Karnataka Rain: ಕೇರಳ, ತಮಿಳುನಾಡಿನಲ್ಲಿ ಮಳೆ: ಆಂಧ್ರ, ತೆಲಂಗಾಣದಲ್ಲಿ ಬಿಸಿಗಾಳಿ- ಕರ್ನಾಟಕದ ಗತಿ ಏನು? ತಿಳಿಯಿರಿ
ಬೆಂಗಳೂರು, ಜೂನ್ 19: ಕೇರಳ ಹಾಗೂ ತಮಿಳು ನಾಡಿನಲ್ಲಿ ಭಾರೀ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎರಡೂ ರಾಜ್ಯಗಳಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ವಿಪರ್ಯಾಸವೆಂದರೆ, ಮಳೆಗಾಲದ ಈ ಸಮಯದಲ್ಲಿ ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಬಿಸಿಗಾಳಿ ಬೀಸುತ್ತಿದೆ. ಇದು ಜಾಗತಿಕ ಹವಾಮಾನದಲ್ಲಿ ಆಗಿರುವ ಬದಲಾವಣೆಯ ಸಂಕೇತವೇ ಎಂಬ ಪ್ರಶ್ನೆ ಎದ್ದಿದೆ.
ಕೇರಳ, ತಮಿಳುನಾಡಿನಲ್ಲಿ ಎಲ್ಲೋ ಅಲರ್ಟ್
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೋಮವಾರ ಕೇರಳದ ಏಳು ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಿಸಿದೆ. ಪತ್ತನಂತಿಟ್ಟ, ಅಲಪ್ಝುಹಾ, ಎರ್ನಾಕುಲಂ, ಇಡುಕ್ಕಿ, ತ್ರಿಶೂರ್ ಮತ್ತು ಮಲಪ್ಪುರಂಗಳಲ್ಲಿ ಸೋಮವಾರದಿಂದ ಭಾರೀ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ. ಇತರೆ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಕೇರಳದಲ್ಲಿ ನೈಋತ್ಯ ಮುಂಗಾರು ಆರಂಭದಿಂದಲೂ ದುರ್ಬಲ ಹಂತದಲ್ಲಿದೆ. ಭಾನುವಾರದ ಹೊತ್ತಿಗೆ ಅದು ನಿಧಾನವಾಗಿ ವೇಗ ಪಡೆದಿದೆ. ರಾಜ್ಯದ ಬಹುತೇಕ ಕಡೆ ಭಾನುವಾರ ಮಳೆಯಾಗಿದೆ. ಕೊಟ್ಟಾಯಂನಲ್ಲಿ 8 ಸೆಂ.ಮೀ.ನಷ್ಟು ಭಾರೀ ಮಳೆಯಾಗಿದೆ. ಎರ್ನಾಕುಲಂ ಜಿಲ್ಲೆಯ ಪಾಲಕ್ಕಾಡ್ ಮತ್ತು ಓಡಕಲಿಯಲ್ಲಿ ತಲಾ 6 ಸೆಂ.ಮೀ, ಕೊಟ್ಟಾಯಂ ಜಿಲ್ಲೆಯ ವೈಕೋಂ, ತಿರುವನಂತಪುರಂ ಜಿಲ್ಲೆಯ ಪಿರಪ್ಪನ್ಕೋಡ್ ಮತ್ತು ಕಣ್ಣೂರು ಜಿಲ್ಲೆಯ ಮಟ್ಟನ್ನೂರಿನಲ್ಲಿ 5 ಸೆಂ.ಮೀ ಮಳೆಯಾಗಿದೆ.
ಇದೇ ರೀತಿ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಭಾರೀ ಮಳೆಯಾಗಿದೆ. ಸೋಮವಾರ ಮಧ್ಯರಾತ್ರಿಯಿಂದ ಚೆನ್ನೈನಲ್ಲಿ ಸುರಿದ ಭಾರೀ ಮಳೆಯ ನಂತರ ಉತ್ತರ, ಮಧ್ಯ ಮತ್ತು ಪಶ್ಚಿಮ ಚೆನ್ನೈ ಮತ್ತು ಉಪನಗರಗಳ ಹಲವಾರು ಪ್ರದೇಶಗಳು ಜಲಾವೃತವಾಗಿವೆ. ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ಎಗ್ಮೋರ್ನ ಗಾಂಧಿ ಇರ್ವಿನ್ ಸೇತುವೆ, ಕೋ-ಆಪ್ಟೆಕ್ಸ್, ವಳ್ಳುವರ್ ಕೊಟ್ಟಂ ಬಳಿ, ಉತ್ತರ ಉಸ್ಮಾನ್ ರಸ್ತೆ, ಕೋಡಂಬಾಕ್ಕಂ ಮತ್ತು ಉತ್ತರ ಚೆನ್ನೈನ ಹಲವಾರು ಸ್ಥಳಗಳಲ್ಲಿ ನೀರು ನಿಂತಿದೆ.
