ಕರ್ನಾಟಕ: ಕೋವಿಡ್ಗೆ ಬಲಿಯಾದ ಸಾರಿಗೆ ಸಿಬ್ಬಂದಿ ಕುಟುಂಬಕ್ಕೆ ₹30ಲಕ್ಷ ಪರಿಹಾರ ಸಿಕ್ಕಿಲ್ಲ
ಬೆಂಗಳೂರು, ಸೆಪ್ಟಂಬರ್ 07: ವರ್ಷಗಳ ಹಿಂದೆ ತೀವ್ರವಾಗಿ ಕಾಡಿದ್ದ ಕೊರೊನಾ ವೈರಸ್ಗೆ ತುತ್ತಾಗಿ ಪ್ರಾಣ ಕಳೆದುಕೊಂಡ ಕರ್ನಾಟಕ ರಾಜ್ಯ ಸಾರಿಗೆ ನೌಕರರ ಎಲ್ಲ ಕುಟುಂಬಗಳಿಗೆ ಘೋಷಿಸಿದಂತೆ ಪರಿಹಾರ ಹಣ ಸಿಕಿಲ್ಲ. ದುಡಿಯುವ ಕೈಗಳನ್ನು ಕಳೆದುಕೊಂಡ ಕುಟುಂಬಗಳ ತೀವ್ರ ಸಂಕಷ್ಟಕ್ಕೆ ತುತ್ತಾಗಿವೆ.
ಈ ಸಂಬಂಧ ರಾಜ್ಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ತಾಹಿರ್ ಹುಸೇನ್ ನಿಯೋಗವು ಪರಿಹಾರಕ್ಕಾಗಿ ಮನವಿ ಸಲ್ಲಿಸುವ ಮೂಲಕ ಸರ್ಕಾರವನ್ನು ಒತ್ತಾಯಿಸಿದೆ.

ಮನವಿ ಪತ್ರದಲ್ಲಿ ಕೋವಿಡ್ 19 ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡ ರಾಜ್ಯ ಸಾರಿಗೆ ನಿಗಮದ ಕುಟುಂಬಗಳಿಗೆ ಕೂಡಲೇ ಪರಿಹಾರಧನ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಲಾಗಿದೆ. ಕೊರೊನಾ ಕಾಲದಲ್ಲಿ ಸೋಂಕಿಗೆ ತುತ್ತಾಗಿ ಒಟ್ಟು 351 ಜನ ಪ್ರಾಣ ಕಳೆದುಕೊಂಡಿದ್ದರು.
4 ನಿಗಮಗಳಲ್ಲಿ ಸಿಬ್ಬಂದಿ ಸಾವಿನ ವಿವರ
ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆ (RTI) ಅಡಿ ಮಾಹಿತಿ ಪಡೆಯಲಾಗಿದೆ ಎಂದು ಸಾರಿಗೆ ಸಿಬ್ಬಂದಿ ಸಾವು ನೋವು ವಿವರಿಸಿದ ವೆಲ್ಫೇರ್ ಪಾರ್ಟಿ ರಾಜ್ಯಾದ್ಯಕ್ಷ ತಾಹಿರ್ ಹುಸೇನ್ ಅವರು, ಲಭ್ಯ ಮಾಹಿತಿಯ ಮುಖಾಂತರ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ (NWKRTC) 80 ಜನ ಸಿಬ್ಬಂದಿಗಳು ಪ್ರಾಣ ಬಿಟ್ಟಿದ್ದಾರೆ. ಹಾಗೆಯೇ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಯಲ್ಲಿ 110 ಜನ ನೌಕರರನ್ನು ಕೋವಿಡ್ ವೈರಸ್ ಬಲಿ ಪಡೆದಿದೆ.

