Telangana Election 2023: ತೆಲಂಗಾಣ ಚುನಾವಣೆಯಲ್ಲಿ ಕರ್ನಾಟಕವೇ ನಿರ್ಣಾಯಕ ಅಂಶ- ತೆಲುಗರ ಮೇಲೆ ಕನ್ನಡಿಗರ ದಟ್ಟ ಪ್ರಭಾವ
ಹೈದರಾಬಾದ್, ನವೆಂಬರ್ 30: ತೆಲಂಗಾಣ ವಿಧಾನಸಭೆ ಚುನಾವಣೆಯು ಭಾರೀ ಕುತೂಹಲ ಕೆರಳಿಸಿದೆ. ಆಡಳಿತರೂಢ ಭಾರತ್ ರಾಷ್ಟ್ರ ಸಮಿತಿ ( ಬಿಆರ್ಎಸ್ ) ಪಕ್ಷಕ್ಕೆ ಕಾಂಗ್ರೆಸ್ ಪಕ್ಷವು ತೀವ್ರ ಪೈಪೋಟಿ ನೀಡುತ್ತಿದೆ. ಈ ಚುನಾವಣೆಯ ಮೇಲೆ ಕರ್ನಾಟಕ ಚುನಾವಣೆ ಫಲಿತಾಂಶದ ದಟ್ಟ ಪ್ರಭಾವವಿದೆ ಎಂಬ ಮಾತುಗಳು ಕೇಳಿಬಂದಿವೆ. ತೆಲಂಗಾಣ ಚುನಾವಣೆಯಲ್ಲಿ ಕರ್ನಾಟಕವು ನಿರ್ಣಾಯಕ ಅಂಶವಾಗಿ ಹೊರಹೊಮ್ಮಿರುವುದು ಅಚ್ಚರಿಯ ರಾಜಕೀಯ ಬೆಳವಣಿಗೆಗೆ ಕಾರಣವಾಗಿದೆ.
ತೆಲಂಗಾಣದಲ್ಲಿ ಆಡಳಿತಾರೂಢ ಬಿಆರ್ಎಸ್ ಪಕ್ಷವನ್ನು ಕೆಳಗಿಳಿಸಲು ಕಾಂಗ್ರೆಸ್ ಪಕ್ಷವು ನಿರಂತರ ಯತ್ನ ನಡೆಸುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆ ಮತ್ತು ವೈಫಲ್ಯಗಳ ನೆರಳು ತೆಲಂಗಾಣ ಚುನಾವಣೆಯಲ್ಲಿ ಗೋಚರವಾಗುತ್ತಿರುವುದು ಕಂಡುಬಂದಿದೆ.

ಪ್ರಚಾರದ ವೇಳೆ ಸಿದ್ದರಾಮಯ್ಯ ಸರ್ಕಾರದ ವೈಫಲ್ಯಗಳನ್ನು ಬಿಆರ್ಎಸ್ ಉಲ್ಲೇಖಿಸಿದೆ. ತೆಲಂಗಾಣ ಕಾಂಗ್ರೆಸ್ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಜನರ ಮುಂದೆ ಒತ್ತಿ ಹೇಳಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಿದ್ದರಾಮಯ್ಯ ಸರ್ಕಾರ ತೆಲಂಗಾಣದಲ್ಲಿ ಜಾಹೀರಾತುಗಳನ್ನು ನೀಡಿದೆ.
ಕರ್ನಾಟಕದ ಜನರಿಗೆ ಭರವಸೆ ನೀಡಿದ್ದ ಐದು ಭರವಸೆಗಳನ್ನು 100 ದಿನಗಳ ಗಡುವಿನೊಳಗೆ ತಲುಪಿಸಲಾಗಿದೆ ಎಂದು ತೆಲಂಗಾಣದ ಕಾಂಗ್ರೆಸ್ ನಾಯಕರು ಒತ್ತಿ ಹೇಳಿದ್ದಾರೆ. ಆದರೆ, ಬಿಆರ್ಎಸ್ ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಕಾಂಗ್ರೆಸ್ನ ಹೇಳಿಕೆಯನ್ನು ತಳ್ಳಿಹಾಕಿವೆ. ಕರ್ನಾಟಕದಲ್ಲಿ 24 ಗಂಟೆಗಳ ವಿದ್ಯುತ್ ಸರಬರಾಜು ಮಾಡಲು ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಬಿಆರ್ಎಸ್ ಆರೋಪಿಸಿದೆ.

