Chandrayaan-3: ಇದಕ್ಕೆ ಹೇಳೋದು ಪಾಕಿಸ್ತಾನಕ್ಕೆ ಬುದ್ಧಿ ಬರಲ್ಲ ಅಂತಾ!
ಪಾಕಿಸ್ತಾನಿ ರಾಜಕಾರಣಿಗಳಿಗೆ ಗೊತ್ತಿರೋದು ಬರೀ ಒಂದೇ ಒಂದು ವಿಚಾರ, ಅದೇನೆಂದರೆ ಉಗ್ರರನ್ನ ಬೆಳೆಸೋದು ಹಾಗೂ ಭಾರತದ ಜೊತೆ ಕಿರಿಕ್ ಮಾಡೋದು. ಇದನ್ನು ಬಿಟ್ಟರೆ ಅವರಿಗೆ ಬೇರೆ ಏನೂ ತಿಳಿದಿಲ್ಲ. ಪಾಕಿಸ್ತಾನದ ನಾಯಕರ ಮನಸ್ಥಿತಿ ಹೀಗಿದ್ದಾಗ ಭಾರತದ 'ಚಂದ್ರಯಾನ-3' ಸಾಧನೆ ಬಗ್ಗೆ ಮಾತನಾಡದೆ ಬಿಡ್ತಾರಾ? ಹೌದು ಈಗ ಕೂಡ ಭಾರತದ ಹೆಮ್ಮೆಯ ಸಂಸ್ಥೆ ಇಸ್ರೋ ಸಾಧನೆಯನ್ನು ಪಾಕಿಸ್ತಾನ ಆಡಿಕೊಂಡಿದೆ.
ಗೆದ್ದ ಎತ್ತಿನ ಬಾಲ ಹಿಡಿಯೋದು ಪಾಕಿಸ್ತಾನ ಗುಣ. ಅದರಲ್ಲೂ ಅಲ್ಲಿನ ರಾಜಕಾರಣಿಗಳು ಸಮಯ ಬಂದಾಗ ಯಾರ ಕಾಲು ಬೇಕಾದರು ಹಿಡಿಯುತ್ತಾರೆ. ತಮ್ಮ ದೇಶದಲ್ಲಿ ಒಂದು ರೈಲು ಗಾಲಿ ತಯಾರಿಸಲು ಪರದಾಡುವ ಪಾಕಿಸ್ತಾನ, ಭಾರತದ ಬಗ್ಗೆ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತದೆ. ಈಗಲೂ ಅಷ್ಟೇ ಚಂದ್ರಯಾನ-3 ಸಾಧನೆ ಬಗ್ಗೆ ಪಾಕಿಸ್ತಾನದ ಮಾಜಿ ಐಟಿ ಸಚಿವ ಫಾವದ್ ಚೌಧರಿ ಬಾಯಿಗೆ ಬಂದಂತೆ ಮಾತನಾಡಿದ್ದು, ಆ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ ಆಕ್ರೋಶವೂ ವ್ಯಕ್ತವಾಗುತ್ತಿದೆ. ಹಾಗಾದ್ರೆ ಫಾವದ್ ಚೌಧರಿ 'ಚಂದ್ರಯಾನ-3' ಬಗ್ಗೆ ಹೇಳಿದ್ದೇನು? ಬನ್ನಿ ತಿಳಿಯೋಣ.

'ಚಂದ್ರಯಾನ-3' ಅನಗತ್ಯ ಯೋಜನೆಯಂತೆ!
