'ಸಿದ್ದು ನಿಜಕನಸುಗಳು' ಪುಸ್ತಕ ಬಿಡುಗಡೆಗೆ ತಡೆ ಕೊಟ್ಟಿದ್ದು ಏಕೆ?
ಬೆಂಗಳೂರು, ಜನವರಿ 10; ಕರ್ನಾಟಕದ ರಾಜಕೀಯದಲ್ಲಿ ಕೆಸೆರೆರಚಾಟಕ್ಕೆ ಕಾರಣವಾಗಿರುವ ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಕುರಿತಾದ 'ಸಿದ್ದು ನಿಜಕನಸುಗಳು' ಪುಸ್ತಕ ಬಿಡುಗಡೆಗೆ ತಡೆ ಬಿದ್ದಿದೆ. ಆದ್ದರಿಂದ ಸೋಮವಾರ ನಡೆಯಬೇಕಿದ್ದ ಕೃತಿ ಬಿಡುಗಡೆ ಸಮಾರಂಭ ರದ್ದಾಯಿತು.
ಸಿದ್ಧರಾಮಯ್ಯರನ್ನು ಅವಹೇಳನ ಮಾಡಿದ್ದಾರೆ ಎನ್ನಲಾಗುವ ಕೃತಿ ಬಿಡುಗಡೆಗೆ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ಸತ್ರ ನ್ಯಾಯಾಲಯವು ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ಹೊರಡಿಸಿತು.
ಪುಸ್ತಕ ಬಿಡುಗಡೆ ಮತ್ತು ಮಾರಾಟಕ್ಕೆ ಶಾಶ್ವತ ನಿರ್ಬಂಧ ಹೇರಲು ಕೋರಿ ಸಿದ್ದರಾಮಯ್ಯ ಪುತ್ರ ಹಾಗೂ ವರುಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಯತೀಂದ್ರ ಸಿದ್ದರಾಮಯ್ಯ ಅರ್ಜಿ ಸಲ್ಲಿಕೆ ಮಾಡಿದ್ದರು.
ಅರ್ಜಿ ವಿಚಾರಣೆ ನಡೆಸಿದ 60ನೇ ಹೆಚ್ಚವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯಕ್ ಅವರು ಈ ಆದೇಶ ಮಾಡಿದ್ದಾರೆ. ಅರ್ಜಿಯ ಮುಂದಿನ ವಿಚಾರಣೆ ಫೆಬ್ರವರಿ 9ರಂದು ನಡೆಯಲಿದೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೋಮವಾರ ಕರ್ನಾಟಕದಲ್ಲಿ ಸುದ್ದಿಯ ಕೇಂದ್ರಬಿಂದುವಾಗಿದ್ದರು. ಬೆಳಗ್ಗೆ ಪುಸ್ತಕ ಬಿಡುಗಡೆ ಬಗ್ಗೆ ಚರ್ಚೆ ನಡೆದಿತ್ತು. ಮಧ್ಯಾಹ್ನ ಕೋಲಾರಕ್ಕೆ ಭೇಟಿ ನೀಡಿದ್ದ ಅವರು ಮುಂದಿನ ಚುನಾವಣೆಗೆ ಕೋಲಾರ ಕ್ಷೇತ್ರದಿಂದ ಕಣಕ್ಕಿಳಿಯುತ್ತೇನೆ ಎಂದು ಘೋಷಣೆ ಮಾಡುವ ಮೂಲಕ ಮತ್ತೆ ಸುದ್ದಿ ಮಾಡಿದರು.

ಅಶ್ವತ್ಥ ನಾರಾಯಣ ಬಿಡುಗಡೆ ಮಾಡಬೇಕಿತ್ತು
ಸೋಮವಾರ ಸಂಜೆ ನಿಗದಿಯಾಗಿದ್ದ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವತ್ಥ ನಾರಾಯಣ 'ಸಿದ್ದು ನಿಜಕನಸುಗಳು' ಪುಸ್ತಕವನ್ನು ಬಿಡುಗಡೆ ಮಾಡಬೇಕಿತ್ತು. ಆದರೆ ಕೋರ್ಟ್ ಮಧ್ಯಂತರ ತಡೆ ನೀಡಿದ ಕಾರಣಕ್ಕೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ರದ್ದಾಗಿದೆ. ಸಾಮಾಜಿಕ ಜಾಲತಾಣದಲ್ಲಿ 'ಸಿದ್ದು ನಿಜಕನಸುಗಳು' ಪುಸ್ತಕದ ಬಗ್ಗೆ ಹಲವಾರು ಚರ್ಚೆಗಳು ನಡೆಯುತ್ತಿವೆ.