ಅದೇನೇ ಇದ್ದರೂ ಕರ್ನಾಟಕದಲ್ಲಿನ ಕಾಂಗ್ರೆಸ್ ಗೆಲುವು ತೆಲಂಗಾಣದಲ್ಲಿ ಚುನಾವಣಾ ರ್ಯಾಲಿಗಳಲ್ಲಿ ಪ್ರತಿಧ್ವನಿಸಿದೆ. ಈ ಗೆಲುವಿನಿಂದಾಗಿ ತೆಲಂಗಾಣ ಕಾಂಗ್ರೆಸ್ನ ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿಗೊಂಡಿದೆ. ಸಾರ್ವಜನಿಕ ಸಭೆಗಳಲ್ಲಿ ಭಾರೀ ಪ್ರಮಾಣದ ಜನರು ಸೇರಿರುವುದು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿದೆ ಎಂದು ಹೇಳಲಾಗುತ್ತಿದೆ.
ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷದ ದಿನಗಳು ಮುಗಿದಿವೆ ಎಂಬ ಋಣಾತ್ಮಕ ಗ್ರಹಿಕೆಯನ್ನು ಬದಲಾಯಿಸಲು ಕರ್ನಾಟಕದ ಗೆಲುವು ಕಾಂಗ್ರೆಸ್ಗೆ ಸಹಾಯ ಮಾಡಿದೆ ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಪ್ರೊ.ಕೆ.ನಾಗೇಶ್ವರ್ ಹೇಳಿದ್ದಾರೆ.

ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅನುಭವಿಸಿದ ಸತತ ಸೋಲುಗಳಿಂದ ಪಕ್ಷವು ಕಂಗೆಟ್ಟಿತ್ತು. ಆದರೆ, ನೆರೆಯ ಕರ್ನಾಟಕದಲ್ಲಿನ ಗೆಲುವು ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಉತ್ಸಾಹ ನೀಡಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿವೆ. ಈಗ ಕಾಂಗ್ರೆಸ್ ಪುನಶ್ಚೇತನಗೊಂಡಿದೆ ಎಂಬ ಭಾವನೆ ಮೂಡಿದೆ ಎಂದು ಹೇಳಲಾಗುತ್ತಿದೆ.
ಈ ಕುರಿತು ಮಾತನಾಡಿರುವ ತೆಲಂಗಾಣ ಜನ ಸಮಿತಿಯ ಅಧ್ಯಕ್ಷ ಎಂ ಕೋದಂಡರಾಮ್ ಅವರು, ಕರ್ನಾಟಕ ಚುನಾವಣೆಗೆ ಮುಂಚೆಯೇ ತೆಲಂಗಾಣದ ಜನರು ಕಾಂಗ್ರೆಸ್ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿದ್ದರು. ಆದರೆ, ಈಗ ತೆಲಂಗಾಣದ ಜನರು ಕಾಂಗ್ರೆಸ್ ಅನ್ನು ಬಿಆರ್ಎಸ್ಗೆ ಪರ್ಯಾಯವಾಗಿ ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಜನರಿಗೆ ಕರ್ನಾಟಕದ ಮಾದರಿಯಲ್ಲಿ ಚುನಾಯಿತ ಸರ್ಕಾರ ಬೇಕು. ಕರ್ನಾಟಕದಲ್ಲಿ ಅಧಿಕಾರದಿಂದ ಕೆಳಗಿಳಿದಿರುವ ಬಿಜೆಪಿಗೆ ತೆಲಂಗಾಣದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಅವಕಾಶವಿಲ್ಲ ಎಂದು ಕೋದಂಡರಾಮ್ ತಿಳಿಸಿದ್ದಾರೆ.












Click it and Unblock the Notifications