‘ಪೇಶ್ವೆ ಡಿಎನ್ಎ’ ಬಗ್ಗೆ ಮಾತನಾಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಈಗ ‘ಜೈ ಶ್ರೀರಾಮ್’ ಎಂದಿದ್ದೇಕೆ?
ಕರ್ನಾಟಕ ರಾಜಕೀಯದಲ್ಲಿ ಹೊಸ ಬಿರುಗಾಳಿ ಮೂಡಿದೆ, ಜೆಡಿಎಸ್ & ಬಿಜೆಪಿ ನಡುವಿನ ರಾಜಕೀಯ ಹೊಂದಾಣಿಕೆ ಕಾಂಗ್ರೆಸ್ ನಾಯಕರಿಗೆ ನಡುಕ ತರಿಸಿದೆ. ಆದ್ರೆ ಈ ಸಮಯದಲ್ಲೇ ಹೊಸ ಚರ್ಚೆ ಕೂಡ ಶುರುವಾಗಿದೆ. ಅದೇನೆಂದರೆ 2023ರ ವಿಧಾನಸಭೆ ಚುನಾವಣೆ ವೇಳೆ, 'ಪೇಶ್ವೆ ಡಿಎನ್ಎ' ಎಂಬ ಮಾತಿನ ಮೂಲಕ ಕುಮಾರಸ್ವಾಮಿ ಅವರು ಸಂಚಲನ ಸೃಷ್ಟಿ ಮಾಡಿದ್ದರು. 'ಈಗ ಆರೋಪ ಮಾಡಿದವರ ಜೊತೆಗೆ ಹೋಗಿದ್ದಾರೆ' ಅಂತ ಸೋಷಿಯಲ್ ಮಂದಿ ಮಾತನಾಡ್ತಿದ್ದಾರೆ.
ಕರ್ನಾಟಕದಲ್ಲಿ ಜೆಡಿಎಸ್ ಕೂಡ ಪ್ರಬಲ ಪಕ್ಷ, ಯಾಕಂದ್ರೆ ಪ್ರತಿ ವಿಧಾನಸಭೆ ಚುನಾವಣೆ ಫಲಿತಾಂಶ ನೋಡಿದರೂ ಇದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಕರ್ನಾಟಕದ ಕಳೆದ ಮೂರು ವಿಧಾನಸಭೆ ಚುನಾವಣೆ ಗಮನಿಸಿದರೆ, ಜೆಡಿಎಸ್ ಕನಿಷ್ಠ ಶೇ. 18ಕ್ಕಿಂತ ಹೆಚ್ಚು ಮತವನ್ನ ಪಡೆದಿದೆ. ಇದು ಬಿಜೆಪಿ & ಕಾಂಗ್ರೆಸ್ ಪಕ್ಷಗಳ ಸೋಲು-ಗೆಲುವಿನ ಆಟದಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ಲೋಕಸಭೆ ಚುನಾವಣೆಯಲ್ಲೂ ಜೆಡಿಎಸ್ ಪ್ರಬಲವಾಗಿದೆ. ಹಿಗಿದ್ದಾಗಲೇ ಕುಮಾರಸ್ವಾಮಿ ಅವರು ದಿಢೀರ್ 'ಜೈ ಶ್ರೀರಾಮ್' ಘೋಷಣೆ ಮೊಳಗಿಸಿದ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಕುಮಾರಸ್ವಾಮಿ ಅವರ 'ಜೈ ಶ್ರೀರಾಮ್' ಘೋಷಣೆ
ಅಂದಹಾಗೆ, ಬಂಟ್ವಾಳದ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದಲ್ಲಿನ ಕ್ರೀಡೋತ್ಸವದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕ್ರೀಡೋತ್ಸವದಲ್ಲಿ ಭಾಷಣ ಮಾಡಿದ ಕುಮಾರಸ್ವಾಮಿ ಕೊನೆಗೆ 'ಜೈ ಶ್ರೀರಾಮ್' ಘೋಷಣೆ ಮೊಳಗಿಸಿದ್ರು. ಹೀಗೆ ಜೆಡಿಎಸ್ ವರಿಷ್ಠ ಕುಮಾರಸ್ವಾಮಿ ಅವರು 'ಜೈ ಶ್ರೀರಾಮ್' ಘೋಷಣೆ ಮೊಳಗಿಸಿದ ನಂತರ ಈ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿದೆ. ಒಂದು ಗುಂಪು ಎಚ್ಡಿಕೆ ಅವರ ಬೆನ್ನಿಗೆ ನಿಂತಿದ್ದರೆ, ಇದೇ ಸಮಯದಲ್ಲಿ ಕಾಂಗ್ರೆಸ್, ಕುಮಾರಸ್ವಾಮಿ ಅವರ ವಿರುದ್ಧ ಹೊಸ ಅಸ್ತ್ರ ಪ್ರಯೋಗ ಮಾಡಿದೆ. ಆದರೆ ಹೀಗೆ ದಿಢೀರ್ ಕುಮಾರಸ್ವಾಮಿ ಅವರು ಬದಲಾಗಿದ್ದು ಏಕೆ?
