Vijay Mallya: ಸಾಲ ತೀರಿಸಿದ್ದೇನೆ ಎಂದ ವಿಜಯ್ ಮಲ್ಯ
ಬ್ಯಾಂಕ್ಗಳಲ್ಲಿ ಸಾಲ ಮಾಡಿ ಸದ್ಯ ವಿದೇಶದಲ್ಲಿರುವ ಉದ್ಯಮಿ ವಿಜಯ್ ಮಲ್ಯ ಇದೀಗ ಬ್ಯಾಂಕ್ಗಳ ವಿರುದ್ಧವೇ ಆರೋಪ ಮಾಡಿದ್ದಾರೆ. ತನಗೆ ನೀಡಿದ ಸಾಲದ ದುಪ್ಪಟ್ಟು ಮೊತ್ತವನ್ನು ಬ್ಯಾಂಕ್ಗಳು ವಸೂಲಿ ಮಾಡಿವೆ ಎಂದು ವಿಜಯ್ ಮಲ್ಯ ಹೇಳಿರುವುದು ಸಂಚಲನ ಸೃಷ್ಟಿಸಿದೆ. ವಿಜಯ್ ಮಲ್ಯ ಮೋಸ ಮಾಡಿದ್ದಾನೆ ಎನ್ನುವವರಿಗೆ ತಿರುಗೇಟು ನೀಡಿರುವ ಅವರು ನನಗೆ ಆಗಿರುವ ಅನ್ಯಾಯ ಪ್ರಶ್ನಿಸಲು ಧೈರ್ಯವಿದೆಯಾ ಎಂದು ಪ್ರಶ್ನಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸರಣಿ ಪೋಸ್ಟ್ ಹಂಚಿಕೊಂಡಿರುವ ವಿಜಯ್ ಮಲ್ಯ ಅನೇಕ ಅಚ್ಚರಿ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ. ಕಿಂಗ್ಫಿಶರ್ ಏರ್ಲೈನ್ಸ್ (ಕೆಎಫ್ಎ) ಸಾಲವಾದ ₹1,200 ಕೋಟಿ ಬಡ್ಡಿ ಸಹಿತ 6,203 ಕೋಟಿ ರೂಪಾಯಿ ಬ್ಯಾಂಕ್ಗಳಿಗೆ ಕಟ್ಟಬೇಕು ಎಂದು ಸಾಲ ವಸೂಲಾತಿ ನ್ಯಾಯ ಮಂಡಳಿಯು ತೀರ್ಪು ನೀಡಿದೆ. ಆದರೆ ಬ್ಯಾಂಕ್ಗಳು ನನ್ನಿಂದ 14,131.60 ಕೋಟಿ ರೂಪಾಯಿ ವಸೂಲಿ ಮಾಡಿವೆ ಎಂದು ಆರೋಪಿಸಿದ್ದಾರೆ.

ವಿಜಯ್ ಮಲ್ಯರಿಂದ ಜಪ್ತಿ ಮಾಡಿರುವ ಆಸ್ತಿಯಿಂದ ₹14,130 ಕೋಟಿಗೂ ಹೆಚ್ಚು ಹಣ ವಸೂಲಿ ಮಾಡಿರುವ ಕುರಿತು ಸಂಸತ್ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ ನೀಡಿದ ಬಳಿಕ ವಿಜಯ್ ಮಲ್ಯ ಟ್ವೀಟ್ ಮಾಡಿದ್ದಾರೆ.
ಪರಿಹಾರ ಕೊಡಿ ಎಂದು ಆಗ್ರಹ
ಜಾರಿ ನಿರ್ದೇಶನಾಲಯ (ಇಡಿ) ಮತ್ತು ಬ್ಯಾಂಕ್ಗಳು ಸಾಲಕ್ಕಿಂತ ಹೆಚ್ಚಿನ ವಸೂಲಾತಿಯನ್ನು ಮಾಡಿದ್ದು, ಕಾನೂನುಬದ್ಧವಾಗಿ ಸಮರ್ಥನೆ ಮಾಡದೇ ಇದ್ದರೆ ತನಗೆ ಪರಿಹಾರ ನೀಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಸಾಲ ಮತ್ತು ಬಡ್ಡಿಯನ್ನು ಪೂರ್ಣವಾಗಿ ಮರುಪಾವತಿ ಮಾಡಿದ್ದರೂ ನನ್ನನ್ನು ವಂಚಕ ಎನ್ನುವ ಹಣೆಪಟ್ಟಿ ಕಟ್ಟಲಾಗಿದೆ ಎಂದು ಹೇಳಿದ್ದಾರೆ.
ವಿಜಯ್ ಮಲ್ಯ ಹೇಳಿದ್ದೇನು?
