Breaking: ಸಂಪುಟ ವಿಸ್ತರಣೆ: ನವೆಂಬರ್ ಮೊದಲ ವಾರದಲ್ಲಿ 6 ಸ್ಥಾನ ಭರ್ತಿ
ಬೆಂಗಳೂರು, ಅಕ್ಟೋಬರ್ 24: ಕರ್ನಾಟಕ ರಾಜ್ಯ ಸಚಿವ ಸಂಪುಟದಲ್ಲಿ ವಿಸ್ತರಣೆಗೆ ಕೇಂದ್ರ ಬಿಜೆಪಿ ಹೈಕಮಾಂಡ್ ಒಪ್ಪಿಗೆ ನೀಡಿದೆ. ನವೆಂಬರ್ ಮೊದಲ ವಾರದಲ್ಲೇ ಸಂಪುಟದಲ್ಲಿ ಖಾಲಿ ಇರುವ ಆರು ಸ್ಥಾನಗಳು ಭರ್ತಿ ಆಗುವ ಸಾಧ್ಯತೆ ಇದೆ.
ರಾಜ್ಯದ ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳ ಭರ್ತಿ ವಿಚಾರ ಹಲವು ಭಾರಿ ಚರ್ಚೆಗೆ ಬಂದಿತ್ತು. ವಿವಿಧ ಕಾರಣಗಳಿಂದ ವಿಸ್ತರಣೆ ಸಾಧ್ಯವಾಗಿರಲಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿರಂತರ ಕಸರತ್ತಿನ ನಂತರ ಇದೀಗ ಕೇಂದ್ರ ಬಿಜೆಪಿ ವರಿಷ್ಠರು ಒಪ್ಪಿಗೆ ನೀಡಿದ್ದಾರೆ. ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟ ಸೇರಲು ಹಲವರು ಮಂತ್ರಿಗಿರಿ ರೇಸ್ನಲ್ಲಿದ್ದಾರೆ. ಅವರಿಗೆ ಕೇಂದ್ರದ ನಿರ್ಧಾರ ಸಮಾಧಾನ ತಂದಿದೆ.
ಸದ್ಯ ಸಂಪುಟದಲ್ಲಿ ಖಾಲಿ ಇರುವ ಆರು ಸ್ಥಾನಗಳ ತುಂಬುವ ಹೊಣೆ ಮುಖ್ಯಮಂತ್ರಿಗಳ ಮೇಲಿದೆ. ಮಂತ್ರಿಸ್ಥಾನ ಆಕಾಂಕ್ಷಿಗಳ ಪಟ್ಟಿಯಲ್ಲಿ ಯಾರು ಯಾರಿಗೆ ಸ್ಥಾನ ಸಿಗಲಿದೆ ಎನ್ನುವುದೇ ಭಾರಿ ಕುತೂಹಲ ಮೂಡಿಸಿದೆ.

ಮಂತ್ರಿಗಿರಿ ಆಕಾಂಕ್ಷಿ ಪಟ್ಟಿಯಲ್ಲಿ ಯಾರಿದ್ದಾರೆ?
ಕುರುಬ ಸಮುದಾಯದಿಂದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ವಲಸಿಗ ಹಾಗೂ ಎಸ್.ಟಿ.ಕೋಟದಲ್ಲಿ ರಮೇಶ್ ಜಾರಕಿಹೊಳಿ ಇದ್ದಾರೆ. ಈ ಇಬ್ಬರು ಪ್ರತ್ಯೇಕ ಪ್ರಕರಣಗಳಲ್ಲಿ ಸಿಲುಕಿ ತಮ್ಮ ಮಂತ್ರಿಗಿರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಇನ್ನು ಹಳೇ ಮೈಸೂರು ಭಾಗದಿಂದ ಒಕ್ಕಲಿಗ ಕೋಟಾದಡಿ ಸಿ.ಪಿ.ಯೋಗೇಶ್ವರ್, ಮಹಿಳೆ ಮತ್ತು ಯಾದವ ಸಮುದಾಯದ ಪೂರ್ಣಿಮಾ ಶ್ರೀನಿವಾಸ್, ಕಲ್ಯಾಣ ಕರ್ನಾ ಟಕ ಭಾಗ ಮತ್ತು ಎಸ್.ಟಿ ಕೋಟಾದ ನರಸಿಂಹ ನಾಯಕ ರಾಜೂಗೌಡ, ಮಧ್ಯ ಕರ್ನಾಟಕದ ಲಿಂಗಾಯತ ಕೋಟಾದ ನಾಯಕ ಎಂ.ಪಿ ರೇಣುಕಾಚಾರ್ಯ ಅವರು ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ.
ಆರೋಪ ಮುಕ್ತವಾದ ನಂತರ ಕೆ.ಎಸ್ ಈಶ್ವರಪ್ಪ ಅವರು ತಮಗೆ ಸಚಿವಸ್ಥಾನ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ. ಸಚಿವನಾಗಿ ಮಾಡದಿದ್ದರೆ ವಿಪಕ್ಷ ಕಾಂಗ್ರೆಸ್ ಹಾಗೂ ರಾಜ್ಯದ ಜನರ ದೃಷ್ಟಿಯಲ್ಲಿ ಶಾಶ್ವತವಾಗಿ ಆರೋಪಿಯಾಗಿ ಕಾಣುತ್ತೇನೆ. ಕಾಂಗ್ರೆಸ್ ನಲ್ಲಿ ಕೆ.ಜೆ.ಜಾರ್ಜ್ ನಿರಪರಾಧಿ ಎಂದು ಸಾಬೀತಾದ ಕೂಡಲೇ ಪುನಃ ಸಂಪುಟಕ್ಕೆ ಸೇರ್ಪಡೆಮಾಡಿಕೊಳ್ಳಳಾಗಿತ್ತು ಎಂದು ಅವರು ತಿಳಿಸಿದ್ದಾರೆ.

2023ಕ್ಕೆ ಚುನಾವಣಾ ರಾಜಕೀಯ ಅಂತ್ಯವಾಗಲಿದ್ದು, ಪಕ್ಷಕ್ಕಾಗಿ ದುಡಿದಿದ್ದೇನೆ. ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ಹೈಕಮಾಂಡ್ ಮತ್ತು ಮುಖ್ಯಮಂತ್ರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಹೀಗಾಗಿ ಅವರು ಸಂಪುಟ ಸೇರುವ ಸಾಧ್ಯತೆ ಇದೆ. ಅದೇ ರೀತಿ ಸರ್ಕಾರ ರಚನೆಗೆ ಪ್ರಮುಖ ಪಾತ್ರವಹಿಸಿದ ಕಾಂಗ್ರೆಸ್ನಿಂದ ವಲಸೆ ಬಂದ ರಮೇಶ್ ಜಾರಕಿಹೊಳಿ ಅವರು ಸಹ ಸಂಪುಟ ಸೇರಬಹುದು ಎನ್ನಲಾಗುತ್ತಿದೆ.












Click it and Unblock the Notifications