ಮಡಿಕೇರಿಯಲ್ಲಿ ಕಾಂಗ್ರೆಸ್ ಪ್ರತಿಭಟನೆಯನ್ನು ಮುಂದೂಡಿದ ಸಿದ್ದರಾಮಯ್ಯ!
ಬೆಂಗಳೂರು, ಆಗಸ್ಟ್ 23: ಮಡಿಕೇರಿಯಲ್ಲಿ ಆಗಸ್ಟ್ 26ರಂದು ರಾಜ್ಯ ಬಿಜೆಪಿ ಸರ್ಕಾರದ ನಿಷ್ಕ್ರಿಯತೆ, ಭದ್ರತಾ ವೈಫಲ್ಯ ಹಾಗೂ ಬಿಜೆಪಿ ಶಾಸಕರ ಭ್ರಷ್ಟಾಚಾರದ ವಿರುದ್ಧ ನಡೆಸಲು ಉದ್ದೇಶಿಸಿದ್ದ ಕಾಂಗ್ರೆಸ್ ಪ್ರತಿಭಟನೆಯನ್ನು ಮುಂದೂಡಲಾಗಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಮಡಿಕೇರಿ ಜಿಲ್ಲಾಡಳಿತವು ನಿಷೇದಾಜ್ಞೆ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರತಿಭಟನೆಯನ್ನು ಮುಂದೂಡಲಾಗಿದೆ. ನಾನು ಕಾನೂನು ಉಲ್ಲಂಘಿಸುವ ತಪ್ಪು ಮಾಡಲ್ಲ. ನಮ್ಮ ಪಕ್ಷ ಕಾನೂನು ಮೀರುವುದಕ್ಕೆ ಬಯಸುವುದಿಲ್ಲ ಎಂದು ಹೇಳಿದ್ದಾರೆ.
ಶಾಸಕರ ಮೌಲ್ಯ ಮಾಪನ; ಸಿದ್ದರಾಮಯ್ಯ ಕಾರ್ಯ ವೈಖರಿಗೆ ಅಂಕ ನೀಡಿ
ಇದು ಪಕ್ಷದ ಕಾರ್ಯಕ್ರಮವಾಗಿದ್ದು, ಎಲ್ಲಾ ಮುಖಂಡರೊಂದಿಗೆ ಚರ್ಚೆ ಮಾಡಿ ಪ್ರತಿಭಟನೆ ಮುಂದೂಡುವ ನಿರ್ಧಾರ ಮಾಡಿದ್ದೇವೆ. ಮುಂದೆ ಮತ್ತೆ ಮುಖಂಡರೊಂದಿಗೆ ಚರ್ಚಿಸಿ ಪ್ರತಿಭಟನೆಗೆ ತೀರ್ಮಾನ ಮಾಡುತ್ತೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ತಮ್ಮ ಕೊಡಗು ಜಿಲ್ಲಾ ಭೇಟಿ ಬಗ್ಗೆ ಸಿದ್ದರಾಮಯ್ಯ ಉಲ್ಲೇಖ
ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಆಗಿರುವ ಹಾನಿ ಪರಿಶೀಲಿಸಲು ಆಗಸ್ಟ್ 18ರಂದು ಭೇಟಿ ನೀಡಿದ್ದೆ. ಅದಕ್ಕೂ ಮೊದಲು ನಿರಂತರ ಮಳೆಯಾಗುತ್ತಿದ್ದ ಹಿನ್ನೆಲೆ ಭೇಟಿ ನೀಡಲು ಆಗಿರಲಿಲ್ಲ. ಈ ವರ್ಷ ಅನೇಕ ಕಡೆಗಳಲ್ಲಿ ಜೂನ್ ತಿಂಗಳಿಂದ ಆಗಸ್ಟ್ ತಿಂಗಳಿನ ವರೆಗೆ ವಾಡಿಕೆಗಿಂತ ಎರಡು, ಮೂರು ಪಟ್ಟು ಹೆಚ್ಚು ಮಳೆಯಾಗಿದೆ. ಹೀಗಾಗಿ ಕೊಡಗಿನಲ್ಲಿ ಅನೇಕ ಕಡೆಗಳಲ್ಲಿ ಭೂಮಿ ಕುಸಿದಿದೆ ಎಂದರು.
