ಮಠಗಳನ್ನು ಸರ್ಕಾರದ ವ್ಯಾಪ್ತಿಗೆ ತರುವ ಪ್ರಸ್ತಾವನೆ ಇಲ್ಲ
ಬೆಂಗಳೂರು, ಜ.29: ಮಠಗಳನ್ನು ಸರ್ಕಾರದ ವ್ಯಾಪ್ತಿಗೆ ತರುವ ಪ್ರಸ್ತಾವನೆಗೆ ಭಾರೀ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಸರ್ಕಾರ ತನ್ನ ಪ್ರಸ್ತಾವನೆಯನ್ನು ಹಿಂಪಡೆದಿದೆ. ಬುಧವಾರ ವಿಧಾನ ಮಂಡಲದ ಅಧಿವೇಶನದಲ್ಲಿ ಮಠಗಳನ್ನು ಸರ್ಕಾರದ ವ್ಯಾಪ್ತಿಗೆ ತರುವ ಯಾವುದೇ ಚಿಂತನೆ ಸರ್ಕಾರದ ಮುಂದಿಲ್ಲ ಎಂದು ಮುಜರಾಯಿ ಖಾತೆ ಸಚಿವ ಪ್ರಕಾಶ ಹುಕ್ಕೇರಿ ಹೇಳಿಕೆ ನೀಡಿ ವಿವಾದಕ್ಕೆ ತೆರೆ ಎಳೆದಿದ್ದಾರೆ.
ಬುಧವಾರದ ಕಲಾಪ ಆರಂಭವಾದಾಗ ಮಠಗಳು ಸರ್ಕಾರದ ನಿಯಂತ್ರಣಕ್ಕೆ ಬೇಡ. ಅಂತಹ ಚಿಂತನೆ ಇದ್ದರೆ ಮೊದಲು ಕೈ ಬಿಡಿ ಎಂದು ಶಾಸಕ ಮಾನಪ್ಪ ಭಂಡಾರಿ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಜರಾಯಿ ಹಾಗೂ ಸಕ್ಕರೆ ಖಾತೆ ಸಚಿವ ಪ್ರಕಾಶ್ ಹುಕ್ಕೇರಿ, ಮಠಗಳು ಮುಜರಾಯಿ ವ್ಯಾಪ್ತಿಗೆ ಒಳಪಡುವುದಿಲ್ಲ ಮತ್ತು ಸರ್ಕಾರದ ವ್ಯಾಪ್ತಿಗೆ ತರುವ ಯಾವುದೇ ಚಿಂತನೆ ಸರ್ಕಾರದ ಮುಂದೆ ಇಲ್ಲ ಉತ್ತರ ನೀಡಿದರು.[ಮಠಗಳು ಸರ್ಕಾರದ ವ್ಯಾಪ್ತಿಗೆ : ಭಾರೀ ವಿರೋಧ]
ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದ್ದ ಸರ್ಕಾರ ಎಲ್ಲ ಮಠಗಳನ್ನು ತನ್ನ ವ್ಯಾಪ್ತಿಗೆ ತರಲು ಚಿಂತನೆ ನಡೆಸಿತ್ತು. ಸ್ವತಃ ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಪ್ರತಿಪಕ್ಷಗಳು ಸರ್ಕಾರದ ಈ ನೀತಿಗೆ ವಿರೋಧ ವ್ಯಕ್ತಪಡಿಸಿದ್ದರು. ಆದ್ದರಿಂದ ಅದನ್ನು ಕೈಬಿಡಲಾಗಿದೆ.[ಕರ್ನಾಟಕದ ಇತರ ಜಿಲ್ಲಾ ಸುದ್ದಿಗಳು]