ಏತನ್ಮಧ್ಯೆ, ಹವಾಮಾನ ವೈಪರೀತ್ಯದಿಂದಾಗಿ ಮುಂಜಾನೆ ಬರಬೇಕಿದ್ದ 10 ಅಂತಾರಾಷ್ಟ್ರೀಯ ವಿಮಾನಗಳನ್ನು ಬೆಂಗಳೂರಿಗೆ ತಿರುಗಿಸಲಾಗಿದೆ. ದೋಹಾ, ಅಬುಧಾಬಿ, ಲಂಡನ್, ಶಾರ್ಜಾ, ಕೊಲಂಬೊ, ಸಿಂಗಾಪುರ, ಮಸ್ಕತ್ ಮತ್ತು ದುಬೈನಿಂದ ಮೂರು ವಿಮಾನಗಳು ಬೆಂಗಳೂರಿನಲ್ಲಿ ಲ್ಯಾಂಡ್ ಆಗಿವೆ. ಭಾರೀ ಮಳೆಯ ಹಿನ್ನೆಲೆಯಲ್ಲಿ, ಚೆನ್ನೈ ಮತ್ತು ಅದರ ನೆರೆಯ ಜಿಲ್ಲೆಗಳಲ್ಲದೆ ವೆಲ್ಲೂರು ಮತ್ತು ರಾಣಿಪೇಟ್ ಜಿಲ್ಲೆಗಳಲ್ಲಿ ಸೋಮವಾರ ಶಾಲೆಗಳನ್ನು ಮುಚ್ಚಲಾಗಿದೆ.

ಆಂಧ್ರ, ತೆಲಂಗಾಣದಲ್ಲಿ ಬಿಸಿಗಾಳಿ
ಹೈದರಾಬಾದ್ನಲ್ಲಿ 41.7 ಡಿಗ್ರಿ ಸೆಲ್ಸಿಯಸ್ ಮತ್ತು ವಿಜಯನಗರದಲ್ಲಿ 46 ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ. ತೆಲಂಗಾಣದಲ್ಲಿ ತೀವ್ರ ಬಿಸಿಗಾಳಿಯ ಎಚ್ಚರಿಕೆಯನ್ನು ನೀಡಿದ್ದು, ಸಂಜೆಯ ವೇಳೆಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಜೂನ್ 19 ರಂದು ತೆಲಂಗಾಣದ 23 ಕಡೆಗಳಲ್ಲಿ ತೀವ್ರ ಶಾಖದ ಅಲೆಯನ್ನು ನಿರೀಕ್ಷಿಸಲಾಗಿದೆ. ಆಂಧ್ರಪ್ರದೇಶದ 330 ಪ್ರದೇಶಗಳಲ್ಲಿ ಬಿಸಿಗಾಳಿಯನ್ನು ನಿರೀಕ್ಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹೆಚ್ಚುತ್ತಿರುವ ತಾಪಮಾನದ ಕಾರಣ, ಆಂಧ್ರ ಪ್ರದೇಶ ಸರ್ಕಾರವು ಜೂನ್ 24 ರ ವರೆಗೆ ಶಾಲೆಗಳಲ್ಲಿ ಅರ್ಧ ದಿನಗಳನ್ನು ರಜೆಯನ್ನು ವಿಸ್ತರಿಸಲು ನಿರ್ಧರಿಸಿದೆ. ಇದು ರಾಜ್ಯದ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಅನ್ವಯಿಸುತ್ತದೆ ಎಂದು ಶಾಲಾ ಶಿಕ್ಷಣ ಆಯುಕ್ತರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕದ ಸ್ಥಿತಿಗತಿ ಏನು?
ರಾಜ್ಯದಲ್ಲಿ ಮುಂಗಾರು ಮಳೆ ಚುರುಕು ಪಡೆಯುವ ಸಾಧ್ಯತೆ ಇದೆ. ಎರಡು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು, ಮುಂದಿನ 48 ಗಂಟೆಗಳಲ್ಲಿ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications