ಹೈಕಮಾಂಡ್ ಸಂದೇಶ; ಯಡಿಯೂರಪ್ಪ ಸೈಡ್ಲೈನ್ ಮಾಡಿಲ್ಲ!
ಬೆಂಗಳೂರು, ಆಗಸ್ಟ್ 17; ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕರ್ನಾಟಕ ಬಿಜೆಪಿಯಲ್ಲಿ ಸೈಡ್ಲೈನ್ ಆಗಿಲ್ಲ. 2021ರ ಜುಲೈ 26ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಯಡಿಯೂರಪ್ಪಗೆ ಪಕ್ಷದ ಹೈಕಮಾಂಡ್ ಮಹತ್ವದ ಜವಾಬ್ದಾರಿ ನೀಡಿದೆ.
ಬುಧವಾರ ಬಿಜೆಪಿ ಸಂಘಟನಾತ್ಮಕವಾಗಿ ಕೆಲವು ಬದಲಾವಣೆ ಮಾಡಿದೆ. ಪಕ್ಷದಲ್ಲಿನ ಪ್ರಮುಖ ತೀರ್ಮಾನ ಕೈಗೊಳ್ಳುವ ಸಮಿತಿಯಾದ ಸಂಸದೀಯ ಮಂಡಳಿ ಪುನಾರಚನೆ ಮಾಡಲಾಗಿದೆ. ಹಲವು ಹೊಸ ಮುಖಗಳನ್ನು ಸಮಿತಿಗೆ ಸೇರಿಸಿಕೊಳ್ಳಲಾಗಿದೆ.
ಕರ್ನಾಟಕದ ಮಾಜಿ ಮುಖ್ಯಮಂತ್ರಿ 77 ವರ್ಷದ ಬಿ. ಎಸ್. ಯಡಿಯೂರಪ್ಪರನ್ನು ಸಂಸದೀಯ ಮಂಡಳಿಗೆ ಸದಸ್ಯರಾಗಿ ಸೇರಿಸಿಕೊಳ್ಳಲಾಗಿದೆ. ಈ ಮೂಲಕ ಕರ್ನಾಟಕ ಬಿಜೆಪಿಯಲ್ಲಿ ಯಡಿಯೂರಪ್ಪರನ್ನು ಸೈಡ್ಲೈನ್ ಮಾಡಿಲ್ಲ ಎಂದು ಹೈಕಮಾಂಡ್ ನಾಯಕರು ಸ್ಪಷ್ಟ ಸಂದೇಶ ನೀಡಿದ್ದಾರೆ.
ಯಡಿಯೂರಪ್ಪ ರಾಜೀನಾಮೆ ಬಳಿಕ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದರು. ಆದರೆ ಹೈಕಮಾಂಡ್ ನಾಯಕರ ನಿರೀಕ್ಷೆ ಮಟ್ಟಿಗೆ ರಾಜ್ಯದಲ್ಲಿ ಸರ್ಕಾರ ವೇಗವಾಗಿ ಕೆಲಸ ಮಾಡುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಇಂತಹ ಸಂದರ್ಭದಲ್ಲಿಯೇ ಯಡಿಯೂರಪ್ಪಗೆ ಮಹತ್ವದ ಜವಾಬ್ದಾರಿ ಕೊಡಲಾಗಿದೆ.

ಪ್ರಭಾವಿ ನಾಯಕನಿಗೆ ಪ್ರಮುಖ ಹುದ್ದೆ
ಅಧಿಕಾರ ಇರಲಿ, ಇಲ್ಲದಿರಲಿ ಬಿ. ಎಸ್. ಯಡಿಯೂರಪ್ಪ ಕರ್ನಾಟಕದ ಪ್ರಭಾವಿ ನಾಯಕ. ರಾಜ್ಯದ ಪ್ರಭಾವಿ ಲಿಂಗಾಯತ ಸಮುದಾಯಕ್ಕೆ ಸೇರಿದ ಯಡಿಯೂರಪ್ಪ ಚುನಾವಣೆಯಲ್ಲಿ ಮತಗಳನ್ನು ತರುವ ನಾಯಕರು ಎಂಬುದನ್ನು ಯಾರೂ ಸಹ ಅಲ್ಲಗಳೆಯುವಂತಿಲ್ಲ. ಆದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಯಡಿಯೂರಪ್ಪರನ್ನು ಕಡೆಗಣಿಸಲಾಗಿದೆ ಎಂಬ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತಿದ್ದವು. ಇದನ್ನು ಹೈಕಮಾಂಡ್ ಅಲ್ಲಗಳೆಯುತ್ತಲೇ ಬಂದಿತ್ತು. ಈಗ ಸಂಸದೀಯ ಮಂಡಳಿಗೆ ಆಯ್ಕೆ ಮಾಡುವ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಯಡಿಯೂರಪ್ಪ ಕರೆಸಿಕೊಳ್ಳಲಾಗಿದೆ.

