Drought in Karnataka; 195 ಬರಪೀಡಿತ ತಾಲೂಕುಗಳ ಪಟ್ಟಿ
ಬೆಂಗಳೂರು, ಸೆಪ್ಟೆಂಬರ್ 14; ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಮಳೆ ಕೈ ಕೊಟ್ಟಿದೆ. ರಾಜ್ಯದ ಹಲವಾರು ತಾಲೂಕುಗಳನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಲಾಗಿದೆ. ಈ ಘೋಷಣೆ ಕುರಿತು ಆದೇಶವೊಂದನ್ನು ಹೊರಡಿಸಲಾಗಿದೆ. ಯಾವ-ಯಾವ ತಾಲೂಕುಗಳು ಬರಪೀಡಿತ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶನುಸಾರ ಮತ್ತು ಅವರ ಹೆಸರಿನಲ್ಲಿ ಟಿ. ಸಿ. ಕಾಂತರಾಜ್, ಸರ್ಕಾರದ ಜಂಟಿ ಕಾರ್ಯದರ್ಶಿ ಕಂದಾಯ ಇಲಾಖೆ ಈ ಕುರಿತು ಆದೇಶಿಸಿದ್ದಾರೆ. 2023-24ನೇ ಸಾಲಿನಲ್ಲಿ 195 ತಾಲೂಕುಗಳು ರಾಜ್ಯದಲ್ಲ ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ರಾಜ್ಯದಲ್ಲಿನ ಮುಂಗಾರು ಹಂಗಾಮಿನಲ್ಲಿ ಬರಪೀಡಿತ ತಾಲ್ಲೂಕುಗಳನ್ನು ಘೋಷಿಸುವ ಆದೇಶದಲ್ಲಿ ನಿರ್ದೇಶಕರು, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ, ಬೆಂಗಳೂರು ಇವರ ಪತ್ರ, ಸಚಿವ ಸಂಪುಟ ಉಪಸಮಿತಿಯ ಸಭೆ ನಡವಳಿಗಳನ್ನು ಉಲ್ಲೇಖ ಮಾಡಲಾಗಿದೆ.

ಪ್ರಸ್ತಾವನೆಗಳನ್ನು ಪರಿಶೀಲಿಸಿ ಕೇಂದ್ರ ಸರ್ಕಾರದ ಬರ ನಿರ್ವಹಣೆ ಕೈಪಿಡಿ-2020ರ ಬರ ಘೋಷಣೆ ಮಾರ್ಗಸೂಚಿಯಲ್ಲಿನ ಮಾನದಂಡಗಳನ್ವಯ ಜಿಲ್ಲಾಧಿಕಾರಿಗಳಿಂದ ಬೆಳಹಾನಿ ಸಮೀಕ್ಷೆಯ (Ground Truthing)ವರದಿಯನುಸಾರ 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದ 31 ಜಿಲ್ಲೆಗಳ 236 ತಾಲ್ಲೂಕುಗಳ ಪೈಕಿ 195 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಕಂಡು ಬಂದಿದ್ದು, ಈ ಪೈಕಿ 161 ತಾಲೂಕುಗಳನ್ನು ತೀವ್ರ ಬರಪೀಡಿತ ತಾಲ್ಲೂಕು ಹಾಗೂ 34 ತಾಲ್ಲೂಕುಗಳನ್ನು ಸಾಧಾರಣ ಬರಪೀಡಿತ ತಾಲ್ಲೂಕು ಎಂದು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ 6 ತಿಂಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ಘೋಷಿಸಿ ಆದೇಶಿಸಿದೆ.
