ಗೃಹ ರಕ್ಷಕರ ಕರ್ತವ್ಯ ಭತ್ಯೆ ಕುರಿತು ಮಹತ್ವದ ಮಾಹಿತಿ ನೀಡಿದ ಗೃಹ ಸಚಿವ
ಬೆಂಗಳೂರು, ಡಿಸೆಂಬರ್12: ಗೃಹ ರಕ್ಷಕರಿಗೆ ಬೇರೆ ರಾಜ್ಯಗಳಲ್ಲಿ ನೀಡುತ್ತಿರುವ ಭತ್ಯೆಯನ್ನು ಅವಲೋಕಿಸಿ ಶೀಘ್ರವೇ ಕರ್ತವ್ಯ ಭತ್ಯೆಯನ್ನು ಪರಿಷ್ಕರಣೆ ಮಾಡುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ಈ ಕುರಿತು ಮಂಗಳವಾರ ವಿಧಾನ ಸಭೆ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕಿ ಜೊಲ್ಲೆ ಶಶಿಕಲಾ ಅಣ್ಣಾಸಾಹೇಬ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಪರಮೇಶ್ವರ್ ಉತ್ತರಿಸಿ, 21,327 ಪುರಷ ಹಾಗೂ 4555 ಮಹಿಳೆ ಸೇರಿ ಒಟ್ಟು 25,882 ಗೃಹರಕ್ಷರು ರಾಜ್ಯದಲ್ಲಿ ಕಾರ್ಯ ನಿರ್ವಿಹಿಸುತ್ತಿದ್ದಾರೆ.

ಸರ್ಕಾರ ಆದೇಶದಂತೆ ಪೊಲೀಸ್ ಇಲಾಖೆಯ ಬಂದೋಬಸ್ತ್, ಕಾನೂನು ಸುವ್ಯವಸ್ಥೆ, ಸಂಚಾರ ನಿಯಂತ್ರಣ ಹಾಗೂ ಠಾಣೆ ಕಾರ್ಯಗಳಲ್ಲಿ ಕರ್ತವ್ಯ ನಿರ್ವಹಿಸುವ ಗೃಹರಕ್ಷಕರಿಗೆ ರೂ.750, ಬೇರೆ ಇಲಾಖೆಗಳಲ್ಲಿ ರೂ.600 ಹಾಗೂ ಪಹರೆ ಕೆಲಸಕ್ಕೆ ಬೆಂಗಳೂರು ನಗರದಲ್ಲಿ ರೂ.455 ಹಾಗೂ ಇತರೆ ಸ್ಥಳದಲ್ಲಿ ರೂ.380 ಭತ್ಯೆ ನೀಡಲಾಗುತ್ತಿದೆ.
ಈ ವ್ಯತ್ಯಾಸವನ್ನು ಸರಿ ಪಡಿಸಿ ರೂ.750 ದಿನಭತ್ಯೆ ನೀಡಲು ಸರ್ಕಾರ ಮಟ್ಟದಲ್ಲಿ ಚಿಂತಿಸಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು. ಗೃಹರಕ್ಷಕರಲ್ಲಿ ಯಾವುದೇ ತಾರತಮ್ಯ ಇಲ್ಲದೆ ಕರ್ತವ್ಯಕ್ಕೆ ನಿಯೋಜಿಸಬೇಕು. ಗೃಹರಕ್ಷಕರಿಗೆ ಆರೋಗ್ಯ ಭದ್ರತೆ, ಪ್ರಯಾಣ ಭತ್ಯೆಗಳನ್ನು ನೀಡಬೇಕು ಎಂದು ಶಾಸಕಿ ಜೊಲ್ಲೆ ಶಶಿಕಲಾ ಅಣ್ಣಾಸಾಹೇಬ ಒತ್ತಾಯಿಸಿದರು.
ಅವ್ಯವಸ್ಥೆ ಸರಿಪಡಿಸಿ ಆಸ್ಪತ್ರೆಗಳಿಗೆ ಜೀವ ರಕ್ಷಕ ಔಷಧಿ ಪೂರೈಕೆ
ಸರ್ಕಾರಿ ಆಸ್ಪತ್ರೆಗಳಿಗೆ ಜೀವ ರಕ್ಷಕ ಔಷಧಿ ಪೂರೈಕೆಯಲ್ಲಿ ಆಗುವ ವಿಳಂಬವನ್ನು ತಪ್ಪಿಸಿ, ಶೀಘ್ರವಾಗಿ ಔಷಧಿಯ ಪೂರೈಕೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ ಗುಂಡೂರಾವ್ ಹೇಳಿದರು.
ವಿಧಾನ ಪರಿಷತನಲ್ಲಿ ಸದಸ್ಯೆ ಹೇಮಲತಾ ನಾಯಕ ಅವರು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ ವಿಷಯದ ಬಗ್ಗೆ ಮಾತನಾಡಿದ ಸಚಿವರು, ಆಸ್ಪತ್ರೆಗಳಲ್ಲಿ ನಿಗದಿತ ಸಮಯಕ್ಕೆ ಔಷಧಿ ಸಿಗುವುದಿಲ್ಲ ಎನ್ನುವುದು ಗಂಭೀರ ವಿಷಯಾಗಿದೆ. ಆಸ್ಪತ್ರೆಗಳಿಗೆ ಸಕಾಲಕ್ಕೆ ಔಷಧಿ ಪೂರೈಸಬೇಕಾಗಿರುವುದು ನಮ್ಮ ಮೂಲ ಜವಾಬ್ದಾರಿಯಾಗಿದೆ.
ಆಸ್ಪತ್ರೆಗಳಿಗೆ ಶೇ.35ರಷ್ಟು ಮಾತ್ರ ಔಷಧಿ ಪೂರೈಕೆಯಾಗುತ್ತಿದೆ. ಟೆಂಡರ್ ಮೂಲಕ ಔಷಧಿ ಖರೀದಿಸುವ ಪ್ರಕ್ರಿಯೆಯಲ್ಲಿ ಸರಬರಾಜುದಾರರು ಭಾಗಿಯಾಗುತ್ತಿಲ್ಲ, ಈ ಪ್ರಕ್ರಿಯೆಯಲ್ಲಿ ಅವ್ಯವಸ್ಥೆ ಉಂಟಾಗಿದೆ ಎನ್ನಲಾಗುತ್ತಿದ್ದು ಈ ಅವ್ಯವಸ್ಥೆಯನ್ನು ಎರಡ್ಮೂರು ತಿಂಗಳೊಳಗೆ ಸರಿಪಡಿಸಲಾಗುವುದು.

