ಸಂಪನ್ಮೂಲ ಕ್ರೋಢೀಕರಣಕ್ಕೆ ಕಾಂಗ್ರೆಸ್ಗೆ ಕರ್ನಾಟಕವೇ ‘ಅಕ್ಷಯಪಾತ್ರೆ’?
ಬೆಂಗಳೂರು, ಮಾರ್ಚ್ 24: ಮುಂದಿನ ಮೂರು ವರ್ಷಗಳಲ್ಲಿ ಕರ್ನಾಟಕ ಸೇರಿದಂತೆ ಸುಮಾರು ಹತ್ತೊಂಬತ್ತು ರಾಜ್ಯಗಳ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಈ ಚುನಾವಣೆಗಳನ್ನು ರಾಷ್ಟ್ರೀಯ ಪಕ್ಷವಾಗಿ ಕಾಂಗ್ರೆಸ್ ಎದುರಿಸಲೇ ಬೇಕಾಗುತ್ತದೆ. ಅದು ಹೇಗೆ ಎದುರಿಸಲಿದೆ ಎಂಬುದು ಆಯಾಯ ರಾಜಕೀಯ ಪರಿಸ್ಥಿತಿಗನುಗುಣವಾಗಿದ್ದರೂ ಕೂಡ ಬಿಜೆಪಿಗೆ ಸಮನಾಗಿ ಸ್ಪರ್ಧೆ ಮಾಡಲೇ ಬೇಕಾದ ಅನಿವಾರ್ಯತೆಯಿದೆ. ಹೀಗಾಗಿಯೇ ಕಾಂಗ್ರೆಸ್ನ ಹೈಕಮಾಂಡ್ಗೆ ಪಕ್ಷಸಂಘಟನೆ, ಸಂಪನ್ಮೂಲ ಕ್ರೊಢೀಕರಣ ಎಲ್ಲವೂ ಸವಾಲಾಗಿ ಪರಿಣಮಿಸಿದ್ದು, ಕರ್ನಾಟಕ ಮತ್ತು ತೆಲಂಗಾಣದತ್ತ ಹೆಚ್ಚಿನ ನಿರೀಕ್ಷೆಯನ್ನಿಟ್ಟುಕೊಂಡಂತೆ ಕಾಣುತ್ತಿದೆ.
ದಕ್ಷಿಣ ಭಾರತದ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಆಡಳಿತವಿದ್ದು, ಸದ್ಯ ಕಾಂಗ್ರೆಸ್ ಹೈಕಮಾಂಡ್ ಗೆ ಸಂಪನ್ಮೂಲ ಕ್ರೊಢೀಕರಣವಾಗ ಬೇಕಾದರೆ ಇದೆರಡು ರಾಜ್ಯಗಳಿಂದ ಮಾತ್ರ ಸಾಧ್ಯವಿದೆ. ಉಳಿದಂತೆ ಯಾವ ರಾಜ್ಯದಿಂದಲೂ ಸಂಪನ್ಮೂಲಗಳನ್ನು ಸಂಗ್ರಹಿಸುವುದು ಅಷ್ಟು ಸುಲಭವಾಗಿಲ್ಲ. ರಾಜ್ಯದ ಮಟ್ಟಿಗೆ ಹೇಳುವುದಾದರೆ ಸಂಕಷ್ಟದ ಸಂದರ್ಭಗಳಲ್ಲಿ ಹೈಕಮಾಂಡ್ ಜತೆಗೆ ನಿಲ್ಲುವ ನಾಯಕ ಯಾರಾದರೂ ಇದ್ದರೆ ಅದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತ್ರ. ಹೀಗಾಗಿಯೇ ಬೇರೆ ಯಾವುದೇ ನಾಯಕರು ತಿಪ್ಪರಲಾಗ ಹಾಕಿದರೂ ಅಂತಿಮವಾಗಿ ಹೈಕಮಾಂಡ್ ಮಾತು ಕೇಳುವುದು ಡಿಕೆಶಿ ಅವರದ್ದೇ.

