'ಶಾಸಕ ಸೇಲಾದ' ಕಾಂಗ್ರೆಸ್ನಿಂದ 14 ಕ್ಷೇತ್ರದಲ್ಲಿ ಸಮಾವೇಶ
ಬೆಂಗಳೂರು, ಆಗಸ್ಟ್ 06 : ಕರ್ನಾಟಕ ಕಾಂಗ್ರೆಸ್ 14 ಅನರ್ಹ ಶಾಸಕರ ಕ್ಷೇತ್ರದಲ್ಲಿ ಉಪ ಚುನಾವಣೆಗೆ ಸಿದ್ಧತೆ ಆರಂಭಿಸಿದೆ. ಎಲ್ಲಾ ಕ್ಷೇತ್ರಗಳಲ್ಲಿ ಬೃಹತ್ ಸಮಾವೇಶ ನಡೆಸುವ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆಯನ್ನು ನೀಡಲಿದೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ತೆರಳಿದ್ದ 14 ಕಾಂಗ್ರೆಸ್ ಶಾಸಕರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದರು. ಈ ಎಲ್ಲಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಲಿದೆ ಎಂಬ ವಿಶ್ವಾಸದಲ್ಲಿ ಕಾಂಗ್ರೆಸ್ ಪಕ್ಷವಿದೆ.
ಕರ್ನಾಟಕ ಕಾಂಗ್ರೆಸ್ನ 14 ಮಾಜಿ ಶಾಸಕರು ಉಚ್ಛಾಟನೆ
ಎಲ್ಲಾ ಶಾಸಕರು ಅನರ್ಹಗೊಳಿಸಿರುವ ಸ್ಪೀಕರ್ ಆದೇಶವನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನೆ ಮಾಡಿದ್ದಾರೆ. ಮತ್ತೊಂದು ಕಡೆ ಕಾಂಗ್ರೆಸ್ ಎಲ್ಲಾ ಕ್ಷೇತ್ರಗಳಲ್ಲಿ ಉಪ ಚುನಾವಣೆಗೆ ಸಿದ್ಧತೆ ಆರಂಭಿಸಿದೆ. ಅಭ್ಯರ್ಥಿ ಆಯ್ಕೆ, ಪ್ರಚಾರ ಕಾರ್ಯದ ಬಗ್ಗೆಯೂ ಪಕ್ಷ ಗಮನ ಹರಿಸಿದೆ.
ಕೆಪಿಸಿಸಿ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಿದ ನಾಯಕರು!
14 ಕ್ಷೇತ್ರದಲ್ಲಿಯೂ 'ಶಾಸಕ ಸೇಲಾದ' ಎಂಬ ಹೆಸರಿನಲ್ಲಿ ಸಮಾವೇಶಗಳನ್ನು ನಡೆಸಲು ಕಾಂಗ್ರೆಸ್ ತೀರ್ಮಾನಿಸಿದೆ. ಈ ಸಮಾವೇಶದ ಮೂಲಕ ಪ್ರಚಾರವನ್ನು ನಡೆಸಿ, ಅತೃಪ್ತ ಶಾಸಕರಿಗೆ ತಿರುಗೇಟು ನೀಡಲು ಪಕ್ಷ ಚಿಂತನೆ ನಡೆಸಿದೆ...
ಕೆಪಿಸಿಸಿ ಪುನಾರಚನೆ : ಪದಾಧಿಕಾರಿಗಳ ನೇಮಕ 75ಕ್ಕೆ ಸೀಮಿತ
ಅನರ್ಹಗೊಂಡಿರುವ ಶಾಸಕರು
1. ಮುನಿರತ್ನ (ರಾಜರಾಜೇಶ್ವರಿ ನಗರ), 2.ಬೈರತಿ ಬಸವರಾಜ (ಕೆ. ಆರ್.ಪುರ), 3.ಎಸ್. ಟಿ. ಸೋಮಶೇಖರ್ (ಯಶವಂತಪುರ), 4.ಬಿ. ಸಿ. ಪಾಟೀಲ್ (ಹಿರೇಕೆರೂರು), 5.ರಮೇಶ್ ಜಾರಕಿಹೊಳಿ (ಗೋಕಾಕ್), 6.ಡಾ. ಕೆ. ಸುಧಾಕರ್ (ಚಿಕ್ಕಬಳ್ಳಾಪುರ), 7.ಎಂ. ಟಿ. ಬಿ. ನಾಗರಾಜ್ (ಹೊಸಕೋಟೆ), 8.ಶ್ರೀಮಂತ ಪಾಟೀಲ್ (ಕಾಗವಾಡ), 9.ಮಹೇಶ್ ಕಮಟಳ್ಳಿ (ಅಥಣಿ), 10.ಶಿವರಾಂ ಹೆಬ್ಬಾರ್ (ಯಲ್ಲಾಪುರ), 11.ಪ್ರತಾಪ್ ಗೌಡ ಪಾಟೀಲ್ (ಮಸ್ಕಿ), 12.ಆನಂದ್ ಸಿಂಗ್ (ವಿಜಯನಗರ). 13. ಆರ್.ಶಂಕರ್ (ರಾಣೆಬೆನ್ನೂರು), 14.ರೋಷನ್ ಬೇಗ್ (ಶಿವಾಜಿನಗರ) ಶಾಸಕರು ಅನರ್ಹಗೊಂಡಿದ್ದಾರೆ.
ಶಾಸಕ ಸೇಲಾದ ಸಮಾವೇಶ
ಕೆಪಿಸಿಸಿ ಎಲ್ಲಾ ಕ್ಷೇತ್ರದಲ್ಲಿಯೂ 'ಶಾಸಕ ಸೇಲಾದ' ಎಂಬ ಹೆಸರಿನಲ್ಲಿ ಸಮಾವೇಶಗಳನ್ನು ನಡೆಸಲಿದೆ. ಮೊದಲ ಸಮಾವೇಶ ಆಗಸ್ಟ್ 8ರಂದು ಹೊಸಕೋಟೆಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಬಿಜೆಪಿಗೆ ಸೇಲಾದರು ಎಂದು ಬಿಂಬಿಸುವುದು
2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದ್ದ ಶಾಸಕರು ಹಣ, ಅಧಿಕಾರಕ್ಕಾಗಿ ಬಿಜೆಪಿಗೆ ಸೇಲಾದರು ಎಂದು ಬಿಂಬಿಸುವುದು ಕಾಂಗ್ರೆಸ್ ತಂತ್ರವಾಗಿದೆ. ಇದಕ್ಕಾಗಿ 'ಶಾಸಕ ಸೇಲಾದ' ಎಂಬ ಹೆಸರಿನಲ್ಲಿಯೇ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ.
ಹಿರಿಯ ನಾಯಕರು ಭಾಗಿ
ಈ ಸಮಾವೇಶದಲ್ಲಿ ಎಲ್ಲಾ ಹಿರಿಯ ನಾಯಕರು ಪಾಲ್ಗೊಳ್ಳುವ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡಲಾಗುತ್ತದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಿಎಂ ಸಿದ್ದರಾಮಯ್ಯ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸೇರಿದಂತೆ ಹಲವು ನಾಯಕರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.