ಆಸ್ಪತ್ರೆಗಳಲ್ಲಿ ಕೆಲವೊಂದು ಪ್ರಮುಖ ಔಷಧಿಗಳು ಸದಾಕಾಲ ಲಭ್ಯತೆಯಲ್ಲಿರುವಂತೆ ನೋಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಕೆಲ ಪ್ರಮುಖ ಔಷಧಿಗಳನ್ನು ಖರೀದಿಸಲು ಈಗಾಗಲೇ ಸೂಚನೆ ನೀಡಲಾಗಿದೆ.
ಆಸ್ಪತ್ರೆಗಳಲ್ಲಿ ಔಷಧಿಯು ಸಾರ್ವಜನಿಕರಿಗೆ ಉಚಿತವಾಗಿ ಲಭ್ಯವಾಗಬೇಕು. ಔಷಧಿ ಪೂರೈಕೆ ಟೆಂಡರ್ ಪ್ರಕ್ರಿಯೆಯಲ್ಲಿ ಅರ್ಹ ಸರಬರಾಜುದಾರರು ಮುಕ್ತವಾಗಿ ಭಾಗಿಯಾಗಬೇಕು. ಸರಿಯಾದ ಸಮಯಕ್ಕೆ ಔಷದಿ ಸರಬರಾಜು ಆಗಬೇಕು ಎಂಬುದು ನಮ್ಮ ಉದ್ದೇಶವಾಗಿದ್ದು ಈ ನಿಟ್ಟಿನಲ್ಲಿ ಈಗಿರುವ ಅವ್ಯವಸ್ಥೆಯನ್ನು ಸರಿಪಡಿಸಲಾಗುವುದು ಎಂದು ಸಚಿವರು ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಕೆಎಸ್ಎಂಎಸ್ಸಿಎಲ್ ಔಷಧಿಗಳನ್ನು ಖರೀದಿಸಿ ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಸಿಲ್ಲ. ಇದರಿಂದಾಗಿ ಹಾವು ನಾಯಿ ಕಡಿತದಂತಹ ಚಿಕಿತ್ಸೆಗಳು ಮಾತ್ರವಲ್ಲದೇ ಕ್ಯಾನ್ಸರ್ ಹೃದಯಘಾತ ಮೊದಲಾದ ಗಂಭೀರ ಕಾಯಿಲೆಗಳಿಗೆ ಬಳಸುವ ಜೀವ ರಕ್ಷಕ ಔಷಧಿಗಳು ಸಿಗದೇ ಬಡ ರೋಗಿಗಳು ಪರದಾಡುವಂತಾಗಿದೆ.
ಔಷಧಿ ಪೂರೈಕೆ ಟೆಂಡರ್ ಪ್ರಕ್ರಿಯೆಯನ್ನು ಇನ್ನು ಮುಗಿಸಿಲ್ಲ. ಬಡ ರೋಗಿಗಳು ವೈದ್ಯರು ಬರೆದು ಕೊಡುವ ಔಷಧಿಗಳನ್ನು ಹೊರಗಡೆ ದುಬಾರಿ ಬೆಲೆ ತೆತ್ತು ಖರೀದಿಸಬೇಕಿದೆ. ಇದಕ್ಕ ಸೂಕ್ತ ಕ್ರಮ ವಹಿಸಬೇಕು ಎಂದು ಸದಸ್ಯರಾದ ಹೇಮಲತಾ ನಾಯಕ ಅವರು ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದರು.












Click it and Unblock the Notifications