‘ಆ ಬಗ್ಗೆ ನಾನು ಮಾತನಾಡಲ್ಲ’: ಕುಸ್ತಿಪಟು ಬಜರಂಗ್ ಪುನಿಯಾ!
ನವದೆಹಲಿ: ಜಗತ್ತಿನ ಗಮನ ಸೆಳೆದಿದ್ದ ಭಾರತದ ಕುಸ್ತಿಪಟುಗಳ ಪ್ರತಿಭಟನೆ ತಣ್ಣಗಾಗಿದೆ. ಕುಸ್ತಿ ಫೆಡರೇಶನ್ ಮುಖ್ಯಸ್ಥ & ಬಿಜೆಪಿ ಎಂಪಿ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿ, ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆದಿತ್ತು. ಆದರೆ ಕೇಂದ್ರ ಗೃಹ ಸಚಿವರ ಮಧ್ಯ ಪ್ರವೇಶದ ಬಳಿಕ ಪ್ರತಿಭಟನೆ ತಣ್ಣಗಾಗಿದೆ. ಈ ಮಧ್ಯೆ ಕುಸ್ತಿಪಟು ಪುನಿಯಾ ಹೇಳಿಕೆ ಸಂಚಲನ ಸೃಷ್ಟಿ ಮಾಡಿದೆ.
ಕುಸ್ತಿಪಟುಗಳ ರಂಪಾಟವನ್ನ ಜಗತ್ತಿಗೆ ಜಗತ್ತೇ ಕಣ್ತುಂಬಿಕೊಂಡಿತ್ತು. ದೇಶಕ್ಕೂ ಘಟನೆ ಕಳಂಕ ತರುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಅಲರ್ಟ್ ಆಗಿದ್ದ ಕೇಂದ್ರ ಸರ್ಕಾರ, ಗೃಹ ಸಚಿವ ಅಮಿತ್ ಶಾರ ನೇತೃತ್ವದಲ್ಲಿ ಸಭೆ ನಡೆಸಿತ್ತು. ಒಲಿಂಪಿಯನ್ ಕುಸ್ತಿಪಟು ಬಜರಂಗ್ ಪುನಿಯಾ (Bajrang Punia) ಸೇರಿ ಪ್ರತಿಭಟನೆ ನಡೆಸುತ್ತಿದ್ದ ದೇಶದ ಕುಸ್ತಿಪಟುಗಳ ಜೊತೆಗೆ ಮಾತುಕತೆ ನಡೆದಿತ್ತು. ಆದ್ರೆ ಈಗ ಸಭೆ ಬಗ್ಗೆ ಮಾತನಾಡಲು ಪುನಿಯಾ ಹಿಂದೇಟು ಹಾಕಿದ್ದಾರೆ. ಅಲ್ಲದೆ 'ಆ ಬಗ್ಗೆ ನಾನು ಮಾತನಾಡಲ್ಲ' ಎಂದು ಹೇಳುವ ಮೂಲಕ, ಬಜರಂಗ್ ಪುನಿಯಾ ಸಂಚಲನ ಸೃಷ್ಟಿಸಿದ್ದಾರೆ (Indian Wrestlers Protest).

ಕುಸ್ತಿಪಟುಗಳ ಪ್ರತಿಭಟನೆ ನಿಂತಿಲ್ಲ ಅಂತೆ!
ಎನ್ಡಿಟಿವಿ ಸುದ್ದಿ ವಾಹಿನಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಪುನಿಯಾ ಅವರು ಮಾತನಾಡಿ, ಗೃಹ ಸಚಿವರ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂಬ ವದಂತಿ ನಿರಾಕರಿಸಿದರು. ಅಲ್ಲದೆ ಡಬ್ಲ್ಯುಎಫ್ಐ ಮುಖ್ಯಸ್ಥರ (Brij Bhushan Sharan Singh) ಮೇಲಿರುವ ಆರೋಪ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಅಮಿತ್ ಶಾ ಹೇಳಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ ಪುನಿಯಾ. ಆದರೆ ಚಳವಳಿ ನಿಂತಿಲ್ಲ & ಅದು ಮುಂದುವರಿಯುತ್ತೆ. ಹೇಗೆ ಮುಂದಕ್ಕೆ ಕೊಂಡೊಯ್ಯಬೇಕು ಎಂಬುದರ ಬಗ್ಗೆ ಕಾರ್ಯತಂತ್ರ ರೂಪಿಸುತ್ತಿದ್ದೇವೆ ಅಷ್ಟೇ ಎಂದು ಕುಸ್ತಿಪಟು ಬಜರಂಗ್ ಪುನಿಯಾ ತಿಳಿಸಿದ್ಧಾರೆ.
ತನಿಖೆ ನಡೆಸುವಂತೆ ಈಗಲೂ ಪಟ್ಟು
ಅಷ್ಟಕ್ಕೂ ನಿನ್ನೆ ರಾತ್ರಿ 11 ಗಂಟೆಗೆ ಆರಂಭವಾದ ಸಭೆ ಒಂದು ಗಂಟೆಗೂ ಹೆಚ್ಚು ಕಾಲ ನಡೆಯಿತು ಎನ್ನಲಾಗಿದೆ. ಅಮಿತ್ ಶಾ ಅವರ ಜೊತೆಗೆ ಚರ್ಚೆಯಲ್ಲಿ ಪುನಿಯಾ, ಸಾಕ್ಷಿ ಮಲಿಕ್, ಸಂಗೀತಾ ಫೋಗಟ್ ಹಾಗೂ ಸತ್ಯವರ್ತ್ ಕರ್ದಿಯಾನ್ ಇದ್ದರು. ಈ ವೇಳೆ ಕುಸ್ತಿಪಟುಗಳು ಹಲವು ವಿಚಾರ ಪ್ರಸ್ತಾಪ ಮಾಡಿದ್ದಾರೆ. ಹಾಗೆಯೇ ಕ್ರೀಡಾಪಟುಗಳು ಸರ್ಕಾರದ ಪ್ರತಿಕ್ರಿಯೆಯಿಂದ ತೃಪ್ತರಾಗಿಲ್ಲ, ನಮ್ಮ ಬೇಡಿಕೆಗಳಿಗೆ ಸರ್ಕಾರವು ಸಮ್ಮತಿಸುತ್ತಿಲ್ಲ ಎಂದು ಭೇಟಿ ವೇಳೆ ಅಮಿತ್ ಶಾ ಅವರ ಬಳಿ ತಿಳಿಸಿದ್ದಾಗಿ ಕುಸ್ತಿಪಟು ಪುನಿಯಾ ಹೇಳಿದ್ದಾರೆ. ಅಲ್ಲದೆ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ನಿಷ್ಪಕ್ಷಪಾತ ತನಿಖೆ ಮತ್ತು ತ್ವರಿತ ಕ್ರಮಕ್ಕೂ ಕುಸ್ತಿಪಟುಗಳು ಒತ್ತಾಯಿಸಿದ್ದಾರೆ.

