RCB: ಕಪ್ ಗೆಲ್ಲದ ಆರ್ಸಿಬಿಯನ್ನೆ ಬಿಟ್ಟಿಲ್ಲ, ಇನ್ನು ನಮ್ ಜೆಡಿಎಸ್ ಬಿಡ್ತಿವಾ!
ಕರ್ನಾಟಕ ಚುನಾವಣಾ ರಾಜಕೀಯದ ಕಾವು ಚಿನ್ನಸ್ವಾಮಿ ಕ್ರೀಡಾಂಗಣಕ್ಕೂ ಹಬ್ಬಿದೆ. ಆರ್ಸಿಬಿ ಅಂದ್ರೆ ಮೊದಲು ನೆನಪಾಗೋದು ತಂಡದ ಅಭಿಮಾನಿಗಳು. 16 ವರ್ಷದಿಂದ ಕಪ್ ಗೆಲ್ಲದೇ ಇದ್ದರೂ, ಅಭಿಮಾನಿಗಳ ಪ್ರೀತಿ ಮಾತ್ರ ಒಂಚೂರು ಕಡಿಮೆಯಾಗಿಲ್ಲ, ತಂಡಕ್ಕೆ ಸಿಗೋ ಬೆಂಬಲ ನೋಡಿ ಆಟಗಾರರೇ ಅಚ್ಚರಿಗೊಂಡಿರುವ ಎಷ್ಟೋ ನಿದರ್ಶನಗಳಿವೆ.
ಎದುರಾಳಿ ತಂಡಗಳೂ ಕೂಡ ಆರ್ ಸಿಬಿ ತಂಡದ ಅಭಿಮಾನಿಗಳನ್ನು ಕೊಂಡಾಡುತ್ತಾರೆ. ಈಗ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಒಂದಿಷ್ಟು ವಿದ್ಯಮಾನಗಳು ಜೆಡಿಎಸ್ಗೆ ಮುಜುಗರ ತಂದಿಕ್ಕಿವೆ.

ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ವಿಚಾರ ಜೆಡಿಎಸ್ಗೆ ತೀವ್ರ ಹಿನ್ನಡೆ ಉಂಟು ಮಾಡಿದೆ. ಹೆಚ್ಡಿ ರೇವಣ್ಣ ಅವರನ್ನು ಎಸ್ಐಟಿ ಬಂಧಿಸಿದೆ. ಪ್ರಜ್ವಲ್ ರೇವಣ್ಣ ಬಂಧನಕ್ಕೆ ಎಸ್ಐಟಿ ಬಲೆ ಬೀಸಿದ್ದು, ಲುಕ್ಔಟ್ ನೋಟಿಸ್ ಕೂಡ ಜಾರಿ ಮಾಡಿದೆ.
ಬೆಂಬಲಕ್ಕೆ ನಿಂತ ಕಾರ್ಯಕರ್ತರು
ಜೆಡಿಎಸ್ ಪಕ್ಷಕ್ಕೆ ರಾಷ್ಟ್ರಮಟ್ಟದಲ್ಲಿ ಮುಜುಗರ ಆಗುತ್ತಿರುವ ಸಂದರ್ಭದಲ್ಲೇ ಪಕ್ಷದ ನಿಷ್ಟಾವಂತ ಕಾರ್ಯಕರ್ತರು, ಬೆಂಬಲಿಗರು ತಂಡದ ಜೊತೆ ನಿಂತಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೂಡ ಜೆಡಿಎಸ್ ಕಾರ್ಯಕರ್ತರು, ಅಭಿಮಾನಿಗಳು ತಾವು ಯಾವುದೇ ಕಾರಣಕ್ಕೂ ಜೆಡಿಎಸ್ ಬಿಟ್ಟುಕೊಡಲ್ಲ ಎನ್ನುವ ಸಂದೇಶ ನೀಡಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದಲ್ಲಿ ಅಭಿಮಾನಿಗಳು, ಜೆಡಿಎಸ್ ಬೆಂಬಲಿಸುವ ಬ್ಯಾನರ್ ಪ್ರದರ್ಶನ ಮಾಡಿದ್ದಾರೆ.
"16 ವರ್ಷದಿಂದ ಸೋತಿರುವ ಆರ್ಸಿಬಿಯನ್ನೆ ಬಿಟ್ಟಿಲ್ಲ, 24 ವರ್ಷದಿಂದ ಇರೋ ಜೆಡಿಎಸ್ ಪಕ್ಷನಾ ಬಿಡ್ತೀವಾ" "ಕರ್ನಾಟಕದ ಪ್ರಾದೇಶಿಕ ಪಕ್ಷ ನಮ್ಮ ಹೆಮ್ಮೆ" ಎನ್ನುವ ಘೋಷವಾಕ್ಯ ಹೊಂದಿರುವ ಬ್ಯಾನರ್ ಹಿಡಿದು ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಜೊತೆಗೆ ನಮ್ಮ ಜೆಡಿಎಸ್, ಹೆಚ್ಡಿ ದೇವೇಗೌಡ, ಹೆಚ್ಡಿ ಕುಮಾರಸ್ವಾಮಿ ಹ್ಯಾಷ್ಟ್ಯಾಗ್ ಕೂಡ ಬಳಸಿದ್ದಾರೆ.
ರಾಜಕೀಯ ಪಿತೂರಿ ಎನ್ನುವ ಬೆಂಬಲಿಗರು
ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ವಿಚಾರದಲ್ಲಿ ಪಕ್ಷವನ್ನು ಬೆಂಬಲಿಸುವ ಅಭಿಮಾನಿಗಳು ಇದೆಲ್ಲಾ ಕಾಂಗ್ರೆಸ್ನವರ ಷಡ್ಯಂತ್ರ ಎಂದು ಆರೋಪಿಸಿದ್ದಾರೆ. ಇಷ್ಟು ದಿನ ಸುಮ್ಮನಿದ್ದು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪೆನ್ಡ್ರೈವ್ ಹಂಚಿರುವುದು ಪಕ್ಷದ ಹೆಸರು ಕೆಡಿಸಲು ಎನ್ನುವ ವಾದ ಪಕ್ಷದ ಕಾರ್ಯಕರ್ತರದ್ದು.
2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಮೂರು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದೆ. ಮಂಡ್ಯದಲ್ಲಿ ಹೆಚ್ಡಿ ಕುಮಾರಸ್ವಾಮಿ, ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಸ್ಪರ್ಧಿಸಿದ್ದರೆ, ಕೋಲಾರದಿಂದ ಮಲ್ಲೇಶ್ ಬಾಬು ಸ್ಪರ್ಧೆ ಮಾಡಿದ್ದಾರೆ.












Click it and Unblock the Notifications