ಮನೆಗಳ ಮೇಲೆ ಮಣ್ಣು ಕುಸಿದಿರುವುರಿಂದ ಜನ ತಮ್ಮ ಮನೆಗಳನ್ನು ತೊರೆದು ಬೇರೆ ಕಡೆ ವಾಸ ಮಾಡುತ್ತಿದ್ದಾರೆ. ರಸ್ತೆಗಳ ಮೇಲೆ ಮಣ್ಣು ಬಿದ್ದು ರಸ್ತೆಗಳು ಮುಚ್ಚಿಹೋಗಿ ಸಾರಿಗೆ ವ್ಯವಸ್ಥೆಗೆ ತೊಂದರೆಯಾಗಿದೆ. ಈ ಸಮಸ್ಯೆಗಳನ್ನು ನೋಡಲು ಹೊರಟಾಗ ತಿತಿಮತಿಯಲ್ಲಿ ನನಗೆ ಕಪ್ಪು ಬಾವುಟ ಪ್ರದರ್ಶಿಸಿದರು. ಪೊಲೀಸರು ಅಲ್ಲಿ ನಿಷ್ಕ್ರಿಯರಾಗಿ ನಿಂತಿದ್ದರು. ಯಾರೋ ಒಬ್ಬ ವ್ಯಕ್ತಿ ಬಂದು ನನ್ನ ಕಾರಿನೊಳಗೆ ಕರಪತ್ರ ಹಾಕಿದ, ಆಗಲೂ ಪೊಲೀಸರು ಅವರನ್ನು ತಡೆಯುವ ಅಥವಾ ಬಂಧಿಸುವ ಕೆಲಸ ಮಾಡಿಲ್ಲ ಎಂದು ಘಟನೆ ಬಗ್ಗೆ ಸಿದ್ದರಾಮಯ್ಯ ಉಲ್ಲೇಖಿಸಿದರು.
25,000 ರೂಪಾಯಿ ಚೆಕ್ ಕೂಡಾ ಪಾಸಾಗಿಲ್ಲ ಎಂದ ಸಿದ್ದರಾಮಯ್ಯ
ಮಡಿಕೇರಿಯ ಅನೇಕ ಕಡೆಗಳಲ್ಲಿ ಮಣ್ಣು ಕುಸಿತದ ಜಾಗಗಳಿಗೆ ಹೋಗಿದ್ದೆ, ಕೆಲವು ಕಡೆ ಅನಗತ್ಯವಾಗಿ ವೆಂಟೆಡ್ ಡ್ಯಾಂ ನಿರ್ಮಾಣ ಮಾಡಿದ್ದಾರೆ. ಇದರಿಂದ ನೀರಿನಲ್ಲಿ ಹರಿದು ಬರುವ ಕಸ, ಕಲ್ಲು, ಮರದ ತುಂಡುಗಳು ಡ್ಯಾಂಗೆ ಅಡ್ಡಲಾಗಿ ನಿಂತು ನೀರು ಹರಿಯದೆ ಅದು ಮನೆ, ಶಾಲೆಗಳಿಗೆ ನುಗ್ಗಿದೆ. ಶಾಲೆಗಳಿಗೆ ಮಕ್ಕಳು ಹೋಗಲು ಆಗುತ್ತಿಲ್ಲ, ವೆಂಟೆಡ್ ಡ್ಯಾಂ ಬದಲು ಸೇತುವೆ ನಿರ್ಮಾಣ ಮಾಡಿದ್ದರೆ ಸಾಕಿತ್ತು ಎಂದು ಅಲ್ಲಿನ ಜನ ಹೇಳುತ್ತಿದ್ದಾರೆ. ಈ ರೀತಿ ಪ್ರವಾಹ 2019, 2020, 2021 ಹಾಗೂ ಈ ಸಾಲಿನಲ್ಲೂ ಆಗಿದೆ. ಆದರೂ ಸರ್ಕಾರ ಅಲ್ಲಿನ ಜನರಿಗೆ ಮನೆ, ಸೂಕ್ತ ಪರಿಹಾರ ಯಾವುದನ್ನೂ ಕಟ್ಟಿಕೊಟ್ಟಿಲ್ಲ. ನಮ್ಮ ಸರ್ಕಾರ ಕಟ್ಟಿಸಿಕೊಟ್ಟಿದ್ದ 750 ಮನೆಗಳು ಬಿಟ್ಟರೆ ಹೊಸದಾಗಿ ಯಾವ ಮನೆ ಕಟ್ಟಿಸಿಕೊಟ್ಟಿಲ್ಲ. 10,000 ರೂಪಾಯಿ ಚೆಕ್ ಗಳನ್ನು ನೀಡಿದ್ದಾರೆ, ಅವು ಪಾಸಾಗಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಮೊಟ್ಟೆ ಎಸೆಯುವುದರ ಹಿಂದಿನ ರಹಸ್ಯ ಬಿಚ್ಚಿಟ್ಟ ಸಿದ್ದರಾಮಯ್ಯ!
ಮಡಿಕೇರಿಯಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಮಾಡಿದ್ದು, ಅದಕ್ಕೊಂದು ತಡೆಗೋಡೆ ನಿರ್ಮಾಣ ಮಾಡಿದ್ದಾರೆ. ಇದಕ್ಕೆ 7.5 ಕೋಟಿ ರೂಪಾಯಿ ಖರ್ಚಾಗಿದೆ. ಇನ್ನೂ ನಿರ್ಮಾಣ ಆಗಿ ಕೆಲವೇ ಸಮಯದಲ್ಲಿ ಈ ತಡೆಗೋಡೆ ಬಿದ್ದು ಹೋಗುತ್ತಿದೆ. ಅದಕ್ಕಾಗಿ ಮರಳು ಚೀಲಗಳನ್ನು ಅಡ್ಡಲಾಗಿ ಇಟ್ಟಿದ್ದಾರೆ. ಮುಖ್ಯಮಂತ್ರಿಗಳ ಭೇಟಿ ಸಂದರ್ಭದಲ್ಲಿ ಕೂಡ ಸ್ಥಳೀಯ ಶಾಸಕರು ತಡೆಗೋಡೆಯನ್ನು ಮುಖ್ಯಮಂತ್ರಿಗಳು ನೋಡದಂತೆ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ.
ಕಾರಣ ಶಾಸಕರು ಮತ್ತು ಗುತ್ತಿಗೆದಾರರು ಸೇರಿ ಹಣ ಲೂಟಿ ಮಾಡಿ ಕಳಪೆ ಕಾಮಗಾರಿ ಮಾಡಿದ್ದಾರೆ. ತಡೆಗೋಡೆ ನೋಡಬೇಕು ಎಂದು ನಮ್ಮ ಕಾರ್ಯಕರ್ತರು ಹೇಳಿದ ಕಾರಣಕ್ಕೆ ನೋಡಲು ಹೋದೆ, ನಾನು ನೋಡಬಾರದು ಎಂಬ ಉದ್ದೇಶಕ್ಕೆ ಅಲ್ಲಿಯೂ ಪ್ರತಿಭಟನೆ ಮಾಡಿ, ಕೋಳಿ ಮೊಟ್ಟೆ ಎಸೆದರು. ಪೊಲೀಸರು ಅಲ್ಲಿ ಕೂಡ ಸುಮ್ಮನೆ ನಿಂತು ನೋಡುತ್ತಿದ್ದರು. ಇದರಿಂದ ಬೇಸರಗೊಂಡು ಪ್ರತಿಭಟಿಸಿದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ಮಾಡಲು ಆರಂಭಿಸಿದ ಪೊಲೀಸರು, ಗಲಾಟೆ ಮಾಡುತ್ತಿದ್ದ ಆರ್ಎಸ್ಎಸ್, ಭಜರಂಗದಳ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಮಡಿಕೇರಿಯಲ್ಲಿ ನಡೆದಿದ್ದು ಸರ್ಕಾರಿ ಪ್ರಾಯೋಜಿತ ಪ್ರತಿಭಟನೆ
ಚಿಕ್ಕಮಗಳೂರಿಗೆ ಹೊರಟ ವೇಳೆ ಕುಶಾಲನಗರ ಬಳಿಯ ಗುಡ್ಡೆ ಹೊಸಳ್ಳಿಯಲ್ಲಿ 20-30 ಜನ ಪ್ರತಿಭಟನೆ ನಡೆಸಿದರು. ಈಗಾಗಲೇ ಎರಡು ಮೂರು ಕಡೆ ಕಪ್ಪು ಬಾವುಟ ಪ್ರದರ್ಶನ, ಪ್ರತಿಭಟನೆ ಮಾಡಿದ್ದಾರೆ ಎಂದ ಮೇಲೆ ಮುಂದೆ ಇಂಥಾ ಪ್ರತಿಭಟನೆ ನಡೆಯುತ್ತದೋ ಇಲ್ಲವೋ ಎಂಬ ಇಂಟೆಲಿಜೆನ್ಸ್ ವರದಿ ಪೊಲೀಸರ ಬಳಿ ಇರುತ್ತದೋ ಇಲ್ಲವೋ? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.
