ಪಶ್ಚಿಮ ಘಟ್ಟಗಳ ಸಂರಕ್ಷಣೆ: ಹೊಸ ಸರ್ಕಾರದಿಂದ ನಿರೀಕ್ಷೆಗಳೇನು?
ಬೆಂಗಳೂರು, ಆಗಸ್ಟ್ 25 : "ಅರಣ್ಯ ಬೆಳೆಸುವ ಜೊತೆಗೆ ಕೃಷಿ ಭೂಮಿಯ ಪರಿವರ್ತನೆಯನ್ನು ತಡೆಯಬೇಕು. ರಸ್ತೆ ಅಗಲೀಕರಣದಂತಹ ಕಾಮಗಾರಿಗಳಿಗೆ ಪಶ್ಚಿಮ ಘಟ್ಟ ಭಾಗದಲ್ಲಿ ಕಡಿವಾಣ ಹಾಕಬೇಕು" ಎಂದು ಪಶ್ಚಿಮ ಘಟ್ಟ ರಕ್ಷಣಾ ವೇದಿಕೆಯ ಸಹದೇವ ಶಿವಪುರ ಹೇಳಿದರು.
ಮಳೆ ಅಬ್ಬರಕ್ಕೆ ಪಶ್ಚಿಮ ಘಟ್ಟ ಶ್ರೇಣಿಯ ಗುಡ್ಡಗಳು ಅಲ್ಲಾಡುತ್ತಿರಲಿಲ್ಲ. ಈಗ ನಾಲ್ಕು ದಿನ ಸುರಿದ ಮಳೆಯಿಂದಾಗಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಗುಡ್ಡ ಕುಸಿತವಾಗಿದೆ. ಪಶ್ಚಿಮ ಘಟ್ಟ ಭಾಗದ ಜನರು ಎಚ್ಚೆತ್ತುಕೊಳ್ಳಬೇಕಾದ ಪರಿಸ್ಥಿತಿ ಇದೆಯೇ?.
ಕರ್ನಾಟಕದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಪಶ್ಚಿಮ ಘಟ್ಟದ ಸಂರಕ್ಷಣೆಯಲ್ಲಿ ಸರ್ಕಾರ ಯಾವ ಕ್ರಮಗಳನ್ನು ಕೈಗೊಳ್ಳಬೇಕು. ಪಶ್ಚಿಮ ಘಟ್ಟ ರಕ್ಷಣಾ ವೇದಿಕೆಯ ಸಹದೇವ ಶಿವಪುರ ಈ ಕುರಿತು ವಿವರಣೆ ನೀಡಿದ್ದಾರೆ.

ಜಲ ವಿದ್ಯುತ್ ಯೋಜನೆ, ಶಿಶಿಲ-ಭೈರಾಪುರ ರಸ್ತೆ, ವಿದ್ಯುತ್ ಯೋಜನೆ, ಶೃಂಗೇರಿ ರೈಲು ಮಾರ್ಗ ಮುಂತಾದ ಯೋಜನೆಗಳ ಕುರಿತು ಸಹದೇವ ಶಿವಪುರ ಮಾತನಾಡಿದ್ದಾರೆ. ಸರ್ಕಾರದಿಂದ ನಿರೀಕ್ಷೆ ಮಾಡುವ ಪ್ರಮುಖ ಅಂಶಗಳು ಇಲ್ಲಿವೆ...
1. ಕೃಷಿ ಭೂಮಿ ಪರಿವರ್ತನೆ
ಅರಣ್ಯವನ್ನು ಬೆಳೆಸುವ ಜೊತೆಗೆ ಕೃಷಿ ಭೂಮಿ ಪರಿವರ್ತನೆಯನ್ನು ತಡೆಯಬೇಕಾಗಿದೆ. ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ಕೃಷಿಭೂಮಿಯನ್ನು ಪರಿವರ್ತಿತಿಸುವ ಕೆಲಸ ಹೆಚ್ಚಾಗುತ್ತಿದೆ. ಗದ್ದೆಗಳು ಲೇಔಟ್ಗಳಾಗುತ್ತಿವೆ. ಇದರಿಂದಾಗಿ ಹೊರಗಿನ ಜನರ ಅದನ್ನು ಸುಲಭವಾಗಿ ಖರೀದಿ ಮಾಡುತ್ತಿದ್ದಾರೆ. ಇದು ನಗರೀಕರಣಕ್ಕೆ ದಾರಿ ಮಾಡಿಕೊಡುತ್ತಿದೆ. ನಗರೀಕರಣ ಆರಂಭವಾದರೆ ನಾವು ಅರಣ್ಯವನ್ನು ಸಂರಕ್ಷಣೆ ಮಾಡಿಯೂ ಉಪಯೋಗವಿಲ್ಲದಂತಾಗುತ್ತದೆ.
2. ಸಮನ್ವಯತೆ ಇಂದ ಕೆಲಸವಾಗಬೇಕು
ಅರಣ್ಯ, ಕಂದಾಯ, ಪರಿಸರ ಇಲಾಖೆಗಳ ನಡುವೆ ಸಮನ್ವಯತೆ ಇರಬೇಕು. ಸಮನ್ವಯತೆ ಕೊರತೆಯಿಂದಾಗಿ ಮಲೆನಾಡು ಭಾಗದ ಯೋಜನೆಗಳ ಬಗ್ಗೆ ಸರಿಯಾದ ಚರ್ಚೆಗಳು ನಡೆಯುತ್ತಿಲ್ಲ. ಯಾವುದೇ ತೀರ್ಮಾನ ಕೈಗೊಳ್ಳುವ ಮೊದಲು ಸಮ್ವಯತೆ ಅಗತ್ಯವಾಗಿದೆ. ಅರಣ್ಯ ಸಂರಕ್ಷಣೆ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಆದರೆ, ಎಲ್ಲಾ ಇಲಾಖೆಗಳು ಸೇರಿ ಕಂದಾಯ, ಕೃಷಿ ಭೂಮಿಯ ಪರಿವರ್ತನೆ ತಡೆಯಲು ಯಾವ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ.
3.ರಸ್ತೆ ಅಗಲೀಕರಣ ಬೇಡ
ಲೋಕಸಭೆ ಕಲಾಪದಲ್ಲಿ ಕೇಳಿದ ಒಂದು ಪ್ರಶ್ನೆಗೆ ಉತ್ತರ ನೀಡುವಾಗ 5 ವರ್ಷದಲ್ಲಿ 1 ಕೋಟಿ ಮರ ಕಡಿಯಲಾಗಿದೆ ಎಂದು ಅಂಕಿ-ಸಂಖ್ಯೆ ನೀಡಲಾಗಿದೆ. ಅನಧಿಕೃತವಾದ ಸಂಖ್ಯೆ ಇನ್ನು ಎಷ್ಟಿದೆಯೋ?. ಬೆಳಗಾವಿ-ಗೋವಾ ರಸ್ತೆ ಅಗಲೀಕರಣಕ್ಕೆ 1 ಲಕ್ಷ ಮರಗಳನ್ನು ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ಕಡಿದಿದ್ದಾರೆ. ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ಇರುವ ರಸ್ತೆಯನ್ನು ರಿಪೇರಿ ಮಾಡಿದರೆ ಸಾರು. ಹೊಸ ಹೆದ್ದಾರಿ ನಿರ್ಮಿಸುವ, ಇರುವ ರಸ್ತೆಯನ್ನು ದ್ವಿಪಥ, ಚತುಷ್ಪಥವಾಗಿ ಪರಿವರ್ತನೆ ಮಾಡುವ ಚಿಂತನೆಯನ್ನು ಸರ್ಕಾರ ಕೈ ಬಿಡಬೇಕು.
4. ಗುಡ್ಡ ಅಗೆದರೆ ಭೂ ಕುಸಿತವಾಗುತ್ತದೆ
ರಸ್ತೆ ನಿರ್ಮಾಣದ ನೆಪದಲ್ಲಿ ಗುಡ್ಡ ಅಗೆದರೆ ಭೂ ಕುಸಿತವಾಗುತ್ತದೆ. ರಸ್ತೆ ಕೆಲಸ ಮುಗಿದ ಬಳಿಕ ಅಲ್ಲಿ ಬಿದಿರು ಬೆಳೆಸುವುದು ಸೇರಿದಂತೆ ಮಣ್ಣಿನ ರಕ್ಷಣೆಗೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಇದರಿಂದಾಗಿ ಗುಡ್ಡಗಳು ಕುಸಿದು ಮನೆ, ಜಮೀನಿನ ಮೇಲೆ ಬರುತ್ತವೆ. ಈಗಾಗಲೇ ಶಿಶಿಲ-ಭೈರಾಪುರ ಅಗಲ ಮಾಡುವ ಯೋಜನೆಯನ್ನು ಕೈ ಬಿಡಲು ಹೋರಾಟ ಮಾಡಲಾಗುತ್ತಿದೆ.
5. ಭೂ ಪರಿವರ್ತನೆ ನಿಯಮ
ಭೂ ಪರಿವರ್ತನೆ ವಿಚಾರಕ್ಕೆ ಬಂದರೆ ಪಶ್ಚಿಮ ಘಟ್ಟಕ್ಕೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟವಾದ ನಿಯಮವಿಲ್ಲ. ನದಿಪಾತ್ರದ ಪ್ರದೇಶಗಳಲ್ಲಿ ಭೂ ಪರಿವರ್ತನೆ ಬಗ್ಗೆ ಕಠಿಣ ನಿಯಮ ಜಾರಿಗೆ ತರಲೇಬೇಕು. ಹೊರಗಿನಿಂದ ಬರುವವರಿಗೆ ವಿಶೇಷ ನಿಯಮ ಜಾರಿಗೆ ತರಬೇಕು. ಭತ್ತದ ಗದ್ದೆ ನಷ್ಟವಾಗುತ್ತಿದೆ ಎಂದು ಅಡಿಕೆ ಕಡೆ ವಾಲುವ ರೈತರ ಅಲೋಚನೆ ಬದಲಾಗಬೇಕು.
6. ಈ ಯೋಜನೆಗಳ ಅಗತ್ಯವಿಲ್ಲ
ಶೃಂಗೇರಿಗೆ ರೈಲ್ವೆ ಮಾರ್ಗ ಮಾಡುವ ಯೋಜನೆ, ತೀರ್ಥಹಳ್ಳಿ-ಮಲ್ಪೆ ನಡುವೆ ಹೆದ್ದಾರಿ ನಿರ್ಮಾಣ ಮಾಡುವ ಯೋಜನೆ ಮುಂತಾದವುಗಳನ್ನು ಕೈ ಬಿಡಬೇಕು.












Click it and Unblock the Notifications