ನಿಖಿಲ್ ಸೋಲು ಎಚ್ಡಿಕೆಗೆ ಶಾಕ್ ಕೊಡ್ತಾ?
2023ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಭದ್ರಕೋಟೆ ರಾಮನಗರದಲ್ಲೇ ಸೋಲನ್ನ ಕಂಡಿದ್ದರು ಮಾಜಿ ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್. ಇದೇ ವಿಚಾರ, ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನೂ ಕೆರಳುವಂತೆ ಮಾಡಿದೆ ಎಂಬ ಆರೋಪ ಈಗ ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿದೆ. ಇದೆಲ್ಲಾ ಕಾರಣಕ್ಕೆ ಬಿಜೆಪಿ ಜೊತೆಗೆ ಪಕ್ಷ ಬಲಗೊಳಿಸುವ ಜೊತೆಗೆ, ಅಲ್ಪಸಂಖ್ಯಾತ ಮುಖಂಡರನ್ನೂ ದೂರ ಇಡುತ್ತಿರದ್ದಾರೆ ಎಂಬ ಆರೋಪ ಇದೆ. ಇಷ್ಟೆಲ್ಲದರ ಮಧ್ಯೆ ಮಾಜಿ ಸಿಎಂ ಜೈ ಶ್ರೀರಾಮ್ ಘೋಷಣೆ ಮೊಳಗಿಸಿದ ಬಗ್ಗೆ, ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆ ಶುರುವಾಗಿದೆ.
ಕುಮಾರಸ್ವಾಮಿ ಬಗ್ಗೆ ಕಾಂಗ್ರೆಸ್ ಹೇಳಿದ್ದೇನು?
ನಿನ್ನೆ ಮಾಜಿ ಸಿಎಂ ಎಚ್ಡಿಕೆ ವಿರುದ್ಧ ಟ್ವೀಟ್ ಮಾಡಿದ್ದ ಕಾಂಗ್ರೆಸ್ 'ಕುಮಾರಸ್ವಾಮಿಯವರು ಬಿಜೆಪಿಯವರಿಗಿಂತ ಹೆಚ್ಚು RSS ಭಕ್ತಿ ಬೆಳೆಸಿಕೊಳ್ಳುತ್ತಿದ್ದಾರೆ, ಅವರು ಕೋಮುವಾದದ ಕಡೆಗೆ ಹೋಗುತ್ತಿರುವ ಸ್ಪೀಡ್ ನೋಡಿದರೆ ಕೆಲವೇ ದಿನಗಳಲ್ಲಿ ಬಿಜೆಪಿಗರನ್ನೇ ಓವರ್ ಟೇಕ್ ಮಾಡಿ ಬಿಜೆಪಿಯ ಅಧ್ಯಕ್ಷರಾದರೂ ಅಚ್ಚರಿ ಇಲ್ಲ! ಬಿಜೆಪಿಯವರ ಒಳಜಗಳ ಕುಮಾರಸ್ವಾಮಿಯವರಿಗೆ ವರದಾನವಾಗಲಿದೆ, ಬಿಜೆಪಿ ಹೈಕಮಾಂಡ್ ಕುಮಾರಸ್ವಾಮಿಯವರನ್ನು ರಾಜ್ಯ ಬಿಜೆಪಿಗೆ ಪ್ರತಿಷ್ಠಾಪಿಸಿದರೂ ಅತಿಶಯೋಕ್ತಿ ಇಲ್ಲ. ಎಚ್ಚರಾಗಿ @RAshokaBJP @BYVijayendra!!' ಎಂದಿತ್ತು ಕರ್ನಾಟಕ ಕಾಂಗ್ರೆಸ್.

ಒಟ್ನಲ್ಲಿ ಲೋಕಸಭೆ ಚುನಾವಣೆ ಅಖಾಡ ರಂಗೇರಿದ ಸಮಯದಲ್ಲೇ ಮಾಜಿ ಸಿಎಂ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷರಾದ ಕುಮಾರಸ್ವಾಮಿ ಅವರ ನಡೆ ವಿಪರೀತ ಕುತೂಹಲ ಕೆರಳಿಸಿದೆ. ಈ ಮೂಲಕ ಬಿಜೆಪಿ & ಜೆಡಿಎಸ್ ಒಂದಾಗಿ ಕಾಂಗ್ರೆಸ್ ನಾಯಕರಿಗೆ ಶಾಕ್ ಕೊಡಲು ಸಿದ್ಧತೆ ನಡೆಸಿವೆ. ಇದಕ್ಕೆ ರಣತಂತ್ರ ಹೆಣೆಯಲಾಗುತ್ತಿದ್ದು, ಇದೆಲ್ಲಾ ಎಷ್ಟೆಲ್ಲ ವರ್ಕೌಟ್ ಆಗುತ್ತೆ? ಅಂತಾ ಕಾದು ನೋಡಬೇಕಿದೆ.












Click it and Unblock the Notifications