ಶನಿವಾರಸಂತೆಯಲ್ಲೂ ಪ್ರತಿಭಟನೆ ಮಾಡಿದರು. ಇಷ್ಟೆಲ್ಲ ಆದರೂ ಪೊಲೀಸರಾಗಲಿ, ಜಿಲ್ಲಾಧಿಕಾರಿಯಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ. ನನ್ನ ಪ್ರಕಾರ ಇವೆಲ್ಲ ಸರ್ಕಾರಿ ಪ್ರಯೋಜಿತ ಪ್ರತಿಭಟನೆಗಳು. ಪೊಲೀಸರಿಗೆ ತಡೆಯಲು ಅವಕಾಶ ಇತ್ತು. ಒಂದು ಕಡೆ ಬಟ್ಟೆಗೆ ಕಲ್ಲು ಸುತ್ತಿಕೊಂಡು ನನ್ನ ಕಾರಿಗೆ ಹೊಡೆದಿದ್ದಾರೆ, ಎರಡು ಕಡೆ ಮೊಟ್ಟೆ ಎಸೆದಿದ್ದಾರೆ. ಎಲ್ಲಾ ಕಡೆ 20-30 ಜನ ಇದ್ದರು.
ಕಾಂಗ್ರೆಸ್ ಪಕ್ಷದ ನಾಯಕಿ ಚಂದ್ರಕಲಾ ಮನೆಗೆ ಭೇಟಿ ನೀಡಿದ್ದ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನ್ನು ಪೊಲೀಸ್ ನಿಷ್ಕ್ರಿಯತೆ ಕುರಿತು ಪ್ರಶ್ನಿಸಿದೆ. ಎರಡು, ಮೂರು ಕಡೆ ಮೊಟ್ಟೆ, ಕಲ್ಲು ಎಸೆದಿದ್ದಾರೆ, ಪ್ರತಿಭಟನೆ ಮಾಡಿದ್ದಾರೆ, ನೀವು ಸರ್ಕಾರ ಹೇಳಿದ್ದನ್ನು ಕೇಳುವುದಕ್ಕೆ ಇರುವುದಲ್ಲ. ನಿಮ್ಮ ಕರ್ತವ್ಯ ನೀವು ಮಾಡಿ ಎಂದು ಹೇಳಿದೆ. ಇಷ್ಟೆಲ್ಲಾ ಆದರೂ ಕೂಡ ಮುಂದೆ ಎರಡು ಕಡೆ ಪ್ರತಿಭಟನೆ ಮಾಡಿದರು. ಪೊಲೀಸ್ ಇಲಾಖೆ ಮಾತ್ರ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇವೆಲ್ಲ ನೋಡಿದರೆ ಇದೊಂದು ಪೂರ್ವಯೋಜಿತ ಪ್ರತಿಭಟನೆ ಎಂಬುದು ಅರ್ಥವಾಗುತ್ತದೆ ಎಂದು ಹೇಳಿದರು.
ಮೊಟ್ಟೆ ಎಸೆದವನ ಕಥೆ ಹೇಳಿದ ಸಿದ್ದರಾಮಯ್ಯ!
