Maha Kumbh Mela 2025: ಮಹಾಕುಂಭ ಮೇಳದ ಪ್ರಯಾಗ್ರಾಜ್ಗೆ ಆರೆಂಜ್ ಅಲರ್ಟ್, ದಟ್ಟ ಮಂಜು-ಮಳೆ ಎಚ್ಚರಿಕೆ
ದೆಹಲಿ, ಜನವರಿ 17: ದೇಶದ ನಾನಾ ಭಾಗಗಳಲ್ಲಿ ವಿವಿಧ ರೀತಿಯ ವಾತಾವರಣ ನಿರ್ಮಾಣವಾಗುತ್ತಿದೆ. ಹವಾಮಾನದಲ್ಲಿ ಉಂಟಾಗುರುತ್ತಿರುವ ನಿರಂತರ ಬದಲಾವಣೆಗಳಿಂದ ದೆಹಲಿ ಸೇರಿದಂತೆ ವಿವಿಧೆಡೆ ವ್ಯಾಪಕ ಮಳೆ ಮಾತ್ರವಲ್ಲದೇ, ಕೆಲವೆಡೆ ಚಳಿ, ದಟ್ಟ ಮಂಜು ನಿರ್ಮಾಣವಾಗುತ್ತಿದೆ. ಸದ್ಯ IMD ಮುನ್ಸೂಚನೆ ಪ್ರಕಾರ, 'ಮಹಾಕುಂಭ ಮೇಳ 2025' ನಡೆಯುತ್ತಿರುವ ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ಮುಂದಿನ ಕೆಲವು ದಿನ ಮಳೆ ಆವರಿಸಲಿದೆ. ಚಳಿ-ಮಂಜು ಕವಿಯಲಿದೆ. ಭಕ್ತರು ಅಗತ್ಯ ಎಚ್ಚರಿಕೆ ವಹಿಸಬೇಕಿದೆ.
ಪ್ರಯಾಗ್ರಾಜ್ನ ವ್ಯಾಪ್ತಿಯಲ್ಲಿ ಮಳೆ, ಮಂಜು ಬೀಳುವ ಮುನ್ಸೂಚನೆ ಇದೆ. ಈ ಭಾಗಕ್ಕೆ ಹವಾಮಾನ ಇಲಾಖೆ ಇಂದು ಶಕ್ರವಾರ (ಜನವರಿ 17) 'ಆರೆಂಜ್ ಅಲರ್ಟ್' ಘೋಷಿಸಿದೆ. ಈ ಪರಿಸ್ಥಿತಿ ಮುಂದಿನ ಕೆಲವು ದಿನಗಳ ಕಾಲ ಮುಂದುವರಿಯಲಿದೆ ಎಂದು ಐಎಂಡಿ ವಿಜ್ಞಾನಿ ಸೋಮ ಸೇನ್ ರಾಯ್ ಮಾಹಿತಿ ನೀಡಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.

ಯುಪಿ ಸೇರಿ ವಿವಿಧೆಡೆ ಜ.22ರ ವರೆಗೆ ಮಳೆ
ಆಗ್ನೇಯ ಉತ್ತರ ಪ್ರದೇಶದಲ್ಲಿ ಮಹಾ ಕುಂಭ ಮೇಳ ನಡೆಯುತ್ತಿದೆ. ಇಲ್ಲಿನ ಮಂಜು ಹೆಚ್ಚು ದಟ್ಟವಾಗಿಲ್ಲದಿದ್ದರೂ, ಚಳಿ ಪ್ರಭಾವ ಹೆಚ್ಚಿರಲಿದೆ. ಇನ್ನೂ ಜನವರಿ 18 ರಿಂದ ವಿಶೇಷವಾಗಿ ಪರ್ವತ ರಾಜ್ಯಗಳಲ್ಲಿ ಮಳೆ ಬೀಳುವ ಸಾಧ್ಯತೆ ಇದೆ. ಜನವರಿ 21 ಮತ್ತು 22 ರಂದು ಮಳೆ ಬೀಳುವ ನಿರೀಕ್ಷೆ ಇದೆ. ಇದಕ್ಕೆಲ್ಲ ವಾಯುಭಾ ಕುಸಿತವೇ ಕಾರಣ ಎಂದು ಐಎಂಡಿ ಹವಾಮಾನ ತಜ್ಞರು ತಿಳಿಸಿದ್ದಾರೆ.
ವಾಯುಭಾರ ಕುಸಿತ: ಮಳೆ, ಮಂಜು ಎಚ್ಚರಿಕೆ
ಪಾಕಿಸ್ತಾನದ ಪಶ್ಚಿಮ ಭಾಗದಲ್ಲಿ ವಾಯುಭಾರ ಕುಸಿತ ಸಂಭವಿಸಿದೆ. ಇನ್ನೊಂದು ಚಂಡಮಾರುತದ ಪರಿಚಲನೆ ವಾತಾವರಣ ದಕ್ಷಿಣ ಹರಿಯಾಣದ ಮೇಲಿದೆ. ಇವುಗಳ ಪ್ರಭಾವದಿಂದಾಗಿ ಉತ್ತರದ ರಾಜ್ಯಗಳಲ್ಲಿ ವಿವಿಧೆಡೆ ಗುರುವಾರ ವ್ಯಾಪಕ ಮಳೆ ದಾಖಲಾಗಿದೆ. ಇಂದು ಶುಕ್ರವಾರವು ಕೆಲವೆಡೆ ಮಳೆ ಮುಂದುವರಿದಿದೆ.
