ಯುದ್ಧ ಬೇಕಾಗಿರುವುದು ಭಾರತಕ್ಕೆ, ಪಾಕಿಸ್ತಾನಕ್ಕಲ್ಲ: ಪಾಕ್ ವಿದೇಶಾಂಗ ಸಚಿವ
Recommended Video

ಇಸ್ಲಾಮಾಬಾದ್, ಫೆಬ್ರವರಿ 25: "ಯುದ್ಧ ಬೇಕಾಗಿರುವುದು ಭಾರತಕ್ಕೆ, ಪಾಕಿಸ್ತಾನಕ್ಕಲ್ಲ. ಪಾಕಿಸ್ತಾನ ಶಾಂತಿ ಬಯಸುತ್ತದೆ" ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹ್ಮೂದ್ ಖುರೇಷಿ ಹೇಳಿದ್ದಾರೆ.
ಪುಲ್ವಾಮಾ ದಾಳಿಯ ನಂತರ ವಿಶ್ವದ ಒತ್ತಡ ಪಾಕಿಸ್ತಾನದ ಮೇಲೆ ಬೀಳುತ್ತಿರುವ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಖುರೇಶಿ, ಪಾಕಿಸ್ತಾನ ಉಭಯ ದೇಶಗಳ ನಡುವೆ ಶಾಂತಿ ನೆಲೆಗೊಳಿಸಲು ಯತ್ನಿಸುತ್ತಿದೆ. ಈ ಕುರಿತು ವಿಶ್ವಸಂಸ್ಥೆಗೂ ಪತ್ರ ಬರೆದಿದ್ದೇವೆ. ಆದರೆ ಭಾರತ ಗಡಿಯಲ್ಲಿ ಹೆಚ್ಚಿನ ಸೈನಿಕರನ್ನು ನಿಯೋಜಿಸಿ, ಯುದ್ಧದಂಥ ಸನ್ನಿವೇಶ ಏರ್ಪಾಡಾಗುವಂತೆ ಮಾಡಿದೆ ಎಂದು ಖುರೇಷಿ ದೂರಿದ್ದಾರೆ.
ಫೆಬ್ರವರ 14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಜೈಷ್ ಇ ಮೊಹಮ್ಮದ್ ನ ಆದಿಲ್ ದಾರ್ ಎಂಬ ಉಗ್ರ ನಡೆಸಿದ ಆತ್ಮಾಹುತಿ ಕಾರ್ ಬಾಂಬ್ ದಾಳಿಯಲ್ಲಿ 44 ಯೋಧರು ಹುತಾತ್ಮರಾಗಿದ್ದರು. ಈ ದಾಳಿಯ ನಂತರ ವಿಶ್ವಸಂಸ್ಥೆಯೂ ಜೈಷ್ ಸಂಘಟನೆಯ ವಿರುದ್ಧ ಛೀಮಾರಿ ಹಾಕಿತ್ತು. ಜೊತೆಗೆ ಘಟನೆಯನ್ನು ವಿಶ್ವವೇ ಖಂಡಿಸಿ, ಭಾರತದ ಪರ ನಿಂತಿದೆ. ಆದರೂ ಪಾಕಿಸ್ತಾನ ಮಾತ್ರ ಭಂಡ ಧೈರ್ಯ ತೋರುವುದನ್ನು ಬಿಟ್ಟಿಲ್ಲ.

ಪಾಕ್ ಅನ್ನು ಕೆಟ್ಟ ಕಣ್ಣಲ್ಲಿ ನೋಡುವ ಧೈರ್ಯ ಮಾಡಬೇಡಿ!
'ಪಾಕಿಸ್ತಾನವನ್ನು ಕೆಟ್ಟ ಕಣ್ಣಲ್ಲಿ ನೋಡುವ ಧೈರ್ಯ ಮಾಡಬೇಡಿ. ಪಾಕಿಸ್ತಾನವನ್ನು ನೀವು ನೋಡುವ ದೃಷ್ಟಿಕೋನ ಬದಲಾಗಲಿ. ಇಲ್ಲವೆಂದರೆ ನಾವು ಸುಮ್ಮನಿರುವುದಿಲ್ಲ' ಎಂದು ಖುರೇಷಿ ಎಚ್ಚರಿಕೆ ನೀಡಿದ್ದಾರೆ.

ಯುದ್ಧ ಬೇಕಾಗಿರುವುದು ಭಾರತಕ್ಕೆ!
"ಯುದ್ಧ ನಮಗೆ ಬೇಕಿಲ್ಲ. ನಾವು ಶಾಂತಿ ಬಯಸುತ್ತೇವೆ. ಭಾರತಕ್ಕೆ ಯುದ್ಧ ಬೇಕಾಗಿದೆ. ಅದಕ್ಕೆಂದೇ ಅದು ವಿಶ್ವದ ಬೇರೆ ಬೇರೆ ರಾಷ್ಟ್ರಗಳನ್ನು ನಮ್ಮ ವಿರುದ್ಧ ಎತ್ತಿಕಟ್ಟಿ ನಮ್ಮ ಮೇಲೆ ಅನವಶ್ಯಕ ಒತ್ತಡ ಸೃಷ್ಟಿಸುತ್ತಿದೆ" ಎಂದು ಖುರೇಷಿ ಭಾರತವನ್ನು ದೂರಿದ್ದಾರೆ.

ಭಾರತ ಯುದ್ಧಕ್ಕೆ ಸಿದ್ಧವಾಗುತ್ತಿರೋದು ಸುಳ್ಳೇ?
ಜಮ್ಮು-ಕಾಶ್ಮೀರದಲ್ಲಿರುವ ವ್ಐದ್ಯರು, ನರ್ಸ್ ಗಳ ರಜೆಯನ್ನು ಭಾರತ ರದ್ದುಗೊಳಿಸಿ, ಪ್ರಕಟಣೆ ಹೊರಡಿಸಿದ್ದು ನಮಗೆ ಗೊತ್ತಿಲ್ಲದ ವಿಷಯವೇ? ಹೀಗೆ ರಜೆ ರದ್ದುಗೊಳಿಸಿದ್ದೇಕೆ. ಅದು ಯಾವ ಸೂಚನೆ ನೀಡುತ್ತದೆ ಎಂದು ಅವರು ಕೇಳಿದ್ದಾರೆ. ಇತ್ತೀಚೆಗಷ್ಟೇ ಪಾಕಿಸ್ತಾನವೂ ಗಡಿಯಲ್ಲಿ ಹೆಚ್ಚಿನ ಸೈನಿಕರನ್ನು ನಿಯೋಜಿಸಿದ್ದಲ್ಲದೆ, ವೈದ್ಯರ ರಜೆಯನ್ನು ರದ್ದುಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದು ಅಹಂಕಾರದ ಪರಮಾವಧಿಯಲ್ಲವೇ?
ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯೇ ಪುಲ್ವಾಮಾ ದಾಳಿ ನಡೆಸಿದ್ದನ್ನು ಒಪ್ಪಿಕೊಂಡಾಗಿದೆ. ಅದಕ್ಕೆ ನೆಲೆ ನೀಡುತ್ತಿರುವುದೂ ಪಾಕಿಸ್ತಾನ ಎಂಬುದು ವಿಶ್ವಕ್ಕೇ ಗೊತ್ತು. ಹೀಗಿದ್ದರೂ ತಮ್ಮನ್ನು ಸಮರ್ಥನೆ ಮಾಡಿಕೊಳ್ಳುವುದು ಪಾಕ್ ವಿದೇಶಾಂಗ ಸಚಿವರ ದುರಹಂಕಾರವಲ್ಲವೇ? ಅತ್ತ ಪ್ರಧಾನಿ ಇಮ್ರಾನ್ ಖಾನ್, ಶಾಂತಿಗೆ ಒಂದು ಅವಕಾಶ ಕೊಡಿ ಎಂದು ನರೇಂದ್ರ ಮೋದಿ ಅವರನ್ನು ಗೋಗರೆಯುತ್ತಿದ್ದರೆ, ಇತ್ತ ಖುರೇಷಿ, ಕೆಟ್ಟ ಕಣ್ಣಿಂದ ಪಾಕಿಸ್ತಾನವನ್ನು ನೋಡಿದರೆ ಸುಮ್ಮನೆ ಬಿಡುವುದಿಲ್ಲ ಎನ್ನುತ್ತಾರೆ. ಒಟ್ಟಿನಲ್ಲಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತಿದೆ ಪಾಕಿಸ್ತಾನದ ವರ್ತನೆ.












Click it and Unblock the Notifications