Government employee; ಜನಧನ್ ಯೋಜನೆಯಡಿ ವಿಮೆ ಸೌಲಭ್ಯ, ವಿವರ
ಬೆಂಗಳೂರು, ಸೆಪ್ಟೆಂಬರ್ 11; ಪ್ರಧಾನ ಮಂತ್ರಿ ಜನಧನ್ ಯೋಜನೆಯಡಿ ರಾಜ್ಯ ಸರ್ಕಾರದ ಸೇವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ/ ಸಿಬ್ಬಂದಿ ವರ್ಗದವರಿಗೆ ವಿಮಾ ಪಾಲಿಸಿ ಮಾಡಿಸಲು ಅವಕಾಶವಿದೆ. ಈ ಕುರಿತು ಸರ್ಕಾರದಿಂದಲೇ ಪತ್ರವೊಂದು ಪ್ರಕಟವಾಗಿದೆ.
ಡಾ. ವಿಶಾಲ್ ಆರ್. ಸರ್ಕಾರದ ಕಾರ್ಯದರ್ಶಿ (ವಿತ್ತೀಯ ಸುಧಾರಣೆ) ಆರ್ಥಿಕ ಇಲಾಖೆ ಈ ಕುರಿತು ಪತ್ರವನ್ನು ಬರೆದಿದ್ದಾರೆ. ಪ್ರಧಾನ ಮಂತ್ರಿ ಜನಧನ ಯೋಜನೆಯಡಿ ವಿಮಾ ಪಾಲಿಸಿ ಮಾಡಿಸಲು ಪ್ರೇರೇಪಿಸುವ ಬಗ್ಗೆ ಎಂಬ ವಿಷಯವನ್ನು ಪತ್ರ ಒಳಗೊಂಡಿದೆ.

ಪತ್ರದ ವಿವರಗಳು; ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳು ಜನರು ತಮ್ಮ ಜೀವನದ ಅನಿಶ್ಚಿತತೆಗಳನ್ನು ಎದುರಿಸಲು ಮತ್ತು ಆರ್ಥಿಕ ತೊಂದರೆಗಳಿಂದ ಸುಧಾರಣೆ ಕಾಣಲು ಸಹಾಯ ಮಾಡುವ ಮೂಲಕ ಜನರಿಗೆ ಆರ್ಥಿಕ ಭದ್ರತೆಯನ್ನು ನೀಡುತ್ತವೆ.
'ಪ್ರಧಾನ ಮಂತ್ರಿ ಜನಧನ್' ಯೋಜನೆಯು ಸಾಮಾಜಿಕ ಭದ್ರತಾ ಯೋಜನೆಯಾಗಿದ್ದು, ಸರ್ಕಾರದ ಇಲಾಖೆಗಳಲ್ಲಿ/ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ/ ಸಿಬ್ಬಂದಿ ವರ್ಗದವರು ಅನಿರೀಕ್ಷಿತ ಸಂದರ್ಭಗಳಲ್ಲಿ ಅಥವಾ ಅಪಘಾತಕ್ಕೆ ಒಳಗಾದಲ್ಲಿ ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ಆರ್ಥಿಕ ಭದ್ರತೆ ಒದಗಿಸುವ ಹಿತದೃಷ್ಟಿಯಿಂದ ಸಹಾಯಕವಾಗಲಿದೆ ಎಂದು ವಿವರಿಸಲಾಗಿದೆ.
ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY) ಮತ್ತು ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಗಳಡಿಯಲ್ಲಿ ವಿಮಾ ಪಾಲಿಸಿಗಳನ್ನು ಮಾಡಿಸಲು ತಮ್ಮ ಸದಸ್ಯರಿಗೆ ಪ್ರೇರೇಪಿಸಲು ಸೂಚಿಸಬಹುದಾಗಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.
* ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯಡಿ ವಾರ್ಷಿಕ ರೂ. 436 ಪ್ರೀಮಿಯಂ ಪಾವತಿಸುವುದು. (ಪ್ರೀಮಿಯಂ ವಿಮಾದಾರರ ಬ್ಯಾಂಕ್ ಖಾತೆಯ ಮೂಲಕ ಪಾವತಿಸಲ್ಪಡುತ್ತದೆ). ಯಾವುದೇ ಕಾರಣದಿಂದ ಮರಣ ಸಂಭವಿಸಿದರೆ ಅವಲಂಬಿತ ಕುಟುಂಬ ಸದಸ್ಯರಿಗೆ ರೂ. 2 ಲಕ್ಷಗಳ ವಿಮಾ ಮೊತ್ತದ ನೆರವು. ಈ ಯೋಜನೆಯು 18 ರಿಂದ 50 ವರ್ಷದೊಳಗಿನ ಜನರಿಗೆ ಮಾತ್ರ ಲಭ್ಯವಿರುತ್ತದೆ.
* ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ, ಇದು ಅಪಘಾತ ವಿಮಾ ಯೋಜನೆಯಾಗಿದ್ದು ವಾರ್ಷಿಕ ರೂ. 20ಗಳ ಪ್ರೀಮಿಯಂ ಪಾವತಿಸುವುದು. (ಪ್ರೀಮಿಯಂ ವಿಮಾದಾರರ ಬ್ಯಾಂಕ್ ಖಾತೆಯ ಮೂಲಕ ಪಾವತಿಸಲ್ಪಡುತ್ತದೆ.) ಒಂದು ವೇಳೆ ಅಪಘಾತವಾಗಿ ಮೃತಪಟ್ಟರೆ ಅಥವಾ ಶಾಶ್ವತ ಒಟ್ಟು ಅಂಗವೈಕಲ್ಯಕ್ಕೆ ರೂ. 2 ಲಕ್ಷಗಳು ಹಾಗೂ ಶಾಶ್ವತ ಭಾಗಶಃ ಅಂಗವೈಕಲ್ಯಕ್ಕೆ ರೂ.1 ಲಕ್ಷಗಳ ವಿಮಾ ಮೊತ್ತದ ನೆರವು. ಈ ಯೋಜನೆಯು 18 ರಿಂದ 70 ವರ್ಷದೊಳಗಿನ ಜನರಿಗೆ ಮಾತ್ರ ಲಭ್ಯವಿರುತ್ತದೆ.
