ಫೆ.7ರಿಂದ ಬಾಗಲಕೋಟೆಯಲ್ಲಿ ಚಾಲುಕ್ಯ ಉತ್ಸವ
ಬಾಗಲಕೋಟೆ, ಜ.28 : ಫೆಬ್ರವರಿ 7ರಿಂದ ಮೂರು ದಿನಗಳ ಕಾಲ ಬಾಗಲಕೋಟೆಯಲ್ಲಿ ಚಾಲುಕ್ಯ ಉತ್ಸವ ಆಚರಿಸಲು ನಿರ್ಧರಿಸಲಾಗಿದೆ ಎಂದು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಪಾಟೀಲ್ ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ಸವ ಉದ್ಘಾಟಿಸಲಿದ್ದಾರೆ ಎಂದು ಪಾಟೀಲ್ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರವಾಸೋದ್ಯಮ ಇಲಾಖೆ ಹೊರತಂದಿರುವ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಪಾಟೀಲ್, ಬರಗಾಲದಿಂದ ಸ್ಥಗಿತಗೊಂಡಿದ್ದ ಚಾಲುಕ್ಯ ಉತ್ಸವ 2014, ಫೆಬ್ರುವರಿ 7ರಿಂದ 9ರ ವರೆಗೆ ಮೂರು ದಿನಗಳ ಕಾಲ ನಡೆಯಲಿದೆ. ಈ ಬಾರಿ ಎರಡು ದಿನ ಬಾದಾಮಿ ಹಾಗೂ ಒಂದು ದಿನ ಐಹೊಳೆಯಲ್ಲಿ ಚಾಲುಕ್ಯ ಉತ್ಸವ ಆಚರಿಸಲಾಗುವುದು ಎಂದು ತಿಳಿಸಿದರು. [ಚಾಲುಕ್ಯ ಉತ್ಸವ ವೆಬ್ ಸೈಟ್ ನೋಡಿ]
ಚಾಲುಕ್ಯ ಉತ್ಸವಕ್ಕಾಗಿ 1 ಕೋಟಿ ರೂ.ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಖ್ಯಾತ ಕಲಾವಿದರಿಂದ, ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುವುದು. ಖ್ಯಾತ ಕಲಾವಿದರಿಂದ ನೃತ್ಯ, ಸಂಗೀತ, ಯಕ್ಷಗಾನ, ಜನಪದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಾಟೀಲ್ ಹೇಳಿದರು. [ಕರ್ನಾಟಕದ ಇತರ ಜಿಲ್ಲಾ ಸುದ್ದಿಗಳು]

ಫೆ.7ರಿಂದ ಚಾಲುಕ್ಯ ಉತ್ಸವ
ಫೆಬ್ರವರಿ 7ರಿಂದ ಮೂರು ದಿನಗಳ ಕಾಲ ಬಾಗಲಕೋಟೆಯಲ್ಲಿ ಚಾಲುಕ್ಯ ಉತ್ಸವ ಆಚರಿಸಲು ನಿರ್ಧರಿಸಲಾಗಿದೆ ಎಂದು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಪಾಟೀಲ್ ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ಸವ ಉದ್ಘಾಟಿಸಲಿದ್ದಾರೆ. ಬರಗಾಲದಿಂದ ಸ್ಥಗಿತಗೊಂಡಿದ್ದ ಚಾಲುಕ್ಯ ಉತ್ಸವ 2014, ಫೆಬ್ರುವರಿ 7ರಿಂದ 9ರ ವರೆಗೆ ಮೂರು ದಿನಗಳ ಕಾಲ ನಡೆಯಲಿದೆ. ಈ ಬಾರಿ ಎರಡು ದಿನ ಬಾದಾಮಿ ಹಾಗೂ ಒಂದು ದಿನ ಐಹೊಳೆಯಲ್ಲಿ ಚಾಲುಕ್ಯ ಉತ್ಸವ ಆಚರಿಸಲಾಗುವುದು ಎಂದು ಪಾಟೀಲ್ ಹೇಳಿದರು.

