ಕರ್ನಾಟಕದಿಂದ ಹಜ್ ಯಾತ್ರೆಗೆ 5ಸಾವಿರ ಯಾತ್ರಿಕರು
ಬೆಂಗಳೂರು, ಆ.21 : ಈ ಬಾರಿ ಕರ್ನಾಟಕದಿಂದ 5,024 ಯಾತ್ರಾರ್ಥಿಗಳು ಹಜ್ಯಾತ್ರೆಗೆ ತೆರಳಲಿದ್ದಾರೆ ಎಂದು ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಜ್ ಸಚಿವ ಆರ್. ರೋಷನ್ ಬೇಗ್ ಹೇಳಿದ್ದಾರೆ. ಆಗಸ್ಟ್ 27 ರಂದು ಮಂಗಳೂರಿನಿಂದ ಹಾಗೂ ಸೆಪ್ಟೆಂಬರ್ 12 ರಂದು ಬೆಂಗಳೂರಿನಿಂದ ಯಾತ್ರೆ ಆರಂಭವಾಗಲಿದೆ.
ಬುಧವಾರ ವಿಧಾನಸೌಧದಲ್ಲಿ ಹಜ್ಯಾತ್ರೆಯ ಸಿದ್ಧತೆಗಳ ಕುರಿತು ಸಭೆ ನಡೆಸಿದ ಬಳಿಕ ಮಾತನಾಡಿದ ರೋಷನ್ ಬೇಗ್, ಬೆಂಗಳೂರಿನಿಂದ ಆರಂಭವಾಗುವ ಹಜ್ ಯಾತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆಪ್ಟೆಂಬರ್ 12 ರಂದು ಚಾಲನೆ ನೀಡಲಿದ್ದಾರೆ ಎಂದು ಹೇಳಿದರು. ಬೆಂಗಳೂರು, ಮಂಗಳೂರು, ಗೋವಾ ಹಾಗೂ ಹೈದರಾಬಾದ್ ವಿಮಾನ ನಿಲ್ದಾಣಗಳಿಂದ ರಾಜ್ಯದ ಯಾತ್ರಿಗಳು ತೆರಳಲಿದ್ದಾರೆ.

ಯಾತ್ರೆಗೆ ತೆರಳುವ ಎಲ್ಲರಿಗೂ ಪೂರ್ವಭಾವಿ ತರಬೇತಿ ಶಿಬಿರಗಳನ್ನು ರಾಜ್ಯದ ಹಲವು ಜಿಲ್ಲೆಗಳಲ್ಲಿ ನಡೆಸಿ, ಯಾತ್ರೆ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಮಾರ್ಗದರ್ಶನ ನೀಡಲಾಗಿದೆ ಎಂದು ಮಾಹಿತಿ ನೀಡಿದ ಸಚಿವರು, ಎಬೋಲಾ ಸೋಂಕಿನ ಬಗ್ಗೆ ಎಚ್ಚರಿಕೆ ವಹಿಸುವಂತೆ ಯಾತ್ರಿಗಳಿಗೆ ತರಬೇತಿ ಶಿಬಿರಗಳಲ್ಲಿ ಮಾರ್ಗದರ್ಶನ ತಿಳಿಸಲಾಗಿದೆ ಎಂದರು.
ಹಜ್ ಯಾತ್ರಿಗಳನ್ನು ಕರೆದೊಯ್ಯುವ ವಿಮಾನಗಳ ವೇಳೆಯನ್ನು ರಾತ್ರಿ 12.30ಕ್ಕೆ ನಿಗದಿ ಪಡಿಸುವಂತೆ ಕೇಂದ್ರ ವಿಮಾನಯಾನ ಖಾತೆ ರಾಜ್ಯ ಸಚಿವ ಜಿ.ಎಂ. ಸಿದ್ದೇಶ್ವರ ಅವರಿಗೆ ಮನವಿ ಮಾಡಲಾಗಿದೆ. ಅವರು ಸಹ ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ರೋಷನ್ ಬೇಗ್ ತಿಳಿಸಿದರು. [ಹಜ್ ಯಾತ್ರಿಕರಿಗೆ ಪುನರ್ಮನನ ಶಿಬಿರ]

ಸರ್ಕಾರದ ವತಿಯಿಂದ ಮೊದಲ ಬಾರಿಗೆ ಮದೀನಾದಲ್ಲಿ ಯಾತ್ರಿಗಳಿಗೆ ಆಹಾರದ ವ್ಯವಸ್ಥೆಯನ್ನು ಮಾಡಲಾಗಿದ್ದು ಮಧ್ಯಾಹ್ನ ಹಾಗೂ ರಾತ್ರಿಯ ಊಟ ಒದಗಿಸಲಾಗುವುದು. ಈ ಶುಲ್ಕವನ್ನು ಯಾತ್ರೆಯ ವೆಚ್ಚದಲ್ಲಿಯೇ ಸೇರ್ಪಡೆಗೊಳಿಸಲಾಗಿದೆ ಎಂದು ಸಚಿವರು ಹೇಳಿದರು. [ಚಿತ್ರ, ಮಾಹಿತಿ : ಕರ್ನಾಟಕ ವಾರ್ತೆ]












Click it and Unblock the Notifications