ಇದಕ್ಕೆ ಕಾರಣ ಯಾವುದೇ ರಾಜ್ಯದ ಚುನಾವಣೆಗಳಿರಲಿ ಅಲ್ಲಿ ಏನು ವ್ಯವಸ್ಥೆ ಮಾಡಬೇಕು? ಮತ್ತು ವೇದಿಕೆ ಮೇಲೆ ನಿಂತು ಮಾತನಾಡಬೇಕಾದರೂ ಕರ್ನಾಟಕದಿಂದ ಡಿಕೆಶಿ ಅವರೇ ಬೇಕಾಗುತ್ತದೆ. ಹೀಗಾಗಿ ಹೈಕಮಾಂಡ್ ಗೆ ಹತ್ತಿರವಾಗಿರುವ ಡಿಕೆಶಿ ಮುಂದಿನ ಎರಡೂವರೆ ವರ್ಷದ ಅವಧಿಗೆ ಸಿಎಂ ಆಗಿಯೇ ತೀರುತ್ತೇನೆ ಎನ್ನುವ ಲೆಕ್ಕಾಚಾರದಲ್ಲಿದ್ದಾರೆ. ಆದರೆ ಅವರದ್ದೇ ಪಕ್ಷದ ನಾಯಕರು ಮಾತ್ರ ಇದಕ್ಕೆ ಆಸ್ಪದ ಕೊಡಲೇ ಬಾರದು ಎಂಬ ತೀರ್ಮಾನಕ್ಕೆ ಬಂದಂತಿದೆ. ಈ ನಡುವೆ ನಾನೇ ಪೂರ್ಣಾವಧಿಯ ಸಿಎಂ ಎಂಬ ಮಾತನ್ನು ಸಿದ್ದರಾಮಯ್ಯ ಅವರು ಅವಕಾಶ ಸಿಕ್ಕಿದಾಗಲೆಲ್ಲ ಹೇಳುತ್ತಲೇ ಇದ್ದಾರೆ. ಆದರೆ ಹೈಕಮಾಂಡ್ ತೀರ್ಮಾನವೇ ಅಂತಿಮ ಎನ್ನುವುದು ಗೊತ್ತಿರುವ ವಿಚಾರವೇ.
ಕರ್ನಾಟಕ, ತೆಲಂಗಾಣದ ಆರ್ಥಿಕ ಸ್ಥಿತಿ ನೆಟ್ಟಗಿಲ್ಲ
ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾಗಿದ್ದೇನೆಂದರೆ ಹಿಂದೆ 2013ರಿಂದ 2018ರವರೆಗೆ ಆಡಳಿತ ನಡೆಸಿದ್ದ ಸಿದ್ದರಾಮಯ್ಯ ಅವರಿಗೆ ಈ ಬಾರಿ ಸುಲಭವಾಗಿಲ್ಲ. ಪ್ರತಿ ಹೆಜ್ಜೆ ಹೆಜ್ಜೆಗೂ ಸವಾಲ್ ಎದುರಾಗಿದೆ. ಗ್ಯಾರಂಟಿ ಯೋಜನೆಗಳು ಖಜಾನೆಯನ್ನು ಕರಗಿಸುತ್ತಿವೆ. ಹೀಗಾಗಿ ಸಂಪನ್ಮೂಲಗಳಿಗಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಿರುವಾಗ ಮುಂದಿನ ದಿನಗಳಲ್ಲಿ ಬೇರೆ, ಬೇರೆ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ಬಂದಾಗ ಅಲ್ಲಿ ಕಾಂಗ್ರೆಸ್ ಸ್ಪರ್ಧಿಸಿ, ಜತೆಗೆ ಹೋರಾಟವನ್ನು ಮಾಡಬೇಕಾಗುತ್ತದೆ.

ಇವತ್ತು ಹಣವಿಲ್ಲದೆ ಯಾವುದೇ ಚುನಾವಣೆ ನಡೆಯಲು ಸಾಧ್ಯವಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ.. ಹಾಗಾಗಿ ಕಾಂಗ್ರೆಸ್ ಸರ್ವ ರೀತಿಯಲ್ಲಿ ಸಜ್ಜಾಗಬೇಕು. ಹಣ ಖರ್ಚು ಮಾಡಬೇಕೆಂದರೆ ಈಗಿನ ಪರಿಸ್ಥಿತಿಯಲ್ಲಿ ಬೇರೆ ಯಾವುದೇ ಮೂಲದಿಂದಲೂ ಹಣ ತರಲು ಸಾಧ್ಯವಿಲ್ಲದ ದೈನೇಶಿ ಸ್ಥಿತಿ ಕಾಂಗ್ರೆಸ್ಸಿಗಿದೆ. ಹೀಗಾಗಿ ಏನೇ ಮಾಡಬೇಕಾದರೂ ಕರ್ನಾಟಕದ ಸಹಕಾರವನ್ನಂತು ಹೈಕಮಾಂಡ್ ಗೆ ಬೇಕೇ ಬೇಕು. ಆದರೆ ಕರ್ನಾಟಕದ ಆರ್ಥಿಕ ಪರಿಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ.
