ಲೋಕಾಯುಕ್ತ ಬಲೆಗೆ ಬಿದ್ದರೆ ಅಧಿಕಾರಿಗಳು ಅಮಾನತು
ಬೆಂಗಳೂರು, ಜು. 11 : ಲೋಕಾಯುಕ್ತ ದಾಳಿಗೊಳಗಾಗುವ ಭ್ರಷ್ಟ ಅಧಿಕಾರಿಗಳಿಗೆ ಇನ್ನು ಕಠಿಣ ಶಿಕ್ಷೆ ಕಾದಿದೆ. ರಾಜ್ಯದಲ್ಲಿ ಲೋಕಾಯುಕ್ತ ದಾಳಿಗೊಳಗಾಗುವ ಭ್ರಷ್ಟ ಅಧಿಕಾರಿಗಳನ್ನು ತಕ್ಷಣವೇ ಅಮಾನತುಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಪರಿಷತ್ತಿನಲ್ಲಿ ಹೇಳಿದ್ದಾರೆ.
ಗುರುವಾರದ ವಿಧಾನಪರಿಷತ್ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯೆ ಮೋಟಮ್ಮ ಅವರ ಪ್ರಶ್ನೆಗೆ ಉತ್ತರ ನೀಡಿದ ಮುಖ್ಯಮಂತ್ರಿಗಳು, ಕಳೆದ ಎರಡು ವರ್ಷಗಳಲ್ಲಿ 166 ಅಧಿಕಾರಿ, ನೌಕರರ ವಿರುದ್ಧ ಲೋಕಾಯುಕ್ತ ದಾಳಿ ನಡೆದಿದೆ. ಈ ಪೈಕಿ ಮೂವರು ಐಎಎಸ್, ಇಬ್ಬರು ಐಎಫ್ಎಸ್, 47 ಎ ಗ್ರೂಪ್, 46 ಬಿ ಗ್ರೂಪ್, 64 ಸಿ ಗ್ರೂಪ್ ಅಧಿಕಾರಿ, ನೌಕರರಿದ್ದು, ನಾಲ್ವರು ಚುನಾಯಿತ ಪ್ರತಿನಿಧಿಗಳಿದ್ದಾರೆ ಎಂದು ಸದನಕ್ಕೆ ಮಾಹಿತಿ ನೀಡಿದರು.

ಸರ್ಕಾರ ಇದುವರೆಗೆ ಲೋಕಾಯುಕ್ತ ದಾಳಿಗೊಳಗಾದ ಎಲ್ಲಾ ಅಧಿಕಾರಿಗಳನ್ನು ಅಮಾನತುಗೊಳಿಸುವ ಕ್ರಮ ಅನುಸರಿಸುತ್ತಿರಲಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಅಧಿಕಾರಿಗಳ ಮೇಲೆ ಲೋಕಾಯುಕ್ತರು ದಾಳಿ ನಡೆಸಿ ಸರ್ಕಾರಕ್ಕೆ ಈ ಕುರಿತು ಮಾಹಿತಿ ನೀಡಿದ ತಕ್ಷಣ ಅವರನ್ನು ಅಮಾನತುಗೊಳಿಸಲಾಗುವುದು ಎಂದು ಹೇಳಿದರು. [ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ತನಿಖೆ ಭೀತಿ]
ಅಧಿಕಾರಿಗಳಿಗೆ ಭಯವಿಲ್ಲ : ಲೋಕಾಯುಕ್ತ ದಾಳಿಗೊಳಗಾದ ಸರ್ಕಾರಿ ಅಧಿಕಾರಿ, ನೌಕರರನ್ನು ಅಮಾನತುಗೊಳಿಸದೇ ಇರುವ ಕಾರಣದಿಂದ ಅವರಲ್ಲಿ ಭಯ ದೂರವಾಗಿದೆ. ಪ್ರಕರಣ ಇತ್ಯರ್ಥವಾಗಲು ಹಲವು ವರ್ಷಗಳು ಬೇಕು. ಅಷ್ಟರಲ್ಲಿ ನಿವೃತ್ತರಾಗುತ್ತೇವೆ ಎಂಬ ನಿರ್ಲಕ್ಷ್ಯ ಧೋರಣೆ ಕಂಡುಬರುತ್ತಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಇದೇವೇಳೆ ಬಿಜೆಪಿ ಸದಸ್ಯ ಡಿ.ಎಸ್.ವೀರಯ್ಯ ಪ್ರಶ್ನೆಗೆ ಉತ್ತರ ನೀಡಿದ ಸಿದ್ದರಾಮಯ್ಯ ಅವರು, ಲೋಕಾಯುಕ್ತರು ಭ್ರಷ್ಟ ಅಧಿಕಾರಿಗಳ ಮೇಲೆ ದಾಳಿ ನಡೆಸಿದ ಬಳಿಕ ತನಿಖೆ ತ್ವರಿತಗೊಳಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಸಲಹೆ ನೀಡಲಾಗುವುದು ಎಂದು ಹೇಳಿದರು. [ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿ ಸಿಎಂ]
ಆಸ್ತಿ ಮುಟ್ಟುಗೋಲು ಸಾಧ್ಯವಿಲ್ಲ : ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು ಸಂಪಾದಿಸಿದ ಆಸ್ತಿಗೆ ಮಾರುಕಟ್ಟೆ ದರ ನಿಗದಿಪಡಿಸಿ ಅದನ್ನು ವಶಪಡಿಸಿಕೊಳ್ಳಬೇಕು ಎಂಬ ಮೋಟಮ್ಮ ಸಲಹೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ತಪ್ಪಿತಸ್ಥ ಅಧಿಕಾರಿ ಆಸ್ತಿ ಖರೀದಿಸಿದ ದಿನ ಇದ್ದ ಮೌಲ್ಯವನ್ನು ಮಾತ್ರ ಲೆಕ್ಕಹಾಕಲು ಸಾಧ್ಯ.
10-15 ವರ್ಷ ಹಿಂದೆ ಖರೀದಿಸಿದ ಆಸ್ತಿಗೆ ಈಗಿನ ಮಾರುಕಟ್ಟೆ ದರ ನಿಗದಿಪಡಿಸಲು ಸಾಧ್ಯವಿಲ್ಲ. ಅದೇ ರೀತಿ ಆರೋಪಿ ಅಧಿಕಾರಿ ವಿರುದ್ಧ ನ್ಯಾಯಾಲಯದಲ್ಲಿ ಆರೋಪ ಸಾಬೀತಾಗುವವರೆಗೆ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೂ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.












Click it and Unblock the Notifications