ಮಠಗಳು ಸರ್ಕಾರದ ನಿಯಂತ್ರಣಕ್ಕಿಲ್ಲ
ಮಠಗಳು ಮುಜರಾಯಿ ಖಾತೆ ವ್ಯಾಪ್ತಿಗೆ ಒಳಪಡುವುದಿಲ್ಲ ಮತ್ತು ಸರ್ಕಾರದ ವ್ಯಾಪ್ತಿಗೆ ತರುವ ಯಾವುದೇ ಚಿಂತನೆ ಸರ್ಕಾರದ ಮುಂದೆ ಇಲ್ಲ ಎಂದು ಮುಜರಾಯಿ ಖಾತೆ ಸಚಿವ ಪ್ರಕಾಶ್ ಹುಕ್ಕೇರಿ ಸದನಕ್ಕೆ ಸ್ಪಷ್ಟನೆ ನೀಡಿದ್ದಾರೆ ಈ ಮೂಲಕ ಎರಡು ದಿನಗಳಿಂದ ಎದ್ದಿದ್ದ ವಿವಾದಕ್ಕೆ ತೆರೆ ಎಳೆದಿದ್ದಾರೆ. ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದ್ದ ಸರ್ಕಾರ ಎಲ್ಲ ಮಠಗಳನ್ನು ತನ್ನ ವ್ಯಾಪ್ತಿಗೆ ತರಲು ಚಿಂತನೆ ನಡೆಸಿತ್ತು. ಇದಕ್ಕೆ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಬೀದರ್ ತಾ.ಪಂಯಲ್ಲಿ ಕುರ್ಚಿ ಕಿತ್ತಾಟ
ತಾಲೂಕು ಪಂಚಾಯಿತಿಯಲ್ಲಿ ಕುರ್ಚಿಗಾಗಿ ಕಿತ್ತಾಟ ಪುನಃ ಆರಂಭವಾಗಿದೆ. ಕೇವಲ 4 ಸದಸ್ಯ ಸಂಖ್ಯಾಬಲ ಹೊಂದಿರುವ ಕಾಂಗ್ರೆಸ್ ಪಕ್ಷ ಅಧ್ಯಕ್ಷ ಸ್ಥಾನಕ್ಕೇರಿದ್ದು, ಜೆಡಿಎಸ್ ಮತ್ತು ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದೆ. ಅಧ್ಯಕ್ಷ ಅಕ್ಬರ್ಖಾನ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿರುವ ಪ್ರತಿಪಕ್ಷಗಳು ಅದನ್ನು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಲುಪಿಸಿದ್ದಾರೆ. ಬೀದರ್ ತಾಪಂಯಲ್ಲಿ ಒಟ್ಟು 23 ಸದಸ್ಯ ಬಲವಿದೆ. ಇವರಲ್ಲಿ ಕಾಂಗ್ರೆಸ್ನ 4, ಜೆಡಿಎಸ್ 9, ಬಿಜೆಪಿ 7 ಹಾಗೂ ಮೂವರು ಸ್ವತಂತ್ರ ಸದಸ್ಯರಿದ್ದಾರೆ. ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಅಧ್ಯಕ್ಷ ಗಣಪತಿ ರಾಠೋಡ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿ ಅವರು ಕುರ್ಚಿ ತೊರೆದಿದ್ದರು. ನಂತರ ಅಧ್ಯಕ್ಷರಾಗಿದ್ದ ಜೆಡಿಎಸ್ನ ಸುಭಾಷ ಕೋರಿ ಸಹ ಅವಿಶ್ವಾಸದ ಕಾರಣದಿಂದಲೇ ಪದತ್ಯಾಗ ಮಾಡಿದ್ದರು.

ಪರಮಶಿವಯ್ಯ ವರದಿ ಜಾರಿಗೆ ಆಗ್ರಹಿಸಿ ಮುತ್ತಿಗೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕು ಸೇರಿದಂತೆ ರಾಜ್ಯದ 9 ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರು ಹಾಗೂ ಕೃಷಿ ನೀರಾವರಿ ಯೋಜನೆಯನ್ನು ಜಾರಿಗೊಳಿಸಬೇಕೆಂದು ಡಾ. ಪರಮಶಿವಯ್ಯ ಅವರ ವರದಿಯನ್ನು ಅನುಷ್ಠಾನ ಗೊಳಿಸಬೇಕೆಂದು ಒತ್ತಾಯಿಸಿ ಸಿಪಿಐ (ಎಂ) ಕಾರ್ಯಕರ್ತರು ವಕೀಲ ಮಂಜುನಾಥ್ ನೇತೃತ್ವದಲ್ಲಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದರು. ದೇವರಕೊಂಡಪ್ಪ ವೃತ್ತದಿಂದ ತಾಲೂಕು ಕಚೇರಿಗೆ ಕಾಲ್ನಡಿಗೆ ಜಾಥಾದಲ್ಲಿ ಬಂದ ನೂರಾರು ಕಾರ್ಯಕರ್ತರು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ರೈತರ ಬಂಧನ ಖಂಡಿಸಿ ರಸ್ತೆ ತಡೆ
ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕಬ್ಬು ಬೆಳೆಗಾರರನ್ನು ಬಂಧಿಸಿದ ಪೊಲೀಸರು ಕ್ರಮವನ್ನು ಖಂಡಿಸಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಮಂಗಳವಾರ ಸಂಜೆ ರೈತರು ದಿಢೀರ್ ರಸ್ತೆ ತಡೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸರ್ಕಾರಕ್ಕೆ ರೈತಪರವಾದ ಕಾಳಜಿ ಇಲ್ಲವಾಗಿದೆ. ಆದ್ದರಿಂದ ರೈತರ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.