'ಭರವಸೆ ಕೊಟ್ಟರೆ ನಾವು ಸೈಲೆಂಟ್ ಆಗಲ್ಲ'
ಹಾಗೇ ಇನ್ನೊಂದು ಕಡೆ ಬ್ರಿಜ್ ಭೂಷಣ್ ಅವರನ್ನು ಇನ್ನೂ ಏಕೆ ಬಂಧಿಸಿಲ್ಲ? ಅವರನ್ನು ಯಾಕೆ ರಕ್ಷಿಸಲಾಗುತ್ತಿದೆ ಎಂದು ನಾವು ಗೃಹ ಸಚಿವರಲ್ಲಿ ಕೇಳಿದೆವು, ಆಗ ಅವರು ನಾವು ಚರ್ಚಿಸುತ್ತಿದ್ದು ಖಂಡಿತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅಮಿತ್ ಶಾ ಭರವಸೆ ನೀಡಿದ್ದಾಗಿ ಕುಸ್ತಿಪಟು ಬಜರಂಗ್ ಪುನಿಯಾ ಮಾಹಿತಿ ನೀಡಿದ್ದಾರೆ. ಆದರೆ ಕೇವಲ ಭರವಸೆ ಆಧಾರದ ಮೇಲೆ ಪ್ರತಿಭಟನೆ ಹಿಂದಕ್ಕೆ ಪಡೆಯುವುದಿಲ್ಲ ಎಂಬ ಮಾತನ್ನೂ ಕಡ್ಡಿ ತುಂಡು ಮಾಡಿದಂತೆ ಕುಸ್ತಿಪಟು ಹೇಳಿರುವುದು, ಪ್ರತಿಭಟನೆ ಕಿಡಿ ಕೊನೆಯಾಗಿಲ್ಲ ಎಂಬ ಸೂಚನೆ ನೀಡುತ್ತಿದೆ. ಅಲ್ದೆ ಕುಸ್ತಿಪಟುಗಳ ಪ್ರತಿಭಟನೆ ಕುರಿತು ಹರಡಿದ್ದ ಬೇರೆ ಬೇರೆ ರೀತಿಯ ವದಂತಿಗೂ ಪುನಿಯಾ ಅಂತ್ಯ ಹಾಡಿದ್ದಾರೆ.
ಒಟ್ನಲ್ಲಿ ಕುಸ್ತಿಪಟುಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಇಡೀ ಜಗತ್ತೇ ಭಾರತದ ಕಡೆ ನೋಡುವಂತೆ ಆಗಿತ್ತು. ಆದರೆ ಪರಿಸ್ಥಿತಿ ಈಗ ಸ್ವಲ್ಪ ಶಾಂತವಾಗಿದೆ. ಸೂಕ್ತ ತನಿಖೆ ನಡೆಯದ ಹೊರತು ಇಲ್ಲಿ ಪ್ರತಿಭಟನೆ ಹಿಂಪಡೆಯುವ ಮಾತೇ ಇಲ್ಲ ಅಂತಿದ್ದಾರೆ ಕುಸ್ತಿಪಟುಗಳು. ಹೀಗೆ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡವಾಗಿದೆ. ಯಾವ ಸಮಯದಲ್ಲಿ ಬೇಕಾದರೂ ಅದು ಸ್ಫೋಟಗೊಂಡು, ಮತ್ತೆ ಪ್ರತಿಭಟನೆ ಶುರುವಾದರೂ ಅಚ್ಚರಿ ಇಲ್ಲ.












Click it and Unblock the Notifications