ಸದ್ಯ ಈ ಭೂಮಿ ಮೇಲ್ಮೈನ ವಾಯುಭಾರ ಕುಸಿತವು ಮೂಲ ಸ್ಥಾನದಿಂದ ಪೂರ್ವಕ್ಕೆ ಚಲಿಸುತ್ತಿದೆ. ಇದರಿಂದಾಗಿ ಉತ್ತರದ ಪರ್ವತ ರಾಜ್ಯಗಳು, ಗುಡ್ಡಗಾಡು ಪ್ರದೇಶಗಳಲ್ಲಿ ಮುಂದಿನ ಮೂರು ದಿನ ಗುಡುಗು ಸಹಿತ ವ್ಯಾಪಕ ಮಳೆ ಆಗಲಿದೆ. ಇಂದು ಜ.17ರಂದು ಕೆಲವು ರಾಜ್ಯಗಳಲ್ಲಿ ಹಿಮಪಾತದ ಎಚ್ಚರಿಕೆ ನೀಡಲಾಗಿದೆ. ಜನವರಿ 18 ಇಲ್ಲವೇ19 ರಿಂದ ಮತ್ತೊಂದು ವಾಯುಭಾರ ಕುಸಿತ ಸಂಭವಿಸಲಿದೆ ಎಂಬ ಮುನ್ಸೂಚನೆ ದೊರೆತಿದೆ.
ತಾಪಮಾನದಲ್ಲಿ 3 ಡಿ.ಸೆ. ಇಳಿಕೆ ಸಾಧ್ಯತೆ
ದೇಶದ ಕೆಲವು ಕಡೆಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ತಾಪಮಾನದಲ್ಲಿ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಇಳಿಕೆ ಆಗಲಿದೆ. ವಾಯುವ್ಯ ಭಾರತದ ರಾಜ್ಯಗಳ ಮೇಲೆ ಮಂಜು ಕವಿಯುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಜನವರಿ 18ರವರೆಗೆ ಪಂಜಾಬ್, ಹರಿಯಾಣ, ಉತ್ತರ ಪ್ರದೇಶದ ಉತ್ತರ ಭಾಗ, ದೆಹಲಿಯಲ್ಲಿ ದಟ್ಟ ಮಂಜು ಕವಿಯಲಿದೆ. ಚಳಿಯ ಪ್ರಮಾಣ ಹೆಚ್ಚಾಗಲಿದೆ. ಶನಿವಾರ ಜನವರಿ 18ರಂದು ದೆಹಲಿ ತಾಪಮಾನ ಇಳಿಕೆ ಆಗಲಿದೆ.
ಗುರುವಾರ ಮಹಾ ಕುಂಭಮೇಳದ ಪ್ರಯಾಗ್ರಾಜ್ ನಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಕಂಡು ಬಂದಿದೆ. ದಟ್ಟ ಮಂಜು ದಾಖಲಾಗಿದೆ. ಇದು ಕುಂಭ ಮೇಳದ ಭಕ್ತರಲ್ಲಿ ಆತಂಕ ಸೃಷ್ಟಿಸಿದೆ. ಕೆಲವರು ಇಂತಹ ವಾತಾವರಣದಿಂದ ಅನಾರೋಗ್ಯಕ್ಕೆ ಈಡಾಗಬಹುದೆಂದು ಆತಂಕದಲ್ಲಿದ್ದಾರೆ.
ಪ್ರಯಾಗ್ರಾಜ್ನಲ್ಲಿ ಲಘು ಮಳೆಯ ಎಚ್ಚರಿಕೆ ನೀಡಲಾಗಿದೆ. ಸುಮಾರು 200 ಮೀಟವರೆಗೆ ಏನು ಕಾಣದಷ್ಟು ಮಂಜು ಕವಿಯುವ ಸಾಧ್ಯತೆ ಇದೆ. ಸದ್ಯ ಮಹಾಕುಂಭ ಮೇಳದಲ್ಲಿ ಕೋಟ್ಯಂತರ ಜನರು ಭಾಗವಹಿಸುವ ನಿರೀಕ್ಷೆ ಇದೆ. ಮೊನ್ನೆಯ ಜನವರಿ 14ರ ಸಂಕ್ರಾಂತಿ ವೇಳೆ ಬರೋಬ್ಬರಿ 3.5 ಕೋಟಿಗೂ ಹೆಚ್ಚು ಜನರಿದ್ದರು.












Click it and Unblock the Notifications