ಅದೇ ರೀತಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ (KKRTC) 64 ಮಂದಿ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಾಗೆಯೇ ಕನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ (KSRTC) 96 ಜನ ಸಿಬ್ಬಂದಿ ಕುಟುಂಬಗಳು ಮನೆ ಯಜಮಾನನ್ನು ಕಳೆದುಕೊಂಡಿವೆ.
₹30 ಲಕ್ಷ ಪರಿಹಾರ ಘೋಷಣೆ: 11ಕುಟುಂಬಕ್ಕಷ್ಟೇ ವಿತರಣೆ
ಕೊರೊನಾ ಕಾಲದಲ್ಲಿ ಸಹ ಅನಾರೋಗ್ಯಕ್ಕೆ ಹೆದರದೇ ಎಲ್ಲ ವಿಭಾಗದ ನೌಕರರು ಸೇವೆ ನೀಡಿದ್ದಾರೆ. ಈ ಪೈಕಿ ಮೃತಪಟ್ಟ ಎಲ್ಲ ಸಂತ್ರಸ್ತ ಕುಟುಂಬಗಳಿಗೆ ತಲಾ 30 ಲಕ್ಷ ಪರಿಹಾರ ನೀಡುವುದಾಗಿ ಅಂದಿನ ಬಿಜೆಪಿ ಸರ್ಕಾರ ಘೋಷಣೆ ಮಾಡಿತ್ತು. ಆದರೆ ಈವರೆಗೆ ಕೇವಲ 11 ಕುಟುಂಬಗಳಿಗೆ ಮಾತ್ರ ಪರಿಹಾರಧನ ನೀಡಲಾಗಿದೆ ಎಂದು ತಿಳಿಸಿದರು.
ಈ ನಿಟ್ಟಿನಲ್ಲಿ ವೆಲ್ಫೇರ್ ಪಾರ್ಟಿಯ ವತಿಯಿಂದ ಹಲವು ಬಾರಿ ಪ್ರತಿಭಟನೆ ನಡೆಸಿ ಸರ್ಕಾರವನ್ನು ಒತ್ತಾಯಿಸಲಾಯಿತು. ಸಾರಿಗೆ ಸಚಿವರನ್ನು ಕೂಡಾ ಬೇಟಿಯಾಗಿ ಈ ಬಗ್ಗೆ ಗಮನ ಹರಿಸುವಂತೆ ಒತ್ತಾಯಿಸಿದ್ದೇವು. ಆದರೆ ಸರ್ಕಾರದಿಂದ ಯಾವ ಸಕಾರಾತ್ಮಕ ಸ್ಪಂದನೆ ಸಿಕ್ಕಿರಲಿಲ್ಲ.
ಪರಿಹಾರ ಸಿಗದ 340 ಕುಟುಂಬಗಳ ಸ್ಥಿತಿ ಶೋಚನೀಯ
ಈ ಬಗ್ಗೆ ಪ್ರಸಕ್ತ ಕಾಂಗ್ರೆಸ್ ಸರ್ಕಾರದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರನ್ನು ವೆಲ್ಪೇರ್ ಪಾರ್ಟಿಯ ರಾಜ್ಯಾಧ್ಯಕ್ಷ ತಾಹಿರ್ ಹುಸೇನ್ ರ ನೇತೃತ್ವದ ತಂಡವು ಬೇಟಿಯಾಗಿ ಸಮರ್ಪಕ ದಾಖಲೆ ಒದಗಿಸಿ, 340 ಕುಟುಂಬಗಳು ಇನ್ನೂ ಕೂಡಾ ಪರಿಹಾರ ಸಿಗದೆ ಅತಂತ್ರ ಸ್ಥಿತಿಯಲ್ಲಿದೆ. ಅವರ ಬದುಕು ಶೋಚನೀಯವಾಗಿದೆ. ಎಂಬುದನ್ನು ವಿವರಿಸಿತು. ಕೂಡಲೇ ಬಾಕಿ ಕುಟುಂಬಗಳಿಗೆ ಹಣ ನೀಡುವಂತೆ ಆಗ್ರಹಿಸಿತು.
ಮಹಾಮಾರಿಗೆ ಕೊರನಾ ಮನೆಗೆ ಆಸರೆಯಾಗದ್ದವರನ್ನು ಬಲಿ ಪಡೆದು ಆಯಾ ಕುಟುಂಬಗಳನ್ನು ಸಂಕಷ್ಟಗಳ ಕೂಪಕ್ಕೆ ತಳ್ಳಿತು. ಇದೆಲ್ಲ ಗಮನವಿಟ್ಟು ಆಲಿಸಿ ಪರಿಹಾರ ಕಲ್ಪಿಸಬೇಕೆಂದು ನಿಯೋಗ ಮನವಿ ಮಾಡಿತು.
ನಿಯೋಗದಲ್ಲಿ ವೆಲ್ಫೇರ್ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ಹಬೀಬುಲ್ಲಾಖಾನ್, ರಾಜ್ಯ ಕಾರ್ಯದರ್ಶಿ ರಿಯಾಝ್ ಅಹಮದ್ ಮತ್ತು ಬೆಂಗಳೂರು ನಗರ ಉಪಾಧ್ಯಕ್ಷರಾದ ಎ.ಪ್ರಭಾಕರ್ ಮತ್ತಿತರರು ಉಪಸ್ಥಿರಿದ್ದರು.












Click it and Unblock the Notifications