ಮದ್ಯದಂಗಡಿ ತೆರವುಗೊಳಿಸಲು ಪ್ರತಿಭಟನೆ
ಬಳ್ಳಾರಿ ಜಿಲ್ಲೆಯ ಸಂಗನಕಲ್ಲು ಗ್ರಾಮದ ಮುಂಭಾಗದ ರಸ್ತೆಯಲ್ಲಿರುವ ವೇಣು ಬ್ರಾಂದಿಶಾಫ್ ಸ್ಥಳಾಂತರಕ್ಕೆ ಆಗ್ರಹಿಸಿ ಗ್ರಾಮದಲ್ಲಿ ಮಹಿಳೆಯರು ಭಾನುವಾರ ಪ್ರತಿಭಟನೆ ನಡೆಸಿ ಅಂಗಡಿ ನುಗ್ಗಿ ಸಾಮಾನುಗಳನ್ನು ಹಾಳು ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಕುರಿತು ಹೇಳಿಕೆ ನೀಡಿರುವ ಗ್ರಾಮ ಪಂಚಾಯಿತಿ ಅಧ್ಯಕ್ಷ ಹನುಮಂತ, ಲಿಕ್ಕರ್ ಶಾಫ್ ಇರುವ ಕಾರಣ ಜನರು ಕೆಲಸಕ್ಕೆ ಹೋಗುವುದು ಕಡಿಮೆ ಆಗಿದೆ. ಪ್ರತಿನಿತ್ಯ ಕುಡಿದು, ಮನೆ ಮಂದಿಯನ್ನು ಉಪವಾಸ ಹಾಕುತ್ತಿದ್ದಾರೆ ಎಂದು ಆರೋಪಿಸಿದರು. ಲಿಕ್ಕರ್ ಶಾಫ್ನ ಸಿಬ್ಬಂದಿ, ಗ್ರಾಮ ಪಂಚಾಯಿತಿ ಸದಸ್ಯರು ಎಷ್ಟೇ ಒತ್ತಡ ಹೇರಿದರೂ ಅಂಗಡಿ ಸ್ಥಳಾಂತರ ಮಾಡಲು, ಮುಚ್ಚಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದರು.

ಫೆ.1ರಿಂದ ಬೀದರ್ ಉತ್ಸವ
ಬೀದರ್ನಲ್ಲಿ ಮೂರು ದಿನ ನಡೆಯಲಿರುವ ಬೀದರ್ ಉತ್ಸವಕ್ಕೆ ಅಗತ್ಯವಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ, ಫೆ. 1ರಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಪಿಸಿ ಜಾಫರ್ ಹೇಳಿದ್ದಾರೆ. ಫೆ.1ರ ಸಂಜೆ 5 ಗಂಟೆಗೆ ಸಿಎಂ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಉಮಾಶ್ರೀ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಅಂದು ಬೆಳಿಗ್ಗೆ 6ಕ್ಕೆ ನಗರದ ಬರೀದ್ ಶಾಹಿ ಉದ್ಯಾನದಿಂದ ಕೋಟೆಯ ಆವರಣದವರೆಗೆ ಮಿನಿ ಮ್ಯಾರಾಥನ್ ಹಮ್ಮಿಕೊಳ್ಳಲಾಗಿದೆ ಎಂದರು. ಫೆ.1ರಂದು ಹರ್ಷದೀಪ್ ಕೌರ್ ಹಾಗೂ ಸಾಬರಿ ಬ್ರದರ್ಸ್ ಅವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುವರು. ಫೆ.2ರಂದು ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ ಹಾಗೂ ಜಾವೇದ್ ಅಲಿ ಅವರ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಅಂದು ರಾತ್ರಿ 9ಗಂಟೆಗೆ ನಗರದ ಮಹ್ಮದ್ ಗವಾನ್ ಮದರಸಾ ಆವರಣದಲ್ಲಿ ಮುಷಾಯರಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಉದ್ಘಾಟನೆಗೆ ಶಬಾನಾ ಆಜ್ಮಿ ಅಥವಾ ಅವರ ಪತಿ ಜಾವೇದ್ ಅಖ್ತರ್ ಆಗಮಿಸಲಿದ್ದಾರೆ ಎಂದರು.

