ಪರಿಷತ್ ನಾಮನಿರ್ದೇಶನ, ದೆಹಲಿಗೆ ಹೊರಟ ಸಿದ್ದರಾಮಯ್ಯ?
ಬೆಂಗಳೂರು, ಜುಲೈ 26 : ಸಾರಿಗೆ ನೌಕರರು ವೇತನ ಪರಿಷ್ಕರಣೆಗೆ ಪಟ್ಟು ಹಿಡಿದು ಮುಷ್ಕರ ನಡೆಸುತ್ತಿದ್ದರೆ ಸಿದ್ದರಾಮಯ್ಯ ವಿಧಾನಪರಿಷತ್ ನಾಮ ನಿರ್ದೇಶನದ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಬುಧವಾರ ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ಅವರು ದೆಹಲಿಗೆ ತೆರಳುವ ಸಾಧ್ಯತೆ ಇದೆ.
ವಿಧಾನಪರಿಷತ್ತಿಗೆ ಮೂರು ಸದಸ್ಯರನ್ನು ನಾಮ ನಿರ್ದೇಶನ ಮಾಡುವ ಜವಾಬ್ದಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲಿದೆ. ಕಲೆ, ಸಾಹಿತ್ಯ ಮತ್ತು ಸಮಾಜ ಸೇವೆ ಕ್ಷೇತ್ರದ ಗಣ್ಯರನ್ನು ಆಯ್ಕೆ ಮಾಡಿ, ನಾಮ ನಿರ್ದೇಶ ಮಾಡಬೇಕಾಗಿದೆ.[ನಾಮ ನಿರ್ದೇಶನ, ಸಿದ್ದರಾಮಯ್ಯಗೆ ಹೊಸ ಸವಾಲು]
ಈ ಕುರಿತು ಚರ್ಚೆ ನಡೆಸಲು ಸಿದ್ದರಾಮಯ್ಯ ಅವರು ಜುಲೈ 27ರಂದು ದೆಹಲಿಗೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ. ಖಾಲಿ ಇರುವ ಮೂರು ಸ್ಥಾನಗಳಿಗೆ ಹಲವಾರು ಆಕಾಂಕ್ಷಿಗಳಿದ್ದಾರೆ. ಆದ್ದರಿಂದ, ಪಟ್ಟಿಗೆ ಹೈಕಮಾಂಡ್ ನಾಯಕರ ಒಪ್ಪಿಗೆ ಪಡೆಯಲು ದೆಹಲಿ ವಿಮಾನವೇರಲಿದ್ದಾರೆ ಎಂಬುದು ಸದ್ಯದ ಮಾಹಿತಿ.['ರಮ್ಯಾರನ್ನು ಸಂಸತ್ತಿನಲ್ಲಿ ನೋಡಲು ಬಯಸುತ್ತೇವೆ']
ಕಲಾವಿದರ ಕೋಟಾದಲ್ಲಿ ಮಾಜಿ ಸಂಸದೆ ರಮ್ಯಾ ಅವರು ಪರಿಷತ್ ಪ್ರವೇಶಿಸಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಆದರೆ, ಕೆಲವು ದಿನಗಳ ಹಿಂದೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು, 'ರಮ್ಯಾರಂತಹ ಯುವ ನಾಯಕಿಯನ್ನು ನಾವು ಸಂಸತ್ತಿನಲ್ಲಿ ನೋಡಲು ಬಯಸುತ್ತೇವೆ. ಅವರನ್ನು ಪರಿಷತ್ತಿಗೆ ಆಯ್ಕೆ ಮಾಡುವ ಯಾವುದೇ ಪ್ರಸ್ತಾಪವಿಲ್ಲ' ಎಂದು ಹೇಳಿದ್ದರು.......
ಕಲಾವಿದರ ಕೋಟಾದಲ್ಲಿ ರಮ್ಯಾ, ಭಾವನಾ
ಜಗ್ಗೇಶ್ ಅವರ ನಿವೃತ್ತಿಯಿಂದ ಕಲಾವಿದರ ಕ್ಷೇತ್ರ ತೆರವಾಗಿದೆ. ಈ ಸ್ಥಾನಕ್ಕೆ ಮಾಜಿ ಸಂಸದೆ ರಮ್ಯಾ ಮತ್ತು ಬಾಲಭವನದ ಅಧ್ಯಕ್ಷೆ ಭಾವನಾ ಅವರ ಹೆಸರು ಕೇಳಿಬರುತ್ತಿದೆ. ಮುಖ್ಯಮಂತ್ರಿ ಚಂದ್ರು ಅವರ ಹೆಸರು ಸಹ ಕೇಳಿಬರುತ್ತಿದ್ದು, ಯಾರನ್ನು ಆಯ್ಕೆ ಮಾಡಲಾಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ರಮ್ಯಾ ಆಯ್ಕೆ ಇಲ್ಲ?