ಸಾಲ ವಸೂಲಾತಿ ಮಂಡಳಿಯ ಪ್ರಕಾರ ₹ 1200 ಕೋಟಿ ಬಡ್ಡಿ ಸೇರಿದಂತೆ ₹ 6203 ಕೋಟಿ ಕೆಎಫ್ಎ (ಕಿಂಗ್ಫಿಷರ್ ಏರ್ಲೈನ್ಸ್) ಮರುಪಾವತಿ ಮಾಡಬೇಕಿತ್ತು, ಆದರೆ ಬ್ಯಾಂಕ್ಗಳು ಮತ್ತು ಜಾರಿ ನಿರ್ದೇಶನಾಲಯ ₹ 14,131.6 ಕೋಟಿಯನ್ನು ವಸೂಲಿ ಮಾಡಿವೆ ಎಂದು ಹಣಕಾಸು ಸಚಿವರೇ ಸಂಸತ್ತಿನಲ್ಲಿ ಘೋಷಿಸಿದ್ದಾರೆ.
ನನ್ನಿಂದ ಹೆಚ್ಚುವರಿ ಹಣವನ್ನು ಹೇಗೆ ವಸೂಲಿ ಮಾಡಲಾಗಿದೆ ಎಂದು ಅವರು ಕಾನೂನು ಪ್ರಕಾರ ಸಮರ್ಥನೆ ಮಾಡಿಕೊಳ್ಳಬೇಕು, ಸಾಲ ವಸೂಲಿ ಮಾಡಿದ್ದರೂ ನನ್ನನ್ನು ಅಪರಾಧಿ ಎನ್ನುವಂತೆ ಬಿಂಬಿಸಲಾಗುತ್ತಿದೆ. ಎರಡು ಪಟ್ಟು ವಸೂಲಿ ಮಾಡಿರುವುದಕ್ಕೆ ನನಗೆ ಪರಿಹಾರ ನೀಡಬೇಕಾಗುತ್ತದೆ ಎಂದು ವಿಜಯ್ ಮಲ್ಯ ಎಕ್ಸ್ನಲ್ಲಿ ಬರೆದಿದ್ದಾರೆ.
ಮತ್ತೊಂದು ಪೋಸ್ಟ್ನಲ್ಲಿ ಸರ್ಕಾರದ ನಿಲುವನ್ನು ಪ್ರಶ್ನೆ ಮಾಡಿರುವ ವಿಜಯ್ ಮಲ್ಯ ನನ್ನನ್ನು ನಿಂದಿಸುವವರು ಸೇರಿದಂತೆ ಯಾರದರೂ ಈಗ ನನಗೆ ಆಗಿರುವ ಅನ್ಯಾಯವನ್ನು ಪ್ರಶ್ನೆ ಮಾಡುತ್ತಾರೆಯೇ ಎಂದು ಪ್ರಶ್ನೆ ಮಾಡಿರುವ ಅವರು, ನಾನು ಯಾವುದೇ ಹಣವನ್ನು ಕದ್ದಿಲ್ಲ ಎಂದು ಹೇಳಿದ್ದಾರೆ.
ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದೇನು?
ಲೋಕಸಭಾ ಅಧಿವೇಶನದಲ್ಲಿ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ವಿಜಯ್ ಮಲ್ಯ ಅವರಿಗೆ ಸೇರಿದ ₹14,131.6 ಕೋಟಿ ಮೌಲ್ಯದ ಆಸ್ತಿಯನ್ನು ಸಾರ್ವಜನಿಕ ವಲಯದ ಬ್ಯಾಂಕ್ಗಳಿಗೆ ಹಸ್ತಾಂತರ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದರು.
2016ರ ಮಾರ್ಚ್ ತಿಂಗಳಿನಲ್ಲಿ ವಿಜಯ್ ಮಲ್ಯ ಇಂಗ್ಲೆಂಡ್ಗೆ ಪಲಾಯನ ಮಾಡಿದ್ದರು. ಮಲ್ಯ ವಿವಿಧ ಬ್ಯಾಂಕ್ಗಳಿಂದ ಕಿಂಗ್ಫಿಷರ್ ಏರ್ಲೈನ್ಸ್ (ಕೆಎಫ್ಎ)ಗಾಗಿ 9,000 ಸಾವಿರ ಕೋಟಿ ರೂಪಾಯಿ ಸಾಲ ಪಡೆದಿದ್ದ ಪ್ರಕರಣದಲ್ಲಿ ಅವರನ್ನು ಆರ್ಥಿಕ ಅಪರಾಧಿ ಎಂದು ಘೋಷಣೆ ಮಾಡಲಾಗಿತ್ತು.












Click it and Unblock the Notifications