ನೋಡಿ ಪಾಕಿಸ್ತಾನದ ಮಾಜಿ ಐಟಿ ಸಚಿವನ ಬಾಯಲ್ಲಿ ಎಂತಹ ಅಣಿಮುತ್ತು ಉದುರಿದೆ ಅಂತಾ. ಪಾಕಿಸ್ತಾನ ಖಾಸಗಿ ಚಾನೆಲ್ ಡಿಬೆಟ್ ಸಮಯದಲ್ಲಿ ಮಾತನಾಡಿರುವ ಫಾವದ್ ಚೌಧರಿ, ಬಾಹ್ಯಾಕಾಶದಲ್ಲಿ ಚಂದ್ರನ ಸ್ಥಾನ ನಮಗೆಲ್ಲರಿಗೂ ಗೊತ್ತಿದೆ. ಚಂದ್ರನು ಯಾವಾಗ ಹುಟ್ಟುತ್ತಾನೆ, ಮುಳುಗುತ್ತಾನೆ ಎಂಬುದೂ ತಿಳಿದಿದೆ. ಚಂದ್ರ ನಮಗೆ ಸಾಕಷ್ಟು ಹತ್ತಿರದಲ್ಲೇ ಇದೆ. ಹೀಗಾಗಿ ಚಂದ್ರನ ವೀಕ್ಷಣೆಗೆ ಇಷ್ಟು ಕಸರತ್ತು ಮಾಡುವ ಅಗತ್ಯವಿಲ್ಲ ಎಂದಿದ್ದಾರೆ. ಈ ವಿಡಿಯೋ ಜಗತ್ತಿನಾದ್ಯಂತ ವೈರಲ್ ಆಗುತ್ತಿದ್ದು, ವಿಜ್ಞಾನದ ಬಗ್ಗೆ ಸಾಮಾನ್ಯ ಜ್ಞಾನವೇ ಇಲ್ಲದ ವ್ಯಕ್ತಿಯಂತೆ ಚೌಧರಿ ಮಾತನಾಡುತ್ತಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.
ಮೊದಲು ಹೊಗಳಿಕೆ... ಆಮೇಲೆ ಡಬಲ್ ಗೇಮ್!
ಅಂದಹಾಗೆ ಜುಲೈ 14ಕ್ಕೆ ಇಸ್ರೋ 'ಚಂದ್ರಯಾನ-3' ನೌಕೆ ಉಡಾಯಿಸಿದ ನಂತರ ಇದೇ ಫಾವದ್ ಚೌಧರಿ ಸಂತಸ ವ್ಯಕ್ತಪಡಿಸಿದ್ದರು. ಅಲ್ಲದೆ ಇಸ್ರೋ ಸಂಸ್ಥೆ ಬಗ್ಗೆ ಹೆಮ್ಮೆಯಿಂದ ಬರೆದುಕೊಂಡಿದ್ದರು. ಆದರೆ ಈಗ ದಿಢೀರ್ ತನ್ನ ಮಾತನ್ನೇ ತಿರುಚಿದ್ದಾರೆ ಪಾಕಿಸ್ತಾನದ ಮಾಜಿ ಐಟಿ ಸಚಿವ. ಇಲ್ಲೇ ಗೊತ್ತಾಗುತ್ತದೆ ಪಾಕಿಸ್ತಾನದಲ್ಲಿ ಅಲ್ಲಿನ ನಾಯಕರು ಭಾರತದ ಪರ ಮಾತನಾಡಿದರೆ ಎಂತಹ ಭಯದ ವಾತಾವರಣ ಸೃಷ್ಟಿಯಾಗಲಿದೆ ಎಂಬುದು. ಇದೇ ವಿಚಾರದ ಬಗ್ಗೆ ಈಗ ಭಾರಿ ಚರ್ಚೆ ಶುರುವಾಗಿದ್ದು, ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಹಾಗೇ ಉಗ್ರರ ತವರು ಪಾಕಿಸ್ತಾನಕ್ಕೆ ಭಾರತೀಯರು ಬುದ್ಧಿ ಹೇಳುತ್ತಿದ್ದಾರೆ.
ಜಗತ್ತಿಗೆ ಖುಷಿ.. ಪಾಕಿಸ್ತಾನಕ್ಕೆ ಉರಿಉರಿ!
