Janardhana Reddy: ನಾನು ಕಾರಿಂದ ಇಳಿತಿದ್ದಂಗೆ ಫೈರಿಂಗ್ ಮಾಡಿದ್ರು: ಅಚ್ಚರಿ ಹೇಳಿಕೆ ನೀಡಿದ ಜನಾರ್ದನ್ ರೆಡ್ಡಿ
ಬಳ್ಳಾರಿ: ಬಳ್ಳಾರಿಯಲ್ಲಿ ರಾತ್ರೋರಾತ್ರಿ ನಡೆದ ಬ್ಯಾನರ್ ಗಲಾಟೆಯ ನಡುವೆ ಗುಂಡಿನ ದಾಳಿ ಪ್ರಕರಣ ಇದೀಗ ರಾಜಕೀಯ ಯುದ್ಧಕ್ಕೆ ಕಾರಣವಾಗಿದೆ. ಸದ್ಯ ಬ್ಯಾನರ್ ಗಲಾಟೆ ಸದ್ಯ ಕೈ-ಕಮಲ ಪಾಳಯಲ್ಲಿ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದ್ದು, ಬ್ಯಾನರ್ ಘರ್ಷಣೆ ಕುರಿತು ಮಾಜಿ ಸಚಿವ ಜನಾರ್ದನ ರೆಡ್ಡಿ ತುರ್ತು ಸುದ್ದಿಗೋಷ್ಠಿ ನಡೆಸಿ ಶಾಸಕ ಭರತ್ ರೆಡ್ಡಿ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.
ಈ ಕುರಿತು ಇಂದು ( ಶುಕ್ರವಾರ) ಸುದ್ದಿಗೋಷ್ಟಿಯಲ್ಲಿ ಮಾಜಿ ಸಚಿವ ಹಾಗೂ ಶಾಸಕರಾದ ಜನಾರ್ದನ ರೆಡ್ಡಿ ಅವರು ಮಾತನಾಡಿ, ನನ್ನ ಕಾರು ಬಂದು ನಿಲ್ಲುತ್ತಿದ್ದಂತೆ, ಅಲ್ಲಿ ನಿಂತಿದ್ದವರು 'ರೆಡ್ಡಿ ಬಂದ್ರು' ಅಂತ ಜೋರಾಗಿ ಕೂಗಿದ್ರು. ಇದು ಫೈರಿಂಗ್ ಮಾಡೋಕೆ ಕೊಟ್ಟ ಮೆಸೇಜ್ ಆಗಿತ್ತು. ನಾನು ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆ ಗುಂಡು ಹಾರಿಸಿದ್ರು. ಈ ಗಲಾಟೆಯಲ್ಲಿ ನನ್ನನ್ನೇ ಟಾರ್ಗೆಟ್ ಮಾಡಿ ಮುಗಿಸೋಕೆ ಈ ಪ್ಲಾನ್ ನಡೆದಿತ್ತು ಎಂದು ಜನಾರ್ದನ ರೆಡ್ಡಿ ಸ್ಪೋಟಕ ಮಾಹಿತಿಯನ್ನ ಬಹಿರಂಗಪಡಿಸಿದ್ದಾರೆ.

