ಅನ್ನ ಬೇಕು.. ಅನ್ನ.. ಮನುಷ್ಯತ್ವ ಮರೆಯಾಗುತ್ತಿದೆಯಾ?
ಅದು ಅಕ್ಟೋಬರ್ 7, 2023ರ ಶನಿವಾರ, ಆ ದಿನ ಯಾರೂ ಕನಸಲ್ಲೂ ಊಹೆ ಮಾಡದ ಘಟನೆ ಸಂಭವಿಸಿತ್ತು. ಹಮಾಸ್ ಉಗ್ರರು ದಿಢೀರ್ ಇಸ್ರೇಲ್ ಮೇಲೆ ದಾಳಿ ಮಾಡಿದ್ದರು. ಈ ರೀತಿ ತನ್ನ ಮೇಲೆ ಹಮಾಸ್ ಅಟ್ಯಾಕ್ ಮಾಡಿದೆ ಅಂತಾ ರೊಚ್ಚಿಗೆದ್ದ ಇಸ್ರೇಲ್ ಯುದ್ಧವನ್ನೇ ಘೋಷಣೆ ಮಾಡಿತ್ತು. ಹೀಗೆ ಇಬ್ಬರ ನಡುವೆ ಹಿಂಸಾಚಾರ ಶುರುವಾಗಿ ಇನ್ನೇನು 6 ತಿಂಗಳು ತುಂಬುತ್ತಿದ್ದು, ವಿಶ್ವಸಂಸ್ಥೆ ಮಹತ್ವದ ಘೋಷಣೆ ಮೊಳಗಿಸಿದೆ.
ಗಾಜಾಪಟ್ಟಿ ಜನರ ಪರಿಸ್ಥಿತಿ ಹೇಗಾಗಿದೆ ಅಂದ್ರೆ, ಒಂದು ಕಡೆ ಉಗ್ರರ ಸರ್ಕಾರ ಹಮಾಸ್ಗೆ ಹೆದರಿ ಬದುಕುತ್ತಿದ್ದಾರೆ. ಇನ್ನೊಂದು ಕಡೆ ಹಮಾಸ್ ಉಗ್ರರು ಮಾಡಿದ್ದ ತಪ್ಪಿಗೆ, ಇಸ್ರೇಲ್ನ ಸೇನೆ ಈಗ ಗಾಜಾದ ಸಾಮಾನ್ಯ ಜನರ ಪ್ರಾಣ ತೆಗೆಯುತ್ತಿದೆ. ಇದ್ಯಾವುದಕ್ಕೂ ಇಸ್ರೇಲ್ ಕೇರ್ ಮಾಡುತ್ತಿಲ್ಲ, ಯಾಕಂದ್ರೆ ಈ ಬಾರಿ ಹಮಾಸ್ ಉಗ್ರರನ್ನು ಬುಡ ಸಮೇತ ಕಿತ್ತು ಹಾಕುವುದಕ್ಕೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಿರ್ಧಾರ ಮಾಡಿದ್ದು. ಪರಿಸ್ಥಿತಿ ಕೈಮೀರಿ ಹೋಗಿ, ಸುಮಾರು 23 ಲಕ್ಷ ಜನರು ಈಜಿಪ್ಟ್ ಗಡಿ ಬಳಿ ಅತಂತ್ರರಾಗಿದ್ದಾರೆ. ಈ ಸಮಯದಲ್ಲೇ ವಿಶ್ವಸಂಸ್ಥೆ ಈಗ ಮಹತ್ವದ ಹೇಳಿಕೆ ನೀಡಿದೆ.