ರಾಜ್ಯ ಪ್ರವಾಸ ಹೊರಟಿರುವ ಯಡಿಯೂರಪ್ಪ
ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮಾಡಿದ ಮೊದಲ ಘೋಷಣೆಯೇ ರಾಜ್ಯ ಪ್ರವಾಸ ಮಾಡುತ್ತೇನೆ ಎಂಬುದು. ಆದರೆ ಹಲವು ಕಾರಣದಿಂದ ರಾಜ್ಯ ಪ್ರವಾಸ ಮುಂದೂಡುತ್ತಲೇ ಬಂದರು. ಈಗ ಆಗಸ್ಟ್ 28ರಿಂದ ರಾಜ್ಯ ಪ್ರವಾಸ ಹೊರಡುತ್ತೇನೆ ಎಂದು ಯಡಿಯೂರಪ್ಪ ದಿನಾಂಕ ನಿಗದಿ ಮಾಡಿದ್ದರು. ಇಂತಹ ಸಂದರ್ಭದಲ್ಲಿಯೇ ಅವರನ್ನು ಸಂಸದೀಯ ಮಂಡಳಿಗೆ ಆಯ್ಕೆ ಮಾಡುವ ಮೂಲಕ ಹೈಕಮಾಂಡ್ ಬಂಪರ್ ಕೊಡುಗೆ ನೀಡಿದೆ.

ಸರ್ಕಾರದ ವರ್ಚಸ್ಸು ಬೆಳೆಸಲು ಸಹಕಾರಿ
ಹಿಜಾಬ್ ವಿವಾದ, ಹಿಂದೂ ಸಂಘಟನೆಗಳ ಕಾರ್ಯಕರ್ತರ ಕೊಲೆ, ಸಚಿವರ ಹೇಳಿಕೆ, ಸಚಿವರ ಕಾರ್ಯ ನಿರ್ವಹಣೆ ಮುಂತಾದ ವಿಚಾರಗಳಿಂದ ಕರ್ನಾಟಕ ಸರ್ಕಾರ, ಪಕ್ಷದ ವರ್ಚಸ್ಸು ಕುಸಿಯುತ್ತಿದೆ. ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಮತ್ತು ಪಕ್ಷಕ್ಕೆ ಶಕ್ತಿ ತುಂಬುವುದು ಹೈಕಮಾಂಡ್ ಪಾಲಿಗೆ ಅನಿವಾರ್ಯವಾಗಿದೆ. ಆದ್ದರಿಂದ ರಾಜ್ಯದ ಪ್ರಭಾವಿ ನಾಯಕನಿಗೆ ಹೈಕಮಾಂಡ್ ಪಕ್ಷದ ಪ್ರಮುಖ ಸಮಿತಿಯಲ್ಲಿ ಸ್ಥಾನ ನೀಡಿದೆ.

ಕಾಂಗ್ರೆಸ್ಗೆ ಹಿನ್ನಡೆಯಾಗಲಿದೆಯೇ?
2023ರ ಮಾರ್ಚ್ ಬಳಿಕ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. 150 ಸ್ಥಾನಗಳಲ್ಲಿ ಗೆದ್ದು ಮತ್ತೆ ಅಧಿಕಾರ ಹಿಡಿಯಬೇಕು ಎಂಬುದು ಬಿಜೆಪಿಯ ಗುರಿ. ಆದರೆ ಚುನಾವಣಾ ಸಿದ್ಧತೆಯಲ್ಲಿ ಪ್ರತಿಪಕ್ಷವಾದ ಕಾಂಗ್ರೆಸ್ ಹಿಂದೆ ಬಿದ್ದಿಲ್ಲ. ಕಾಂಗ್ರೆಸ್ ನಾಯಕರನ್ನು ಎದುರಿಸುವ ಭಾಗವಾಗಿಯೇ ಯಡಿಯೂರಪ್ಪಗೆ ಮಹತ್ವದ ಹುದ್ದೆ ನೀಡಲಾಗಿದೆ. ಇದು ಕಾಂಗ್ರೆಸ್ಗೆ ಹಿನ್ನಡೆ ಉಂಟು ಮಾಡಲಿದೆಯೇ? ಎಂದು ಕಾದು ನೋಡಬೇಕಿದೆ.
Recommended Video

ಹೈಕಮಾಂಡ್ಗೆ ಗೊತ್ತು ಪ್ರಭಾವ
ಬಿ. ಎಸ್. ಯಡಿಯೂರಪ್ಪ ಪ್ರಭಾವ ಹೈಕಮಾಂಡ್ ನಾಯಕರಿಗೂ ಗೊತ್ತು. ಕೆಲವು ದಿನಗಳ ಹಿಂದೆ ಬೆಂಗಳೂರಿಗೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ, ಬಿಜೆಪಿಯ ಪ್ರಭಾವಿ ನಾಯಕ ಅಮಿತ್ ಶಾ ಯಡಿಯೂರಪ್ಪರನ್ನು ಕರೆಸಿಕೊಂಡು ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದರು. ರಾಜ್ಯ ರಾಜಕೀಯದ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದ್ದರು. ಈಗ ಚುನಾವಣೆ ಎದುರಿರುವಾಗ ಯಡಿಯೂರಪ್ಪಗೆ ಮಹತ್ವದ ಹೊಣೆ ನೀಡುವ ಮೂಲಕ ಹೈಕಮಾಂಡ್ ರಾಜ್ಯ ರಾಜಕೀಯದತ್ತ ಗಮನಹರಿಸಿದೆ.












Click it and Unblock the Notifications