ಜೆಡಿಎಸ್ ಪಕ್ಷಕ್ಕೆ ಹೊಸ ಹೆಸರು ನಾಮಕರಣ ಮಾಡಿದ ಕಾಂಗ್ರೆಸ್ !
ಬೆಂಗಳೂರು,ಸೆಪ್ಟೆಂಬರ್ 11: 2024 ರ ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಕುರಿತು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದು, ಲೋಕಸಭಾ ಮೈತ್ರಿ ಕುರಿತು ಸಾಕಷ್ಟು ಚರ್ಚೆಯಾಗುತ್ತಿದ್ದು, ಜೆಡಿಎಸ್ ವಿರುದ್ದ ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಚುನಾವಣೆಯಲ್ಲಿ ಸೋತರೆ ಪಕ್ಷ ವಿಸರ್ಜಿಸುತ್ತೇನೆ ಎಂದಿದ್ದರು, ಆದರೆ ಈಗ "ಜಾತ್ಯಾತೀತತೆ"ಯನ್ನು ವಿಸರ್ಜಿಸಲು ಹೊರಟಿದ್ದಾರೆ.
ಜನತಾ ದಳ ಎಂಬ ಹೆಸರನ್ನು "ಕಮಲ ದಳ" ಎಂದು ಬದಲಿಸಿಕೊಂಡರೆ ಒಳಿತು ಎಂದು ಕಾಂಗ್ರೆಸ್ ಸಲಹೆ ನೀಡಿದೆ. ಇತ್ತ ರಾಜ್ಯ ಬಿಜೆಪಿ ಜೆಡಿಎಸ್ ಪಕ್ಷವನ್ನು ಫ್ಯಾಮಿಲಿ ಪಾರ್ಟಿ ಟೀಕಿಸುತ್ತಿತ್ತು, ಈಗ ಅದೇ ಫ್ಯಾಮಿಲಿಗೆ ನಾಲ್ಕು ಸೀಟು ಬಿಟ್ಟು ಹೊಂದಾಣಿಕೆ ಮಾಡಿಕೊಳ್ಳುತ್ತಿರುವುದು ನಾಚಿಕೆಗೇಡು ಅಲ್ಲವೇ ಎಂದು ರಾಜ್ಯ ಬಿಜೆಪಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದೆ.

ಬಿಜೆಪಿ ಜೆಡಿಎಸ್ ಮೈತ್ರಿ ಹೇಗಿದೆ ಅಂದರೆ ನಡು ನೀರಲ್ಲಿ ಮುಳುಗುತ್ತಿರುವ ಇಬ್ಬರು ಒಬ್ಬರನೊಬ್ಬರು ಕೈ ಹಿಡಿದು ಆಸರೆ ಪಡೆಯುವಂತೆ..! ಪರಸ್ಪರ ಕೈ ಹಿಡಿದು ಇಬ್ಬರೂ ಮುಳುಗಿ ತಳ ಸೇರುವುದು ಖಂಡಿತ. ಮುಳುಗುವವರು ಹುಲ್ಲು ಕಡ್ಡಿಯ ಆಸರೆಯನ್ನಾದರೂ ಪಡೆಯಬೇಕು, ಅದು ಬಿಟ್ಟು ಮತ್ತೊಬ್ಬ ಮುಳುಗುತ್ತಿರುವವರ ಆಸರೆ ಪಡೆದರೆ ಬದುಕಲು ಸಾಧ್ಯವೇ?! ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಈಗಾಗಲೇ ದೆಹಲಿಯಲ್ಲಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್ ಡಿ ದೇವೇಗೌಡ ಅವರು ಕೇಂದ್ರ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರ ಜೊತೆಗೆ ಚರ್ಚಿಸಿದ್ದು, ಮೈತ್ರಿ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ಲಿಂಗಾಯತ ನಾಯಕ ಬಿ ಎಸ್ ಯಡಿಯೂರಪ್ಪ ಬಿಜೆಪಿ- ಜೆಡಿಎಸ್ ಮೈತ್ರಿಗೆ ಅಮಿತ್ ಶಾ ಒಪ್ಪಿದ್ದಾರೆ. ನಾಲ್ಕು ಸ್ಥಾನ ಬಿಟ್ಟುಕೊಡಲು ಅವರು ಹೇಳಿದ್ದಾರೆ. ಜೆಡಿಎಸ್ ಜೊತೆಗಿನ ಮೈತ್ರಿಯಿಂದ ನಮಗೆ ಶಕ್ತಿ ಬರುತ್ತೆ ಎಂದು ಯಡಿಯೂರಪ್ಪ ಹೇಳಿದರು.
ಮೈತ್ರಿ ವಿಚಾರವಾಗಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಹೇಳಿದ್ದೇನು?
ಬಿಜೆಪಿ ನಾಯಕರನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದೆ ಹೌದು, ದೇವೆಗೌಡ ಮತ್ತೆ ಪ್ರಧಾನಿ ಆಗೊದಕ್ಕೆ ಈ ಭೇಟಿ ಮಾಡಿದ್ದಲ್ಲ, ಈ ಪಕ್ಷ ಉಳಿಸಲು. ಮೋದಿಯವರು ಅವರಾಗಿಯೇ ವಿಶ್ವಾಸದಿಂದ ಭೇಟಿ ಮಾಡಲು ಮುಂದೆ ಬಂದಾಗ ಅವರ ಜತೆ ಮಾತನಾಡಿದ್ದು ಸತ್ಯ. ಆದರೆ ನಾವು ಯಾವ ಸೀಟನ್ನು ಕೇಳಲಿಲ್ಲ.
