ಸಿದ್ದರಾಮಯ್ಯ ಬಿಜೆಪಿಗೆ ಸೇರಲು ಮುಂದಾಗಿದ್ದರಾ? ಸಿಎಂ ಹೇಳಿದ್ದೇನು?
ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ನಡುವೆ ಹೊತ್ತಿ ಉರಿಯುತ್ತಿರುವ ಕಿಚ್ಚು ಆರಿಲ್ಲ. ಅದರಲ್ಲೂ ನಿನ್ನೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಮುಖಂಡರು & ಕಾರ್ಯಕರ್ತರ ಸಮಾವೇಶದಲ್ಲಿ ಕುಮಾರಸ್ವಾಮಿ ಸ್ಫೋಟಕ ಆರೋಪ ಮಾಡಿದ್ದರು. ಸಿಎಂ ಸಿದ್ದರಾಮಯ್ಯ ಬಿಜೆಪಿಗೆ ಹೋಗಲು ಸಿದ್ಧರಾಗಿದ್ದರು ಎಂಬ ರೀತಿ ವಾಗ್ದಾಳಿ ನಡೆಸಿದ್ದರು. ಈಗ ಎಚ್ಡಿಕೆ ಹೇಳಿಕೆಗೆ ಸಿದ್ದರಾಮಯ್ಯ ಉತ್ತರಿಸಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ಮಧ್ಯೆ ಹೊಂದಾಣಿಕೆ ಮಾತು ನಿಜವಾಗುತ್ತಿದ್ದಂತೆ ಕಾಂಗ್ರೆಸ್ ಪಡೆ ಅಲರ್ಟ್ ಆಗಿದೆ. ಅದರಲ್ಲೂ ಇಷ್ಟು ದಿನ ನಾವು ಜೆಡಿಎಸ್ ಪಕ್ಷವನ್ನ ಬಿಜೆಪಿಯ ಬಿ-ಟೀಂ ಅಂತಾ ಹೇಳುತ್ತಿದ್ದದ್ದು ನಿಜವಾಗಿದೆ ಅಂತಿದ್ದಾರೆ ಕಾಂಗ್ರೆಸ್ ನಾಯಕರು. ಹೀಗೆ ಜೆಡಿಎಸ್ನ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧವೇ ನಿನ್ನೆ ಕುಮಾರಸ್ವಾಮಿ ಹರಿಹಾಯ್ದಿದ್ದರು. ಹಾಗೇ ಸಿಎಂ ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ ಮಾಡಿದ್ರು.

ಅಡ್ವಾಣಿ ಮನೆಗೆ ಹೋಗಿದ್ದರಾ ಸಿದ್ದರಾಮಯ್ಯ?
ಕಾಂಗ್ರೆಸ್ ಮತ್ತು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸುವಾಗ, ಸಿದ್ದರಾಮಯ್ಯ ಬಿಜೆಪಿ ಸೇರಲು ಆಗ ಬಿಜೆಪಿ ನಾಯಕರಾಗಿದ್ದ ಎಲ್.ಕೆ. ಅಡ್ವಾಣಿ ಅವರ ಮನೆಗೆ ಹೋಗಿದ್ದ ಬಗ್ಗೆ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಹೇಳಿದ್ದಾರೆ. ಹಾಗಾದರೆ ಯಾರನ್ನು ಕರೆದುಕೊಂಡು ಬಿಜೆಪಿ ನಾಯಕರ ಮನೆ ಬಾಗಿಲಿಗೆ ಹೋಗಿದ್ದರು ಎಂಬುದನ್ನು ಸಿದ್ದರಾಮಯ್ಯ ಅವರು ಹೇಳಲಿ ಎಂದು ಸವಾಲು ಹಾಕಿದ್ದರು ಎಚ್ಡಿಕೆ. ಈ ಆರೋಪಕ್ಕೆ ಇದೀಗ ಉತ್ತರ ನೀಡಿರುವ ಸಿಎಂ ಸಿದ್ದರಾಮಯ್ಯ, ಪರೋಕ್ಷವಾಗಿ ಮಾಜಿ ಸಿಎಂಗೆ ಸವಾಲು ಎಸೆದಿದ್ದಾರೆ.
ಯಾರಾದರೂ ಈ ಮಾತು ನಂಬುತ್ತಾರಾ?
ಮೈಸೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಜೆಡಿಎಸ್ ನಾಯಕರು ಮತ್ತು ಮಾಜಿ ಸಿಎಂ ಎಚ್ಡಿಕೆ ಮಾಡಿದ ಆರೋಪಕ್ಕೆ ಉತ್ತರಿಸಿದ್ದಾರೆ. ನಾನು ಬಿಜೆಪಿ ಸೇರಲು ಹೋಗಿದ್ದೆ ಅಂತಾ ಹೇಳಿದರೆ ಯಾರಾದರೂ ನಂಬಲು ಆಗುತ್ತಾ? ನಾನು ಜಾತ್ಯಾತೀತ ಮೌಲ್ಯಗಳನ್ನು ಅನುಸರಿಸಿ ರಾಜಕೀಯ ಮಾಡಿದ್ದೇನೆ. ಹೀಗಿದ್ದಾಗ ನಾನು ಬಿಜೆಪಿಗೆ ಹೋಗಲು ಸಾಧ್ಯವಾ? ಎಂದು ಎಚ್ಡಿಕೆ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದೇನು?
ನಿನ್ನೆ ಸಿದ್ದರಾಮಯ್ಯ ವಿರುದ್ಧ & ಕಾಂಗ್ರೆಸ್ ನಾಯಕರ ವಿರುದ್ಧ ಕುಮಾರಸ್ವಾಮಿ ಅವರು ತೀವ್ರ ವಾಗ್ದಾಳಿ ನಡೆಸಿದ್ದರು. ನಮ್ಮ ನೈತಿಕತೆ ಬಗ್ಗೆ ಮಾತನಾಡುತ್ತೀರಿ. ನಮ್ಮ ಸಿದ್ಧಾಂತದ ಬಗ್ಗೆ ಪ್ರಶ್ನೆ ಮಾಡುತ್ತೀರಿ. ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆ ಚುನಾವಣೆಯಲ್ಲಿ ಗೆದ್ದು ಸಂಸತ್ತಿಗೆ ಹೋಗದಿದ್ದರೆ ನೀವು ಬಿಜೆಪಿ ಸೇರುತ್ತಿರಲಿಲ್ಲವೆ? ವಿರೋಧ ಪಕ್ಷದ ನಾಯಕನ ಸ್ಥಾನ ನೀಡಲಿಲ್ಲ ಎಂಬ ಕಾರಣಕ್ಕೆ ಬಿಜೆಪಿ ಸೇರಲು ನೀವು ಮುಂದಾಗಿದ್ದು ಎಲ್ಲರಿಗೂ ಗೊತ್ತು. ಖರ್ಗೆ ಗೆಲುವಿನಲ್ಲಿ ಜೆಡಿಎಸ್ ಪಾತ್ರವೂ ಇತ್ತು. ಇದರಿಂದ ನಿಮಗೆ ವಿಪಕ್ಷ ನಾಯಕನ ಸ್ಥಾನ ಸಿಕ್ಕಿತು ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದರು ಮಾಜಿ ಸಿಎಂ ಎಚ್ಡಿಕೆ.

