BY Vijayendra: ಬಾಂಬ್ ಸ್ಫೋಟ ಘಟನೆ ಮತ್ತೆ ಮರುಕಳಿಸಿದರೆ ಅದಕ್ಕೆ ಕಾಂಗ್ರೆಸ್ ಸರ್ಕಾರವೇ ಹೊಣೆ!
ಬೆಂಗಳೂರು, ಮೇ. 25: ಈ ವರ್ಷದ ಮಾರ್ಚ್ 1 ರಂದು ರಾಮೇಶ್ವರಂ ಕೆಫೆ ಕುಂದಲಹಳ್ಳಿ ಶಾಖೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಎನ್ಐಎ ಆರೋಪಿಗಳನ್ನು ಬಂಧಿಸುತ್ತಲೇ ಇದೆ. ಈಗಾಗಲೇ ಸ್ಫೋಟದ ಐದನೇ ಆರೋಪಿಯನ್ನು ಹುಬ್ಬಳ್ಳಿಯಲ್ಲಿ ಬಂಧಿಸಲಾಗಿದೆ. ಇದನ್ನು ಉಲ್ಲೇಖಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ರಾಜ್ಯ ಸರ್ಕಾರ ಮತ್ತು ಕಾನೂನು ಸುವ್ಯವಸ್ಥೆ ಬಗ್ಗೆ ಟೀಕಿಸಿದ್ದಾರೆ.
"ಕರ್ನಾಟಕ ಕ್ರಿಮಿನಲ್ ಹಾಗೂ ಭಯೋತ್ಪಾದಕರಿಗೆ ಆಶ್ರಯ ತಾಣವಾಗಿರುವುದು ಹಾಗೂ ಕಾನೂನು ಸುವ್ಯವಸ್ಥೆ ಕುಸಿದಿರುವುದು, ರಾಜ್ಯದಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ಕೊಲೆ ಹಾಗೂ ದೌರ್ಜನ್ಯದ ಘಟನೆಗಳು ಒಂದೆಡೆ ಸಾಕ್ಷೀಕರಿಸಿದರೆ, ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಎನ್.ಐ.ಎ ಯಿಂದ ಬಂಧಿತರಾಗುತ್ತಿರುವ ಭಯೋತ್ಪಾದಕರ ಹಿನ್ನೆಲೆಯನ್ನು ಗಮನಿಸಿದರೆ 'ಕರ್ನಾಟಕ ಭಯೋತ್ಪಾದಕರಿಗೆ ಆಶ್ರಯ ತಾಣವಾಗಿದೆ' ಎಂಬ ಕರ್ನಾಟಕ ಬಿಜೆಪಿ ಆರೋಪದಲ್ಲಿ ಹುರುಳಿದೆ ಎನ್ನುವುದನ್ನು ಬಿಂಬಿಸುತ್ತಿದೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.

ಉಗ್ರ ಚಟುವಟಿಕೆಗೆ ದೊಡ್ಡ ಮೊತ್ತದ ಬಂಡವಾಳ!
"ಬಂಧಿತರಾಗುತ್ತಿರುವವರೆಲ್ಲರೂ ಮುಸ್ಲಿ ಮೂಲಭೂತವಾದಿ ಹಿನ್ನಲೆಯ ಅಂತರಾಷ್ಟ್ರೀಯ ಭಯೋತ್ಪಾದನಾ ಚಟುವಟಿಕೆಯೊಂದಿಗೆ ನಂಟು ಬೆಳೆಸಿಕೊಂಡವರಾಗಿದ್ದಾರೆ, ಇವರ ಉಗ್ರ ಚಟುವಟಿಕೆಗೆ ದೊಡ್ಡ ಮೊತ್ತದ ಬಂಡವಾಳವೂ ಹರಿದು ಬಂದಿರುವುದೂ ಸ್ಪಷ್ಟವಾಗಿದೆ, ಬೃಹತ್ ಬೆಂಗಳೂರನ್ನು ಕೇಂದ್ರೀಕರಿಸಿಕೊಂಡು ರಾಜ್ಯದ ವಿವಿಧ ಸ್ಥಳಗಳಲ್ಲಿ ವಿಧ್ವಂಸಕ ಕೃತ್ಯ ಎಸಗಲು ಯೋಜನೆ ರೂಪಿಸಿದ್ದ ಸತ್ಯವೂ ಹೊರಬಂದಿದೆ" ಎಂದು ಆರೋಪಿಸಿದ್ದಾರೆ.
"ಈ ಹಿನ್ನಲೆಯಲ್ಲಿ ರಾಮೇಶ್ವರಂ ಕೆಫೆಯಲ್ಲಿ ನಡೆದ ಆಘಾತಕಾರಿ ಬಾಂಬ್ ಬ್ಲಾಸ್ಟ್ ಘಟನೆ ಮತ್ತೆ ತಲೆ ಎತ್ತುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಇದರಿಂದ ರಾಜ್ಯದ ಜನತೆ ತೀವ್ರ ಆತಂಕಕ್ಕೆ ಒಳಗಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲಿ? ಯಾವಾಗ ಏನಾಗುತ್ತದೋ? ಯಾವ ದುಷ್ಕೃತ್ಯ, ಏನು ಅವಘಡ ಸೃಷ್ಠಿಸುತ್ತದೋ ? ಎಂಬ ದಿಗಿಲು ಜನರನ್ನು ಬಾಧಿಸುತ್ತಿದೆ" ಎಂದು ಹೇಳಿದ್ದಾರೆ.
"ಎನ್.ಐ.ಎ ದಾಳಿಯ ಪರಿಣಾಮದಿಂದ ಬಿಲದೊಳಗೆ ಅಡಗಿರುವ ಉಗ್ರ ಶಕ್ತಿಗಳು ಹೊರ ಬರುತ್ತಿವೆ. ಆದರೆ ರಾಜ್ಯ ಸರ್ಕಾರ ಮಾತ್ರ ಈ ನಿಟ್ಟಿನಲ್ಲಿ ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳುವ ಹೆಜ್ಜೆಯನ್ನಿಡುವ ಲಕ್ಷಣಗಳು ಕಾಣುತ್ತಿಲ್ಲ. ಸದ್ಯ ಈ ಕ್ಷಣಕ್ಕಾದರೂ ನಿಷ್ಕ್ರೀಯಗೊಂಡಿರುವ ಗುಪ್ತಚರ ಇಲಾಖೆಗೆ ಚಿಕಿತ್ಸೆ ನೀಡಿ ಸಾಧ್ಯವಿರುವ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಿ" ಎಂದಿದ್ದಾರೆ.
"ಕರ್ನಾಟಕದ ಸುರಕ್ಷತೆ ಹಾಗೂ ನಾಗರೀಕರ ಅಮೂಲ್ಯ ಜೀವಗಳನ್ನು ಕಾಪಾಡುವ ದೃಷ್ಟಿಯಿಂದ ಕ್ರಮ ತೆಗೆದುಕೊಳ್ಳಲಿ ಎಂದು ಒತ್ತಾಯಿಸುವೆ, ಉಗ್ರ ನಿಗ್ರಹಕ್ಕೆ ವಿಶೇಷ ತಂಡ ರಚಿಸಲಿ, ಜತೆಗೇ ಜನರಲ್ಲಿನ ಆತಂಕ ದೂರಾಗಿಸಲು ಅಭಯ ತುಂಬುವ ಹೆಜ್ಜೆಗಳನ್ನಿಡಲಿ" ಎಂದು ಕಾಂಗ್ರೆಸ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.












Click it and Unblock the Notifications