CM Bommai On Jagadish Shettar Resignation: 'ಶೆಟ್ಟರ್ ರಾಜೀನಾಮೆ ವಿಚಾರ ನೋವು ತಂದಿದೆ' ಬೊಮ್ಮಾಯಿ
ಹುಬ್ಬಳ್ಳಿ ಏಪ್ರಿಲ್ 16: ಶೆಟ್ಟರ್ ರಾಜೀನಾಮೆ ವಿಚಾರ ನನಗೆ ನೋವು ತಂದಿದೆ. ಉನ್ನತ ಹುದ್ದೆ ನೀಡುತ್ತೇವೆ ಎಂದು ನಾವು ಹೇಳಿದ್ದೆವು. ಆದರೇ ಅವರು ಅದನ್ನು ಒಪ್ಪಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, 'ಶೆಟ್ಟರ್ ರಾಜೀನಾಮೆ ವಿಚಾರ ಬಹಳ ಕಸಿವಿಸಿಯಾಗಿದೆ. ಇದಕ್ಕಿಂತ ದೊಡ್ಡ ಹುದ್ದೆಯನ್ನು ನಾವು ಕೊಡುತ್ತೇವೆ ಎಂದು ನಡ್ಡಾ ಅವರು ಹೇಳಿದ್ದರು. ಜೊತೆಗೆ ಶೆಟ್ಟರ್ ಅವರು ಹೇಳಿದವರಿಗೆ ಟಿಕೆಟ್ ಕೊಡಲು ನಾವು ಭರವಸೆ ನೀಡಿದ್ದೆವು. ಅದಾಗಿಯೂ ಅವರು ರಾಜೀನಾಮೆ ನೀಡಲು ಮುಂದಾಗಿದ್ದಾರೆ' ಎಂದು ಬೊಮ್ಮಾಯಿ ಬೇಸರ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಲಕ್ಷ್ಮಣ ಸವದಿ ಬಿಜೆಪಿಗೆ ರಾಜೀನಾಮೆ ನೀಡುವ ಮೂಲಕ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಇಂದು ಜಗದೀಶ್ ಶೆಟ್ಟರ್, ಓಲೇಕಾರ್, ಅಖಂಡ ಶ್ರೀನಿವಾಸ ಮೂರ್ತಿ ಅವರು ಸ್ಪೀಕರ್ ಕಾಗೇರಿ ಅವರಿಗೆ ರಾಜೀನಾಮೆ ಸಲ್ಲಿಸಿದರು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಭಾರತೀಯ ಜನತಾ ಪಕ್ಷಕ್ಕೆ ಶಿರಸಿಯಲ್ಲಿ ಇಂದು ರಾಜೀನಾಮೆ ನೀಡಿದರು. ವಾಸ್ತವವಾಗಿ ಕರ್ನಾಟಕ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಜಗದೀಶ್ ಶೆಟ್ಟರ್ ಹೆಸರು ಇರಲಿಲ್ಲ. ಇದರಿಂದ ಕೋಪಗೊಂಡ ಶೆಟ್ಟರ್ ಇಂದು ರಾಜೀನಾಮೆ ನೀಡಿದರು. ಇನ್ನೂ ಓಲೇಕಾರ್, ಅಖಂಡ ಶ್ರೀನಿವಾಸ ಇದೇ ಕಾರಣದಿಂದಾಗಿ ರಾಜೀನಾಮೆ ನೀಡಿದ್ದಾರೆ.

ಶಿರಸಿಯಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ಹಾಗೂ ಬಿಜೆಪಿ ಪಕ್ಷಕ್ಕೆ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಜಗದೀಶ್ ಶೆಟ್ಟರ್ ರಾಜೀನಾಮೆ ನೀಡಿದರು. ರಾಜೀನಾಮೆ ಸಲ್ಲಿಸಿದ ನಂತರ ಹುಬ್ಬಳಿಗೆ ಪ್ರಯಾಣ ಮಾಡಲಿದ್ದಾರೆ. ಹುಬ್ಬಳ್ಳಿ ನಿವಾಸದಲ್ಲಿ ಮಹತ್ವದ ಸಭೆ ನಡೆಸಲಿದ್ದಾರೆ. ಬಳಿಕ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಕಾಂಗ್ರೆಸ್ ಆಪ್ತರೊಂದಿಗೆ ವಿಶೇಷ ವಿಮಾನದಲ್ಲಿ ಪ್ರಯಾಣ ಬೆಳಸಲಿದ್ದಾರೆ. ಇದರಿಂದ ಜಗದೀಶ್ ಶೆಟ್ಟರ್ ಮುಂದಿನ ನಡೆ ಏನು ಎನ್ನುವ ಕುತೂಹಲ ಮೂಡಿಸಿದೆ. ಈ ಎಲ್ಲಾ ಬೆಳವಣಿಗಳನ್ನು ನೋಡಿದರೆ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರುವ ಸಾಧ್ಯತೆಗಳು ದಟ್ಟವಾಗಿವೆ.

