ಲೋಕಸಭಾ ಚುನಾವಣೆಗೆ ಜೆಡಿಎಸ್ - ಬಿಜೆಪಿ ಮೈತ್ರಿ; ಗೆಲ್ಲುವ ಸ್ಥಾನಗಳ ಬಗ್ಗೆ ಭವಿಷ್ಯ ನುಡಿದ ಕೆ ಎಸ್ ಈಶ್ವರಪ್ಪ
ಶಿವಮೊಗ್ಗ, ಸೆಪ್ಟೆಂಬರ್ 11: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ -ಬಿಜೆಪಿ ಮೈತ್ರಿಕೂಟ 28 ಲೋಕಸಭಾ ಕ್ಷೇತ್ರಗಳ ಪೈಕಿ 28 ಸ್ಥಾನವನ್ನು ಗೆಲ್ಲುವುದು ನಿಶ್ಚಿತ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪ ಹೇಳಿದರು.
ಈ ಕುರಿತು ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಬಿಜೆಪಿ ಜೆಡಿಎಸ್ ಮೈತ್ರಿ ಸಹಿ ಸುದ್ದಿ. ಇವರೆಡೂ ಪಕ್ಷ ಒಂದಾದರೆ ರಾಜ್ಯದಲ್ಲಿ ಕಾಂಗ್ರೆಸ್ ಅಡ್ರೆಸ್ ಇಲ್ಲದಂತಾಗುತ್ತದೆ, ಕಾಂಗ್ರೆಸ್ಗೆ ಹೊಟ್ಟೆ ನೋವಾಗುತ್ತಿದೆ. ಕೋಮುವಾದಿ ಬಿಜೆಪಿಗೆ ಸೇರಿದ್ದಕ್ಕೆ ಜೆಡಿಎಸ್ ಬಗ್ಗೆ ಆರೋಪ ಮಾಡುತ್ತಿದೆ.

ಅಟಲ್ ಬಿಹಾರಿ ವಾಜಪೇಯಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ದೂರವಿಡಲು ಬೇಷರತ್ ಬೆಂಬಲ ನೀಡುವುದಾಗಿ ಹೇಳಿದರು. ಆಗ ರಾಮಕೃಷ್ಣ ಹೆಗಡೆ ಸಿಎಂ ಆದರು. ಸಿದ್ದರಾಮಯ್ಯಗೆ ಕನ್ನಡ ಕಾವಲು ಸಮಿತಿ ಅಧ್ಯಕ್ಷ ಸ್ಥಾನದ ಜೊತೆಗೆ ಗೂಟದ ಕಾರು ದೊರಕಿತು. ಆಗ ಬಿಜೆಪಿ ರಾಷ್ಟ್ರೀಯ ಪಕ್ಷವಾಗಿತ್ತು. ಈಗ ಸಿಎಂ ಸ್ಥಾನ ಹೋಗುವ ಸಾಧ್ಯತೆಯಿಂದ ಬಿಜೆಪಿ ಕೋಮುವಾದಿ ಪಕ್ಷವಾಗಿ ಕಾಣುತ್ತಿದೆ ಎಂದು ಕಿಡಿಕಾರಿದರು.
ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ -ಬಿಜೆಪಿ ಮೈತ್ರಿಕೂಟ 28ಕ್ಕೆ 28 ಸ್ಥಾನವನ್ನು ಗೆಲ್ಲುವುದು ನಿಶ್ಚಿತ. ಹಾಗಾಗಿ ಶಿವರಾಮ್ ಹೆಬ್ಬಾರ್ ಸೇರಿದಂತೆ ಹಲವರ ಮನೆಯ ಬಾಗಿಲು ಬಡಿಯುತ್ತಿದ್ದಾರೆ. ಆದರೂ ಯಾರೊಬ್ಬರೂ ಕಾಂಗ್ರೆಸ್ ಸೇರಲು ಹೋಗಿಲ್ಲ. ಅತಿ ಹಿಂದುಳಿದ ನಾಯಕರನ್ನು ತುಳಿದು ಅಧಿಕಾರ ನಡೆಸಲಾಗುತ್ತಿದೆ ಎಂದು ಹರಿಪ್ರಸಾದ್ ಆರೋಪಿಸಿದ್ದಾರೆ. ನನ್ನ ಹೆಸರು ಹೇಳಿಲ್ಲ ಎಂದು ಹೇಳಿದ್ದ ಸಿದ್ದರಾಮಯ್ಯ ಏಕೆ ಕೇಂದ್ರ ನಾಯಕರಿಗೆ ದೂರು ನೀಡಿದ್ದಾರೆ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯಗೆ ರಾಷ್ಟ್ರೀಯವಾದ ಗೊತ್ತಿಲ್ಲ. ಚೆಡ್ಡಿ ರಾಷ್ಟ್ರ ಭಕ್ತಿಯ ಪ್ರತೀಕ. ಹಾಗಾಗಿ ಹರಿಪ್ರಸಾದ್ ಮತ್ತು ಸಿದ್ದರಾಮಯ್ಯ ಚೆಡ್ಡಿ ಬಗ್ಗೆ ಮಾತನಾಡುವುದು ಸರಿಯಲ್ಲ. ಬಿಜೆಪಿಯನ್ನು ಕೋಮುವಾದಿ ಎನ್ನುತ್ತಿದ್ದ ದೇವೇಗೌಡರಿಗೂ ಈಗ ಮನವರಿಕೆ ಆಗಿದೆ. ಕಾಂಗ್ರೆಸ್ ವಿರೋಧಿಗಳನ್ನು ಬಿಜೆಪಿ ಆಹ್ವಾನಿಸುತ್ತಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರೈತರ ಪರ ಸರ್ಕಾರ ಇದೆ ಎಂಬುದು ಮರೆತು ಹೋಗಿದೆ. ಆಂತರಿಕ ಹಾಗೂ ಬಹುರಂಗ ಬಡಿದಾಟ ನಡೆದಿದೆ, ಐದು ಗ್ಯಾರಂಟಿಗಳ ಪೈಕಿ ಒಂದು ಗ್ಯಾರಂಟಿಯನ್ನೂ ಜನರಿಗೆ ಸಮಾಧಾನ ತರುವ ರೀತಿ ಜಾರಿಯಾಗಿಲ್ಲ. ರೈತರು ಸಂಕಷ್ಟದಲ್ಲಿದ್ದಾರೆ. ಹೀಗಿದ್ದೂ ಅವರಿಗೆ ಭರವಸೆ ತುಂಬುವ ಕೆಲಸ ಆಗಿಲ್ಲ. 200 ಯೂನಿಟ್ ಉಚಿತವಾಗಿ ನೀಡುವುದು ಹಾಗಿರಲಿ. ದುಡ್ಡು ಕೊಡುತ್ತೇವೆ ಎಂದರೂ ವಿದ್ಯುತ್ ಸಿಗುತ್ತಿಲ್ಲ. ಕೈಗಾರಿಕೆಗಳು ನೆರೆಯ ರಾಜ್ಯಕ್ಕೆ ವಲಸೆ ಹೋಗುತ್ತಿವೆ ಎಂದು ಹೇಳಿದರು.
ಗೃಹ ಲಕ್ಷ್ಮಿ ಗ್ಯಾರಂಟಿ ಯೋಜನೆ ಪೂರ್ಣವಾಗಿ ಜಾರಿಯಾಗಿಲ್ಲ. ಅರ್ಜಿ ಸ್ವೀಕರಿಸುವುದನ್ನೇ ನಿಲ್ಲಿಸಿದ್ದಾರೆ. ಉಚಿತ ಅಕ್ಕಿ ನೀಡಲು ಸಾಧ್ಯವಾಗದೆ ಕೇಂದ್ರ ಸರ್ಕಾರದ ಮೇಲೆ ಎತ್ತಿ ಹಾಕಿದ್ದಾರೆ, ಉಚಿತ ಪ್ರಯಾಣದ ಪರಿಣಾಮ ಬೆಂಗಳೂರಿನಲ್ಲಿ ಜನ ಪರದಾಡುತ್ತಿದ್ದಾರೆ. ಏರ್ಪೋರ್ಟ್ ನಿಂದ ಬರಲಾಗದೆ ಜನರು ತೊಂದರೆಗೆ ಸಿಲುಕಿದ್ದಾರೆ, ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಸಚಿವರು ಹಳ್ಳಿಯ ಕಡೆಗೆ ಹೋಗಿ ರೈತರಿಗೆ ಧೈರ್ಯ ಹೇಳುತ್ತಿಲ್ಲ. ಅವರದ್ದೇ ಮಾಹಿತಿ ಪ್ರಕಾರ ಈ ತನಕ 139 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರೈತರು ಪರಿಹಾರಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ. ಹಾಗಾಗಿ ಸ್ವತಃ ಸಿಎಂ ರೈತರ ಆತ್ಮಹತ್ಯೆ ಹಾಗೂ ಪರಿಹಾರ ನೀಡಿಕೆ ಬಗ್ಗೆ ಶ್ವೇತಪತ್ರ ಹೊರಡಿಸಲಿ, ಬರಪೀಡಿತ ತಾಲೂಕಿನ ಘೋಷಣೆಗೆ ಸಂಪುಟ ಸಭೆ ತನಕ ಕಾಯಬೇಡಿ ಎಂದು ಸರ್ಕಾರಕ್ಕೆ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.
ಗ್ಯಾರಂಟಿ ಬಗ್ಗೆ ಸಚಿವರು ಚೀಪ್ ಪಾಪ್ಯುಲಾರಿಟಿ ಪಡೆಯುವುದರಲ್ಲಿ ಮಗ್ನರಾಗಿದ್ದಾರೆ. ಹಾಗಾಗಿ ಎಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಎಷ್ಟು ಜನರಿಗೆ ಪರಿಹಾರ ನೀಡಲಾಗಿದೆ, ಎಷ್ಟು ಬೆಳೆ ಹಾನಿಯಾಗಿದೆ ಎಂಬುದನ್ನು ಸಿಎಂ ತಿಳಿಸಬೇಕು. ಕಂದಾಯ ಇಲಾಖೆ ಮೂಲಕ ಮಾಹಿತಿ ತಿಳಿಸಿ, ನಿಮ್ಮ ನಿಲುವೇನು ಎಂದು ಹೇಳಬೇಕು, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಈ ಬಗ್ಗೆ ಮುಂದಾಗಲಿ. ಹಿರಿಯನಾಗಿ ನಾನು ಅವರಿಗೆ ಈ ಮಾತು ಹೇಳುತ್ತಿದ್ದೇನೆ ಎಂದು ಹೇಳಿದರು.












Click it and Unblock the Notifications