Karnataka Rain: ಮಳೆ ಆರ್ಭಟದ ಮುನ್ಸೂಚನೆ: ಜಿಲ್ಲೆಗಳ ಪಟ್ಟಿ ಇಲ್ಲಿದೆ
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆ ಆರ್ಭಟ ಶುರುವಾಗಿದ್ದು ಇದೇ ವೇಳೆ ಹವಾಮಾನ ಇಲಾಖೆ ಸಿಹಿ ಸುದ್ದಿ ನೀಡಿದೆ. ಕರಾವಳಿ ಜಿಲ್ಲೆಗಳೂ ಸೇರಿದಂತೆ ಕರ್ನಾಟಕದ ಒಳನಾಡಲ್ಲಿ ಸೆಪ್ಟೆಂಬರ್ 15ರ ತನಕ ಭಾರಿ ಮಳೆ ಸುರಿಯುವ ಮುನ್ಸೂಚನೆ ಸಿಕ್ಕಿದೆ. ಹಾಗಾದರೆ ಮಳೆ ಅಬ್ಬರಿಸುವ ಜಿಲ್ಲೆಗಳು ಯಾವು? ಎಲ್ಲಿ ಹೆಚ್ಚು ಮಳೆ ಸುರಿಯಲಿದೆ? ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ಅಂದಹಾಗೆ ಕರ್ನಾಟಕದ 7 ಜಿಲ್ಲೆಗಳಲ್ಲಿ ಒಂದು ವಾರ ಕಾಲ ಧಾರಾಕಾರ ಮಳೆ ಸುರಿಯಲಿದೆ ಎಂಬ ಮುನ್ಸೂಚನೆ ಸಿಕ್ಕಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಬೀದರ್, ಕಲಬುರಗಿ ಹಾಗೂ ಕಾವೇರಿ ನದಿಯ ಉಗಮ ಸ್ಥಾನ ಕೊಡಗು ಜಿಲ್ಲೆಯಲ್ಲಿ ಮಳೆ ಅಬ್ಬರಿಸುವುದು ಗ್ಯಾರಂಟಿ ಆಗಿದೆ. ಹೀಗಾಗಿ ಈ ಜಿಲ್ಲೆಗಳಲ್ಲಿ ಈಗಾಗಲೇ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮತ್ತೊಂದು ಕಡೆ ರಾಜ್ಯದ ಇತರ ಜಿಲ್ಲೆಗಳಲ್ಲೂ ಮಳೆರಾಯ ಅಬ್ಬರಿಸಿ, ಬೊಬ್ಬಿರುವುದು ಗ್ಯಾರಂಟಿ.

ದಿಢೀರ್ ಮಳೆ ಬೀಳಲು ಕಾರಣ ಏನು?
ಅಷ್ಟಕ್ಕೂ ನೈಋತ್ಯ ಮುಂಗಾರು ಉತ್ತರ ಒಳನಾಡಿನಲ್ಲಿ ಚುರುಕಾಗಿದೆ. ಹಾಗೆಯೇ ಕರಾವಳಿ ಜಿಲ್ಲೆಗಳಲ್ಲಿ ಸಾಮಾನ್ಯವಾಗಿತ್ತು ಹಾಗೂ ದಕ್ಷಿಣ ಒಳನಾಡಿನಲ್ಲಿ ದುರ್ಬಲವಾಗಿತ್ತು. ಆರಂಭದ ದಿನಗಳಲ್ಲಿ ಕೈಕೊಟ್ಟಿದ್ದ ಮುಂಗಾರು ಮಳೆ, ಈಗ ಮತ್ತೆ ಚುರುಕಾಗಿದೆ. ದಕ್ಷಿಣ ಕರ್ನಾಟಕ ಭಾಗದಲ್ಲಿ ಮಾತ್ರವಲ್ಲ ಉತ್ತರ ಕರ್ನಾಟಕದಲ್ಲಿ ಕೂಡ ಮಳೆ ಅಬ್ಬರಿಸುತ್ತಿದೆ. ಹೀಗಾಗಿ ಈ ಬಾರಿ ಬರದ ಬೇಗೆಯಲ್ಲಿ ಸಂಕಷ್ಟ ಎದುರಿಸುತ್ತಿದ್ದ ಕರ್ನಾಟಕದ ಜನರಿಗೆ ರಿಲೀಫ್ ಸಿಕ್ಕಿದೆ. ಈಗ ಸಿಕ್ಕಿರುವ ಮಾಹಿತಿ ಪ್ರಕಾರ ಸೆಪ್ಟೆಂಬರ್ 7ರಿಂದ ಸೆಪ್ಟೆಂಬರ್ 15ರ ತನಕ ರಾಜ್ಯದಲ್ಲಿ ಮಳೆ ಹೀಗೆ ಅಬ್ಬರಿಸಲಿದೆ.
#ಕರ್ನಾಟಕ ರಾಜ್ಯದ ಮಳೆ ಮುನ್ಸೂಚನೆ ನಕ್ಷೆಗಳು 15th ಸೆಪ್ಟೆಂಬರ್ 2023 ರವರೆಗೆ.
— Karnataka State Natural Disaster Monitoring Centre (@KarnatakaSNDMC) September 7, 2023
Rainfall Forecast map for the #Karnataka State till 15th September 2023. pic.twitter.com/0YjXmnmCbp
ಹಾಗೇ ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ ಮತ್ತು ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಯೂ ಸೇರಿ ಉತ್ತರ ಕರ್ನಾಟಕದಲ್ಲಿ ಇನ್ನೂ ಹಲವು ದಿನಗಳ ಕಾಲ ಉತ್ತಮವಾಗಿ ಮಳೆ ಬೀಳಲಿದೆ. ಇನ್ನೊಂದು ಕಡೆ ದಕ್ಷಿಣ ಭಾಗಕ್ಕು ಮಳೆ ಸುರಿಯಲಿದ್ದು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ ಕೊಡಗು ಸೇರಿದಂತೆ ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ ತುಮಕೂರಲ್ಲಿ ಮಳೆ ಆರ್ಭಟ ತೋರುವುದು ಬಹುತೇಕ ಗ್ಯಾರಂಟಿ.

