Vande Bharat Express: ಬೆಂಗಳೂರು-ಕಲಬುರಗಿ ರೈಲು ವೇಳಾಪಟ್ಟಿ ಬದಲು, ಸಚಿವರ ಸೂಚನೆ
ಕಲಬುರಗಿ, ಫೆಬ್ರವರಿ 25: ರಾಜಧಾನಿ ಬೆಂಗಳೂರು ಮತ್ತು ಕಲ್ಯಾಣ ಕರ್ನಾಟಕವನ್ನು ಸಂಪರ್ಕಿಸುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೇವೆಯ ವೇಳಾಪಟ್ಟಿ ಪರಿಷ್ಕರಣೆಯಾಗಲಿದೆ. ಈ ರೈಲು ಮಂತ್ರಾಲಯಕ್ಕೆ ತೆರಳುವ ಭಕ್ತರಿಗೆ ಸಹ ಸಹಾಯಕವಾಗಿದ್ದು, ವೇಳಾಪಟ್ಟಿ ಪರಿಷ್ಕರಣೆಯಿಂದ ಇನ್ನಷ್ಟು ಪ್ರಯಾಣಿಕರಿಗೆ ಉಪಯೋಗವಾಗಲಿದೆ. 2024ರ ಮಾರ್ಚ್ 15ರಂದು ಈ ರೈಲು ಸೇವೆ ಆರಂಭವಾಗಿದೆ.
ಬೆಂಗಳೂರು ನಗರದ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್-ಕಲಬುರಗಿ ನಡುವೆ ಕೇಸರಿ ಬಣ್ಣದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರ ನಡೆಸುತ್ತಿದೆ. ಈ ರೈಲಿನ ವೇಳಾಪಟ್ಟಿಯನ್ನು ಬದಲಾವಣೆ ಮಾಡಬೇಕು ಎಂದು ಒತ್ತಾಯ ಕೇಳಿಬಂದಿತ್ತು. ರೈಲ್ವೆ ಇಲಾಖೆಗೆ ಈ ಕುರಿತು ಸಚಿವರು, ವಿವಿಧ ಸಂಘ ಸಂಸ್ಥೆಗಳು ಸಹ ಪತ್ರವನ್ನು ಬರೆದು ಮನವಿ ಸಲ್ಲಿಕೆ ಮಾಡಿದ್ದರು.

ತುಮಕೂರು ಸಂಸದ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳಿಗೆ ಬೆಂಗಳೂರು-ಕಲಬುರಗಿ ನಡುವಿನ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡುವ ಕುರಿತು ಗಮನಹರಿಸುವಂತೆ ಸೂಚನೆ ನೀಡಿದ್ದಾರೆ.
ಸದ್ಯದ ವೇಳಾಪಟ್ಟಿ: ಬೆಂಗಳೂರು-ಕಲಬುರಗಿ ನಡುವೆ ರೈಲು ನಂಬರ್ 22231/ 22232 ಸಂಚಾರ ನಡೆಸುತ್ತಿದೆ. ವಂದೇ ಭಾರತ್ ರೈಲು ಕಲಬುರಗಿಯಿಂದ ಬೆಳಗ್ಗೆ 5.15ಕ್ಕೆ ಹೊರಟು ಮಧ್ಯಾಹ್ನ 2 ಗಂಟೆಗೆ ಬೆಂಗಳೂರು ನಗರ ತಲುಪುತ್ತಿದೆ. 2.40ಕ್ಕೆ ಬೆಂಗಳೂರು ನಗರದಿಂದ ಹೊರಟು ರಾತ್ರಿ 11.30ಕ್ಕೆ ಕಲಬುರಗಿ ತಲುಪುತ್ತಿದೆ.
ಈ ರೈಲು ಸೇವೆ ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಯ ಜನರಿಗೆ ಅನುಕೂಲವಾಗಿದೆ. ಕೆಲವು ದಿನಗಳ ಹಿಂದೆ ಸಚಿವ ವಿ. ಸೋಮಣ್ಣ ಮಂತ್ರಾಲಯಕ್ಕೆ ಭೇಟಿ ನೀಡಿದ್ದರು. ಆಗ ಬೆಂಗಳೂರಿನಿಂದ ಆಗಮಿಸುವ ಭಕ್ತರಿಗೆ ಅನುಕೂಲವಾಗುವಂತೆ ರೈಲು ವೇಳಾಪಟ್ಟಿ ಬದಲಾವಣೆ ಮಾಡಬೇಕು ಎಂದು ಮನವಿ ಸಲ್ಲಿಕೆ ಮಾಡಲಾಗಿತ್ತು.