'ರಮ್ಯಾ ಅವರನ್ನು ಪರಿಷತ್ತಿಗೆ ಆಯ್ಕೆ ಮಾಡುವ ಪ್ರಸ್ತಾಪವೇ ಇಲ್ಲ. ರಮ್ಯಾರಂತಹ ಯುವ ನಾಯಕಿಯನ್ನು ನಾವು ಸಂಸತ್ತಿನಲ್ಲಿ ನೋಡಲು ಬಯಸುತ್ತೇವೆ. ಅವರನ್ನು ಪರಿಷತ್ತಿಗೆ ಆಯ್ಕೆ ಮಾಡುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ' ಎಂದು ಕೆಲವು ದಿನಗಳ ಹಿಂದೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದರು. ಆದ್ದರಿಂದ, ರಮ್ಯಾ ಆಯ್ಕೆಯಾಗುವುದಿಲ್ಲ ಎಂಬ ಸುದ್ದಿಗಳೂ ಇವೆ.
ಸಾಹಿತ್ಯ ಕ್ಷೇತ್ರದಿಂದ ಯಾರ ಆಯ್ಕೆ?
ಸಾಹಿತ್ಯ ಕ್ಷೇತ್ರದಿಂದ ಒಬ್ಬರನ್ನು ನಾಮ ನಿರ್ದೇಶನ ಮಾಡಬೇಕಿದೆ. ಬರಗೂರು ರಾಮಚಂದ್ರಪ್ಪ, ಮರುಳಸಿದ್ದಪ್ಪ, ಎಸ್.ಜಿ ಸಿದ್ದರಾಮಯ್ಯ, ಜಿ.ಕೆ ಗೋವಿಂದ್ರಾವ್ ಅವರ ಹೆಸರುಗಳು ಕೇಳಿಬರುತ್ತಿವೆ. ಯಾರು ಆಯ್ಕೆಯಾಗಲಿದ್ದಾರೆ? ಎಂಬದು ಸದ್ಯದ ಕುತೂಹಲ.[ಚಿತ್ರ : ಜಿ.ಕೆ.ಗೋವಿಂದರಾವ್]
ಕೆಪಿ ನಂಜುಡಿ ಹೆಸರು ಕೇಳಿಬರುತ್ತಿದೆ
ಸಮಾಜ ಸೇವೆ ಕ್ಷೇತ್ರದಿಂದಲೂ ಒಬ್ಬರನ್ನು ನಾಮ ನಿರ್ದೇಶನ ಮಾಡಲು ಅವಕಾಶವಿದೆ. ವಿಶ್ವಕರ್ಮ ಸಮುದಾಯದ ಮುಖಂಡ ಕೆ.ಪಿ.ನಂಜುಡಿ ಅವರ ಹೆಸರು ಕೇಳಿಬರುತ್ತಿದೆ. ಪಕ್ಷದ ಜೊತೆ ಗುರುತಿಸಿಕೊಂಡಿರುವ ನಂಜುಡಿ ಅವರು ಎಂಎಲ್ಸಿ ಆಗುವ ಪ್ರಯತ್ನವನ್ನು ಹಿಂದೆ ಮಾಡಿದ್ದರು.
ಒಂದು ಸ್ಥಾನಕ್ಕೆ ಚುನಾವಣೆ ನಡೆಯಬೇಕು
ಮೂವರನ್ನು ನಾಮ ನಿರ್ದೇಶನ ಮಾಡಿದೂ ಪರಿಷತ್ತಿನಲ್ಲಿ ಒಂದು ಸ್ಥಾನ ಖಾಲಿ ಇರಲಿದೆ. ಅದನ್ನು ಭರ್ತಿ ಮಾಡಲು ಚುನಾವಣೆ ನಡೆಯಬೇಕಿದೆ. ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದ ವೈ.ಎ.ನಾರಾಯಣ ಸ್ವಾಮಿ ಅವರ ರಾಜೀನಾಮೆಯಿಂದ ಸ್ಥಾನ ತೆರವಾಗಿದೆ. ನಾರಾಯಣ ಸ್ವಾಮಿ ಅವರು ಹೆಬ್ಬಾಳ ಕ್ಷೇತ್ರದ ಉಪ ಚುನಾವಣೆಯಲ್ಲಿ ಜಯಗಳಿಸಿ ವಿಧಾನಸಭೆ ಪ್ರವೇಶಿಸಿದ್ದಾರೆ.