ಪ್ರಸ್ತಾವನೆಯ ಅಂಶಗಳು; 2023ನೇ ಸಾಲಿನ ನೈಋತ್ಯ ಮುಂಗಾರು ರಾಜ್ಯಕ್ಕೆ ದಿನಾಂಕ 8/6/2023ರಂದು ಪ್ರವೇಶಿಸಿ, ರಾಜ್ಯದ ಎಲ್ಲೆಡೆ 14 ದಿನಗಳಲ್ಲಿ ವ್ಯಾಪಿಸಿತು. ಮುಂಗಾರು ಪ್ರವೇಶ ಮತ್ತು ವ್ಯಾಪಿಸಲು ಸಾಮಾನ್ಯ ದಿನಾಂಕಕ್ಕಿಂತ ಒಂದು ವಾರ ತಡವಾಗಿದೆ. ಜೂನ್ ಮಾಹೆಯಲ್ಲಿ ಮುಂಗಾರು ದುರ್ಬಲಗೊಂಡು ವಾಡಿಕೆಗಿಂತ ಶೇ. 56 ಮಳೆ ಕೊರತೆ ಉಂಟಾಯಿತು. ಜುಲೈ ಮಾಹೆಯಲ್ಲಿ ಮುಂಗಾರು ಚುರುಕುಗೊಂಡು ವಾಡಿಕೆಗಿಂತ ಶೇ.29 ಹೆಚ್ಚು ಮಳೆಯಾಗಿದ್ದು, ಈ ಮಳೆಯು ಕೇವಲ ಒಂದು ವಾರ ಮಾತ್ರ ಕೇಂದ್ರೀಕೃತವಾಗಿತ್ತು. ಆಗಸ್ಟ್ ಮಾಹೆಯಲ್ಲಿ ವಾಡಿಕೆಗಿಂತ ಶೇ.73 ಮಳೆ ಕೊರತೆಯಾಗಿದ್ದು, ಕಳೆದ 125 ವರ್ಷಗಳಲ್ಲಿ ಅತಿ ಕಡಿಮೆ ಮಳೆ ದಾಖಲಾಗಿರುವುದು ಕಂಡು ಬಂದಿರುತ್ತದೆ ಎಂದು ಹೇಳಿದೆ.
ರಾಜ್ಯದ ಮಳೆ, ಬೆಳೆ ಜಲಾಶಯಗಳ ಸಂಗ್ರಹಣಾ ಅಂತರ್ಜಲ, ಕುಡಿಯುವ ನೀರು ಹಾಗೂ ಮೇವಿನ ಪರಿಸ್ಥಿತಿ ಕುರಿತು ಕಾಲಕಾಲಕ್ಕೆ ರಾಜ್ಯ ಹವಮಾನ ಅವಲೋಕನಾ ಸಮಿತಿಯು ಪರಿಶೀಲಿಸಿದೆ. ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ರಾಜ್ಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಸರ್ಕಾರದ ಮುಖ್ಯ ಕಾರ್ಯದರ್ಶಿರವರು ಅವಲೋಕಿಸಿರುತ್ತಾರೆ. ಕೇಂದ್ರ ಸರ್ಕಾರದ ಬರ ಕೈಪಿಡಿ-2020 ರನ್ವಯ ಕಡ್ಡಾಯ ಮತ್ತು ತತ್ಪರಿಣಾಮ ಸೂಚಕಗಳ ನಿರಂತರ ಮೇಲ್ವಿಚಾರಣೆಯ ಆಧಾರದ ಮೇಲೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ದಿನಾಂಕ 1/6/2023 ರಿಂದ 19/8/2023 ಅವಧಿಯ ವರದಿಯಂತೆ ರಾಜ್ಯದಲ್ಲಿ 487 ಮಿ. ಮೀ. ಮಳೆಯಾಗಿದ್ದು, ವಾಡಿಕೆ ಮಳೆ (635 ಮಿ. ಮೀ.)ಗೆ ಹೋಲಿಸಿದಾಗ ಶೇ.23ರಷ್ಟು ಮಳೆಕೊರತೆ ಕಂಡು ಬಂದಿರುತ್ತದೆ.
ಬರ ಕೈಪಿಡಿ-2020ರ ಮಾರ್ಗಸೂಚಿಯನ್ವಯ ಬರ ಘೋಷಿಸಲು ಸೂಚಿಸಿರುವ ಕಡ್ಡಾಯ ಮಾನದಂಡಗಳಾದ ಶೇ.60ಕ್ಕಿಂತ ಹೆಚ್ಚು ಮಳೆ ಕೊರತೆ ಅಥವಾ ಸತತ ಮೂರು ವಾರಗಳಲ್ಲಿ ಶುಷ್ಕ ವಾತಾವರಣ ಹಾಗೂ ತತ್ಪರಿಣಾಮ ಮಾನದಂಡಗಳಾದ ತೇವಾಂಶ ಕೊರತೆ, ಉಪಗ್ರಹ ಆಧಾರಿತ ಬೆಳೆ ಸೂಚ್ಯಾಂಕ, ಬೆಳೆ ಬಿತ್ತನೆ ಪುದೇಶ, ಹಾಗೂ ಜಲಸಂಪನ್ಮೂಲ ಸೂಚ್ಯಾಂಕದಲ್ಲಿನ ತೀವ್ರತೆಯನ್ನು ಆಧರಿಸಿ ಮೌಲ್ಯಮಾಪನ ಮಾಡಿ ಒಟ್ಟಾರೆ 113 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಕಂಡುಬಂದಿದೆ.
ದಿನಾಂಕ 22/8/2023ರಂದು ನಡೆದ ಸಂಪುಟ ಉಪಸಮಿತಿಯ ಸಭೆಯು ಬರ ಕೈಪಿಡಿ-2020 ರ ಪ್ಯಾರಾ 3.2.6ರ ನಿಬಂಧನೆಗಳನ್ವಯ ಜಿಲ್ಲಾಧಿಕಾರಿಗಳು ಆಯಾ ಜಿಲ್ಲೆಯ ಕೃಷಿ, ತೋಟಗಾರಿಕೆ ಮತ್ತು ಕಂದಾಯ ಅಧಿಕಾರಿ/ ಇತರೆ ಸಿಬ್ಬಂದಿಗಳನ್ನು ಒಳಗೊಂಡ ತಂಡಗಳನ್ನು ರಚಿಸಿ ಬರ ಪರಿಸ್ಥಿತಿ ಕಂಡುಬಂದ 113 ತಾಲ್ಲೂಕುಗಳ 1519 ಗ್ರಾಮಗಳನ್ನು Random ಆಗಿ ಗುರುತಿಸಿ ಇವುಗಳಲ್ಲಿನ ಒಟ್ಟು 14,228 ಪ್ಲಾಟ್ಗಳಲ್ಲಿ ಮೊಬೈಲ್ App ಮೂಲಕ ಬೆಳೆ ಹಾನಿ ಕ್ಷೇತ್ರ ದೃಢಿಕರಣ (Ground Truthing)ನ್ನು ಕೈಗೊಂಡಿರುತ್ತಾರೆ.
ದಿನಾಂಕ 25/8/2023ರಲ್ಲಿ ಸುತ್ತೋಲೆಯನ್ನು ಹೊರಡಿಸಿ ಬೆಳೆ ಸಮೀಕ್ಷೆ ನಡೆಸುವಂತೆ ತಿಳಿಸಿದೆ. ಅದರಂತೆ ಶೇ.50ಕ್ಕಿಂತ ಹೆಚ್ಚು ಬೆಳೆ ನಷ್ಟವಾಗಿರುವ 62 ತಾಲೂಕುಗಳನ್ನು ತೀವ್ರ ಬರ ಹಾಗೂ ಶೇ 33-50ರಷ್ಟು ಬೆಳೆ ನಷ್ಟವನ್ನು ವರದಿ ಮಾಡಿರುವ 51 ತಾಲ್ಲೂಕುಗಳು ಸಾಧಾರಣ ಬರ ಎಂದು ವರ್ಗೀಕರಿಸಲಾಗಿದೆ. ದಿನಾಂಕ 1/6/2023 ರಿಂದ 2/9/2023 ಅವಧಿಯಲ್ಲಿ ರಾಜ್ಯದಲ್ಲಿ 512 ಮಿ. ಮೀ. ಮಳೆಯಾಗಿದ್ದು, ವಾಡಿಕೆ ಮಳೆ (701ಮಿ. ಮೀ)ಗೆ ಹೋಲಿಸಿದಾಗ ಶೇ.27ರಷ್ಟು ಮಳೆಕೊರತೆ ಕಂಡು ಬಂದಿದೆ. ಬರ ಮಾನದಂಡಗಳನ್ನು ಪರಿಗಣಿಸಿ ಹೊಸದಾಗಿ 83 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಕಂಡುಬಂದಿರುವ ತಾಲ್ಲೂಕುಗಳೆಂದು KSNDMC ಸಂಸ್ಥೆಯು ವರದಿ ನೀಡಿದೆ.
ಈ ಬಗ್ಗೆ ದಿನಾಂಕ 4/9/2023ರಂದು ನಡೆದ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಈಗಾಗಲೇ ಬೆಳೆ ಹಾನಿ ಸಮೀಕ್ಷೆ ನಡೆಸಿ ಸಾಧಾರಣ ಬರವೆಂದು ಗುರುತಿಸಲಾದ 51 ತಾಲ್ಲೂಕುಗಳ ಜೊತೆಗೆ ದಿನಾಂಕ 2/9/2023 ವರದಿಯನುಸಾರ ರಾಜ್ಯದಲ್ಲಿ 83 ತಾಲ್ಲೂಕುಗಳು ಸೇರಿ 134 ತಾಲ್ಲೂಕುಗಳಲ್ಲಿ ಬೆಳೆ ಹಾನಿ ಕ್ಷೇತ್ರ ದೃಢೀಕರಣ (Ground Truthing) ಕೈಗೊಳ್ಳುವಂತೆ ಹಾಗೂ ಸದರಿ ಪ್ರಸ್ತಾವನೆಯ ಬಗ್ಗೆ ಸಚಿವ ಸಂಪುಟಕ್ಕೆ ಮಂಡಿಸುವಂತೆ ತೀರ್ಮಾನಿಸಲಾಯಿತು. ಅದರಂತೆ ದಿನಾಂಕ 4/9/2023ರಲ್ಲಿ ಸುತ್ತೋಲೆಯನ್ನು ಹೊರಡಿಸಿ ಬೆಳೆ ಸಮೀಕ್ಷೆ ನಡೆಸುವಂತೆ ತಿಳಿಸಿದೆ.