ತಾಕತ್ತಿದ್ದರೆ ಸಿಗರೇಟ್, ತಂಬಾಕು, ಮದ್ಯ ನಿಷೇಧಿಸಲಿ
ಹಬ್ಬ ಹರಿದಿನಗಳಲ್ಲಿ ತಾಂಬೂಲಕ್ಕೆ ಬಳಸುವ ಅಡಕೆಯನ್ನು ನಿಷೇಧ ಮಾಡಲು ಹೊರಟಿರುವ ಕಾಂಗ್ರೆಸ್ ತಾಕತ್ತಿದ್ದರೆ ಸಿಗರೇಟ್, ತಂಬಾಕು, ಮದ್ಯವನ್ನು ನಿಷೇಧಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸವಾಲು ಹಾಕಿದ್ದಾರೆ. ಪುತ್ತೂರಿನಲ್ಲಿ ಸೋಮವಾರ ಸಂಜೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವ ಕಾಂಗ್ರೆಸ್, ರೈತರಲ್ಲಿ ಭಯದ ವಾತಾವರಣ ನಿರ್ಮಿಸುತ್ತಿದೆ. ಈಗಾಗಲೇ ಕೊಳೆರೋಗ, ನುಸಿರೋಗದಿಂದ ಹೈರಾಣಾಗಿರುವ ಅಡಕೆ ಬೆಳೆಗಾರರ ಬದುಕು ಕಾಂಗ್ರೆಸ್ನ ಅಡಕೆ ನಿಷೇಧದ ನಿರ್ಧಾರದಿಂದ ಮತ್ತಷ್ಟು ಸಂಕಷ್ಟಕ್ಕೀಡಾಗಿದೆ ಎಂದು ಯಡಿಯೂರಪ್ಪ ಹೇಳಿದರು.

ಹೋಮ್ಗಾರ್ಡ್ಗಳಿಗೆ ಸಂತಸದ ಸುದ್ದಿ
ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿ ಸಂಚಾರ ನಿರ್ವಹಣೆ ಕೆಲಸ ಮಾಡುತ್ತಿರುವ 50 ಅರೆಕಾಲಿಕ ಹೋಮ್ಗಾರ್ಡ್ಗಳಿಗೆ ಸಂತಸದ ಸುದ್ದಿ ಹೊರಬಿದ್ದಿದೆ. 50 ಸಿಬ್ಬಂದಿಯನ್ನು ಸರ್ಕಾರ ಕಾಯಂ ಆಗಿ ಸೇವೆಗೆ ಬಳಸಿಕೊಳ್ಳುವಂತೆ ಆದೇಶ ಹೊರಡಿಸಿದೆ.
ಪೊಲೀಸ್ ಸಿಬ್ಬಂದಿ ಕೊರತೆಯಿಂದಾಗಿ ಸಂಚಾರಿ ಸುವ್ಯವಸ್ಥೆ ಕಾಪಾಡಲು ಮಹಾನಗರ ಪೊಲೀಸ್ ಇಲಾಖೆ ಹುಬ್ಬಳ್ಳಿ-ಧಾರವಾಡ ಅವಳಿ ನಗರ ವ್ಯಾಪ್ತಿಯಲ್ಲಿ ಜನವರಿ 9ರಂದು 50 ಹೋಮ್ಗಾರ್ಡ್ಗಳನ್ನು ನೇಮಿಸಿಕೊಂಡಿತ್ತು. ಆದರೆ ಈ ಹೋಮ್ಗಾರ್ಡ್ಗಳಿಗೆ ಗೌರವಧನ ನೀಡುವವರು ಯಾರು? ಎಂಬ ಪ್ರಶ್ನೆ ಎದ್ದಿತ್ತು. ಸದ್ಯ 50 ಸಿಬ್ಬಂದಿಯನ್ನು ಕಾಯಂ ಸೇವೆಗೆ ಬಳಸಿಕೊಳ್ಳುವಂತೆ ಸರ್ಕಾರ ಆದೇಶ ನೀಡಿದ್ದು, ಇದರಿಂದ ಸಿಬ್ಬಂದಿ ನಿರಾಳರಾಗಿದ್ದಾರೆ.

ರೈತರ ಅನಿರ್ದಿಷ್ಟಾವಧಿ ಧರಣಿ ಆರಂಭ
ಕಳಪೆ ಹತ್ತಿ ಬೀಜದಿಂದ ಆಗಿರುವ ಬೆಳೆ ನಷ್ಟಕ್ಕೆ ಪರಿಹಾರ, ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಹೆಚ್ಚಿಸಲು ಆಗ್ರಹಿಸಿ ಹಾಗೂ ಬೆಳೆವಿಮೆ ತಾರತಮ್ಯ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಹಾವೇರಿ ಜಿಲ್ಲೆಯ ರೈತರು ಸೋಮವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.











Click it and Unblock the Notifications