ಈಗಾಗಲೇ ಧರ್ಮೇಂದ್ರ ಪ್ರಧಾನ್, ಪ್ರಲ್ಹಾದ್ ಜೋಶಿ, ಸಿಎಂ ಬಸವರಾಜ ಬೊಮ್ಮಾಯಿ ಅವರು ಜಗದೀಶ್ ಶೆಟ್ಟರ್ ಮನ ಒಲಿಸುವ ಸಂಧಾನ ಸಭೆ ವಿಫಲವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಜಗದೀಶ್ ಶೆಟ್ಟರ್ ವಿರೋಧ ಪಕ್ಷದ ನಾಯಕರಾಗಿದ್ದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪಟ್ಟು ಹಿಡಿದ ಶೆಟ್ಟರ್ಗೆ ಬಿಜೆಪಿ ಟಿಕೆಟ್ ನಿರಾಕರಿಸಿದ್ದಕ್ಕೆ ಕೋಪಕೊಂಡು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ನನ್ನ ಕುಟುಂಬದವರು ಚುನಾವಣೆಗೆ ಸ್ಪರ್ಧಿಸಬಹುದು, ನನಗೆ ಮಹತ್ವದ ಜವಾಬ್ದಾರಿ ನೀಡಲಾಗುವುದು ಎಂದು ಬಿಜೆಪಿ ಹೈಕಮಾಂಡ್ ನನ್ನ ಬಳಿ ಪ್ರಸ್ತಾಪಿಸಿತ್ತು ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಆದರೆ ನಾನು ಪ್ರಸ್ತಾಪವನ್ನು ನಿರಾಕರಿಸಿದೆ ಎಂದಿದ್ದಾರೆ.
ಭಾರತೀಯ ಜನತಾ ಪಕ್ಷಕ್ಕೆ ಅವರು ನೀಡಿದ ಕೊಡುಗೆಯನ್ನು ಉಲ್ಲೇಖಿಸಿದ ಶೆಟ್ಟರ್, "ನಾನು ಅವಮಾನಕ್ಕೊಳಗಾದ ರೀತಿಯಿಂದ ನನಗೆ ದುಃಖವಾಗಿದೆ, ನಾನು ಈ ಜನರಿಗೆ(ಬಿಜೆಪಿ) ಸವಾಲು ಹಾಕಬೇಕು ಎಂದು ಭಾವಿಸಿದೆ" ಎಂದು ಹೇಳಿದ್ದಾರೆ. ಹಾಗಾಗಿ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ಶೆಟ್ಟರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಲಿಂಗಾಯತ ಮುಖಂಡ ಶೆಟ್ಟರ್ ಮಾತನಾಡಿ, ರಣತಂತ್ರ ರೂಪಿಸಿ ನನ್ನ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ. ನಾನು ಹಠವಾದಿ, ಹಠಮಾರಿ ಅಲ್ಲ. ಆದರೆ ಈ ಬಾರಿ ಪಕ್ಷ ಮುಜುಗರಕ್ಕೀಡು ಮಾಡಿದ್ದರಿಂದ ಹಠ ಹಿಡಿದಿದ್ದೇನೆ. ಈ ಜನರಿಗೆ (ಬಿಜೆಪಿ ಹೈಕಮಾಂಡ್) ನಾನು ಹೇಳಲು ಪ್ರಯತ್ನಿಸುತ್ತಿರುವುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ನಾನು ಸ್ಪರ್ಧೆ ಮಾಡೇ ಮಾಡುತ್ತೇನೆ ಎಂದು ಶೆಟ್ಟರ್ ಹೇಳಿದ್ದಾರೆ.
ಈ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಯಾವಾಗಲೂ ಹೇಳುತ್ತಿದ್ದೆ, ಇಂದು ನನಗೆ ಬೇಸರವಾಗಿದೆ ಹಾಗಾಗಿ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿದ್ದೇನೆ ಎಂದು ಶೆಟ್ಟರ್ ಹೇಳಿದರು. ಭಾರದ ಮನಸ್ಸಿನಿಂದ ಸ್ಪೀಕರ್ ಅವರನ್ನು ಭೇಟಿ ಮಾಡುತ್ತೇನೆ, ಪಕ್ಷ ಬಿಟ್ಟಿದ್ದೇನೆ. ಆದರೆ ನಾನು ಈ ಚುನಾವಣೆಯಲ್ಲಿ ಸ್ಪರ್ಧಿ ಮಾಡುವುದು ಖಚಿತ ಎಂದಿದ್ದಾರೆ.
ರಾಜ್ಯ ಚುನಾವಣೆಗೆ ಬಿಜೆಪಿ ಎರಡು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎರಡು ಪಟ್ಟಿಗಳಲ್ಲಿ 212 ಅಭ್ಯರ್ಥಿಗಳನ್ನು ಘೋಷಿಸಲಾಗಿದ್ದು, 12 ಅಭ್ಯರ್ಥಿಗಳ ಹೆಸರನ್ನು ಇನ್ನೂ ಪ್ರಕಟಿಸಬೇಕಾಗಿದೆ. ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಘೋಷಿಸಲಾಗಿದೆ. ರಾಜ್ಯದ ಎಲ್ಲಾ 224 ಸ್ಥಾನಗಳಿಗೆ ಮೇ 10 ರಂದು ಮತದಾನ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.












Click it and Unblock the Notifications