ದಿನಾಂಕ 7/9/2023ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದಲ್ಲಿ ನೈರುತ್ಯ ಮುಂಗಾರಿನಲ್ಲಿ ಕೊರತೆಯಿಂದಾಗಿ ಬರ ಪರಿಸ್ಥಿತಿ ಉಂಟಾಗಿರುವ ಕುರಿತು ಸಚಿವ ಸಂಪುಟವು ದೀರ್ಘವಾಗಿ ಚರ್ಚಿಸಿ ಈಗಾಗಲೇ 62 ತಾಲ್ಲೂಕುಗಳಲ್ಲಿ ತೀವ್ರ ಬರ ಎಂದು ಬೆಳೆ ಹಾನಿ ಸಮೀಕ್ಷೆಯಿಂದ ದೃಢಪಟ್ಟಿದ್ದು, ಇನ್ನು ಹೆಚ್ಚುವರಿಯಾಗಿ 134 ತಾಲ್ಲೂಕುಗಳಲ್ಲಿ ಜಿಲ್ಲಾಧಿಕಾರಿಗಳು ಆಯಾ ಜಿಲ್ಲೆಯ ಕೃಷಿ, ತೋಟಗಾರಿಕೆ ಮತ್ತು ಕಂದಾಯ ಅಧಿಕಾರಿ/ ಇತರೆ ಸಿಬ್ಬಂದಿಗಳನ್ನು ಒಳಗೊಂಡ ತಂಡಗಳನ್ನು ರಚಿಸಿ ಒಟ್ಟು 134 ತಾಲ್ಲೂಕುಗಳಲ್ಲಿನ Random ಆಗಿ ಗುರುತಿಸಿ ಇವುಗಳಲ್ಲಿ ಒಟ್ಟು 19,075 ಪ್ಲಾಟ್ಗಳಲ್ಲಿ ಮೊಬೈಲ್ App ಮೂಲಕ ಬೆಳೆ ಹಾನಿ ಕ್ಷೇತ್ರ ದೃಢೀಕರಣ (Ground Truthing) ಕೈಗೊಂಡು, ಸದರಿ ವರದಿ ಮುಂದಿನ ಕೆಲವು ದಿನಗಳಲ್ಲಿ ಬರುವುದರಿಂದ ನಂತರ ಬರ ಘೋಷಣೆಯ ಬಗ್ಗೆ ತೀರ್ಮಾನಿಸಲು ಸಚಿವ ಸಂಪುಟ ನಿರ್ಧರಿಸಿದೆ.
ದಿನಾಂಕ 13/9/2023ರಂದು ನಡೆದ ಸಚಿವ ಸಂಪುಟ ಉಪ ಸಮಿತಿಯು ಹೆಚ್ಚುವರಿಯಾಗಿ 134 ತಾಲ್ಲೂಕುಗಳಿಗೆ ಜಿಲ್ಲಾಧಿಕಾರಿಗಳಿಂದ ಬೆಳೆ ಹಾನಿ ಸಮೀಕ್ಷೆ ಬಗ್ಗೆ ವರದಿಯನ್ನು ಪಡೆದು ಪರಿಶೀಲಿಸಿ, ಮೊದಲು ಸಾಧಾರಣವೆಂದು ಗುರುತಿಸಲಾದ 51 ತಾಲ್ಲೂಕುಗಳಲ್ಲಿ ಮತ್ತೊಮ್ಮೆ ಬೆಳೆ ಹಾನಿ ಕ್ಷೇತ್ರ ದೃಢೀಕರಣ (Ground Truthing) ಕೈಗೊಂಡ ನಂತರ 41 ತಾಲ್ಲೂಕುಗಳು ತೀವ್ರ ಬರ ವರ್ಗದಲ್ಲಿ ಹಾಗೂ ಉಳಿದ 10 ತಾಲ್ಲೂಕುಗಳು ಸಾಧಾರಣ ಬರ ವರ್ಗದಲ್ಲಿ ಗುರುತಿಸಲಾಗಿದೆ. ಹೊಸದಾಗಿ ಬರ ಪರಿಸ್ಥಿತಿ ಕಂಡು ಬಂದ 83 ತಾಲ್ಲೂಕುಗಳ ಪೈಕಿ 58 ತಾಲೂಕುಗಳು ತೀವ್ರ ಬರ ಹಾಗೂ 24 ತಾಲ್ಲೂಕುಗಳು ಸಾಧಾರಣ ಬರವೆಂದು ನಿರ್ಣಯಿಸಿದೆ.