ಕೋರ್ಟ್ ಆದೇಶವೇನು?
ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರರ ಬಗ್ಗೆ ಮುದ್ರಣ ಅಥವಾ ವಿದ್ಯುನ್ಮಾನ ಮಾಧ್ಯಮಗಳಲ್ಲಿ 1-7ನೇ ಪ್ರತಿವಾದಿಗಳಾದ ಸಚಿವ ಡಾ. ಸಿ. ಎನ್. ಅಶ್ವತ್ಥ ನಾರಾಯಣ, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬರಹಗಾರ ರೋಹಿತ್ ಚಕ್ರತೀರ್ಥ, ಸಂತೋಷ್ ತಿಮ್ಮಯ್ಯ, ವೃಷಾಂಕ್ ಭಟ್ ಮತ್ತು ರಾಕೇಶ್ ಶೆಟ್ಟಿ ಹಾಗೂ ಅವರಿಗೆ ಸಂಬಂಧಿಸಿದ ವ್ಯಕ್ತಿಗಳು 'ಸಿದ್ದು ನಿಜಕನಸುಗಳು' ಪುಸ್ತಕದ ಕುರಿತು ಯಾವುದೇ ರೀತಿ ಮಾನಹಾನಿ ಹೇಳಿಕೆ, ಬಿಡುಗಡೆ, ಮಾರಾಟ, ಪ್ರದರ್ಶನ ಹಾಗೂ ಪ್ರಚಾರವನ್ನು ಮುಂದಿನ ವಿಚಾರಣೆವರೆಗೆ ಮಾಡುವಂತಿಲ್ಲ ಎಂದು ಆದೇಶದಲ್ಲಿ ನ್ಯಾಯಾಲಯ ಹೇಳಿದೆ.

ಅರ್ಜಿಯ ವಿಚಾರನೆ ಫೆಬ್ರವರಿ 9ಕ್ಕೆ ಮುಂದೂಡಿಕೆ
ಎಲ್ಲಾ ಪ್ರತಿವಾದಿಗಳಿಗೆ ದಾವೆ ಸಮನ್ಸ್ ಮತ್ತು ನೋಟಿಸ್ ಜಾರಿಗೊಳಿಸಿದ ಕೋರ್ಟ್ ಅರ್ಜಿಯ ವಿಚಾರಣೆಯನ್ನು ಫೆಬ್ರವರಿ 9ಕ್ಕೆ ಮುಂದೂಡಿದೆ. ಅಲ್ಲದೆ, 'ಸಿದ್ದು ನಿಜ ಕನಸುಗಳು' ಪುಸ್ತಕದ ಮಾರಾಟಕ್ಕೆ ನಿಷೇಧ ವಿಧಿಸಲಾಗಿದೆ.
ಅದರಂತೆ ದೂರುದಾರ ಒದಗಿಸಿರುವ ಲಿಂಕ್ ಆಧರಿಸಿ, ಮಧ್ಯಸ್ಥಿಕೆದಾರರಾಗಿರುವ 8 (ಫ್ಲಿಫ್ಕಾರ್ಟ್) ಮತ್ತು 9ನೇ ಪ್ರತಿವಾದಿಗಳು (ಅಮೆಜಾನ್ ಇಂಡಿಯಾ) ಮಾನಹಾನಿ ವಿಚಾರಗಳನ್ನು ತೆಗೆದು ಹಾಕಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

'ಸಿದ್ದು ನಿಜಕನಸುಗಳು' ಪುಸ್ತಕ
ವರುಣ ಕ್ಷೇತ್ರದ ಶಾಸಕ, ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಪರವಾಗಿ ವಾದಿಸಿದ ಹಿರಿಯ ವಕೀಲರು, 'ಅರ್ಜಿದಾರರ ತಂದೆ ಸಿದ್ದರಾಮಯ್ಯ ಒಪ್ಪಿಗೆ ಪಡೆಯದೇ ಪ್ರತಿವಾದಿಗಳು ಈಗಾಗಲೇ ಸಿದ್ದು ನಿಜಕನಸುಗಳು ಎಂಬ ಪುಸ್ತಕವನ್ನು ಮುದ್ರಿಸಿದ್ದಾರೆ. ಅದರಲ್ಲಿ ವಿರುದ್ಧ ಮಾನಹಾನಿ ವಿಚಾರ ಮುದ್ರಿಸಲಾಗಿದೆ. ಪುಸ್ತಕ ಬಿಡುಗಡೆ ಮಾಡಿದರೆ ಅವರ ವರ್ಚಸ್ಸಿಗೆ ಧಕ್ಕೆಯಾಗಲಿದೆ ಹಾಗೂ ಅವರ ಬೆಂಬಲಿಗರ ಭಾವನೆಗಳಿಗೆ ಘಾಸಿ ಉಂಟು ಮಾಡಲಿದೆ. ಆದ್ದರಿಂದ ಪುಸ್ತಕ ಬಿಡುಗಡೆಗೆ ನಿಷೇಧ ಹೇರಬೇಕು' ಎಂದು ಕೋರಿದ್ದರು.












Click it and Unblock the Notifications