ಈ ವಿಮಾ ಯೋಜನೆಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಹೆಚ್ಚಿನ ಮಾಹಿತಿಗಾಗಿ ಆರ್ಥಿಕ ಸಲಹೆಗಾರರು (ಆರ್ಥಿಕ ಒಳಗೊಳ್ಳುವಿಕೆ), ಆರ್ಥಿಕ ಇಲಾಖೆ, ಬಹುಮಹಡಿಗಳ ಕಟ್ಟಡ, 3ನೇ ಹಂತ, ಬೆಂಗಳೂರು (ದೂರವಾಣಿ 22032499) ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.
ಸದರಿ ವಿಮಾ ಯೋಜನೆಗಳಲ್ಲದ ಬೇರೆ ಯೋಜನೆಗಳಲ್ಲಿ ಪಾಲಿಸಿಗಳನ್ನು ಮಾಡಿಸಿದ್ದರೂ ಸಹ, ಸದರಿ ಯೋಜನೆಗಳಡಿಯಲ್ಲಿ ವಿಮಾ ಪಾಲಿಸಿಗಳನ್ನು ಮಾಡಿಸಲು ಸದಸ್ಯರಿಗೆ ಪ್ರೇರೇಪಿಸುವಂತೆ ಕೋರಲಾಗಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ; ಈ ಯೋಜನೆಯನ್ನು 2015ರಲ್ಲಿ ಆರಂಭಿಸಲಾಯಿತು. ಇದು ಒಂದು ವರ್ಷದ ಜೀವ ವಿಮಾ ಯೋಜನೆ, ವರ್ಷದಿಂದ ವರ್ಷಕ್ಕೆ ನವೀಕರಿಸಬಹುದಾದ ಅವಕಾಶವಿದೆ. ಈ ಯೋಜನೆಯನ್ನು ಸಾರ್ವಜನಿಕ ಮತ್ತು ಖಾಸಗಿ ವಲಯದ ವಿಮಾ ಕಂಪನಿಗಳ ಮೂಲಕ ನಿಗದಿತ ವಾಣಿಜ್ಯ ಬ್ಯಾಂಕ್ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳು ಮತ್ತು ಸಹಕಾರಿ ಬ್ಯಾಂಕ್ಗಳೊಂದಿಗೆ ಒಪ್ಪಂದ ಜಾರಿಗೊಳಿಸಲಾಗುತ್ತಿದೆ.
ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ; ಇದು ಅಪಘಾತ ವಿಮಾ ಯೋಜನೆಯಾಗಿದ್ದು, ಅಪಘಾತದ ಕಾರಣದಿಂದ ಮರಣ ಅಥವಾ ಅಂಗವೈಕಲ್ಯಕ್ಕೆ ಆಕಸ್ಮಿಕ ಮರಣ ಮತ್ತು ಅಂಗವೈಕಲ್ಯ ರಕ್ಷಣೆ ನೀಡುತ್ತದೆ. ಇದು ಒಂದು ವರ್ಷದ ಕವರ್ ಆಗಿರುತ್ತದೆ, ವರ್ಷದಿಂದ ವರ್ಷಕ್ಕೆ ನವೀಕರಿಸಬಹುದಾಗಿದೆ.
ಯೋಜನೆಯನ್ನು ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪನಿಗಳು ಮತ್ತು ಇತರ ಸಾಮಾನ್ಯ ವಿಮಾ ಕಂಪನಿಗಳ ಮೂಲಕ ನೀಡಲಾಗುವುದು/ ನಿರ್ವಹಿಸಲಾಗುವುದು. ಕವರ್ ಜೂನ್ 1 ರಿಂದ ಮೇ 31 ರವರೆಗೆ ಒಂದು ವರ್ಷದ ಅವಧಿಗೆ ಇರುತ್ತದೆ, ಇದಕ್ಕಾಗಿ ನಿಗದಿತ ಫಾರ್ಮ್ಗಳಲ್ಲಿ ಗೊತ್ತುಪಡಿಸಿದ ಬ್ಯಾಂಕ್ ಖಾತೆಯಿಂದ ಸ್ವಯಂ-ಡೆಬಿಟ್ ಮೂಲಕ ಸೇರುವ/ ಪಾವತಿ ಮಾಡುವ ಆಯ್ಕೆಯನ್ನು ಪ್ರತಿ ವರ್ಷ ಮೇ 31 ರೊಳಗೆ ನೀಡಬೇಕಾಗುತ್ತದೆ. ಹಿಂದಿನ ಅನುಭವದ ಆಧಾರದ ಮೇಲೆ ಪರಿಷ್ಕರಿಸಬಹುದಾದ ನಿಯಮಗಳೊಂದಿಗೆ ಯೋಜನೆಯ ಮುಂದುವರಿಕೆಗೆ ಒಳಪಟ್ಟಿರುತ್ತದೆ.












Click it and Unblock the Notifications