Basavaraj Bommai: ಐಎಎಸ್ ಅಧಿಕಾರಿಗಳ ಪೋಸ್ಟಿಂಗ್ ಗೂ ದರ ಫಿಕ್ಸ್: ಬಸವರಾಜ ಬೊಮ್ಮಾಯಿ ಆರೋಪ
ಬೆಂಗಳೂರು, ಜುಲೈ 13: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವರ್ಗಾವಣೆ ದಂಧೆ ಕುರಿತು ಸಾಲು ಸಾಲು ಆರೋಪಗಳನ್ನ ಮಾಡಿದ್ದು, ಇದೀಗ ಸರ್ಕಾರದ ವಿರುದ್ದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಐಎಎಸ್ ಅಧಿಕಾರಿಗಳ ಪೋಸ್ಟಿಂಗ್ ಕುರಿತು ಗಂಭೀರ ಆರೋಪ ಮಾಡಿದ್ದಾರೆ.
ಹೌದು, ಈ ಕುರಿತು ಗುರುವಾರ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿ, ರಾಜ್ಯದಲ್ಲಿ ಐಎಎಸ್ ಅಧಿಕಾರಿಗಳ ಪೋಸ್ಟಿಂಗ್ ಗೂ ದರ ನಿಗದಿ ಮಾಡಿದ್ದಾರೆ. ಈಗಾಗಲೇ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ವರ್ಗಾವಣೆಯ ದರ ಫಿಕ್ಸ್ ಮಾಡಿರುವ ಬಗ್ಗೆ ದಾಖಲೆ ಕೊಟ್ಟಿದ್ದಾರೆ. ಅದಕ್ಕೂ ಮುಂಚೆಯೇ ನಾನು ಹೇಳಿದ್ದೆ, ಶಾಸಕರ ಭವನ ಹಾಗೂ ವಿಧಾನಸೌಧ, ಕೆಕೆ ಗೆಸ್ಟ್ ಹೌಸ್ ನಲ್ಲಿ ಜನರ ದಂಡು ಸೇರುತ್ತಿದೆ ಎಂದು ತಿಳಿಸಿದರು.

ಈಗಾಗಲೇ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಒಂದು ಇಲಾಖೆಯ ದರ ಪಟ್ಟಿ ಕೊಟ್ಟಿದ್ದಾರೆ. ಈ ದರ ಪಟ್ಟಿ ಬಗ್ಗೆ ಸರ್ಕಾರ ಸ್ಪಷ್ಟನೆ ಕೊಡಬೇಕು. ದರ ಪಟ್ಟಿ ಇಷ್ಟೇ ಇದೆಯಾ? ಅಥವಾ ಜಾಸ್ತಿ ಆಗಿದೆಯಾ ಅಂತ ಹೇಳಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
ಇನ್ನೂ ಗ್ಯಾರಂಟಿ ಯೋಜನೆಗಳ ಕುರಿತು ಮಾತನಾಡಿದ ಅವರು, ಅನ್ನಭಾಗ್ಯದಲ್ಲಿ ಈ ತಿಂಗಳು ಕೇಂದ್ರ ಕೊಡುವ ಐದು ಕೆಜಿಯಲ್ಲಿ 2kg ಕಡಿತ ಮಾಡಿದೆ. ಈ ಬಗ್ಗೆ ಆದೇಶ ಕೂಡ ಹೊರಡಿಸಿದೆ.
3kg ಅಕ್ಕಿ 2 ಕೆಜಿ ಧಾನ್ಯ ಕೊಡಲು ಮುಂದಾಗಿದೆ. ಕೇಂದ್ರದ 5ಕೆ.ಜಿ ಅಕ್ಕಿ ಅಲ್ಲದೆ 10kg ಅಕ್ಕಿ ಕೊಡ್ತೀನಿ ಅಂದ್ರು. ಆದರೆ, ಕೇಂದ್ರ ಕೊಡುವ 5ರಲ್ಲಿ 3kg ಮಾತ್ರ ಕೊಡುತ್ತಿದ್ದಾರೆ. ಇದು ಬಡವರ ಹೊಟ್ಟೆ ಮೇಲೆ ಕನ್ನ ಹೊಡೆದಂತೆ. ಇದನ್ನ ನಾವೂ ನಿರೀಕ್ಷೆ ಮಾಡಿರಲಿಲ್ಲ. ನಾವು ಕೊಡುವಾಗ ಕಡಿಮೆ ಆದಾಗ ಹಾರಾಡಿದ್ರು. ಇದು ಜನರಿಗೆ ಮಾಡಿರೋ ದೋಖಾ, ಗ್ಯಾರಂಟಿ ಬದಲು ದೋಖಾ ನಡೆದಿದೆ. ಈ ಬಗ್ಗೆ ಸ್ಪಷ್ಟ ಉತ್ತರವನ್ನ ಸದನದಲ್ಲಿ ಕೊಡಬೇಕು ಎಂದು ಆಗ್ರಹಿಸಿದರು.












Click it and Unblock the Notifications