ನಿನ್ನೆ(ಗುರುವಾರ) ನಡೆದ ಘಟನೆಯಿಂದ ಭರತ್ ರೆಡ್ಡಿ ಅವರ ಅಸಲಿ ಸಂಸ್ಕೃತಿ ಏನು ಅನ್ನೋದು ಜಗತ್ತಿಗೆ ಗೊತ್ತಾಗಿದೆ. ವಾಲ್ಮೀಕಿ ಹೆಸರಲ್ಲಿ ಇವರು ರಾಜಕೀಯ ಮಾಡ್ತಿದ್ದಾರೆ, ಆದರೆ ಬಳ್ಳಾರಿಯಲ್ಲಿ ನಡೀತಿರೋದೆಲ್ಲಾ ಅನೈತಿಕ ಚಟುವಟಿಕೆಗಳು ಅಂತ ಗಂಭೀರ ಆರೋಪ ಮಾಡಿದ್ದಾರೆ. ಈ ಗಲಾಟೆ ಸಣ್ಣದಲ್ಲ, ಇದರಿಂದ ಆ ಯುವಕ ಬಲಿಯಾಗಿದ್ದಾನೆ. ಈ ಕೇಸ್ ಸಣ್ಣದಲ್ಲ, ಇದರ ಹಿಂದೆ ದೊಡ್ಡ ಷಡ್ಯಂತ್ರ ಇದೆ. ಸತ್ಯ ಹೊರಗೆ ಬರಬೇಕು ಅಂದ್ರೆ ಒಂದೋ ಹೈಕೋರ್ಟ್ ಜಡ್ಜ್ ನೇತೃತ್ವದಲ್ಲಿ ತನಿಖೆ ಆಗಲಿ, ಇಲ್ಲಾಂದ್ರೆ ಕೇಸ್ ಅನ್ನು ಸಿಬಿಐ (CBI) ಗೆ ಕೊಡಿ ಅಂತ ಜನಾರ್ದನ ರೆಡ್ಡಿ ಸರ್ಕಾರವನ್ನ ಒತ್ತಾಯ ಮಾಡಿದ್ದಾರೆ.
ಇನ್ನೂ ಈ ಘಟನೆ ಕುರಿತು ನಾನೇ ಖುದ್ದಾಗಿ ಹೋಗಿ ಪೊಲೀಸ್ ಠಾಣೆಯಲ್ಲಿ ದೂರು ಕೊಡ್ತೀನಿ, ನ್ಯಾಯ ಸಿಗೋವರೆಗೂ ಬಿಡಲ್ಲ. ಇವರು ಈಗ ವಾಲ್ಮೀಕಿ ಪುತ್ಥಳಿ, ಬ್ಯಾನರ್ ಅಂತ ನಾಟಕ ಮಾಡ್ತಿದ್ದಾರೆ. ಆದರೆ, ನಾವು 20 ವರ್ಷಗಳ ಹಿಂದೆಯೇ ವಾಲ್ಮೀಕಿ ಭವನ ಕಟ್ಟಿ ಸಮಾಜಕ್ಕೆ ಅರ್ಪಣೆ ಮಾಡಿದ್ವಿ. ಇವರು ಮಹರ್ಷಿ ವಾಲ್ಮೀಕಿ ಹೆಸರನ್ನ ಬಳಸಿಕೊಂಡು ರಾಜಕೀಯ ಲಾಭ ಪಡ್ಕೊಳೋಕೆ ನೋಡ್ತಿದ್ದಾರೆ. ಇವರ ಉದ್ದೇಶ ಸಮಾಜ ಸೇವೆ ಅಲ್ಲ, ಗಲಾಟೆ ಮಾಡೋದು ಎಂದು ಮಾಜಿ ಸಚಿವ ಹಾಗೂ ಶಾಸಕ ಜನಾರ್ದನ ರೆಡ್ಡಿ ಅವರು ವಾಗ್ದಾಳಿ ನಡೆಸಿದ್ದಾರೆ.
ಇತ್ತ ಆ ಗಲಾಟೆ ಆಗೋ ಮುಂಚೆನೇ ಶ್ರೀರಾಮುಲು ಅವರು ಪರಿಸ್ಥಿತಿ ತಿಳಿಗೊಳಿಸೋಕೆ ಪ್ರಯತ್ನ ಪಟ್ಟಿದ್ರಂತೆ. ಆದರೆ, ಶ್ರೀರಾಮುಲು ಅವರು ಎಷ್ಟೇ ಬುದ್ಧಿ ಮಾತು ಹೇಳಿದ್ರೂ, ಅವರು ಕೇಳೋ ಸ್ಥಿತಿಯಲ್ಲಿ ಇರ್ಲಿಲ್ಲ. ಕಡೆಗೆ ಈ ಮಟ್ಟಕ್ಕೆ ಬಂದು ನಿಂತಿದೆ ಅಂತ ಕಾಂಗ್ರೆಸ್ ನಾಯಕರ ವಿರುದ್ಧ ಜನಾರ್ದನ ರೆಡ್ಡಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications