ಬಿಎಸ್ವೈ ಭೇಟಿಯಾಗಿ ಧವಳಗಿರಿಯ ದೋಸೆ ಸವಿದ ಸಿ. ಟಿ. ರವಿ!
ಬೆಂಗಳೂರು, ಜುಲೈ 19; ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಭೇಟಿ ಮಾಡಿದರು. ಧವಳಗಿರಿಯಲ್ಲಿ ದೋಸೆಯನ್ನು ಸವಿದೆ ಎಂದು ಅವರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ, ಯಡಿಯೂರಪ್ಪ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ.
ಬುಧವಾರ ಬೆಂಗಳೂರಿನ ಡಾಲರ್ಸ್ ಕಾಲೋನಿಯ ಯಡಿಯೂರಪ್ಪ ನಿವಾಸ 'ಧವಳಗಿರಿ'ಗೆ ಸಿ. ಟಿ. ರವಿ ಭೇಟಿ ನೀಡಿದರು. ಬೆಳಗಿನ ಉಪಹಾರದ ಸಮಯಕ್ಕೆ ಯಡಿಯೂರಪ್ಪ ನಿವಾಸಕ್ಕೆ ತೆರಳಿದ್ದರಿಂದ ನನ್ನ ಬೆಳಗ್ಗಿನ ಉಪಹಾರ ಮುಗಿಸಿದ್ದರೂ ಧವಳಗಿರಿಯ ದೋಸೆಯ ರುಚಿ ಸವಿಯುವವರೆಗೆ ಬಿಡಲಿಲ್ಲ ಎಂದು ಸಿ. ಟಿ. ರವಿ ಟ್ವೀಟ್ ಮಾಡಿದ್ದಾರೆ.

'ನಮ್ಮ ಪಕ್ಷದ ಹಿರಿಯ ನಾಯಕರು, ರೈತ ನಾಯಕ, ಕೇಂದ್ರೀಯ ಸಂಸದೀಯ ಮಂಡಳಿಯ ಸದಸ್ಯರಾದ ಶ್ರೀ ಬಿ. ಎಸ್. ಯಡಿಯೂರಪ್ಪಜಿ ಅವರನ್ನು ಇಂದು ಅವರ ನಿವಾಸದಲ್ಲಿ ಭೇಟಿ ಮಾಡಿದೆನು. ಸದಾ ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳುವ ಯಡಿಯೂರಪ್ಪ, ಇಂದು ಉಪಹಾರದ ಸಮಯಕ್ಕೆ ಅವರ ನಿವಾಸಕ್ಕೆ ಹೋದಾಗ ನನ್ನ ಬೆಳಗ್ಗಿನ ಉಪಹಾರ ಮುಗಿಸಿದ್ದರೂ ಧವಳಗಿರಿಯ ದೋಸೆಯ ರುಚಿ ಸವಿಯುವವರೆಗೆ ಬಿಡಲಿಲ್ಲ' ಎಂದು ಸಿ. ಟಿ. ರವಿ ಹೇಳಿದ್ದಾರೆ.
'ವಿಧಾನಸಭಾ ಅಧಿವೇಶನದ ನಂತರ ಲೋಕಸಭಾ ಚುನಾವಣಾ ನಿಮಿತ್ತ ರಾಜ್ಯಾದಂತ್ಯ ಪ್ರವಾಸ ಮಾಡಿ ಕಾರ್ಯಕರ್ತರ ವಿಶ್ವಾಸ ಹೆಚ್ಚಿಸುವ ಕೆಲಸ ಮಾಡುತ್ತೇನೆ ಎಂಬ ಅವರ ಪಕ್ಷದ ಮೇಲಿನ ಪ್ರೀತಿ ಮತ್ತು ಸಂಘಟನೆ ಮಾಡಬೇಕೆಂಬ ಛಲ ನನಗೆ ಇನ್ನಷ್ಟು ಸಂಘಟನಾತ್ಮಕ ಪ್ರವಾಸ ಮಾಡಬೇಕೆಂದು ಪ್ರೇರಣೆ ನೀಡಿತು' ಎಂದು ಸಿ. ಟಿ. ರವಿ ಟ್ವೀಟ್ನಲ್ಲಿ ತಿಳಿಸಿದ್ದಾರೆ.
'ನಮ್ಮ ಪಕ್ಷದ ಹಿರಿಯ ನಾಯಕರಾದ ಸನ್ಮಾನ್ಯ ಶ್ರೀ ಬಿ. ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆದೆನು. ಪಕ್ಷಕ್ಕೆ ಹಾಗು ರಾಜ್ಯಕ್ಕಾಗಿ ಹಗಲಿರುಳು ದುಡಿದ ಶ್ರೀ ಯಡಿಯೂರಪ್ಪರವರು ಎಂದಿನಂತೆ ನನಗೆ ಆಶೀರ್ವಾದಿಸಿ ಮಾರ್ಗದರ್ಶನ ನೀಡಿದರು' ಎಂದು ಸಿ. ಟಿ. ರವಿ ಟ್ವೀಟ್ ಮಾಡಿದ್ದಾರೆ.
ಯಡಿಯೂರಪ್ಪ ಟ್ವೀಟ್; ಸಿ. ಟಿ. ರವಿ ಭೇಟಿ ಬಗ್ಗೆ ಬಿ. ಎಸ್. ಯಡಿಯೂರಪ್ಪ ಸಹ ಟ್ವೀಟ್ ಮಾಡಿದ್ದು, 'ಇಂದು ನಮ್ಮ ಮನೆಗೆ ಆಗಮಿಸಿದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ ಸಿ.ಟಿ.ರವಿ ಅವರನ್ನು ಭೇಟಿ ಮಾಡಿ ಜನ್ಮದಿನದ ಶುಭಾಶಯಗಳನ್ನು ಕೋರಲಾಯಿತು' ಎಂದು ಹೇಳಿದ್ದಾರೆ.
ಜುಲೈ 18ರಂದು ಸಿ. ಟಿ. ರವಿ ಅವರ ಹುಟ್ಟುಹಬ್ಬ ಈ ಹಿನ್ನಲೆಯಲ್ಲಿ ಅವರು ಪ್ರತಿವರ್ಷದಂತೆ ಹಿರೇಮಗಳೂರು ಕೋದಂಡ ರಾಮಸ್ವಾಮಿಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜಾ ಕೈಂಕರ್ಯವನ್ನು ನೆರವೇರಿಸಿ ದೇವರ ದರ್ಶನ ಪಡೆದಿದ್ದರು.
ಚುನಾವಣೆಯಲ್ಲಿ ಸೋಲು; ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಚಿಕ್ಕಮಗಳೂರು ಕ್ಷೇತ್ರದ ಶಾಸಕರಾಗಿದ್ದರು. ಈ ಬಾರಿಯ ಚುನಾವಣೆಯಲ್ಲಿ ಅವರು 79,128 ಮತಗಳನ್ನು ಪಡೆದು ಕಾಂಗ್ರೆಸ್ನ ಹೆಚ್. ಡಿ. ತಮ್ಮಯ್ಯ (85,054 ಮತ) ವಿರುದ್ಧ ಸೋಲು ಕಂಡಿದ್ದರು. ಕಾಂಗ್ರೆಸ್ ಅಭ್ಯರ್ಥಿ ಹೆಚ್. ಡಿ. ತಮ್ಮಯ್ಯ ಸಿ. ಟಿ. ರವಿ ಆಪ್ತರಾಗಿದ್ದರು. ಚುನಾವಣೆಯ ಸಮಯದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ, ಸಿ. ಟಿ. ರವಿ ವಿರುದ್ಧವೇ ಕಣಕ್ಕಿಳಿದಿದ್ದರು.
ರಾಜ್ಯದ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರಲ್ಲಿ ಸಿ. ಟಿ. ರವಿ ಸಹ ಒಬ್ಬರು. ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಹ ಅವರ ಹೆಸರು ಕೇಳಿ ಬರುತ್ತಿದೆ. ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿರುವ ಅವರು ವಿವಿಧ ರಾಜ್ಯಗಳ ಚುನಾವಣಾ ಉಸ್ತುವಾರಿಯಾಗಿಯೂ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.












Click it and Unblock the Notifications