ಬೆಂಗಳೂರು-ಮಂತ್ರಾಲಯ ನಡುವಿನ ಭಕ್ತರಿಗೆ ಅನುಕೂಲ ಮಾಡಿಕೊಡುವಂತಹ ರೈಲು ಇದಾಗಿದೆ. ಆದ್ದರಿಂದ ರೈಲು ವೇಳಾಪಟ್ಟಿ ಬದಲಾಗಲಿದೆ. ಸದ್ಯದ ಮಾಹಿತಿ ಪ್ರಕಾರ ರೈಲು ಬೆಳಗ್ಗೆ 6 ಗಂಟೆಗೆ ಬೆಂಗಳೂರು ನಗರದಿಂದ ಹೊರಟು ಮಧ್ಯಾಹ್ನ 2.45ಕ್ಕೆ ಕಲಬುರಗಿ ತಲುಪುವಂತೆ ವೇಳಾಪಟ್ಟಿ ಬದಲಾವಣೆ ಮಾಡುವ ಪ್ರಸ್ತಾಪವಿದೆ.
ಕೇಂದ್ರ ರೈಲ್ವೆ ವಲಯದ ವ್ಯಾಪ್ತಿಗೆ ಕಲಬುರಗಿ ಒಳಪಡುತ್ತದೆ. ಪ್ರಸ್ತಾವಿತ ವೇಳಾಪಟ್ಟಿ ಬದಲಾವಣೆಗೆ ಅದು ಒಪ್ಪಿಗೆ ನೀಡಿದೆ. ಆದರೆ ಕಲ್ಯಾಣ ಕರ್ನಾಟಕ ಭಾಗದ ಪ್ರಯಾಣಿಕರು ವೇಳಾಪಟ್ಟಿ ಬದಲಾವಣೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈಗಿರುವ ವೇಳಾಪಟ್ಟಿ ಅನ್ವಯವೇ ರೈಲು ಓಡಿಸಬೇಕು ಎಂದು ಒತ್ತಾಯಿಸಿ ಆನ್ಲೈನ್ ಅಭಿಯಾನವನ್ನು ಆರಂಭಿಸಿದ್ದಾರೆ.
ಬೆಂಗಳೂರು-ಕಲಬುರಗಿ ವಂದೇ ಭಾರತ್ ರೈಲಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಈ ರೈಲು ಶೇ 85ರಷ್ಟು ಭರ್ತಿಯಾಗಿ ಸಂಚಾರ ನಡೆಸುತ್ತಿದೆ. ಈಗ ಮಂತ್ರಾಲಯದ ಮನವಿಯಂತೆ ರೈಲು ವೇಳಾಪಟ್ಟಿ ಬದಲಾವಣೆ ಮಾಡಲು ಕಲಬುರಗಿ ಭಾಗದ ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ವಿ. ಸೋಮಣ್ಣ ರೈಲ್ವೆ ಸಚಿವರಾದ ಬಳಿಕ ಒಮ್ಮೆಯೂ ಕಲಬುರಗಿ ಜಿಲ್ಲೆಗೆ ಭೇಟಿ ನೀಡಿಲ್ಲ. ಈಗಿರುವ ರೈಲು ವೇಳಾಪಟ್ಟಿ ಉತ್ತಮವಾಗಿದೆ. ಇದನ್ನು ಕೇವಲ ಮಂತ್ರಾಲಯದ ಭಕ್ತರ ಅನುಕೂಲಕ್ಕಾಗಿ ಬದಲಾವಣೆ ಮಾಡುವ ಮೂಲಕ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಅನ್ಯಾಯ ಮಾಡಬಾರದು ಎಂದು ಜನರು ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಬೆಂಗಳೂರು-ಕಲಬುರಗಿ ನಡುವಿನ ವಂದೇ ಭಾರತ್ ರೈಲಿನಲ್ಲಿ ಚೇರ್ ಕಾರ್ನಲ್ಲಿ ಆಹಾರವಿಲ್ಲದೇ 1,216, ಆಹಾರದ ಜೊತೆಗೆ 1,540 ರೂ. ದರವಿದೆ. ಎಕ್ಸಿಕ್ಯುಟಿವ್ ಚೇರ್ ಕಾರ್ ಆಹಾರವಿಲ್ಲದೇ 2,386 ಮತ್ತು ಆಹಾರದ ಜೊತೆಗೆ ದರ 2,765 ರೂ. ಇದೆ.












Click it and Unblock the Notifications