ಉತ್ತರ ಪ್ರದೇಶ; ದಲಿತನ ಮೇಲೆ ಹಲ್ಲೆ, ಚಪ್ಪಲಿ ನೆಕ್ಕಿಸಿದ ವ್ಯಕ್ತಿ
ಲಕ್ನೋ, ಜುಲೈ 09; ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಯ ಮೇಲೆ ಮೂತ್ರ ಮಾಡಿದ ಪ್ರಕರಣದ ಮಧ್ಯ ಪ್ರದೇಶದಲ್ಲಿ ನಡೆದಿತ್ತು. ಈಗ ಉತ್ತರ ಪ್ರದೇಶದಲ್ಲಿ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ ಚಪ್ಪಲಿ ನೆಕ್ಕುವಂತೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದ ಸೊನಭದ್ರ ಜಿಲ್ಲೆಯಲ್ಲಿ ಈ ವಾರದಲ್ಲಿ ನಡೆದಿದೆ ಎಂಬ ಘಟನೆಯ ವಿಡಿಯೋ ಈಗ ವೈರಲ್ ಆಗಿದೆ. ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ರಾಜೇಂದ್ರ ಎಂದು ಗುರುತಿಸಲಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣವನ್ನು ಇಬ್ಬರು ಆರೋಪಿಗಳ ವಿರುದ್ಧ ದಾಖಲು ಮಾಡಿದ್ದಾರೆ.

ಮರದ ಮಂಚದ ಮೇಲೆ ಕುಳಿತಿರುವ ವ್ಯಕ್ತಿಯೊಬ್ಬ ರಾಜೇಂದ್ರ ಎನ್ನುವ ವ್ಯಕ್ತಿಯನ್ನು ನಿಂದಿಸುತ್ತಾನೆ. ತನ್ನ ಮುಂದೆ ಮಂಡಿಯೂರಿ ಕೂರುವಂತೆ ಹೇಳುತ್ತಾನೆ. ಬಳಿಕ ಆತನ ಮೇಲೆ ಹಲ್ಲೆ ಮಾಡುತ್ತಾನೆ. ಎರಡೂ ಕಿವಿಗಳನ್ನು ಹಿಡಿದುಕೊಂಡು ಬಸ್ಕಿ ಹೊಡೆಸುತ್ತಾನೆ. ಬಳಿಕ ಚಪ್ಪಲಿ ಮತ್ತು ತನ್ನ ಕಾಲನ್ನು ನೆಕ್ಕುವಂತೆ ಹೇಳುತ್ತಾನೆ.
ಆರೋಪಿ ಲೈನ್ಮೆನ್; ದಲಿತ ಸಮುದಾಯದ ವ್ಯಕ್ತಿ ರಾಜೇಂದ್ರ ಮೇಲೆ ಹಲ್ಲೆ ನಡೆಸಿ, ಚಪ್ಪಲಿ ನೆಕ್ಕುವಂತೆ ಮಾಡಿದ ಆರೋಪಿಯನ್ನು ತೇಜ್ ಬಲಿ ಸಿಂಗ್ ಎಂದು ಗುರುತಿಸಲಾಗಿದೆ. ಈತ ಲೈನ್ಮ್ಯಾನ್ ಆಗಿದ್ದು, ಸಂತ್ರಸ್ತ ವ್ಯಕ್ತಿಯ ಚಿಕ್ಕಪ್ಪನ ಮನೆಗೆ ವಿದ್ಯುತ್ ಸಮಸ್ಯೆ ಬಗೆಹರಿಸಲು ಬಂದಿದ್ದ.
ಯಾವುದೋ ವಿಚಾರಕ್ಕೆ ರಾಜೇಂದ್ರ ಮತ್ತು ತೇಜ್ ಬಲಿ ಸಿಂಗ್ ನಡುವೆ ಗಲಾಟೆ ನಡೆದಿದೆ. ಆಗ ರಾಜೇಂದ್ರ ಮೇಲೆ ಹಲ್ಲೆ ಮಾಡಿ, ನಿಂದಿಸಿ ಚಪ್ಪಲಿ ನೆಕ್ಕುವಂತೆ ಮಾಡಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆರೋಪಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.
ಒಟ್ಟು ಎರಡು ವಿಡಿಯೋಗಳು ವೈರಲ್ ಆಗಿವೆ. ಮೊದಲ ವಿಡಿಯೋದಲ್ಲಿ ರಾಜೇಂದ್ರನನ್ನು ನೆಲಕ್ಕೆ ಬೀಳಿಸಿ ಥಳಿಸಲಾಗುತ್ತಿದೆ. ಎರಡನೇ ವಿಡಿಯೋದಲ್ಲಿ ಆತನನ್ನು ನಿಂದಿಸಿ, ಬಸ್ಕಿ ಹೊಡೆಯುವಂತೆ ಹೇಳಿ, ಚಪ್ಪಲಿ ಮತ್ತು ಕಾಲು ನೆಕ್ಕುವಂತೆ ಮಾಡಲಾಗುತ್ತದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಉತ್ತರ ಪ್ರದೇಶದ ಪೊಲೀಸರು ಕ್ರಮ ಕೈಗೊಂಡಿದ್ದಾರೆ. 1989ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಯ್ದೆ (ದೌರ್ಜನ್ಯ ತಡೆ ಕಾಯ್ದೆ) ಸೇರಿದಂತೆ ಐಪಿಸಿ ಸೆಕ್ಷನ್ನ ವಿವಿಧ ಕಾಯ್ದೆಗಳಡಿ ಇಬ್ಬರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ.












Click it and Unblock the Notifications