ಮೂರು ವರ್ಷಗಳಲ್ಲಿ 19 ರಾಜ್ಯಗಳಲ್ಲಿ ಚುನಾವಣೆ
ಕಾಂಗ್ರೆಸ್ ನ ಹೈಕಮಾಂಡ್ ಮುಂದಿನ ದಿನಗಳಲ್ಲಿ ಏನನ್ನಾದರೂ ನಿರೀಕ್ಷೆ ಮಾಡಬಹುದು ಎನ್ನುವುದಾದರೆ ಅದು ಕರ್ನಾಟಕದಿಂದ ಮಾತ್ರ ಸಾಧ್ಯ. ಈಗಾಗಲೇ ತೆಲಂಗಾಣದ ಸಿಎಂ ರೇವಂತ್ ರೆಡ್ಡಿ ಅವರು ಸರ್ಕಾರದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಹೇಳಿಕೊಂಡಿರುವ ಸುದ್ದಿಗಳು ಎಲ್ಲರಿಗೂ ಗೊತ್ತಿದೆ. ಅವರು ನೈಜಾಂಶವನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಆದರೆ ಕರ್ನಾಟಕ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಆದರೆ ಅದನ್ನು ಮುಚ್ಚಿಟ್ಟು ಎಲ್ಲವೂ ಚೆನ್ನಾಗಿದೆ ಎಂಬುದನ್ನು ತೋರ್ಪಡಿಸುವ ಕೆಲಸದಲ್ಲಿ ಸಿಎಂ ಸೇರಿದಂತೆ ಬಹುತೇಕರು ನಿರತರಾಗಿದ್ದಾರೆ. ಅದು ಏನೇ ಇರಲಿ ಹೈಕಮಾಂಡ್ ಗೆ ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸ ಕರ್ನಾಟಕ ಮಾಡಲೇ ಬೇಕಾಗುತ್ತದೆ.

ಇನ್ನು ಮೂರು ವರ್ಷಗಳ ಅವಧಿಯಲ್ಲಿ ಕರ್ನಾಟಕ ಸೇರಿದಂತೆ ದೇಶದ 19 ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅದರಲ್ಲೂ ಮುಂದಿನ ನವೆಂಬರ್ ವೇಳೆಗೆ ಬಿಹಾರದಲ್ಲಿ ಚುನಾವಣೆ ಬರಲಿದ್ದು ಅದಕ್ಕಾಗಿ ಕಾಂಗ್ರೆಸ್ ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಮುಂದಿನ ಚುನಾವಣೆಗಳನ್ನು ಎದುರಿಸುವುದು ಕಾಂಗ್ರೆಸ್ ಗೆ ಸುಲಭವಾಗಿ ಉಳಿದಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಪಕ್ಷ ಸಂಘಟನೆಯಲ್ಲಿಯೂ ಕಾಂಗ್ರೆಸ್ ದುರ್ಬಲವಾಗಿದೆ. ಜತೆಗೆ ಆರ್ಥಿಕ ಸಂಪನ್ಮೂಲದ ಕೊರತೆಯೂ ಕಾಡುತ್ತಿದೆ. ಇಂತಹ ಸ್ಥಿತಿಯಲ್ಲಿ ಅಧಿಕಾರದಲ್ಲಿರುವ ರಾಜ್ಯಗಳಿಂದ ಸರ್ವ ರೀತಿಯ ಸಹಾಯವನ್ನು ಹೈಕಮಾಂಡ್ ನಿರೀಕ್ಷೆ ಮಾಡಿಯೇ ಮಾಡುತ್ತದೆ.
ಸಂಪನ್ಮೂಲ ಸಂಗ್ರಹಿಸುವ ನಾಯಕ ಬೇಕು
ಈಗಾಗಲೇ ಖಾಲಿಯಾಗಿರುವ ಖಜಾನೆಯನ್ನು ಸರಿದೂಗಿಸುವ ಸಲುವಾಗಿ ರಾಜ್ಯದಲ್ಲಿ ಮೇಲಿಂದ ಮೇಲೆ ಬೆಲೆ ಏರಿಕೆಯ ಬರೆ ಎಳೆಯುತ್ತಾ ಬರುತ್ತಿರುವ ಸರ್ಕಾರ ಮುಂದಿನ ದಿನಗಳಲ್ಲಿ ಇನ್ನು ಯಾವ ರೀತಿಯಲ್ಲೆಲ್ಲ ಸಂಪನ್ಮೂಲ ಸಂಗ್ರಹಣೆಗೆ ಇಳಿಯುತ್ತದೆಯೋ ಗೊತ್ತಿಲ್ಲ. ಆದರೆ ಮುಂದಿನ ಮೂರು ವರ್ಷಗಳು ಬದಲಾವಣೆಯ ಮತ್ತು ಸವಾಲಿನ ವರ್ಷಗಳು ಎನ್ನುವುದನ್ನು ರಾಜಕೀಯವಾಗಿ ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಹೈಕಮಾಂಡ್ ಗೆ ಸಂಪನ್ಮೂಲ ಸಂಗ್ರಹಿಸುವ ನಾಯಕನ ಅಗತ್ಯತೆ ಇರುವುದರಿಂದ ಅಂತಹ ನಾಯಕನಿಗೆ ಮಣೆ ಹಾಕುವ ಎಲ್ಲ ಸಾಧ್ಯತೆಗಳಿವೆ. ಅಂತಹ ನಾಯಕ ಕರ್ನಾಟಕದಲ್ಲಿ ಯಾರಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ..ಮುಂದೇನು ಕಾದು ನೋಡೋಣ.












Click it and Unblock the Notifications