ಮೊಟ್ಟೆ ಎಸೆದ ಸಂಪತ್ ಎನ್ನುವವನು ಆರ್ಎಸ್ಎಸ್ ಶಾಖೆಗೆ ಹೋಗುವವನು. ಆತ ಮೊಟ್ಟೆ ಎಸೆದು ಬಂಧಿಸಲ್ಪಟ್ಟ ಸಂದರ್ಭದಲ್ಲಿ ಒಳಗಾದ ಮೇಲೆ ಶಾಸಕ ಅಪ್ಪಚ್ಚು ರಂಜನ್ ಆತನನ್ನು ಠಾಣೆಯಿಂದ ಬಿಡಿಸಿಕೊಂಡು ಬಂದಿದ್ದಾರೆ. ಕೊನೆಗೆ ಅವನಿಂದ ತಾನು ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಿಸಿದ್ದಾರೆ. ಅಪ್ಪಚ್ಚು ರಂಜನ್ ಸಂಪತ್ ಜೊತೆ ಇರುವ ಫೋಟೋಗಳು ಇವೆ. ಮಳೆ, ಪ್ರವಾಹದಿಂದ ಮನೆ ಕಳೆದುಕೊಂಡು ನಿರ್ಗತಿಕರಾಗಿರುವ, ಬೆಳೆ ನಷ್ಟ ಅನುಭವಿಸಿರುವ ರೈತರ ಕಷ್ಟ ಕೇಳಲು ನಾನು ಹೋಗಿದ್ದು, ಸರ್ಕಾರ ಮಾಡಿರುವ ಕಳಪೆ ಕಾಮಗಾರಿಗಳನ್ನು ನಾನು ನೋಡಬಾರದು ಎಂದು ತಡೆಯುವ ಉದ್ದೇಶದಿಂದ ಸರ್ಕಾರವೇ ಪ್ರತಿಭಟನೆ ನಡೆಸಲು ಕುಮ್ಮಕ್ಕು ನೀಡಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಕಾಂಗ್ರೆಸ್ ಪ್ರತಿಭಟನೆ ಮುಂದೂಡಲು ಕಾರಣವೇನು?
26ರಂದು ಸರ್ಕಾರದ ನಿಷ್ಕ್ರಿಯತೆ, ಭದ್ರತಾ ವೈಫಲ್ಯ ಹಾಗೂ ಶಾಸಕರ ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ಮಾಡುತ್ತೇವೆ ಎಂದು ಘೋಷಣೆ ಮಾಡಿದೆ. ಅದಕ್ಕಾಗಿ ಬಿಜೆಪಿಯವರು ತಾವೂ ಒಂದು ಜಾಗೃತಿ ಸಮಾವೇಶ ಮಾಡುತ್ತೇವೆ ಎಂದು ಘೋಷಣೆ ಮಾಡಿದರು. ಅವರು ಸಮಾವೇಶ ಮಾಡಲು ನಮ್ಮ ತಕರಾರಿಲ್ಲ. ಆದರೆ ನಾವು ಘೊಷಣೆ ಮಾಡಿದ ಮರುದಿನವೇ ನಾವು ಮಾಡುತ್ತೇವೆ ಎಂದು ಹೇಳಿ ಬಿಜೆಪಿಯವರು ದ್ವೇಷದಿಂದ ಸಮಾವೇಶ ಮಾಡಲು ಹೊರಟಿದ್ದು. ಪ್ರತಿಭಟನೆ ನಮ್ಮ ಸಂವಿಧಾನಾತ್ಮಕ ಹಕ್ಕು. ಸರ್ಕಾರ ಅದಕ್ಕೂ ಅವಕಾಶ ನೀಡುತ್ತಿಲ್ಲ ಎಂದು ಸಿದ್ದರಾಮಯ್ಯ ದೂಷಿಸಿದರು.
ಅನಗತ್ಯವಾಗಿ ಮೊಟ್ಟೆ, ಕಲ್ಲು ಎಸೆದು ಕಪ್ಪು ಬಾವುಟ ಪ್ರದರ್ಶನ ಮಾಡಿದ್ದು ಏಕೆ? ಇವು ಯಾವುದಕ್ಕೂ ಸರಿಯಾದ ಕಾರಣಗಳಿಲ್ಲ. ನಮ್ಮ ಪ್ರತಿಭಟನೆಯನ್ನು ಜನರಿಗೆ ತಪ್ಪಾಗಿ ಬಿಂಬಿಸಲು ಸರ್ಕಾರ ಕುಠಿಲ ಪ್ರಯತ್ನ ಮಾಡಿದೆ. ಈಗ ಡಿಸಿ ಮತ್ತು ಎಸ್,ಪಿ ಅವರು ಕೊಡಗಿನಲ್ಲಿ ನಾವು ಅನುಮತಿ ನೀಡಿಲ್ಲ ಎಂದು 144 ಸೆಕ್ಷನ್ ಹಾಕಿದ್ದಾರೆ. ಹೀಗಾಗಿ ತಾವು ತಮ್ಮ ಪ್ರತಿಭಟನೆಯನ್ನು ಮುಂದೂಡುವುದಾಗಿ ಸಿದ್ದರಾಮಯ್ಯ ಹೇಳಿದರು.
Recommended Video