ಕಾರ್ಮಿಕರ ನೋಂದಣಿಗೆ ಚಾಲನೆ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಯದ ಕಾರ್ಮಿಕರು, ವಾಹನ ಚಾಲಕರು, ಅಸಂಘಟಿತ ಕಾರ್ಮಿಕರನ್ನು ಗುರುತಿಸಿ ಸ್ಥಳದಲ್ಲೇ ನೋಂದಾಯಿಸುವ ಕಾರ್ಯವನ್ನು ಆರಂಭಿಸಲಾಗಿದೆ. ಪಟ್ಟಣದ ಎಪಿಎಂಸಿ ಸಮೀಪ ಸಂತೆ ನಡೆಯುವ ಸ್ಥಳದಲ್ಲಿ ವಾಹನ ಚಾಲಕರ ನೋದಣಿ ಮಾಡಿಕೊಳ್ಳಲಾಗುತ್ತಿದೆ ಎಂದು ಚಿಕ್ಕಮಗಳೂರು ವಿಭಾಗದ ಕಾರ್ಮಿಕ ಆಯುಕ್ತರಾದ ಶ್ರೀವಳ್ಳಿ ಹೇಳಿದ್ದಾರೆ.

ಇನ್ನೂ 4 ಎಚ್ಡಿ-ಒನ್ ಕೇಂದ್ರ
ನಾಗರಿಕರಿಗೆ ಒಂದೇ ಸೂರಿನಡಿ ಹಲವಾರು ಸೌಲಭ್ಯಗಳನ್ನು ಒದಗಿಸುವ ಎಚ್ಡಿ-ಒನ್ನ (ಹುಬ್ಬಳ್ಳಿ-ಧಾರವಾಡ ಒನ್) 4 ಕೇಂದ್ರಗಳನ್ನು ಅವಳಿ ನಗರದಲ್ಲಿ ಸ್ಥಾಪಿಸಲಾಗುತ್ತದೆ. ಈಗಾಗಲೇ ಅವಳಿ ನಗರದಲ್ಲಿ ಎಚ್ಡಿ-ಒನ್ನ 9 ಕೇಂದ್ರಗಳಿದ್ದು, ಧಾರವಾಡದಲ್ಲಿ ಎರಡು ಹಾಗೂ ಹುಬ್ಬಳ್ಳಿಯಲ್ಲಿ ಏಳು ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇದರೊಂದಿಗೆ ಹುಬ್ಬಳ್ಳಿಯ ಹೆಗ್ಗೇರಿ, ಆನಂದನಗರ, ಆದರ್ಶನಗರ ಮತ್ತು ಧಾರವಾಡದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನೂತನ ಕೇಂದ್ರ ಸ್ಥಾಪನೆಗೊಳ್ಳಲಿವೆ.

ವೈದ್ಯ ಕಾಲೇಜಿಗೆ ಆಗ್ರಹಿಸಿ ಪ್ರತಿಭಟನೆ
ಚಿತ್ರದುರ್ಗದ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಹಿಂಭಾಗವಿರುವ 9 ಎಕರೆ ಖಾಲಿ ಜಾಗದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣ ಮಾಡುವಂತೆ ಒತ್ತಾಯಿಸಿ ವಂದೇಮಾತರಂ ಜಾಗೃತಿ ವೇದಿಕೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದೆ. ಜಿಲ್ಲಾ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಕೆ.ಟಿ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಯಲ್ಲಿ ನೂರಾರು ಜನರು ಭಾಗವಹಿಸಿದ್ದರು.












Click it and Unblock the Notifications