ಅದರಂತೆ ಕೇಂದ್ರ ಸರ್ಕಾರ ಬರ ನಿರ್ವಹಣೆ ಕೈಪಿಡಿ - 2020 ರಲ್ಲಿ ನೀಡಿರುವ ಬರ ಘೋಷಣೆಯ ಮಾರ್ಗಸೂಚಿಯನ್ವಯ ಬರ ಘೋಷಣೆಯ ಮಾನದಂಡಗಳನ್ನು ಪರಿಗಣಿಸಿ ಒಟ್ಟಾರೆಯಾಗಿ ರಾಜ್ಯದ 31 ಜಿಲ್ಲೆಗಳ 236 ತಾಲ್ಲೂಕುಗಳ ಪೈಕಿ 195 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಕಂಡುಬಂದಿದ. ಈ ಎಲ್ಲಾ ತಾಲ್ಲೂಕುಗಳಲ್ಲಿ ಬೆಳಹಾನಿ ಸಮೀಕ್ಷೆ (Ground Truthing) ಕೈಗೊಂಡ ನಂತರ ಅಂತಿಮವಾಗಿ 161 ತಾಲ್ಲೂಕುಗಳನ್ನು ತೀವ್ರ ಬರ ಪೀಡಿತ ತಾಲ್ಲೂಕುಗಳು ಹಾಗೂ 34 ತಾಲ್ಲೂಕುಗಳನ್ನು ಸಾಧಾರಣ ಬರ ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಲೆಂದು ತುರ್ತು ಬರ ನಿರ್ವಹಣಾ ಜವಾಬ್ದಾರಿ ವಹಿಸಬೇಕಾದ್ದರಿಂದ ಮುಖ್ಯಮಂತ್ರಿಯವರು ಹಾಗೂ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA), ಅಧ್ಯಕ್ಷರ ಅನುಮೋದನೆ ಪಡೆಯಲು ತೀರ್ಮಾನಿಸಲಾಯಿತು.
ಈ ಎಲ್ಲಾ ಪ್ರಕ್ರಿಯೆಯನ್ನು ಕಾಲಕಾಲಕ್ಕೆ KSDMAಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಸರ್ಕಾರದ ಮುಖ್ಯ ಕಾರ್ಯದರ್ಶಿರವರ ಅವಗಾಹನೆಗೆ ತರಲಾಗಿದೆ. ಸಚಿವ ಸಂಪುಟ ಉಪ ಸಮಿತಿಯ ತೀರ್ಮಾನದಂತೆ ಮಾನ್ಯ ಮುಖ್ಯ ಮಂತ್ರಿಯವರ ಅನುಮೋದನೆಯನ್ನು ಪಡೆದು ರಾಜ್ಯದ 31 ಜಿಲ್ಲೆಗಳ 236 ತಾಲ್ಲೂಕುಗಳ ಪೈಕಿ 195 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಕಂಡುಬಂದಿದೆ. ಈ ಎಲ್ಲಾ ತಾಲೂಕುಗಳಲ್ಲಿ ಬೆಳೆಹಾನಿ ಸಮೀಕ್ಷೆ (Ground Truthing) ಕೈಗೊಂಡ ನಂತರ ಅಂತಿಮವಾಗಿ 161 ತಾಲ್ಲೂಕುಗಳನ್ನು ನೀವು ಬರ ಪೀಡಿತ ತಾಲ್ಲೂಕುಗಳು ಹಾಗೂ 34 ತಾಲ್ಲೂಕುಗಳನ್ನು ಸಾಧಾರಣ ಬರ ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಲು ನಿರ್ಣಯಿಸಿದೆ.
Download











Click it and Unblock the Notifications