Vande Bharat Express: ಬೆಂಗಳೂರು-ಹೈದರಾಬಾದ್ ರೈಲು, ಕರ್ನಾಟಕಕ್ಕೆ ಲಾಭವಿಲ್ಲ
ಬೆಂಗಳೂರು, ಆಗಸ್ಟ್ 03; ಭಾರತೀಯ ರೈಲ್ವೆಯು ಕರ್ನಾಟಕಕ್ಕೆ ಮತ್ತೊಂದು ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್ಪ್ರೆಸ್ ನೀಡಲು ಮುಂದಾಗಿದೆ. ರಾಜ್ಯದಲ್ಲಿ ಈಗಾಗಲೇ ಎರಡು ವಂದೇ ಭಾರತ್ ರೈಲುಗಳು ಓಡುತ್ತಿವೆ. ಆಗಸ್ಟ್ ತಿಂಗಳಿನಲ್ಲಿಯೇ ಬೆಂಗಳೂರಿಗೆ ಮತ್ತೊಂದು ರೈಲು ಬರುವ ನಿರೀಕ್ಷೆ ಇದೆ.
ಐಟಿ ಕ್ಷೇತ್ರದ ಹಬ್ ಆಗಿರುವ ಬೆಂಗಳೂರು ಮತ್ತು ಹೈದರಾಬಾದ್ ನಗರಗಳ ನಡುವೆ ವಂದೇ ಭಾರತ್ ರೈಲು ಸೇವೆ ಆಗಸ್ಟ್ನಲ್ಲಿಯೇ ಆರಂಭವಾಗುವ ನಿರೀಕ್ಷೆ ಇದೆ. ಅಂತರರಾಜ್ಯ ಸಂಪರ್ಕಿಸುವ ಈ ರೈಲು ಯಶವಂತಪುರ-ಕಾಚಿಗುಡ ನಡುವೆ ಸಂಚಾರ ನಡೆಸುವ ಸಾಧ್ಯತೆ ಇದೆ. ಈ ರೈಲು ಸೇವೆ ಆರಂಭದ ದಿನಾಂಕ ಇನ್ನೂ ಘೋಷಣೆಯಾಗಿಲ್ಲ.

2022ರ ನವೆಂಬರ್ನಲ್ಲಿ ಆರಂಭವಾದ ಮೈಸೂರು-ಚೆನ್ನೈ ವಂದೇ ಭಾರತ್ ರೈಲು ಬೆಂಗಳೂರು ಮೂಲಕ ಸಾಗುತ್ತದೆ. ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವೆ ರಾಜ್ಯದ 2ನೇ ವಂದೇ ಭಾರತ್ ರೈಲು ಓಡುತ್ತಿದೆ. ಆಗಸ್ಟ್ ಅಂತ್ಯದೊಳಗೆ ಯಶವಂತಪುರ-ಕಾಚಿಗುಡ ನಡುವೆ ರೈಲು ಸಂಚಾರ ಆರಂಭವಾಗುವ ಸಾಧ್ಯತೆ ಇದೆ.
ಕರ್ನಾಟಕಕ್ಕೆ ಲಾಭ ಕಡಿಮೆ; ದಕ್ಷಿಣ ಮಧ್ಯ ರೈಲ್ವೆ ಯಶವಂತಪುರ-ಕಾಚಿಗುಡ ನಡುವೆ ವಂದೇ ಭಾರತ್ ರೈಲನ್ನು ಓಡಿಸಲಿದೆ. ಸುಮಾರು 7 ಗಂಟೆ ಅವಧಿಯಲ್ಲಿ ಬೆಂಗಳೂರು ಮತ್ತು ಹೈದರಬಾದ್ ನಗರದ ನಡುವಿನ 610 ಕಿ. ಮೀ. ಮಾರ್ಗವನ್ನು ಈ ರೈಲು ಕ್ರಮಿಸಲಿದೆ ಎಂದು ಅಂದಾಜಿಸಲಾಗಿದೆ.
ಈ ರೈಲಿನ ವೇಳಾಪಟ್ಟಿ ಇನ್ನೂ ಅಂತಿಮಗೊಂಡಿಲ್ಲ. ಆದರೆ ಅಧಿಕಾರಿಗಳ ಮಾಹಿತಿ ಪ್ರಕಾರ ಕಾಚಿಗುಡದಿಂದ ಬೆಳಗ್ಗೆ ಹೊರಡುವ ರೈಲು ಮಧ್ಯಾಹ್ನ 1 ಗಂಟೆ ಸುಮಾರಿಗೆ ಯಶವಂತಪುರಕ್ಕೆ ಬರಬಹುದು. ಮಧ್ಯಾಹ್ನ ಇಲ್ಲಿಂದ ಹೊರಟು, ರಾತ್ರಿ ಕಾಚಿಗುಡ ತಲುಪಲಿದೆ. ರೈಲು ಸಂಚಾರದ ದಿನಾಂಕ ನಿಗದಿ ಬಳಿಕ ವೇಳಾಪಟ್ಟಿ, ದರ ಅಂತಿಮವಾಗಲಿದೆ.
