ಅಕ್ರಮ ಗಣಿಗಾರಿಕೆಯಿಂದಾಗಿ 12 ಸಾವಿರ ಕೋಟಿ ನಷ್ಟ
ಬೆಂಗಳೂರು, ಜು. 11 : ರಾಜ್ಯದಲ್ಲಿ ನಡೆದ ಅಕ್ರಮ ಗಣಿಗಾರಿಕೆಯಿಂದಾಗಿ ರಾಜ್ಯ ಸರ್ಕಾರಕ್ಕೆ 12,200 ಕೋಟಿ ರೂ. ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಪರಿಷತ್ತಿನಲ್ಲಿ ಹೇಳಿದ್ದಾರೆ. ರಾಜ್ಯದಲ್ಲಿ ಗಣಿಗಾರಿಕೆ ಮುಂದುವರಿಸಲು ಸುಪ್ರೀಂಕೋರ್ಟ್ ಅನುಮತಿ ನೀಡಿದ್ದರೂ ಗಣಿಗಾರಿಕೆ ಆರಂಭವಾಗದಿರುವುದಕ್ಕೆ ಗಣಿ ಮಾಲಿಕರು ಕಾರಣ ಎಂದು ಅವರು ತಿಳಿಸಿದ್ದಾರೆ.
ಗುರುವಾರದ ವಿಧಾನಪರಿಷತ್ ಕಲಾಪದಲ್ಲಿ ವಿರೋಧಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ, ಬಿಜೆಪಿಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಗೋ.ಮಧುಸೂಧನ್, ವೈ.ಎ.ನಾರಾಯಣಸ್ವಾಮಿ ಹಾಗೂ ಬಿ.ಜೆ. ಪುಟ್ಟಸ್ವಾಮಿ ಇತರರು ಮಂಡಿಸಿದ ನಿಲುವಳಿ ಸೂಚನಾ ಪತ್ರಕ್ಕೆ ಉತ್ತರ ನೀಡಿದ ಮುಖ್ಯಮಂತ್ರಿಗಳು, 2002-2003ರ ಅವಧಿಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಅದಿರಿಗೆ ಬೆಲೆ ಹೆಚ್ಚಾಗಿತ್ತು. ಆಗ ನಡೆದ ಅಕ್ರಮ ಗಣಿಗಾರಿಕೆಯಿಂದ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದರು.

ರಾಜ್ಯದಲ್ಲಿ ಈಗಾಗಲೇ 166 ಗಣಿಗಾರಿಕೆಗೆ ಲೈಸೆನ್ಸ್ ನೀಡಲಾಗಿದ್ದು, ಅಂದಾಜು 4012 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳು ಸದನಕ್ಕೆ ಮಾಹಿತಿ ನೀಡಿದರು. 166 ಪರವಾನಿಗೆಗಳಲ್ಲಿ ಎ, ಬಿ. ಮತ್ತು ಸಿ ಎಂದು ವರ್ಗೀಕರಣ ಮಾಡಲಾಗಿದೆ ಎಂದರು. [ಲೋಕಾಯುಕ್ತ ಬಲೆಗೆ ಬಿದ್ದರೆ ಅಧಿಕಾರಿಗಳು ಅಮಾನತು]
ಎ ಮತ್ತು ಬಿ ವರ್ಗದ ಗಣಿಗಳನ್ನು ಕೆಲವು ಷರತ್ತಿಗೊಳಪಟ್ಟು ಪುನರ್ ಪ್ರಾರಂಭಿಸಲು ನಿರ್ದೇಶನ ನೀಡಲಾಗಿದೆ. ಅಲ್ಲದೆ ಸಿ ವರ್ಗದ 51 ಗಣಿಗಳನ್ನು ರದ್ದುಪಡಿಸಿ ಬಹಿರಂಗ ಹರಾಜಿನ ಮೂಲಕ ವಿಲೇವಾರಿ ಮಾಡಲು 12-9-2013ರಂದು ಆದೇಶ ಹೊರಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ಗಣಿಗಾರಿಕೆಯನ್ನು ಪುನರ್ ಆರಂಭಿಸಲು ಯಾವುದೇ ವಿಳಂಬ ಮಾಡಿಲ್ಲ. ಒಟ್ಟು 115 ಎ ಮತ್ತು ಬಿ ವರ್ಗದ ಗಣಿಗಳ ಪೈಕಿ 7 ಗಣಿಗಳು ಅಂತರ ರಾಜ್ಯ ಗಡಿ ವಿವಾದ ಹೊಂದಿವೆ ಆದ್ದರಿಂದ ವಿಳಂಬವಾಗುತ್ತಿದೆ ಎಂದು ಸಿಎಂ ತಿಳಿಸಿದರು. [ವಿದೇಶಿ ನೆರವು ಪಡೆಯುವ ಎನ್ ಜಿಓಗಳ ವಿರುದ್ಧ ತನಿಖೆ]
2014-15ನೇ ಸಾಲಿನಲ್ಲಿ ಸರ್ಕಾರ ಕಬ್ಬಿಣ ಅದಿರಿನ ಉತ್ಪಾದನೆಯ ಪ್ರಮಾಣವನ್ನು 30 ದಶಲಕ್ಷ ಟನ್ ಗಳಿಗೆ ಸೀಮಿತಗೊಳಿಸಿರುವುದರಿಂದ ಪಾರದರ್ಶಕವಗಿ, ಕಾನೂನುಬದ್ಧವಾಗಿ ಗಣಿಗಾರಿಕೆಯನ್ನು ನಡೆಸುವುದಲ್ಲದೆ ಗಣಿ ಕಾರ್ಮಿಕರ ಹಿತವನ್ನು ಕಾಪಾಡಲಿದೆ ಎಂದು ಭರವಸೆ ನೀಡಿದರು.












Click it and Unblock the Notifications