ಜುಲೈ 14ರ ಮಧ್ಯಾಹ್ನ 2:35ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಭಾರತದ 'ಚಂದ್ರಯಾನ-3' ರಾಕೆಟ್ ಲಾಂಚ್ ಆಗಿತ್ತು. 3900 ಕೆಜೆ ತೂಕದ ಬಾಹ್ಯಾಕಾಶ ನೌಕೆ ಮತ್ತು ರೋವರ್ ಹೊತ್ತ ರಾಕೆಟ್ ಬಾಹ್ಯಾಕಾಶ ತಲುಪಿ ಈಗಾಗಲೇ ತನ್ನ ಗುರಿಯ ಕಡೆಗೆ ಪ್ರಯಾಣ ಬೆಳೆಸಿದೆ. ಭೂಮಿಯಿಂದ 3,84,000 ಕಿಮೀ ದೂರದಲ್ಲಿರುವ ಚಂದ್ರನತ್ತ ಭಾರತದ ಯಾತ್ರೆ ಹೊರಟಿದೆ. ಬಾಹ್ಯಾಕಾಶ ವಿಜ್ಞಾನಿಗಳ ಕುತೂಹಲದ ಕೇಂದ್ರ ಬಿಂದು, ಚಂದ್ರನ ದಕ್ಷಿಣ ಧ್ರುವದ ಅಧ್ಯಯನ ನಡೆಸುವುದೇ ಯೋಜನೆ ಟಾರ್ಗೆಟ್. ಹೀಗೆ ಇಡೀ ಜಗತ್ತೇ ಮೆಚ್ಚುವ ಕೆಲಸವನ್ನ ಭಾರತದ ಇಸ್ರೋ ಮಾಡಿದ್ದು, ಎಲ್ಲೆಲ್ಲೂ ಈ ಕುರಿತು ಚರ್ಚೆ ನಡೆಯುತ್ತಿದೆ. ಆದ್ರೆ ಪಾಕಿಸ್ತಾನ ಮಾಜಿ ಸಚಿವನ ಮಾತಿಗೆ ಭಾರಿ ವಿರೋಧ ವ್ಯಕ್ತವಾಗಿದೆ.
2019ರಲ್ಲಿ ಭಾರತದ 'ಚಂದ್ರಯಾನ-2' ಕೊನೇ ಕ್ಷಣದಲ್ಲಿ ಸೋತು ಹೋಗಿದ್ದಾಗ ಶತಕೋಟಿ ಭಾರತೀಯರು ಕಣ್ಣೀರು ಹಾಕಿದ್ದರು. ಅದರಲ್ಲೂ ಅಂದಿನ ಇಸ್ರೋ ಅಧ್ಯಕ್ಷರೇ ಅತ್ತುಬಿಟ್ಟರು. ಪರಿಸ್ಥಿತಿ ಹೀಗಿದ್ದಾಗ ಇಡೀ ಜಗತ್ತೇ ಭಾರತದ ಪ್ರಯತ್ನಕ್ಕೆ ನಮಿಸಿತ್ತು. ಆದ್ರೆ ಇದೇ ಹೊತ್ತಲ್ಲಿ ಆಗ ಪಾಕಿಸ್ತಾನದ ಐಟಿ ಸಚಿವನಾಗಿದ್ದ ಫಾವದ್ ಚೌಧರಿ ಇಸ್ರೋ ಬಗ್ಗೆ ಪರೋಕ್ಷವಾಗಿ ಆಡಿಕೊಂಡ ಬಗ್ಗೆ ಆಕ್ರೊಶ ವ್ಯಕ್ತವಾಗಿತ್ತು. ಈಗ ಮತ್ತೊಮ್ಮೆ 'ಚಂದ್ರಯಾನ-3' ಬಗ್ಗೆ ಫಾವದ್ ಚೌಧರಿ ವ್ಯತಿರಿಕ್ತವಾಗಿ ಮಾತನಾಡಿರುವುದು ಚರ್ಚೆಗೆ ಗ್ರಾಸವಾಗಿದೆ.












Click it and Unblock the Notifications