ಬೆಂಗಳೂರು-ಹೈದರಾಬಾದ್ ನಡವಿನ ವಂದೇ ಭಾರತ್ ರೈಲು ಯಶವಂತಪುರ, ಧರ್ಮಾವರಂ, ದೋನ್, ಕರ್ನೂಲ್ ನಗರ, ಗಡ್ವಾಲ ಜಂಕ್ಷನ್, ಮೆಹಬೂಬ ನಗರ, ಶಾದ್ ನಗರ ಮೂಲಕ ಕಾಚಿಗುಡಕ್ಕೆ ತಲುಪಲಿದೆ. ಕಾಚಿಗುಡ ಮತ್ತು ದೋನ್ ನಡುವೆ ಈಗಾಗಲೇ ಪ್ರಾಯೋಗಿಕ ಸಂಚಾರ ನಡೆದಿದೆ.
ಈ ರೈಲಿನಿಂದಾಗಿ ಕರ್ನಾಟಕಕ್ಕಿಂತ ತೆಲಂಗಾಣ ರಾಜ್ಯಕ್ಕೆ ಹೆಚ್ಚು ಉಪಯೋಗ ಎಂಬ ವಾದವಿದೆ. ರೈಲ್ವೆ ಹೋರಾಟಗಾರ ಕೃಷ್ಣಪ್ರಸಾದ್ ಈ ಬಗ್ಗೆ ಮಾತನಾಡಿ, "ಈ ರೈಲು ರಾಜ್ಯದಲ್ಲಿ ಕೇವಲ 80 ರಿಂದ 85 ಕಿ. ಮೀ. ಮಾತ್ರ ಸಂಚರಿಸಲಿದೆ. ಇದರಿಂದ ರಾಜ್ಯದ ಜನರಿಗೆ ಹೆಚ್ಚಿನ ಪ್ರಯೋಜನ ಆಗುವ ನಿರೀಕ್ಷೆಯಿಲ್ಲ" ಎಂದು ಹೇಳಿದ್ದಾರೆ.
ಯಶವಂತಪುರದ ಬಳಿಕ ಆಂಧ್ರ ಪ್ರದೇಶದ ಹಿಂದೂಪುರ ರೈಲ್ವೆ ನಿಲ್ದಾಣ ಬರುತ್ತದೆ. ಆದರೆ ರೈಲು ಗುಂತಕಲ್ಲು, ರಾಯಚೂರು ಮೂಲಕ ಸಂಚರಿಸಿದ್ದರೆ ರಾಯಚೂರು ಜಿಲ್ಲೆ, ಮಂತ್ರಾಲಯಕ್ಕೆ ತೆರಳುವವರಿಗೆ, ಸೇಡಂ ಬಳಿಯ ಸಿಮೆಂಟ್ ಕೈಗಾರಿಕೆ ಭಾಗದವರಿಗೆ, ಯಾದಗಿರಿ ಜಿಲ್ಲೆಗೆ ಉಪಯೋಗವಾಗುತ್ತಿತ್ತು ಎಂಬುದು ವಾದವಾಗಿದೆ.
ಬೆಂಗಳೂರು-ಹೈದರಾಬಾದ್ ನಡುವೆ ವಿದ್ಯುದೀಕರಣ ಕಾಮಗಾರಿ ಪೂರ್ಣವಾಗಿದೆ. ಆದ್ದರಿಂದ ವಂದೇ ಭಾರತ್ ರೈಲು ಓಡಿಸಲು ಕಾಯಬೇಕಿಲ್ಲ. ಈ ಹೊಸ ವಂದೇ ಭಾರತ್ ರೈಲು ಸಂಚಾರದ ವೇಳಾಪಟ್ಟಿ, ದಿನಾಂಕ, ದರಗಳು ಇನ್ನೂ ಅಂತಿಮಗೊಂಡಿಲ್ಲ.
ಹೈದರಾಬಾದ್ ನಗರ ದಕ್ಷಿಣ ಮಧ್ಯ ರೈಲ್ವೆ ವಲಯದ ವ್ಯಾಪ್ತಿಯಲ್ಲಿದೆ. ಬೆಂಗಳೂರಿನ ಯಶವಂತಪುರ ನಿಲ್ದಾಣ ನೈಋತ್ಯ ರೈಲ್ವೆ ವಲಯಕ್ಕೆ ಸೇರಿದೆ. ಆದ್ದರಿಂದ ಬೆಂಗಳೂರು-ಹೈದರಾಬಾದ್ ವಯಾ ಕರ್ನೂಲ್ ರೈಲು ಸಂಚಾರವನ್ನು ದಕ್ಷಿಣ ಮಧ್ಯ ರೈಲ್ವೆ ಆರಂಭಿಸಲಿದೆ.
2023ರ ಜನವರಿಯಲ್ಲಿಯೇ ದಕ್ಷಿಣ ಮಧ್ಯ ರೈಲ್ವೆ ವಲಯ ಬೆಂಗಳೂರು ಮತ್ತು ಕಾಚಿಗೂಡ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭಿಸುವ ಬಗ್ಗೆ ಮಾಹಿತಿ ನೀಡಿತ್ತು. ತೆಲಂಗಾಣ ರಾಜ್ಯದ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಇರುವುದರಿಂದ ಕೇಂದ್ರ ಸರ್ಕಾರ ರೈಲು ಸಂಚಾರಕ್ಕೆ ಒಪ್ಪಿಗೆ ನೀಡುವ ಸಾಧ್ಯತೆ ಇದೆ.












Click it and Unblock the Notifications