ಅನ್ನ ಬೇಕು.. ಅನ್ನ..
ಅಂದಹಾಗೆ ಯುದ್ಧ ಪೀಡಿತ ಗಾಜಾಗೆ, ಜೀವರಕ್ಷಕ ನೆರವು ಹರಿದು ಬರಬೇಕಾದ ಸಮಯ ಇದು. ಅಲ್ಲಿನ ಜನರ ಹಸಿವು ನೀಗಿಸಬೇಕು ಅಂತಾ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್ ಹೇಳಿದ್ದಾರೆ. ತಕ್ಷಣವೇ ಯುದ್ಧ ನಿಲ್ಲಿಸಬೇಕು ಎಂದು ಇಸ್ರೇಲ್ & ಹಮಾಸ್ಗೆ ಮನವಿ ಮಾಡಿದೆ ವಿಶ್ವಸಂಸ್ಥೆ. ರಫಾ ನಗರ ಸಮೀಪದ, ಗಾಜಾದ ಈಜಿಪ್ಟ್ ಭಾಗದ ಗಡಿಯಲ್ಲಿ ಇಂತಹ ಹೇಳಿಕೆ ನೀಡಿದ್ದಾರೆ ಅವರು. ಇದೇ ವೇಳೆ ಗಾಜಾಪಟ್ಟಿ ಜನರಿಗೆ ನೆರವಿನ ಸಾಮಗ್ರಿ ಸಾಗಾಟ ಮಾಡಲು ಇದ್ದ ದಾರಿಗಳನ್ನು ಕೂಡ ಬಂದ್ ಮಾಡಲಾಗಿದೆ ಎಂಬ ಆರೋಪಗಳಿದ್ದು. ಈ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಎಲ್ಲಿ ನೋಡಿದರೂ ಹಸಿವಿನ ಆರ್ಭಟ
ಗಾಜಾಪಟ್ಟಿಯ ಪರಿಸ್ಥಿತಿ ಬಗ್ಗೆ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್, ಮನಸ್ಸು ಕಲಕುವ ಸಂಗತಿ ಬಿಚ್ಚಿಟ್ಟಿದ್ದಾರೆ. ಗಡಿ ಭಾಗದಿಂದ ಹೃದಯ ವಿದ್ರಾವಕ & ಹೃದಯ ಶೂನ್ಯ ಪರಿಸ್ಥಿತಿ ನಾವು ನೋಡಬಹುದು. ಪರಿಹಾರ ಸಾಮಗ್ರಿ ಹೊತ್ತ ಟ್ರಕ್ಗಳ ಉದ್ದದ ಸರತಿ ಸಾಲು ಒಂದು ಕಡೆ. ಇನ್ನೊಂದು ಬದಿ ಹಸಿವಿನಲ್ಲಿ ನರಳುತ್ತಿರುವ ಜನರು ನಮ್ಮ ಕಣ್ಣುಗಳಿಗೆ ಕಾಣ್ತಾರೆ ಎಂದಿದ್ದಾರೆ, ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್ ಅವರು. ಪರಿಹಾರ ಸರಕು ಹೊತ್ತ ಸುಮಾರು 7 ಸಾವಿರ ಟ್ರಕ್ಗಳು ಉತ್ತರ ಈಜಿಪ್ಟ್ ಪ್ರಾಂತ್ಯದಲ್ಲಿ ಗಾಜಾಗೆ ಪ್ರವೇಶಿಸಿಲು ಕಾದು ಕುಳಿತಿವೆ.

ಒಟ್ನಲ್ಲಿ ಪರಿಸ್ಥಿತಿ ಭಯಾನಕವಾಗಿದ್ದು, ಜನಗಳು ಪರದಾಡುತ್ತಿದ್ದಾರೆ. ಹೀಗಾಗಿ ಸೂಕ್ತವಾದ ಕ್ರಮ ಕೈಗೊಂಡು ಇಸ್ರೇಲ್ & ಹಮಾಸ್ ಯುದ್ಧ ನಿಲ್ಲಿಸಬೇಕು ಎಂಬ ಆಗ್ರಹ ಕೇಳಿಬಂದಿದೆ. ಆದರೆ ಈ ಮಾತು ಅಂದುಕೊಂಡಷ್ಟು ಸುಲಭವೂ ಅಲ್ಲ, ಯುದ್ಧ ನಿಲ್ಲುವ ಸಾಧ್ಯತೆ ಈಗ ಕಾಣಿಸುತ್ತಿಲ್ಲ. ಹೀಗಾಗಿ ಗಾಜಾಪಟ್ಟಿ ಜನರು ಜೀವ ಕೈಯಲ್ಲಿಡಿದು ಬದುಕುವ ಪರಿಸ್ಥಿತಯು ನಿರ್ಮಾಣ ಆಗಿದೆ.












Click it and Unblock the Notifications