ಯಡಿಯೂರಪ್ಪ ಜೊತೆ ಸಿದ್ದರಾಮಯ್ಯ ಸೇರಿ...
ಮಾಜಿ ಸಿಎಂ ಎಚ್ಡಿಕೆ ಜೊತೆ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾದ ಜಿ.ಟಿ. ದೇವೇಗೌಡ ಕೂಡ ವಾಗ್ದಾಳಿ ನಡೆಸಿದ್ದರು. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ, ಕಾಂಗ್ರೆಸ್ನಲ್ಲಿ ವಿಪಕ್ಷ ಸ್ಥಾನ ಸಿಕ್ಕಿಲ್ಲ ಅಂತ ಮುನಿಸಿಕೊಂಡ ಸಿದ್ದರಾಮಯ್ಯ ಅವರು ಬಿಜೆಪಿ ಸೇರಿ ಹಣಕಾಸು ಸಚಿವರಾಗಲು ಹೊರಟಿದ್ದರು ಎಂದು ಆರೋಪಿಸಿದ್ದರು. ಹೀಗೆ ನಿನ್ನೆ ನಡೆದಿದ್ದ ಜೆಡಿಎಸ್ ಸಭೆಯಲ್ಲಿ ಸಿದ್ದರಾಮಯ್ಯ ವಿರುದ್ಧ ದಳಪತಿಗಳು ವಾಗ್ಬಾಣ ಬಿಟ್ಟಿದ್ದರು.
ಒಟ್ನಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಮತ್ತೊಂದು ಸುತ್ತಿನ ಮಾತಿನ ಮಹಾಯುದ್ಧ ಶುರುವಾಗಿದೆ. ಈ ಬಾರಿ ಸಿಎಂ ಸಿದ್ದರಾಮಯ್ಯ & ಮಾಜಿ ಸಿಎಂ ಕುಮಾರಸ್ವಾಮಿ ಅವರ ನಡುವೆ ನೇರವಾಗಿ ಯುದ್ಧ ಆರಂಭವಾಗಿದೆ. ಆದ್ರೆ ಇದೆಲ್ಲಾ ಎಲ್ಲಿಗೆ ಬಂದು ನಿಲ್ಲುತ್ತೆ? ಈ ಪ್ರಶ್ನೆಗೆ ಉತ್ತರವನ್ನು ಕಾದು ನೋಡಬೇಕು ಅಷ್ಟೇ. ಯಾಕಂದ್ರೆ ಮುಂದಿನ ಲೋಕಸಭೆಯ ತನಕ ಈ ಮಾತಿನ ಯುದ್ಧ ನಿಲ್ಲುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ.












Click it and Unblock the Notifications