ಮಂಡ್ಯದಲ್ಲಿ ಬಿಜೆಪಿಯ ಮತಗಳು ಇಲ್ಲವೇ? ರಾಮನಗರದಲ್ಲಿ ಬಿಜೆಪಿಯ ಓಟ್ ಇಲ್ವೇ? ಕೋಲಾರ, ತುಮಕೂರಿನಲ್ಲಿ ಇಲ್ವೇ?? ಹಾಗಂದ ಮಾತ್ರಕ್ಕೆ ಜೆಡಿಎಸ್ನಲ್ಲಿ ಏನೂ ಇಲ್ಲ ಎಂದು ಯಾರೂ ಭಾವಿಸಬಾರದು. ಈ ಬಗ್ಗೆ ಬಿಜೆಪಿ ನಾಯಕರಿಗೆ ಮಾತುಕತೆಯ ವೇಳೆಯೇ ಹೇಳಿದ್ದೇನೆ. ವಿಜಯಪುರದಲ್ಲಿ, ರಾಯಚೂರಿನಲ್ಲಿ ನನ್ನ ಪಕ್ಷದ ಶಕ್ತಿ ಕೊಟ್ಟರೆ ಮಾತ್ರ ಬಿಜೆಪಿ ಗೆಲ್ಲುತ್ತೆ ಎಂದು ಹೇಳಿದ್ದೇನೆ. ಬೀದರ್ ನಲ್ಲಿ ಎರಡು ಕ್ಷೇತ್ರಗಳಲ್ಲಿ ನಮ್ಮ ಶಕ್ತಿ ಇದೆ. ಚಿಕ್ಕಮಗಳೂರಿನ ಲೋಕಸಭೆ ಕ್ಷೇತ್ರದಲ್ಲಿಯೂ ನಮ್ಮ ಶಕ್ತಿ ಇದೆ. ನಾನು ವಿನಮ್ರವಾಗಿ ಈ ವಿಷಯ ತಿಳಿಸಿದ್ದೇನೆ.ಈ ವಿಚಾರವಾಗಿ ಕುಮಾರಸ್ವಾಮಿ ಅವರು ಅಂತಿಮವಾಗಿ ಎಷ್ಟು ಸೀಟು ಹಂಚಿಕೆ ಮಾಡಿಕೊಳ್ಳಬೇಕೆಂದು ಬಿಜೆಪಿ ನಾಯಕರ ಜತೆ ಕೂತು ಚರ್ಚೆ ನಡೆಸಿ ತೀರ್ಮಾನ ಮಾಡುತ್ತಾರೆ ಎಂದರು.
ಇನ್ನೂ ಈ ಕುರಿತು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಮಾತನಾಡಿ, ಕಾಂಗ್ರೆಸ್ ನವರು ಲೋಕಸಭೆ ಚುನಾವಣೆಯಲ್ಲಿ 25 ಕ್ಷೇತ್ರಗಳನ್ನು ಗೆದ್ದೇಬಿಟ್ಟೆವು ಎಂದು ಅಹಂಕಾರದಿಂದ ಮೆರೆಯುತ್ತಿದ್ದಾರೆ. ಅದಕ್ಕೆ ಈ ಹೊಸ ರಾಜಕೀಯ ಅಧ್ಯಾಯ ಚೆಕ್ ಮೇಟ್ ಇಡುತ್ತದೆ. ಈ ಅಹಂಕಾರಕ್ಕೆ ಇತಿಶ್ರೀ ಹಾಡುತ್ತೇವೆ ಎಂದರು.
ಕೇವಲ ಮೂರೇ ತಿಂಗಳ ಆಡಳಿತಾವಧಿಯಲ್ಲಿ ದುರಾಡಳಿತದ ಪರಾಕಾಷ್ಠೆ ಮುಟ್ಟಿರುವ ಕಾಂಗ್ರೆಸ್ ಸರಕಾರದ ವಿರುದ್ಧ ರಾಜ್ಯದ ಹೊಸ ರಾಜಕೀಯ ಅಧ್ಯಾಯ ಆರಂಭವಾಗುತ್ತಿದೆ. ವಿಪಕ್ಷಗಳು ಒಟ್ಟಾಗಿ ಸರಕಾರದ ವಿರುದ್ಧ ಹೋರಾಟ ಮಾಡುತ್ತೇವೆ.2006ರ ಅಧ್ಯಾಯ ಮತ್ತೆ ಪುನರಾವರ್ತನೆ ಮಾಡಲು ನಿರ್ಧಾರ ಮಾಡಲಾಗಿದೆ. ಪಕ್ಷದ ಕಾರ್ಯಕರ್ತರು, ಮುಖಂಡರು, ಶಾಸಕರ ವಿಶ್ವಾಸಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಎಲ್ಲವನ್ನೂ ತೀರ್ಮಾನ ಮಾಡುತ್ತೇನೆ. ನಿಮ್ಮ ರಕ್ಷಣೆ, ನಾಡಿನ ರಕ್ಷಣೆ ಉದ್ದೇಶದಿಂದ ಹೊಸ ಅಧ್ಯಾಯ ಶುರು ಮಾಡುತ್ತಿದ್ದೇನೆ ಎಂದರು.












Click it and Unblock the Notifications