಆಕಾಂಕ್ಷಿಗಳಿಗೆ ಕಳೆದ ವರ್ಷ 4 ದಿನದ ಕಾರ್ಯಾಗಾರ ನಡೆಸಲಾಗಿತ್ತು. ಕಳೆದ ವಾರ ಮೈಸೂರಿನಲ್ಲಿ 2 ದಿನದ ಕಾರ್ಯಾಗಾರ ಆಯೋಜನೆ ಮಾಡಲಾಗಿತ್ತು.
ಟಿಕೆಟ್ ಆಕಾಂಕ್ಷಿಗಳ ಜೊತೆ ಪಕ್ಷದ ವರಿಷ್ಠ ಎಚ್. ಡಿ. ದೇವೇಗೌಡ, ಎಚ್. ಡಿ. ಕುಮಾರಸ್ವಾಮಿ, ಪಕ್ಷದ ಅಧ್ಯಕ್ಷ ಸಿ. ಎಂ. ಇಬ್ರಾಹಿಂ 6 ತಾಸು ದುಂಡು ಮೇಜಿನ ಸಭೆ ನಡೆಸಿದ್ದರು.












Click it and Unblock the Notifications