ಎಲ್ಲೆಲ್ಲಿ ಎಷ್ಟು ಮಳೆ ಬಿದ್ದಿದೆ?
ಇನ್ನು ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಯಾದಂತೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಬಲ್ಲಮಾವಟಿಯಲ್ಲಿ 78.5 ಮಿಲಿ ಮೀಟರ್ ಮಳೆ ಬಿದ್ದಿದೆ. ಈ ಮೂಲಕ ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಬಿದ್ದ ಪ್ರದೇಶವಾಗಿದೆ. ಇನ್ನು ಬೆಂಗಳೂರಿನಲ್ಲೂ ಉತ್ತಮ ಮಳೆಯಾಗುತ್ತಿದ್ದು, ಬೊಮ್ಮನಹಳ್ಳಿಯಲ್ಲಿ 16.5 ಮಿಮೀ ಮಳೆ ಬಂದಿದೆ. ಇಷ್ಟೇ ಅಲ್ಲದೆ ರಾಜ್ಯದ ಇತರ ಜಿಲ್ಲೆ ಹಾಗೂ ತಾಲೂಕುಗಳಲ್ಲೂ ಉತ್ತಮವಾಗಿ ಮಳೆಯಾಗಿದೆ. ಅದರ ಮಾಹಿತಿ ಮುಂದೆ ಓದಿ.
ಕರಾವಳಿ, ಮಲೆನಾಡಲ್ಲಿ ಮಳೆ ಅಬ್ಬರ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 77.5 ಮಿಲಿ ಮೀಟರ್ ಮಳೆಯಾಗಿದ್ದು, ಮಂಡ್ಯ ಜಿಲ್ಲೆಯ ಬೆಕ್ಕಲಾಲೆಯಲ್ಲಿ 63 ಮಿಮೀ ಮಳೆ ಸುರಿದಿದೆ. ಚಿಕ್ಕಮಗಳೂರಲ್ಲಿ 61 ಮಿಮೀ ಬೀದರ್ನಲ್ಲಿ 55 ಮಿಮೀ, ಉಡುಪಿ ಜಿಲ್ಲೆಯಲ್ಲಿ 52.5 ಮಿಮೀ, ತುಮಕೂರು 52 ಮಿಮೀ, ಹಾಸನ 47 ಮಿಮೀ, ಉತ್ತರ ಕನ್ನಡ 46 ಮಿಮೀ, ಕಲಬುರಗಿ 42.5 ಮಿಮೀ, ಶಿವಮೊಗ್ಗ ಜಿಲ್ಲೆಯಲ್ಲಿ 40.5 ಮಿಮೀ ಮಳೆಯಾಗಿದೆ ಎಂದು ವರದಿಯಾಗಿದೆ. ಬೆಂಗಳೂರಿನಲ್ಲಿ ಕೂಡ ಬುಧವಾರ ಹಲವು ಕಡೆಗಳಲ್ಲಿ ಉತ್ತಮ ಮಳೆಯಾಗಿದ್ದು ಗುರುವಾರ ಕೂಡ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ಹೊರವಲಯದ ಆನೇಕಲ್ ಸೇರಿದಂತೆ ಇತರೆಡೆ ಮಧ್ಯಾಹ್ನವೇ ಮಳೆ ಶುರುವಾಗಿದೆ.

ಹೀಗೆ ಬರದ ಬೇಗೆಯಲ್ಲಿ ಬಸವಳಿದ ಕನ್ನಡಿಗರಿಗೆ ಮುಂಗಾರು ಮಳೆ ರೀ ಎಂಟ್ರಿ ಒಂದಷ್ಟು ನೆಮ್ಮದಿ ನೀಡುತ್ತಿದೆ. ಅದರಲ್ಲೂ ಬರ ಎದುರಾಗಿ ರಾಜ್ಯದ ಲಕ್ಷಾಂತರ ಎಕರೆ ಪ್ರದೇಶದಲ್ಲಿ ನಾಟಿ ಮಾಡಿದ್ದ ಬೆಳೆ ಒಣಗಲು ಆರಂಭವಾಗಿತ್ತು. ಈಗ ಮಳೆ ಸುರಿಯುತ್ತಿದ್ದು ಅನ್ನದಾತ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಮುಂದಿನ ಕೆಲವು ದಿನಗಳ ಕಾಲ ಇದೇ ರೀತಿ ಭಾರಿ ಮಳೆ ಸುರಿಯುವ ನಿರೀಕ್ಷೆ ಇದ್ದು ರಾಜ್ಯ ಡ್ಯಾಂಗಳು ಕೂಡ ಭರ್ತಿ ಆಗುವ ಸಾಧ್ಯತೆ ಇದೆ.












Click it and Unblock the Notifications